Categories: ಲೇಖನ

ಪ್ರತಿಭಟನೆ – ಮುಷ್ಕರ – ಮುತ್ತಿಗೆ – ಚಳವಳಿ – ಬಂದ್ – ಸತ್ಯಾಗ್ರಹ – ಹರತಾಳ – ಅಮರಣಾಂತ ಉಪವಾಸ – ಜೈಲ್ ಭರೋ ..

ಪ್ರತಿಭಟನೆ – ಮುಷ್ಕರ – ಮುತ್ತಿಗೆ – ಚಳವಳಿ – ಬಂದ್ – ಸತ್ಯಾಗ್ರಹ – ಹರತಾಳ – ಅಮರಣಾಂತ ಉಪವಾಸ – ಜೈಲ್ ಭರೋ ……….

ಸಾರಿಗೆ ನೌಕರರ ಮುಷ್ಕರ ನಡೆದ ಹಿನ್ನೆಲೆಯಲ್ಲಿ ಈ ಪ್ರತಿಭಟನೆಗಳ ಬಗ್ಗೆ ಸಾರ್ವಜನಿಕರಲ್ಲಿ ಸಿನಿಕತನ ಮೂಡುತ್ತಿದೆ. ಆಡಳಿತ ವ್ಯವಸ್ಥೆಯ ಬಗ್ಗೆ ನಿರಾಸೆಯಾಗುತ್ತಿದೆ. ಸಾರಿಗೆ ನೌಕರರ ಬೇಡಿಕೆಗಳು ನ್ಯಾಯಯುತವಾಗಿಯೇ ಇವೆ. ಅದನ್ನು ಬೇಗ ಬಗೆಹರಿಸಿದರೆ ಒಳ್ಳೆಯದು. ಆದರೆ ಒಟ್ಟಾರೆಯಾಗಿ ಈ ವ್ಮವಸ್ಥೆಯ ಪ್ರತಿಭಟನೆ, ಆಗ್ರಹಗಳ ಬಗ್ಗೆ ಯೋಚಿಸಿದಾಗ…….

ಬ್ಯಾಂಕ್ ಅಧಿಕಾರಿಗಳು,
” ಬೇಕೆ ಬೇಕು ನ್ಯಾಯ ಬೇಕು ”

ಬೇಡಿಕೆಗಳು — ಸಂಬಳ ಜಾಸ್ತಿ ಮಾಡಿ, ರಜಾ ಸೌಕರ್ಯ ಹೆಚ್ಚು ಮಾಡಿ ಇನ್ನೂ ಇನ್ನೂ……

ಶಿಕ್ಷಕರು,
” ಅನ್ಯಾಯ ಅನ್ಯಾಯ,
ಶಿಕ್ಷಕರಿಗೆ ಅನ್ಯಾಯ ”

ಬೇಡಿಕೆಗಳು — ಸಂಬಳ ಹೆಚ್ಚು ಮಾಡಿ, ಪರೀಕ್ಷಾ ದಿನ ಭತ್ಯೆ ಜಾಸ್ತಿ ಮಾಡಿ ಇನ್ನೂ ಇನ್ನೂ……..

ಅಂಗನವಾಡಿ ಕಾರ್ಯಕರ್ತೆಯರು,
” ಧಿಕ್ಕಾರ ಧಿಕ್ಕಾರ ಸರ್ಕಾರಕ್ಕೆ ಧಿಕ್ಕಾರ ”

ಬೇಡಿಕೆಗಳು — ಗೌರವಧನ ಹೆಚ್ಚಿಸಿ – ಮೂಲ ಭೂತ ಸೌಕರ್ಯ ಒದಗಿಸಿ ಇನ್ನೂ ಇನ್ನೂ………..

ಕನ್ನಡ ಕಾರ್ಯಕರ್ತರು…..
” ಕನ್ನಡ ಉಳಿಸಿ ಕನ್ನಡ ಬೆಳೆಸಿ ”

ಬೇಡಿಕೆಗಳು — ಕರ್ನಾಟಕದಲ್ಲಿ ಕನ್ನಡಕ್ಕೇ ಆದ್ಯತೆ, ಉದ್ಯೋಗದಲ್ಲಿ ಕನ್ನಡಿಗರಿಗೇ ಮೊದಲ ಪ್ರಾಶಸ್ತ್ಯ ಇನ್ನೂ ಇನ್ನೂ……….

ರೈತರು……
” ನ್ಯಾಯ ಕೊಡಿ ಇಲ್ಲ ವಿಷ ಕೊಡಿ ”

ಬೇಡಿಕೆಗಳು — ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಹೆಚ್ಚಿಸಿ, ಸಾಲಾ ಮನ್ನಾ ಮಾಡಿ ಇನ್ನೂ ಇನ್ನೂ……..

ವಿದ್ಯಾರ್ಥಿಗಳು……
” ನ್ಯಾಯ ನಮ್ಮ ಹಕ್ಕು ಅದು ಭಿಕ್ಷೆಯಲ್ಲ ”

ಬೇಡಿಕೆಗಳು — ಪ್ರವೇಶ ಶುಲ್ಕ ಕಡಿಮೆ ಮಾಡಿ, ಶಿಕ್ಷಕರ ಸಂಖ್ಯೆ ಹೆಚ್ಚು ಮಾಡಿ ಇನ್ನೂ ಇನ್ನೂ…..

ಕಾರ್ಮಿಕರು…..
” ನ್ಯಾಯ ಕೊಡಿ ಇಲ್ಲವೇ ಅಧಿಕಾರ ಬಿಡಿ ”

ಬೇಡಿಕೆಗಳು — ಕನಿಷ್ಠ ಸಂಬಳ ಹೆಚ್ಚಿಸಿ, ಮಾಲೀಕರ ಶೋಷಣೆ ತಡೆಯಿರಿ……

ಸರ್ಕಾರಿ ಅಧಿಕಾರಿಗಳು, ಮಹಿಳೆಯರು, ಅವರು ಇವರು ಎಂದು ಲೆಕ್ಕಾ ಹಾಕುತ್ತಾ ಸಾಗಿದರೆ ಬಹುತೇಕ ಎಲ್ಲರೂ ಬೇರೆ ಯಾವುದೋ ಕಾರಣಕ್ಕಾಗಿ ಒಂದಲ್ಲಾ ಒಂದು ರೀತಿಯ ಅಸಮಾಧಾನ ಹೊರ ಹಾಕುತ್ತಾರೆ.

ಹಾಗಾದರೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೇ ಚುನಾಯಿಸಿದ ಸರ್ಕಾರ ಮಾಡುತ್ತಿರುವುದಾದರೂ ಏನು ? ಅಥವಾ ನಮ್ಮದೇ ಸರ್ಕಾರದ ವಿರುದ್ಧ ಹೋರಾಡುವ ನಾವೇ ಅವಾಸ್ತವ ಬೇಡಿಕೆಗಳನ್ನು ಇಡುತ್ತಿದ್ದೇವೆಯೇ ? ಅಥವಾ ನ್ಯಾಯ, ಅನ್ಯಾಯ, ಬೇಡಿಕೆ, ಪೂರೈಕೆ, ವಾಸ್ತವ, ಭ್ರಮೆ, ಸರ್ಕಾರ, ಸಾರ್ವಜನಿಕ ಕರ್ತವ್ಯಗಳು ಈ ಎಲ್ಲವನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೇವೆಯೇ….

ಅಪರೂಪಕ್ಕೆ ಸರ್ಕಾರದ ಕೆಲವು ಅಚಾತುರ್ಯದ ವಿರುದ್ಧ ಹೋರಾಡಬೇಕಾದ ಜನ ಪ್ರತಿನಿತ್ಯ ಒಂದಲ್ಲ ಒಂದು ಕಾರಣಕ್ಕೆ ಪ್ರತಿಭಟಿಸುತ್ತಾ ಅದನ್ನೇ ವೃತ್ತಿ ಅಥವಾ ಹವ್ಯಾಸ ಮಾಡಿಕೊಳ್ಳುವ ಮಟ್ಟಕ್ಕೆ ಆಡಳಿತ ವ್ಯವಸ್ಥೆ ಕುಸಿಯಲು ಕಾರಣವೇನು?

ಸರ್ಕಾರ ಮತ್ತು ಸಾರ್ವಜನಿಕರ ಮಧ್ಯೆ ಎಲ್ಲೋ ಕೊಂಡಿ ಕಳಚಿದೆ. ಸಮನ್ವಯ ಸಾಧ್ಯವೇ ಆಗುತ್ತಿಲ್ಲ. ಅವರ ಬೇಡಿಕೆ ಮತ್ತು ಪೂರೈಕೆ ತುಂಬಾ ದೂರದಲ್ಲಿದೆ. ಪ್ರಜಾಪ್ರಭುತ್ವದ ನಿಜ ಯಶಸ್ಸು ಸರ್ಕಾರದ ಜನ ಸ್ಪಂದನೆಯ‌ ಆಧಾರದಲ್ಲಿ ನಿರ್ಧರಿಸಬೇಕಿದೆ. ಅದನ್ನು ಸರಿದೂಗಿಸುವುದೇ ಜನರ ಜೀವನಮಟ್ಟ ಸುಧಾರಣೆಯ ಮೊದಲ ಮೆಟ್ಟಿಲು ಎಂದು ಭಾವಿಸಬಹುದೇ ?

ಖಜಾನೆ ಸಂಘರ್ಷ……..

ಸಾರ್ವಜನಿಕ ಖಜಾನೆಯ ಹಣ ಹಂಚಿಕೆಗಾಗಿ ಶಾಸಕಾಂಗ ಮತ್ತು ಕಾರ್ಯಾಂಗದ ನಡುವಿನ ಸಂಘರ್ಷ ಎಂದು ಕರೆಯಬಹುದೇ ಈ ಮುಷ್ಕರಗಳನ್ನು………..

ಇಲ್ಲ ಇಲ್ಲ. ನಾವು ಸುಮ್ಮನೆ ಹಣ ಪಡೆಯುತ್ತಿಲ್ಲ. ಶಾಸಕಾಂಗ ಮತ್ತು ಕಾರ್ಯಾಂಗ ಕಾರ್ಯನಿರ್ವಹಿಸುತ್ತಿರುವುದೇ ಜನರಿಗಾಗಿ. ಶಾಸಕಾಂಗ ಸಮಯದ ಮಿತಿ ಇಲ್ಲದೆ ಕೆಲಸ ಮಾಡಿದರೆ, ಕಾರ್ಯಾಂಗ ದಿನದ 10 ಗಂಟೆ ಸುಮಾರು 30 ವರ್ಷಗಳಷ್ಟು ದೀರ್ಘಕಾಲ ಕೆಲಸ ಮಾಡುತ್ತದೆ. ಈಗಲೂ ಲಕ್ಷಾಂತರ ಅವಶ್ಯಕ ಹುದ್ದೆಗಳು ಭರ್ತಿಯಾಗದೆ ಖಾಲಿ ಇದ್ದರೂ ಕೆಲಸದ ಒತ್ತಡವನ್ನು ನಿಭಾಯಿಸಿ ಕೆಲಸ ಮಾಡುತ್ತಿದ್ದೇವೆ. ನಾವು ಆರ್ಥಿಕವಾಗಿ ಸಮಾಧಾನಕರ ಪರಿಸ್ಥಿತಿಯಲ್ಲಿ ಇಲ್ಲದಿದ್ದರೆ ಸಾರ್ವಜನಿಕ ಸೇವೆಯನ್ನು ನೆಮ್ಮದಿಯಾಗಿ ಮಾಡಲು ಸಾಧ್ಯವೇ. ಆದ್ದರಿಂದ ತಕ್ಷಣದಿಂದಲೇ ನಮ್ಮ ಕಾನೂನಾತ್ಮಕ ಮತ್ತು ನ್ಯಾಯಯುತ ಬೇಡಿಕೆ ಈಡೇರಿಸಲೇ ಬೇಕು. ಅದಕ್ಕಾಗಿ ಮುಷ್ಕರ ಮಾಡುವುದು ನಮ್ಮ ಹಕ್ಕು ಎಂದು ಮುಷ್ಕರ ನಿರತರ ಅಭಿಪ್ರಾಯ.

ತಪ್ಪು ತಪ್ಪು. ಈಗಾಗಲೇ ಸಾರ್ವಜನಿಕ ಖಜಾನೆಯ ದೊಡ್ಡ ಮೊತ್ತ ಶಾಸಕಾಂಗ ಮತ್ತು ಕಾರ್ಯಾಂಗದ ಸಂಬಳ – ಸಾರಿಗೆ ಮುಂತಾದ ನಿರ್ವಹಣೆಗಾಗಿಯೇ ಖರ್ಚಾಗುತ್ತಿದೆ. ಅವರಿಗೆ ನೀಡುವ ಸಂಬಳವೇ ತುಂಬಾ ಜಾಸ್ತಿ. ಕೋಟ್ಯಂತರ ಜನ ಇದಕ್ಕಿಂತ ಕಡಿಮೆ ಸಂಬಳದಲ್ಲಿ ಯಾವುದೇ ಭದ್ರತೆಯಿಲ್ಲದೇ ಬದುಕುತ್ತಿರುವಾಗ ಇನ್ನಷ್ಟು ಸಂಬಳ ಹೆಚ್ಚು ಮಾಡುವಂತೆ ಮುಷ್ಕರ ಮಾಡುವುದು ಸರಿಯಲ್ಲ. ಜೊತೆಗೆ ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಮೇಲೆ ಬಹುದೊಡ್ಡ ಭ್ರಷ್ಟಾಚಾರದ ಆರೋಪಗಳಿವೆ. ಸರ್ಕಾರದ ಖಜಾನೆಯನ್ನು ‌ಲೂಟಿ ಮಾಡುವವರು ಇವರೇ. ಇದು ಬಹುತೇಕ ನಿಜವಲ್ಲವೇ ಎಂದು ಸಾರ್ವಜನಿಕರ ಅಭಿಪ್ರಾಯ…….

ಸಾರ್ವಜನಿಕ ಹಣದಿಂದಲೇ ತಮ್ಮ ಬದುಕು ರೂಪಿಸಿಕೊಂಡಿರುವ ಶಾಸಕಾಂಗ ಮತ್ತು ಕಾರ್ಯಾಂಗದ ನಡುವಿನ ಸಂಘರ್ಷದಲ್ಲಿ ಜನರಿಗೆ ತೊಂದರೆಯಾಗುವುದು ನಿಶ್ಚಿತ. ಅದರಲ್ಲೂ ಬಂದ್ ಮಾಡಿದರೆ ಇಡೀ ಆಡಳಿತ ವ್ಯವಸ್ಥೆಯೇ ಸ್ತಬ್ಧವಾಗುತ್ತದೆ. ಅದರ ಪರಿಣಾಮ ಅನುಭವಿಸುವವರು ಸಾಮಾನ್ಯ ಜನರು……

ಖಜಾನೆಗೆ ಬರುವ ಹಣವೆಷ್ಟು, ಖರ್ಚಾಗುವ ಹಣವೆಷ್ಟು, ಉಳಿತಾಯ ಅಥವಾ ಸಾಲದ ಹಣವೆಷ್ಟು, ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು ಎಂದು ವಾರ್ಷಿಕ ಬಜೆಟ್ ಮಂಡಿಸುವ ದಿನಗಳಲ್ಲಿ ಇಷ್ಟೊಂದು ದೊಡ್ಡ ಮುಷ್ಕರ ನಡೆಯುವುದಾದರೆ ಆಡಳಿತ ವ್ಯವಸ್ಥೆಯ ಬಗ್ಗೆ ಮರುಕ ಉಂಟಾಗುತ್ತದೆ. ದೊಡ್ಡ ದೊಡ್ಡ ಮಂತ್ರಿಗಳು, ಅಧಿಕಾರಿಗಳಿಗೇ ತಮ್ಮ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದರೆ ಇನ್ನು ಆಡಳಿತ ನಡೆಸುವುದು ಹೇಗೆ. ಕನಿಷ್ಠ ನ್ಯಾಯಾಂಗವಾದರೂ ಮಧ್ಯೆ ಪ್ರವೇಶಿಸಬೇಕಲ್ಲವೇ. ಇಲ್ಲದಿದ್ದರೆ ಮುಷ್ಕರದಿಂದ ಆಗುವ ನಷ್ಟಕ್ಕೆ ಹೊಣೆ ಯಾರು. ಆ ನಷ್ಟವನ್ನು ಬೆಲೆ ಏರಿಸುವ ಮೂಲಕ ಸರಿದೂಗಿಸಬಹುದು‌ ಎಂಬ ಅಹಂಕಾರ ಆಡಳಿತಗಾರರಿಗೆ ಇರಬಹುದೇ…..

ಅಸಂಘಟಿತ ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಿಗಳು, ಶೋಷಿತರು, ದೌರ್ಜನ್ಯಕ್ಕೆ ಒಳಗಾದವರು ಇತ್ಯಾದಿ ದುರ್ಬಲ ವರ್ಗದವರು ಮುಷ್ಕರ ಹೂಡಿದರೆ ಸಹಿಸಬಹುದು. ಅಧಿಕಾರ ಕೇಂದ್ರದಲ್ಲಿ ಕುಳಿತವರೇ ಒಬ್ಬರಿಗೊಬ್ಬರು ಜಗಳವಾಡಿದರೆ ಸಾಮಾನ್ಯರ ಗತಿ ಏನು…….

ಆಡಳಿತ ವ್ಯವಸ್ಥೆ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದೇ ಆಗಿದ್ದರೆ ಸಮಯಕ್ಕೆ ಸರಿಯಾಗಿ ಬೇಡಿಕೆಗಳ ಕುರಿತು ಸಮಿತಿ ರಚಿಸಿ ನಿಗದಿತ ಅವಧಿಯೊಳಗೆ ವರದಿ ತರಿಸಿಕೊಂಡು ಯಾವುದೇ ಗೊಂದಲಗಳಿಗೆ ಆಸ್ಪದ ಇಲ್ಲದಂತೆ ಜಾರಿ ಮಾಡಬಹುದಿತ್ತು. ಶಾಸಕಾಂಗಕ್ಕೆ ದಕ್ಷತೆ ಇಲ್ಲ ಮತ್ತು ಬೇಜವಾಬ್ದಾರಿ. ಹಾಗೆಯೇ ಕಾರ್ಯಾಂಗಕ್ಕೆ ತಾಳ್ಮೆಯಿಲ್ಲ ಮತ್ತು ಹೊಂದಾಣಿಕೆಯ ಮನೋಭಾವ ಇಲ್ಲ. ಕಷ್ಟ ಅನುಭವಿಸುವುದು ಮಾತ್ರ ಸಾಮಾನ್ಯ ಜನ.

ಶಾಸಕರುಗಳು ತಮ್ಮ ಕೆಲಸ ಸರಿಯಾಗಿ ನಿರ್ವಹಿಸದಿದ್ದರು ಒಂದೇ ದಿನದಲ್ಲಿ ತಮ್ಮ ವೇತನವನ್ನು ಯಾವುದೇ ಚರ್ಚೆ, ಪ್ರತಿರೋಧ ಇಲ್ಲದೇ ದುಪ್ಪಟ್ಟು ಮಾಡಿಕೊಳ್ಳುತ್ತಾರೆ. ಅಧಿಕಾರಿಗಳು ಮುಷ್ಕರ ಮಾಡಿ ತಮ್ಮ ಸಂಬಳ ಹೆಚ್ಚು ಮಾಡಿಕೊಳ್ಳುತ್ತಾರೆ.

ಕಾರ್ಮಿಕರು, ರೈತರು, ಬೀದಿ ಬದಿಯ ವ್ಯಾಪಾರಿಗಳು ದುಡಿದು ದುಡಿದು ಊಟ, ಬಟ್ಟೆ, ವಸತಿ, ಶಿಕ್ಷಣ, ಆರೋಗ್ಯಕ್ಕಾಗಿ ಜೀವನ ಪೂರ್ತಿ ಒದ್ದಾಡುತ್ತಲೇ ಪ್ರಾಣ ಬಿಡುತ್ತಾರೆ. ಅದರಲ್ಲೂ

ಈಗ ಮುಷ್ಕರಕ್ಕೆ ಕಾರಣರಾದವರು ಮತ್ತು ಮುಷ್ಕರ ಮಾಡುತ್ತಿರುವವರು ಇಬ್ಬರೂ ಹೊಟ್ಟೆ ತುಂಬಿದವರು ಮತ್ತು ಸರ್ಕಾರಿ ಖಜಾನೆಯಿಂದ ನಿಶ್ಚಿತ ನಿರ್ಧಿಷ್ಟ, ಖಚಿತ ಮತ್ತು ಯಾವುದೇ ಸಂಕಷ್ಟದಲ್ಲೂ ಮೊದಲು ಹಣ ಪಡೆಯುವವರು. ಮುಷ್ಕರದಿಂದ ತೊಂದರೆ ಒಳಗಾಗುವವರು ಆ ಖಜಾನೆಗೆ ಹಣ ತುಂಬುವವರು.

ಆದ್ದರಿಂದ ದಯವಿಟ್ಟು ಮುಷ್ಕರ ಮಾಡುವವರು ಮತ್ತು ಅದಕ್ಕೆ ಕಾರಣರಾದವರು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ.
ಜೊತೆಗೆ ಸರ್ಕಾರಿ ಅಧಿಕಾರಿಗಳೇ ನಿಮ್ಮ ಸಂಬಳ ಹೆಚ್ಚಾದ ಮೇಲೆ ಇಡೀ ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರ ಕಡಿಮೆಯಾಗುವಂತೆ ನೋಡಿಕೊಳ್ಳಿ. ನಿಮ್ಮ ಸಂಘಟನೆಯನ್ನು ಕೇವಲ ನಿಮ್ಮ ಹಕ್ಕುಗಳಿಗೆ ಮಾತ್ರ ಸೀಮಿತವಾಗದೆ ಸಾರ್ವಜನಿಕ ಸೇವೆಗಾಗಿಯೂ ಮೀಸಲಿಡಿ. ಅವರ ಋಣದಲ್ಲಿ ನೀವಿದ್ದೀರಿ ಎಂಬುದನ್ನು ನೆನಪಿಟ್ಟುಕೊಳ್ಳಿ.

ಮುಖ್ಯಮಂತ್ರಿಗಳೇ, ಸಾರ್ವಜನಿಕರ ಸೇವೆಗೆ ಹೆಚ್ಚು ಸಮಯ ಮೀಸಲಿಡಿ. ಈ ಸಮಸ್ಯೆಯನ್ನು ಬೇಗ ಪರಿಹರಿಸಿ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ದಶಕಗಳುರುಳಿದರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಿಲ್ಲ ಜಿಲ್ಲಾ ಕೇಂದ್ರ

ರಾಜ್ಯ ರಾಜಧಾನಿ ಬೆಂಗಳೂರಿಗೆ ಪಕ್ಕದಲ್ಲೇ ಇರುವ ಜಿಲ್ಲೆ ಎಂದರೆ ಅದು ಬೆಂಗಳೂರು ಗ್ರಾಮಾಂತರ ಜಿಲ್ಲೆ. ಕೈಗಾರಿಕಾ ಬೆಳವಣಿಗೆ, ವೇಗವಾದ ನಗರೀಕರಣ,…

5 hours ago

ದೇವೇಗೌಡರ ವ್ಯಕ್ತಿತ್ವವನ್ನು ವಿಮರ್ಶೆಗೆ ಒಳಪಡಿಸುವುದು ಸಹ ಅಷ್ಟೇ ಸಂಕೀರ್ಣ….

ಸನ್ಮಾನ್ಯ ಶ್ರೀ ಎಚ್. ಡಿ. ದೇವೇಗೌಡ,... 94, ನಾಟ್ ಔಟ್, ಶತಕಕ್ಕೆ 6 ಮಾತ್ರ ಬಾಕಿ, ಅವರು ಶತಕವನ್ನು ಪೂರೈಸಲಿ…

6 hours ago

ಮೇ 20 ಇ-ಫಾರ್ಮಸಿ ವಿರೋಧಿ ಬಂದ್‌ಗೆ ಔಷಧ ವ್ಯಾಪಾರಿಗಳ ಬೆಂಬಲ

ದೊಡ್ಡಬಳ್ಳಾಪುರ: ದೇಶದಲ್ಲಿ ಇ-ಫಾರ್ಮಸಿ ಹಾಗೂ ಆನ್ಲೈನ್ ಮೂಲಕ ಔಷಧ ಮಾರಾಟವನ್ನು ವಿರೋಧಿಸಿ ಮೇ 20 ರಂದು ದೇಶವ್ಯಾಪಿ ಕರೆ ನೀಡಿರುವ…

16 hours ago

ಹಾಡೋನಹಳ್ಳಿ ವಿಎಸ್ ಎಸ್ ಎನ್ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಹಾಡೋನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘ(ವಿಎಸ್ಎಸ್ ಎನ್) ಚುನಾವಣೆ ನಡೆದಿದ್ದು, ವಿಎಸ್ಎಸ್ ಎನ್ ನ…

17 hours ago

ವಿ.ಡಿ ಸತೀಶನ್ ಕೇರಳದ ನೂತನ ಮುಖ್ಯಮಂತ್ರಿ

ವಿಡಿ ಸತೀಶನ್ ಅವರು ಕೇರಳದ ನೂತನ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ತಿರುವನಂತಪುರಂನ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ ಪ್ರಮಾಣವಚನ ಸ್ವೀಕಾರ…

21 hours ago

ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆ ಮತ್ತು ನೀಟ್ ಪರೀಕ್ಷೆಯ ಅಕ್ರಮ ಖಂಡಿಸಿ “ಕೈ” ಪ್ರತಿಭಟನೆ

ದೊಡ್ಡಬಳ್ಳಾಪುರ: ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆ ಮತ್ತು ನೀಟ್ (NEET) ಪರೀಕ್ಷೆಯ ಅಕ್ರಮಗಳನ್ನು ಖಂಡಿಸಿ ಬೆಂಗಳೂರು…

23 hours ago