ಬದ್ಧತೆಯಿಂದ ಕಾರ್ಯ ನಿರ್ವಹಿಸಿದರೆ ಯಶಸ್ಸು ಸಾಧ್ಯ-ಸ್ತ್ರೀ ರೋಗ ತಜ್ಞೆ ಡಾ.ಶಾಲಿನಿ

ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದರೊಂದಿಗೆ ಬದ್ಧತೆಯಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ನಾವು ಬದುಕಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿದ್ದು, ಮಹಿಳೆಯರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಿದೆ ಎಂದು ಸ್ತ್ರೀ ರೋಗ ತಜ್ಞೆ ಡಾ.ಶಾಲಿನಿ ಹೇಳಿದರು.

ನಗರದ ಅಪೇರಲ್ ಪಾರ್ಕ್ ಸಮೀಪದಲ್ಲಿರುವ ಶ್ರೀ ರಾಮ ಸಮೂಹ ಶಿಕ್ಷಣ ಸಂಸ್ಥೆಯ ಸೂರ್ಯ ಪದವಿ ಪೂರ್ವ ಕಾಲೇಜು, ಶ್ರೀ ರಾಮ ನರ್ಸಿಂಗ್ ಕಾಲೇಜು ಸಹಯೋಗದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳಾ ಸಬಲೀಕರಣ, ಮಹಿಳಾ ಸಶಕ್ತೀಕರಣದ ಧ್ಯೇಯ ಹಾಗೂ ಲಿಂಗ ಅಸಮಾನತೆಯ ವಿರುದ್ದ ದನಿ ಎತ್ತುವ ನಿಟ್ಟಿನಲ್ಲಿ ಮಹಿಳಾ ದಿನಾಚರಣೆ ಪ್ರಮುಖ ಪಾತ್ರ ವಹಿಸಲಿದೆ. ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಬರುತ್ತಿರುವುದು ಸಂತಸದ ಸಂಗತಿಯಾಗಿದೆ. ಇದಕ್ಕೆ ಕುಟುಂಬ ಹಾಗೂ ಸಮುದಾಯದ ಸಹಕಾರ ಬೇಕು. ಮಹಿಳೆ ತನ್ನಲ್ಲಿರುವ ಅಂತರ್ ಶಕ್ತಿಯನ್ನು ಹೊರ ತಂದಾಗ ಮಾತ್ರ ಸಬಲರಾಗಲು ಸಾಧ್ಯ. ಪ್ರಾಪ್ತ ವಯಸ್ಸಿಗೆ ಬಂದು ಯುವತಿಯರು ಸ್ವತಂತ್ರ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮಥ್ಯ್ಯ ಪಡೆದಿರುತ್ತಾರೆ. ಆದರೆ ಇದಕ್ಕೆ ತಕ್ಕೆ ಅರ್ಹತೆ ಪಡೆದುಕೊಳ್ಳಬೇಕು. ಜಂಕ್ ಫುಡ್‍ಗಳ ಆಹಾರ ಸೇವನೆ ನಮ್ಮ ಆರೋಗ್ಯಕ್ಕೆ ಹಾನಿಕರವಾಗಿದ್ದು, ಆರೋಗ್ಯಕ್ಕೆ ಮಹಿಳೆಯರು ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

ಪ್ರಗತಿಪರ ರೈತ ಮಹಿಳೆ ಬಿ.ಮಂಜುಳ ಮಾತನಾಡಿ, ಬದುಕಿನಲ್ಲಿ ಕಷ್ಟಗಳು ಬರುವುದು ಸಹಜ. ಆ ಅದಕ್ಕೆ ಧೃತಿಗೆಡಬಾರದು. ದಶಕಗಳ ಹಿಂದೆ ಗ್ರಾಮೀಣ ಹೆಣ್ಣು ಮಕ್ಕಳಿಗೆ ಶಿಕ್ಷಣ ಎನ್ನವುದು ಮರೀಚಿಕೆಯಾಗಿತ್ತು. ಆದರೆ ಈಗ ಕಾಲ ಬದಲಾಗಿದೆ ಎಂದು ತಾವು ಎಸ್.ಎಸ್.ಎಲ್.ಸಿ ನಂತರದ ದಿನಗಳಲ್ಲಿ ಕಷ್ಟಪಟ್ಟು ಕೃಷಿ ಮಾಡಿದೆ.150 ರೂ ಸಂಬಳ ಪಡೆದು ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡಿದೆ. ಪ್ರಗತಿಪರ ಕೃಷಿ ಮಹಿಳೆ ಸೇರಿದಂತೆ ಹಲವಾರು ಪ್ರಶಸ್ತಿಗಳು ಬಂದಿವೆ. ಇದಕ್ಕೆ ಆತ್ಮ ವಿಶ್ವಾಸವೇ ನನಗೆ ಆಸರೆಯಾಯಿತು. ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಆದ್ಯತೆ ನೀಡಿದರೆ, ಬದುಕಿನಲ್ಲಿ ಬರುವ ಸಂಕಷ್ಟಗಳನ್ನು ಎದುರಿಸಲು ಸಾಧ್ಯ ಎಂದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್ ಮಾತನಾಡಿ, ರಾಜಕೀಯ ಕ್ಷೇತ್ರ ನನಗೆ ಹೊಸತಾದರೂ ಇಲ್ಲಿ ಬಂದು ಒಂದಿಷ್ಟು ಸೇವೆ ಮಾಡಿದ್ದೇನೆ. ಮಹಿಳೆಯರು ಯಾವುದೇ ಕಾರ್ಯ ನಿರ್ವಹಿಸಬಲ್ಲರು ಎನ್ನುವುದನ್ನು ಸಮಾಜಕ್ಕೆ ತೋರಿಸಬೇಕಿದೆ ಎಂದರು.

ಶ್ರೀ ರಾಮ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ.ಮಾಲಾ ವಿಜಯಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರಿಗಾಗುತ್ತಿದ್ದ ತಾರತಮ್ಯ, ಶೋಷಣೆಗಳ ವಿರುದ್ದ ದನಿ ಎತ್ತಿದ ಪ್ರತೀಕವಾಗಿ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದ್ದು, ಇದರ ಹಿನ್ನೆಲೆ ಅರಿಯಬೇಕಿದೆ. ಹೆಣ್ಣು ಮಕ್ಕಳಿಗೆ ಸಾಮಾಜಿಕ ಜವಾಬ್ದಾರಿಗಳಿರುತ್ತವೆ. ಸಾಮಾಜಿಕ ಜಲತಾಣಗಳಲ್ಲಿ ಪೋಸ್ಟ್‌ ಗಳನ್ನು ಹಾಕುವಾಗ ಎಚ್ಚರ ವಹಿಸಬೇಕು. ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್, ಸ್ತ್ರೀ ರೋಗ ತಜ್ಞೆ ಡಾ.ಶಾಲಿನಿ, ನಗರಸಭೆ ಮಾಜಿ ಅಧ್ಯಕ್ಷೆ ಶಾಂತಮ್ಮ, ವಿದುಷಿ ಶಾರದಾ ಶ್ರೀಧರ್,ಪ್ರಗತಿಪರ ರೈತ ಮಹಿಳೆ ಬಿ.ಮಂಜುಳ, ಮುಕ್ತಿಧಾಮದ ನಿರ್ವಾಹಕಿ ಲಕ್ಷ್ಮಮ್ಮ, ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಪಾಲಕರಾದ ರಾಧಾಮಣಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ರಾಮ ಆಸ್ಪತ್ರೆಯ ನಿರ್ದೇಶಕ ಡಾ.ಎಚ್.ಜಿ.ವಿಜಯ ಕುಮಾರ್, ಸುಜ್ಞಾನ ದೀಪಿಕಾ ಜಾಗೃತಿ ಸಂಚಾಲಕರಾದ ಎಂ.ಎಸ್.ಮಂಜುನಾಥ್, ಎಚ್‍ಇಎಚ್‍ಎಸ್ ಪ್ಯಾರಾಮೆಡಿಕಲ್ ಕಾಲೇಜು ಪ್ರಾಂಶುಪಾಲ ರಾಮಮೂರ್ತಿ, ಸೂರ್ಯ ಪ.ಪೂ.ಕಾಲೇಜಿನ ಪ್ರಾಂಶುಪಾಲ ಎಂ.ಸಿ.ಮಂಜುನಾಥ್ ಮೊದಲಾದವರು ಭಾಗವಹಿಸಿದ್ದರು.

Ramesh Babu

Journalist

Recent Posts

ಅಕ್ರಮ ಪಡಿತರ ಅಕ್ಕಿ, ರಾಗಿ ವಶಕ್ಕೆ, ಪ್ರಕರಣ ದಾಖಲು

ಆಹಾರ ಸಚಿವ ಹಾಗೂ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪನವರ ಜಿಲ್ಲೆಯಲ್ಲಿ ಬಡವರಿಗೆ ನೀಡಬೇಕಿದ್ದ ಪಡಿತರ ಅಕ್ಕಿ, ರಾಗಿಯನ್ನು ಕಾಳ ಸಂತೆಯಲ್ಲಿ…

7 hours ago

ಗೆಲ್ಲುತ್ತಲೇ ಇರುವ ರಾಜಕಾರಣಿಗಳು, ಸೋಲುತ್ತಲೇ ಇರುವ ಮತದಾರರು…

ದೃಷ್ಟಿಕೋನ........ ಗೆಲ್ಲುತ್ತಲೇ ಇರುವ ರಾಜಕಾರಣಿಗಳು, ಸೋಲುತ್ತಲೇ ಇರುವ ಮತದಾರರು, ಕನಸು ಕಾಣುತ್ತಲೇ ಇರುವ ಬಡ, ಮಧ್ಯಮ ವರ್ಗದವರು, ಅಧಿಕ ಪ್ರಸಂಗಿಗಳಂತೆ…

8 hours ago

ಅಕ್ರಮ ಸಂಬಂಧಕ್ಕೆ ಒಪ್ಪದ ಮಹಿಳೆಯ ಖಾಸಗಿ ಅಂಗ ತುಳಿದು ದೌರ್ಜನ್ಯ: ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವು: ವ್ಯಕ್ತಿ ಬಂಧನ

ಅಕ್ರಮ ಸಂಬಂಧಕ್ಕೆ ಒಪ್ಪದ ಮಹಿಳೆಯ ಖಾಸಗಿ ಅಂಗವನ್ನು ತುಳಿದು ದೌರ್ಜನ್ಯ ನಡೆಸಿ ಮಹಿಳೆಯ ಸಾವಿಗೆ ಕಾರಣನಾದ ಕಾಮುಕನನ್ನು ಪೊಲೀಸರು ಬಂಧಿಸಿರುವ…

20 hours ago

ಮೇ.5ರಂದು ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಮೇ.5ರಂದು 66/11 ಕೆವಿ ಡಿ.ಕ್ರಾಸ್ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ DF17-ನಂದಿ ಮೋರಿ, DF18-ಬೀಡಿಕೆರೆ ಫೀಡರ್‌ಗಳಲ್ಲಿ ವಿದ್ಯುತ್…

1 day ago

ಚುನಾವಣಾ ಫಲಿತಾಂಶದ ವಿಶ್ಲೇಷಣೆ…..

ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…

1 day ago

ಕಾರ್ಮಿಕ ವರ್ಗದ ವೈದ್ಯಕೀಯ ಸೇವೆಗೆ ಇಎಸ್ಐಸಿ ಆಸ್ಪತ್ರೆ ವರದಾನ- ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ

ಶ್ರಮಿಕ ವರ್ಗದವರು ಹಾಗೂ ಅವರ ಅವಲಂಬಿತರಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ಒದಗಿಸುವಲ್ಲಿ ಇಎಸ್ಐಸಿ ಆಸ್ಪತ್ರೆಯು ವರದಾನವಾಗಲಿದೆ. ಎಲ್ಲಾ ಕಾರ್ಮಿಕರು ವೈದ್ಯಕೀಯ…

2 days ago