Categories: ಲೇಖನ

ಬೆಂಗಳೂರಿನ ಸರಾಸರಿ ಪ್ರತಿ ವ್ಯಕ್ತಿ ವರ್ಷಕ್ಕೆ 117 ತಾಸು ಟ್ರಾಫಿಕ್‌ನಿಂದಾಗಿ ರಸ್ತೆಯಲ್ಲಿ ಕಳೆಯುತ್ತಾರೆ

ಅಭಿವೃದ್ಧಿ……….

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಕೇಂದ್ರದ ಆರ್ಥಿಕ ಸಮೀಕ್ಷೆ ವರದಿಯ ಮೇಲೆ ಕಣ್ಣಾಡಿಸಿದಾಗ ಕಂಡುಬಂದ ಕೆಲವು ಅಂಶಗಳು,

ಬೆಂಗಳೂರಿನ ಸರಾಸರಿ ಪ್ರತಿ ವ್ಯಕ್ತಿ ವರ್ಷಕ್ಕೆ 117 ತಾಸು ಟ್ರಾಫಿಕ್‌ನಿಂದಾಗಿ ರಸ್ತೆಯಲ್ಲಿ ಕಳೆಯುತ್ತಾರೆ.

ಟ್ರಾಫಿಕ್‌ನಿಂದಾಗಿ ಬೆಂಗಳೂರಿನ ಜನರ ಒಟ್ಟು 7.07 ಲಕ್ಷ ಪ್ರೊಡಕ್ಟಿವ್ ಗಂಟೆಗಳು ನಷ್ಟವಾಗುತ್ತಿವೆ. ಇದರ ವೆಚ್ಚ ಅಂದಾಜು 11.7 ಬಿಲಿಯನ್ ರೂಪಾಯಿ. ಅಂದರೆ, ಇವರು ಒಂದು ವೇಳೆ ಟ್ರಾಫಿಕ್‌ನಲ್ಲಿ ನಿಲ್ಲದೇ ಕೆಲಸ ಮಾಡಿರುತ್ತಿದ್ದರೆ ಇಷ್ಟು ಮೌಲ್ಯದ ಉತ್ಪನ್ನ ತಯಾರಿಸುತ್ತಿದ್ದರು.

ಹಾಗೆಯೇ…..

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಎಂಬ ಸರ್ಕಾರಿ ಸಂಸ್ಥೆಯ ಮೂರ್ನಾಲ್ಕು ವರ್ಷಗಳ ಹಿಂದಿನ ಅಧೀಕೃತ ವಿಶ್ಲೇಷಣೆ ಪ್ರಕಾರ …….

ಸಂಚಾರಿ ದಟ್ಟಣೆಯಿಂದ ವರ್ಷಕ್ಕೆ 3700 ಕೋಟಿ ನಷ್ಟ.
ಒಟ್ಟು 60 ಕೋಟಿ ಗಂಟೆಗಳ ಮಾನವ ಶ್ರಮ ವ್ಯರ್ಥ.
ಇದಕ್ಕೆ ಅವರು ನಿಗದಿಪಡಿಸಿರುವ ಬೆಲೆ 2350 ಕೋಟಿ.
ಪೆಟ್ರೋಲ್, ಡೀಸಲ್ ಮುಂತಾದ ಇಂಧನದ ನಷ್ಟ 50 ಕೋಟಿ ಲೀಟರ್.
ಇದರ ಒಟ್ಟು ಬೆಲೆ ಸುಮಾರು 1350 ಕೋಟಿ…….

ರಾಜ್ಯದ – ದೇಶದ ಬಹುತೇಕ ಎಲ್ಲಾ ಬೃಹತ್ ನಗರಗಳ ಸ್ಥಿತಿ ಸರಿಸುಮಾರು ಇದೇ ಆಗಿರುತ್ತದೆ…..

ನನಗಂತೂ ತುಂಬಾ ಸಂತೋಷವಾಯಿತು. ನಮ್ಮನ್ನಾಳುವ ಸರ್ಕಾರಗಳಿಗೆ ಸಾರ್ವಜನಿಕರ ಬಗ್ಗೆ ಎಷ್ಟೊಂದು ಕಾಳಜಿ ಇದೆಯೆಂದು.!!!

ಈ ರೀತಿ ಒಂದು ವರದಿ ಸಿದ್ಧಮಾಡವುದು. ಇದರ ಪರಿಹಾರಕ್ಕಾಗಿ ಪ್ಲೈಓವರ್ ಗಳು, ಸ್ಟೀಲ್ ಬ್ರಿಡ್ಜ್ ಗಳು, ಅಂಡರ್ ಪಾಸ್ ಗಳು, ರಸ್ತೆ ಅಗಲೀಕರಣ ಇತ್ಯಾದಿ ಯೋಜನೆ ರೂಪಿಸಿ ಲಕ್ಷಾಂತರ ಕೋಟಿ ಇದರಲ್ಲಿ ಹಣ ತೊಡಗಿಸುವುದು. ನಗರಗಳು ಮಹಾನ್ ಅಭಿವೃದ್ಧಿ ಹೊಂದಿವೆ ಎಂದು ಜಗತ್ತಿಗೆ ತೋರಿಸುವುದು.

ಬೇಷ್ ಸರ್ಕಾರಗಳೇ ಬೇಷ್…….. ಎಷ್ಟೊಂದು ಸುಂದರ ಕಲ್ಪನೆ.

ನಿರ್ಜೀವ ವಾಹನಗಳಿಗೆ ಸಂಭ್ರಮವೋ ಸಂಭ್ರಮ. ರಸ್ತೆಗಳಲ್ಲಿ ಝ್ಯಂ ಝ್ಯಂ ಎಂದು ನಲಿದಾಡುತ್ತಾ ಸಾಗುತ್ತವೆ.

ಆದರೆ ………

ಗಿಡ ಮರಗಳಿಗೆ, ಅದರಲ್ಲಿ ವಾಸಿಸುವ ಜೀವಸಂಕುಲಕ್ಕೆ ಮತ್ತು ನಮ್ಮ ನಿಮ್ಮೆಲ್ಲರಿಗೆ ಇದರ ಕೊಡುಗೆ ಬಲ್ಲಿರೇನು. ಮೊದಲೇ ರಾಸಾಯನಿಕಯುಕ್ತ ಕಲಬೆರಕೆ ಆಹಾರ ತಿಂದು ರೋಗನಿರೋಧಕ ಶಕ್ತಿ ಕಳೆದುಕೊಂಡಿರುವ ನಮಗೆ ಆಸ್ತಮಾ, ಹೃದ್ರೋಗ, ಶ್ವಾಸಕೋಶ ತೊಂದರೆಯಿಂದ ಅನುಭವಿಸುತ್ತಿರುವ ನರಕಯಾತನೆಗೆ ಎಷ್ಟು ಬೆಲೆ ಎಂದು ಆ ವರದಿಯಲ್ಲಿ ತಿಳಿಸಿಲ್ಲ. ಅಂದಾಜು ಇದಕ್ಕೆ ಬಲಿಯಾಗುವ ಜನ, ಪಶು ಪಕ್ಷಿ, ಪ್ರಾಣಿಗಳು, ಗಿಡಮರಗಳು, ವಾಯುಮಾಲಿನ್ಯಗಳಿಗೆ ಅವರು ಕಟ್ಟುವುದು ಎಷ್ಟು ಬೆಲೆ ಎಂಬುದನ್ನೂ ವರದಿಯಲ್ಲಿ ಹೇಳಿಲ್ಲ……

ಆದ್ದರಿಂದಲೇ ರಸ್ತೆಯ ವಿಸ್ತರಣೆಗಾಗಿ ಅನೇಕ ಪುರಾತನ ಮರಗಳನ್ನು ಕೊಲ್ಲುತ್ತಿದ್ದಾರೆ….

ಬಹುಶಃ ನನ್ನ ಅನಿಸಿಕೆ ಪ್ರಕಾರ ಅವರಿಗೆ ತುಂಬಾ ಚೆನ್ನಾಗಿ ಗೊತ್ತಿರಬೇಕು, ಸಾಮಾನ್ಯ ಮನುಷ್ಯರಿಗೆ, ಜೀವ ಸಂಕುಲಕ್ಕೆ, ಗಿಡಮರಗಳಿಗೆ ಯಾವ ಬೆಲೆಯೂ ಇಲ್ಲ. ಉಚಿತವಾಗಿ ಕೊಟ್ಟರೂ ತೆಗೆದುಕೊಳ್ಳುವವರಿಲ್ಲ. 😜.

ಅಲ್ಲಿ ನೋಡಿ ಒಬ್ಬ ರಾಜಕಾರಣಿ, ಮತ್ತೊಬ್ಬ ಅಧಿಕಾರಿ ಅರಚುತ್ತಿದ್ದಾರೆ, ಪರಿಸರ ಮಾಲಿನ್ಯದಿಂದ ಆಗುವ ಅನಾಹುತಗಳಿಗೆ ನಾವು ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ಕಟ್ಟಿಸುತ್ತೇವೆ ,
ಒಳ್ಳೆಯ ಔಷಧಿ ಕಂಡುಹಿಡಿಯುತ್ತೇವೆ. ಆಂಬ್ಯುಲೆನ್ಸ್ ಒದಗಿಸುತ್ತೇವೆ……

ನೋಡಿದಿರಾ ಇವರ ಹೊಸ ಹೊಸ ಐಡಿಯಾಗಳು.
ಅವರ ದೃಷ್ಟಿಯಲ್ಲಿ ಅಭಿವೃದ್ಧಿ ಎಂದರೆ ರಸ್ತೆಗಳು – ಕಟ್ಟಡಗಳು – ವಾಹನಗಳು – ಮಾಲ್ ಗಳು,
ಸಾಮಾನ್ಯ ಜನರು ಕುರಿಗಳು ಅಷ್ಟೆ……

ಒಬ್ಬ ಆರೋಗ್ಯವಂತ ವ್ಯಕ್ತಿ ಉಸಿರಾಡಲು ಬೇಕಾದ ಆರೋಗ್ಯಕರ ಆಮ್ಲಜನಕ ( Oxygen ) ಸಿಗಲು ಸುಮಾರು 7 ಮರಗಳ ( Trees ) ಅವಶ್ಯಕತೆ ಇದೆ. ಈಗಿನ ಬೆಂಗಳೂರಿನ ಜನಸಂಖ್ಯೆ ಸುಮಾರು 1 ಕೋಟಿ 50 ಲಕ್ಷ ಇದೆ. ಅದರ ಪ್ರಕಾರ ಇಲ್ಲಿ ಇರಬೇಕಾದ ವೃಕ್ಷಗಳ ಸಂಖ್ಯೆ ಸುಮಾರು 9 ಕೋಟಿ. ಆದರೆ ವಾಸ್ತವದಲ್ಲಿ ಇರುವುದು ಕೇವಲ 14.5 ಲಕ್ಷ ಮರಗಳು ಮಾತ್ರ.
ಇದು ಇತ್ತೀಚೆಗೆ ಒಬ್ಬ ಪರಿಸರ ತಜ್ಞರ ಅಭಿಪ್ರಾಯ ಪತ್ರಿಕೆಯಲ್ಲಿ ಓದಿದ್ದು .

ಅಬ್ಬಾ,…………..

ಎಷ್ಟೊಂದು ಶುಧ್ಧ ಗಾಳಿಯ ಕೊರತೆ ಎದುರಿಸುತ್ತಿದ್ದೇವೆ ನಾವು‌. ಆರೋಗ್ಯದ ಅತ್ಯಾವಶ್ಯಕ ಆಮ್ಲಜನಕ ಸರಿಯಾಗಿ ಸಿಗುತ್ತಿಲ್ಲ. ಉಸಿರಾಡುತ್ತಿರುವುದು ಧೂಳಿನಿಂದ ಕೂಡಿದ ವಿಷಯುಕ್ತ ಗಾಳಿ.

ಬಹುಶಃ ಕರ್ನಾಟಕ ರಾಜ್ಯದಲ್ಲಿ ಕೇವಲ ಕೊಡಗು, ಚಿಕ್ಕಮಗಳೂರು, ಚಾಮರಾಜನಗರ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಹಾಸನ ಹಾಗೂ ಮೈಸೂರಿನ ಕೆಲವು ಭಾಗಗಳನ್ನು ಹೊರತುಪಡಿಸಿದರೆ ಇತರೆ ಎಲ್ಲಾ ಜಿಲ್ಲೆಗಳಲ್ಲೂ ಮರಗಳ ಕೊರತೆ ಕಾಡುತ್ತಿರಬಹುದು. ಅದರಲ್ಲೂ ಕೋಲಾರ, ಬೀದರ್, ಮಂಡ್ಯ, ಗುಲ್ಬರ್ಗಾ, ರಾಯಚೂರು, ತುಮಕೂರು, ಬಳ್ಳಾರಿ, ಯಾದಗಿರಿ ಮುಂತಾದ ಜಿಲ್ಲೆಗಳ ಪರಿಸ್ಥಿತಿ ಅತ್ಯಂತ ಶೋಚನೀಯ.

ಇನ್ನು ಶುಧ್ಧ ನೀರಿನ ಕೊರತೆ ಇಡೀ ದೇಶವನ್ನೇ ಕಾಡುತ್ತಿದೆ. ನೀರಿನಿಂದ ಬರಬಹುದಾದ ಖಾಯಿಲೆಯಿಂದ ನರಳುತ್ತಿರುವ ಮತ್ತು ಸಾಯುತ್ತಿರುವ ಜನಸಂಖ್ಯೆ ಒಂದು ಮಹಾಯುದ್ಧದ ಸಾವು ನೋವಿನ ಸಂಖ್ಯೆಗೆ ಹತ್ತಿರವಿರಬಹುದು.

ಮತ್ತೆ……..
ಆಹಾರದ ವಿಷಯ ಹೇಳುವುದೇ ಬೇಡ. ಕನಿಷ್ಠ ಪೌಷ್ಟಿಕಾಂಶವಿರಲಿ, ಶ್ರೀಮಂತರು ಮತ್ತು ಸಾಮಾನ್ಯ ಜನರೂ ಕೂಡ ಸೇವಿಸುತ್ತಿರುವುದು ನಿಧಾನವಾಗಿ ಕೊಲ್ಲುವ ವಿಷಯುಕ್ತ ಆಹಾರವನ್ನೇ. ದೇಶದ ಬಹುತೇಕ ಚಿಲ್ಲರೆ ಅಂಗಡಿಗಳಲ್ಲಿ ದೊರಕುವುದು ಕಲಬೆರಕೆ ಮತ್ತು ಕಾಲಾವಧಿ ಮುಗಿದು ಉಪಯೋಗಿಸಲು ಬಾರದ ಆಹಾರ ಪದಾರ್ಥಗಳೇ.

ಎತ್ತ ಸಾಗುತ್ತಿದ್ದೇವೆ ನಾವು ?

ಇತ್ತೀಚಿನ ಪ್ರವಾಸದಲ್ಲಿ ನಾನು ಗಮನಿಸಿದ್ದು ಬಹುತೇಕ ಪಟ್ಟಣ ಪ್ರದೇಶದಲ್ಲಿ ಅತಿಹೆಚ್ಚು ಕಾಣುವುದು ಮೆಡಿಕಲ್ ಲ್ಯಾಬೋರೇಟರಿ, ಆಸ್ಪತ್ರೆ ಮತ್ತು ಮೆಡಿಕಲ್ ಸ್ಟೋರ್ ಗಳು. ಅವುಗಳ ಮುಂದೆ ಒಂದಷ್ಟು ಜನಸಂಧಣಿ. ಬಾರ್, ಹೋಟೆಲ್ ಮತ್ತು ಬ್ಯೂಟಿ ಪಾರ್ಲರ್ ಗಳು ಕೂಡ ಹೆಚ್ಚು ಹೆಚ್ಚು ಕಾಣಿಸುತ್ತಿವೆ.

ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ದೆಹಲಿಯ ಏಮ್ಸ್ ( All India institute of medical sciences ) ಮುಂತಾದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯರಿಗೆ ಚಿಕಿತ್ಸೆ ದೊರೆಯಲು ಸರತಿಯ ಪ್ರಕಾರ ಮತ್ತೊಂದು ತಪಾಸಣೆಗೆ ಸುಮಾರು ದಿನಗಳು ಕಾಯಬೇಕಾಗಿದೆಯಂತೆ.

Sound mind in Sound body.
ಆರೋಗ್ಯವೇ ಭಾಗ್ಯ ಅನಾರೋಗ್ಯವೇ ನರಕ…..

ಅಧಿಕಾರಕ್ಕೇರಲು ತಂ,ತ್ರ ಕುತಂತ್ರ ನಡೆಸುತ್ತಾ ಸಮಾವೇಶಗಳಿಗಾಗಿ ಅಪಾರ ಹಣ ಶ್ರಮ ವ್ಯಯಿಸುತ್ತಾ, ನಮ್ಮನ್ನೆಲ್ಲಾ ಆಕ್ರಮಿಸಿರುವ ಮಾಧ್ಯಮಗಳಲ್ಲಿ ಇದೇ ನಮ್ಮ ಅತ್ಯಾವಶ್ಯಕ ಆದ್ಯತೆ ಎಂಬ ಭ್ರಮೆ ಸೃಷ್ಟಿ ಮಾಡಿ ಅನಾರೋಗ್ಯದ ರಾಜ್ಯ – ದೇಶದತ್ತ ಸಾಗುತ್ತಿರುವ ರಾಜಕಾರಣಿಗಳನ್ನು ಆಡಳಿತಗಾರರನ್ನು ಶಪಿಸುತ್ತಾ………‌

ಕೃಷಿ, ನೀರಾವರಿ, ಅರಣ್ಯ, ಆಹಾರ ಇಲಾಖೆಗಳ ಜವಾಬ್ದಾರಿ ನೆನಪಿಸುತ್ತಾ…..

ಆದಷ್ಟು ಶೀಘ್ರ ನಮ್ಮ ವ್ಯವಸ್ಥೆಯ ಆಧ್ಯತೆಗಳು ಬದಲಾಗಲಿ ಎಂಬ ಆಶಯದೊಂದಿಗೆ…..

ಧರ್ಮೋ ರಕ್ಷತಿ ರಕ್ಷಿತ:
ಬದಲಾಗಿ,
ವೃಕ್ಷೋ ರಕ್ಷತಿ ರಕ್ಷಿತ:
ಎಂಬುದು ನಮ್ಮ ಮೊದಲ ಆಧ್ಯತೆಯಾಗಲಿ……
ಆರೋಗ್ಯವಂತ ಬಲಿಷ್ಠ ಸಮಾಜ ನಮ್ಮದಾಗಲಿ.

ಕೊನೆಯದಾಗಿ ಸರ್ಕಾರಿ ಅಧಿಕಾರಿಗಳಿಗೆ ನನ್ನದೊಂದು ಉಚಿತ ಸಲಹೆಯಿದೆ. ರಸ್ತೆಗಳಿಗೆ ಅಡ್ಡಬರುವ ಮರಗಳನ್ನು ಕಡಿಯುವಂತೆ ಅದೇ ರಸ್ತೆಗಳಲ್ಲಿ ನಿರ್ಧಿಷ್ಟ ಸಂಖ್ಯೆ ಮೀರಿದ ನಂತರ ಪ್ರವೇಶಿಸುವ ಜನರ ತಲೆಗಳನ್ನು ಕತ್ತರಿಸಬೇಕು. ಆಗ ಕನಿಷ್ಠ ಸಾಯುವವರು ಒಳ್ಳೆಯ ಸಾವನ್ನೂ ಬದುಕಿರುವವರು ಒಳ್ಳೆಯ ಬದುಕನ್ನೂ ಅನುಭವಿಸುವಂತಾಗಲಿ.
ಈಗಲೂ ಸರ್ಕಾರಗಳು ಪರೋಕ್ಷವಾಗಿ ಮಾಡುತ್ತಿರುವುದು ಇದನ್ನೇ…..

ಇದೊಂದು ಹುಚ್ಚರ ಸಂತೆ………….
ಛೆ…..ಛೆ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

‘ಯುದ್ಧದ ವಿರುದ್ಧವೇ ಯುದ್ಧ ಸಾರಬೇಕಿದೆ’…

ಯುದ್ಧದ ವಿರುದ್ಧವೇ ಯುದ್ಧ ಸಾರಬೇಕಿದೆ, " War against war... " ಅಸಹಾಯಕರ ನೋವಿನ ಧ್ವನಿ,... ದಯವಿಟ್ಟು ಬನ್ನಿ ಭಾಗವಹಿಸಿ......…

3 hours ago

ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಇಬ್ಬರು ಸ್ನೇಹಿತರು ಸಾವು

ಇಬ್ಬರು ಸ್ನೇಹಿತರು ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ರಾಮಸಮುದ್ರ ಕೆರೆಯಲ್ಲಿ…

5 hours ago

ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಒಂದೇ ದಿನ ಇಬ್ಬರು ಯುವಕರು ಆತ್ಮಹತ್ಯೆ….!

ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲವೆಂದು ಮನನೊಂದು ಒಂದೇ ದಿನ ರಾಜ್ಯದ ಇಬ್ಬರು ಯುವಕರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆಗಳು ಚಿಕ್ಕಮಗಳೂರು…

17 hours ago

ದೇವರ ಆಶೀರ್ವಾದದಿಂದಲೇ ಎರಡು ಬಾರಿ ಸಿಎಂ ಆಗಿದ್ದೇನೆ- ಸಿಎಂ ಸಿದ್ದರಾಮಯ್ಯ

ನಮ್ಮ ಮನೆ ದೇವರಾದ ರಾಮೇಶ್ವರ–ಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದದಿಂದಲೇ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಎರಡು ಬಾರಿ ವಿಪಕ್ಷ ನಾಯಕನಾಗಿ…

18 hours ago

ತೂಬಗೆರೆಯಲ್ಲಿಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ: ಗ್ರಾಮೀಣ ಜನರ ಆರೋಗ್ಯ ಬಹಳ ಮುಖ್ಯ- ಡಾ. ಜ್ಞಾನೇಶ್ವರಿ

ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಅತ್ಯಂತ ಅವಶ್ಯಕ. ಇಂತಹ ಶಿಬಿರಗಳು ಕಾಲಕಾಲಕ್ಕೆ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಲೇ…

18 hours ago

ಜಾತ್ರೆಯಲ್ಲಿ ವ್ಯಕ್ತಿಯ ಭೀಕರ ಕೊಲೆ

ಜಾತ್ರೆಯೊಂದರಲ್ಲಿ ವ್ಯಕ್ತಿಯ ಭೀಕರ ಕೊಲೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಂಗನಗೌಡ ಪಾಟೀಲ್…

1 day ago