ಉಕ್ಕಿ ಹರಿಯುವ ದೇಶಪ್ರೇಮ………..
ಎಲ್ಲೆಲ್ಲೂ ರಾಷ್ಟ್ರಗೀತೆ – ರಾಷ್ಟ್ರಧ್ವಜ…….
ಜೈ ಭಾರತ್ ಘೋಷಣೆ……
ತುಂಬಾ ಸಂತೋಷ……
ಆದರೆ,
ಸೂಕ್ಷ್ಮವಾಗಿ ಗಮನಿಸಿ ಮತ್ತು ನೆನಪಿಡಿ………
ಇದೇ ಬಾಯಿಗಳೇ ದ್ವೇಷ ಕಾರುವ, ರಕ್ತ ಹೀರುವ ಘೋಷಣೆ ಕೂಗುವುದು…..
ಇದೇ ಕಣ್ಣುಗಳೇ ಸಾವುಗಳನ್ನು ಸಂಭ್ರಮಿಸಿ ಕ್ರೂರತೆ ಮೆರೆಯುವುದು….
ಇದೇ ಕೈಗಳೇ ಭ್ರಷ್ಟ ಲಂಚದ ಹಣಕ್ಕೆ ಕೈಚಾಚುವುದು…..
ಇದೇ ಕಾಲುಗಳೇ ಹಣ, ಹೆಂಡ ಪಡೆದು ಮತದಾನ ಕೇಂದ್ರಕ್ಕೆ ಸಾಗುವುದು….
ಇದೇ ತೋಳುಗಳೇ ಅತ್ಯಾಚಾರಕ್ಕೆ ಬಳಸಲ್ಪಡುವುದು….
ಇದೇ ಮನಸ್ಸುಗಳೇ ಇಂದು ದೇಶದಲ್ಲಿ ಅರಾಜಕತೆ ಅಸಹಿಷ್ಣತೆ ಉಂಟು ಮಾಡುತ್ತಿರುವುದು………..
ಜನರನ್ನು ಟೀಕಿಸಿದ್ದಕ್ಕೆ ಬೇಸರವಾಗುತ್ತಿದೆಯೇ ?
ಬನ್ನಿ ನನ್ನೊಂದಿಗೆ…..
ಇಡೀ ದೇಶದ ಸರ್ಕಾರಿ ಕಚೇರಿಗಳಲ್ಲಿ, ಆಸ್ಪತ್ರೆಯಿಂದ ವಿಧಾನಸಭೆಗಳವರೆಗೆ,
ಜಮೀನು ನೋಂದಣಿ ಕಚೇರಿಯಿಂದ ಮರಣ ನೋಂದಣಿ ಕಚೇರಿಯವರೆಗೆ ಲಂಚವಿಲ್ಲದೆ ಕೆಲಸವಾಗುವುದು ಅಪರೂಪ.
ಒಡವೆ ಧರಿಸಿದ ಒಂಟಿ ಹೆಣ್ಣು ಇಲ್ಲಿ ಸುರಕ್ಷಿತ ಎಂದು ಹೇಳುವ ಒಂದೇ ಒಂದು ಜನನಿಬಿಡ ಬಸ್ ನಿಲ್ದಾಣ ಅಥವಾ ರೈಲು ನಿಲ್ದಾಣವನ್ನು ತೋರಿಸಿ.
ಕಾನೂನು ತಜ್ಞರ ಸಲಹೆ ಪಡೆಯದೆ ಕೇವಲ ನಂಬಿಕೆಯ ಆಧಾರದ ಮೇಲೆ ಮನೆ ಅಥವಾ ಜಮೀನು ಖರೀದಿಸುವ ಧೈರ್ಯ ಎಷ್ಟು ಜನರಿಗಿದೆ.
ಒಂದು ಕಡೆ ಡ್ರಗ್ ಮಾಫಿಯಾ, ಇನ್ನೊಂದು ಕಡೆ ಲ್ಯಾಂಡ್ ಮಾಫಿಯಾ, ಕ್ಯಾಪಿಟೇಷನ್ ಮಾಫಿಯಾ, ಶುಗರ್ ಮಾಫಿಯಾ, ಗಣಿ ಮಾಫಿಯಾ, ವಾಟರ್ ಮಾಫಿಯಾ ಜೊತೆಗೆ ಜಾತಿ ಧರ್ಮ ಮುಂತಾದ ವಿಭಜಕ ಶಕ್ತಿಗಳು ಇಡೀ ಆಡಳಿತ ಯಂತ್ರವನ್ನು ನಿಯಂತ್ರಿಸುತ್ತಿವೆ.
ಆದರೆ ದೇಶಭಕ್ತಿ ಮಾತ್ರ ಉಕ್ಕಿ ಹರಿಯುತ್ತದೆ.
ದೇಶಭಕ್ತಿ ಕೇವಲ ಘೋಷಣೆಯಲ್ಲ. ಅದು ನಡವಳಿಕೆ.
ದುರುಳ ನಾಯಕರಿಂದ ಮಕ್ಕಳಿಗೆ ಶಾಲೆಯಲ್ಲಿ ನೀತಿ ಪಾಠ ಹೇಳಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದರೆ ಆ ಕಪಟತನದ ಮುಖವಾಡ ಮುಂದಿನ ದಿನಗಳಲ್ಲಿ ಮಕ್ಕಳಿಗೆ ತಿಳಿಯುವುದಿಲ್ಲವೇ ?
ನುಡಿದಂತೆ ನಡೆಯಿರಿ
ಇಲ್ಲವೇ
ನಡೆದಂತೆ ನುಡಿಯಿರಿ
ಅದೇ ದೇಶಪ್ರೇಮ.
ಸರಳತೆ ಸಭ್ಯತೆ ಪ್ರೀತಿ ವಿಶ್ವಾಸವಿಲ್ಲದ ಪೇಪರ್ ಟೈಗರ್ ಗಳೋ, ಟಿವಿ ಟೈಗರ್ ಗಳೋ ಆಗಿ ಒಣ ವೇದಾಂತ ಹೇಳುತ್ತಾ ಪ್ರಚಾರದ ಹಂಗಿಗೆ ಬಿದ್ದು ಬುದ್ದಿವಂತರೆಂಬ ಭ್ರಮೆಗೆ ಒಳಗಾಗಿ ವ್ಯಕ್ತಿತ್ವವೇ ಇಲ್ಲದ ಟೊಳ್ಳು ದೇಶಪ್ರೇಮ ಅಪಾಯಕಾರಿ.
ಮಾತಿನರಮನೆಯಲ್ಲಿ ಅರಳುವುದು ಮುಖವಾಡ.
ನರನಾಡಿಗಳಲ್ಲಿ ಸಮಾನತೆ ಸೌಹಾರ್ಧತೆ ಅಡಗಿರುವುದು ದೇಶಪ್ರೇಮ.
ವಂದೇ ಮಾತರಂ ಎಂದು ಕೂಗುವುದು
ದೇವಸ್ಥಾನಗಳಿಗೆ ಪ್ರವೇಶ ನಿರಾಕರಿಸುವುದು.
ವಂದೇ ಮಾತರಂ ಎನ್ನುವುದು ಮಠದಲ್ಲಿ ಪಂಕ್ತಿಬೇದ ಮಾಡುವುದು ಮತ್ತು ಅದನ್ನು ಸಮರ್ಥಿಸುವುದು.
ವಂದೇ ಮಾತರಂ ಎನ್ನುವುದು ಜಾತಿ ಸರ್ಟಿಫಿಕೇಟ್ ಹಂಚುವುದು.
ವ್ಯಕ್ತಿ ಸ್ವಾತಂತ್ರ್ಯ ಗೌರವಿಸದೆ ಇನ್ನೊಬ್ಬರನ್ನು ಹಂಗಿಸುವುದು.
ಛೆ…….
ನಮ್ಮ ನಡವಳಿಕೆ – ವರ್ತನೆ – ದಿನನಿತ್ಯದ ಒಳ್ಳೆಯ, ಮೌಲ್ಯಯುತ ಚಟುವಟಿಕೆಗಳೇ ನಮ್ಮ ದೇಶಪ್ರೇಮ.
ಕೇವಲ ಜೈ ಭಾರತ್ ಘೋಷಣೆಯಲ್ಲ……
ಒಳ್ಳೆಯವರಾಗಿ,
ಒಳ್ಳೆಯದನ್ನು ಪ್ರೋತ್ಸಾಹಿಸಿ,
ಕೆಟ್ಟದ್ದನ್ನು ತಿರಸ್ಕರಿಸಿ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್.ಕೆ
ದೊಡ್ಡಬಳ್ಳಾಪುರ: ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದೆ. ವಿವಿಧೆಡೆ…
ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…
ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…
ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…
ದೇವನಹಳ್ಳಿ: ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ…
ದೊಡ್ಡಬಳ್ಳಾಪುರ: ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ಕೋಳಿಫಾರ್ಮ್ಗೆ ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿಮರಿಗಳು…