ಪ್ಯಾಲಸ್ಟೈನ್- ಇಸ್ರೇಲ್ ಯುದ್ಧ: ಯುದ್ಧ ನಿಲ್ಲಿಸುವಂತೆ ಪ್ರತಿಭಟನೆ: ‘ಸತ್ಯವನ್ನ ಅರಿಯದೇ ಪ್ಯಾಲಸ್ಟೈನ್ ವಿರುದ್ಧ ಕನ್ನಡದ ಕೆಲ ದೃಶ್ಯ ಮಾಧ್ಯಮಗಳು‌ ನಿಂತಿವೆ’- ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ ಆರೋಪ

ಜಗತ್ತಿನಾದ್ಯಂತ ಕೋಟ್ಯಂತರ ಜನ ಪ್ಯಾಲೆಸ್ಟೈನ್ ಹಾಗೂ ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ದ ಬೇಡ ಎಂದು ಬೀದಿಗೆ ಬಂದು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ನಮ್ಮ ಕನ್ನಡದ ಕೆಲ ದೃಶ್ಯ ಮಾಧ್ಯಮಗಳು ಸತ್ಯವನ್ನು ಅರಿಯದೆ ಜಗತ್ತೇ ಪ್ಯಾಲೆಸ್ಟೈನ್ ವಿರುದ್ಧ ನಿಂತಿದೆ ಎಂದು ಸುದ್ದಿ ಬಿತ್ತರಿಸುತ್ತಿವೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ ಅವರು ಆರೋಪಿಸಿದರು.

ದೊಡ್ಡಬಳ್ಳಾಪುರ ತಾಲ್ಲೂಕು ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆ ವತಿಯಿಂದ ಪ್ಯಾಲೆಸ್ಟೈನ್  ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ದವನ್ನು ನಿಲ್ಲಿಸುವಂತೆ ಒತ್ತಾಯಿಸಿ ನಗರದ ತಾಲೂಕು ಕಚೇರಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ಮಾದ್ಯಮಗಳು ಇತಿಹಾಸ ಮತ್ತು ಸತ್ಯಗಳನ್ನು ತಿಳಿದು ಮಾತನಾಡಬೇಕು ಎಂದು ಒತ್ತಾಯಿಸಿದ ಅವರು ಮಾಧ್ಯಮಗಳು ಫ್ಯಾಸಿಸ್ಟ್ ವಾದಿ ಬಲಪಂಥೀಯರಂತೆ ನಡೆದುಕೊಳ್ಳುವುದು ಅಘಾತಕಾರಿ ಹಾಗೂ ಜೀವ ವಿರೋಧಿಯಾದುದು ಎಂದು ಕಳವಳ ವ್ಯಕ್ತಪಡಿಸಿದರು.

ಜರ್ಮಿನಿಯ ಫ್ಯಾಸಿಸ್ಟ್ ಹಿಟ್ಲರ್ ನೇತೃತ್ವದ ಸರ್ಕಾರ ನಡೆಸಿದ ಜನಾಂಗೀಯ ಹತ್ಯೆಗೆ ಒಳಗಾಗಿ ನಿರಾಶ್ರಿತರಾಗಿ ಪ್ಯಾಲೆಸ್ಟೈನ್ ‌ನಲ್ಲಿ ಬಂದು ನೆಲೆಸಿರುವ ಯಹೂದಿಗಳನ್ನು ಇಸ್ರೇಲ್ ಪ್ಯಾಲೆಸ್ಟೈನ್ ಹಳ್ಳಿಗಳಿಗೆ ನುಗ್ಗಿ ಅವರ ಆಸ್ತಿಗಳನ್ನು ಕಬಳಿಸಿದೆ. ಅವರದೇ ದೇಶದಲ್ಲಿ ಅವರನ್ನು ಪ್ರಾಣಿಗಳ ರೀತಿ ಬಂದಿಸಿದೆ. ಕಳೆದ 70 ವರ್ಷದಿಂದ ಲಕ್ಷಾಂತರ ಜನರನ್ನು ಕೊಂದಿದೆ. ಕಳೆದ 15 ದಿನಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಸುಮಾರು 15 ಸಾವಿರ ಜನ ಅಮಾಯಕರು ಎರಡು ಕಡೆ ಸತ್ತಿದ್ದಾರೆ. ಇದರಲ್ಲಿ ಸುಮಾರು 3,500 ಮಕ್ಕಳ ಸಾವು ನಾಗರೀಕ ಸಮಾಜವನ್ನು ಕಂಗೆಡಿಸಿದೆ. ಈ ಎರಡು ದಶಕದಲ್ಲಿಯೇ ಸುಮಾರು 50 ಸಾವಿರ ಮಕ್ಕಳನ್ನು ಇಸ್ರೇಲ್ ಕೊಂದಿದೆ ಎಂದು ಆಕ್ರೋಶ ಹೊರಹಾಕಿದರು.

 ಇಸ್ರೇಲಿಗಳು ಈ ರೀತಿ ಕ್ರೂರವಾಗಿ ನಡೆದು ಕೊಳ್ಳುತ್ತಿರುವುದನ್ನು ಜಗತ್ತಿನ ನಾಗರೀಕ ಜನತೆ ಉಗ್ರವಾಗಿ ಖಂಡಿಸಲೇಬೇಕು ಎಂದ ಅವರು, ಅಮೇರಿಕಾದ ಕುಮ್ಮಕ್ಕು, ಮಿಲಟರಿ ಮತ್ತು ಹಣಕಾಸಿನ ನೆರವಿನಿಂದ ಕೊಬ್ಬಿರುವ ಇಸ್ರೇಲ್ ಇಡೀ ಮಧ್ಯ ಪ್ರಾಚ್ಯದಲ್ಲಿ ಅಶಾಂತಿಗೆ ಕಾರಣವಾಗಿದೆ. ಅಮೇರಿಕಾದ ಕಾರ್ಪೊರೇಟ್ ಕಂಪನಿಗಳು, ಅದರ ಯಹೂದಿ ಮಾಲೀಕರು ಅಪಾರ ಪ್ರಮಾಣದಲ್ಲಿ ಯುದ್ಧ ಶಸ್ತಾಸ್ತ್ರಗಳನ್ನು ಉತ್ಪಾದಿಸಿ ಲಾಭ ಮಾಡಲು ಈ ಯುದ್ಧವನ್ನು ಪ್ರಚೋದನೆ ಮಾಡಲಾಗಿದೆ ಎಂದು ಆರೋಪಿಸಿದರು.

ಸಿಪಿಐಎಂ ತಾಲ್ಲೂಕು ಕಾರ್ಯದರ್ಶಿ ರುದ್ರ‌ಆರಾಧ್ಯ ಅವರು ಮಾತನಾಡಿ, ಯುದ್ಧಕೋರ ಅಮೇರಿಕಾ, ಇಂಗ್ಲೆಡ್ ದೇಶಗಳ ಬಾಲ ಬಡುಕ ಇಸ್ರೇಲ್ ನಿಲುವನ್ನು ಖಂಡಿಸುತ್ತೇವೆ. ಇಸ್ರೇಲ್ ಮತ್ತು ಪ್ಯಾಲೆಸ್ಟೀನನಲ್ಲಿ ನಡೆಯುತ್ತಿರುವ ಯುದ್ಧವನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಯುದ್ಧ ನಿಲುಗಡೆಗಾಗಿ ನಡೆದ ವಿಶ್ವ ಸಂಸ್ಥೆಯ ಸಭೆಯಲ್ಲಿ ಭಾರತ ಹಾಜರಾಗದೆ, ಅಮೇರಿಕ ಇಸ್ರೇಲ್ ಮತ್ತು ಇಂಗ್ಲೆಂಡ್ ಜೊತೆಯಲ್ಲಿ ನಿಂತಿರುವುದು ಅತ್ಯಂತ ಖಂಡನೀಯ, 120 ದೇಶಗಳು ಇಸ್ರೇಲ್‌ ವಿರುದ್ಧ ಮತಹಾಕಿವೆ. ಆದರೆ ನಮ್ಮ ಭಾರತದ ಈಗಿನ ಬಲಪಂಥೀಯ, ಪ್ಯಾಸಿಸ್ಟ್ ಮೋದಿ ನೇತೃತ್ವದ ಸರ್ಕಾರ ಇನ್ನೊಂದು ಪ್ಯಾಸಿಸ್ಟ್ ಸರ್ಕಾರದ ಪರ ನಿಂತಿರುವುದು ಆಶ್ಚರ್ಯವಲ್ಲ, ಭಾರತ ಇಸ್ರೇಲ್-ಪ್ಯಾಲೆಸ್ಟೀನ್ ಸ್ವಾತಂತ್ರ್ಯ ರಾಷ್ಟ್ರಗಳ ನಿರ್ಮಾಣವನ್ನು ಸದಾಕಾಲ ಬೆಂಬಲಸಿದೆ. ಆದ್ದರಿಂದ ಭಾರತದ ಶಾಂತಿಪ್ರಿಯ ಜನತೆಯಾದ ನಾವು ಈ ಕೂಡಲೇ ಯುದ್ಧ ನಿಲ್ಲಿಸಬೇಕು ಈ ಎರಡು ದೇಶಗಳು ವಿಶ್ವ ಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಮಾತುಕತೆಯ ಮೂಲಕ ಎಲ್ಲಾ ವಿವಾದ-ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಬೇಕೆಂದು ಒತ್ತಾಯಿಸುತ್ತೇವೆ. ಯುದ್ಧದಿಂದಾಗಿರುವ ಸಾವು-ನೋವುಗಳಿಗೆ ಅಗತ್ಯ ಪರಿಹಾರ ಒದಗಿಸಬೇಕು, ಭಾರತ ಸರ್ಕಾರದ ಇಸ್ರೇಲ್ ಪರವಾದ ನಿಲುವನ್ನು ಬದಲಾಯಿಸಲು ಮತ್ತು ಜವಹಾರಲಾಲ್ ನೆಹರುರವರ ಪ್ಯಾಲೆಸ್ಟೀನ್ ಪರ ನಿಲುವನ್ನು ಗೌರವಿಸಬೇಕೆಂದು ಒತ್ತಾಯಿಸುತ್ತೇವೆ ಎಂದರು.

ಪ್ರತಿಭಟನೆಯಲ್ಲಿ ವೇದಿಕೆಯ ಸಂಚಾಲಕ ಪ್ರಜಾ ವಿಮೋಚನಾ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಗೂಳ್ಯ ಹನುಮಣ್ಣ, ಕನ್ನಡ ಪಕ್ಷದ ಮುಖಂಡರಾದ ಸಂಜೀವ್ ನಾಯಕ, ಮುನಿಪಾಪಯ್ಯ, ವೆಂಕಟೇಶ್, ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ಸಂಘಟನೆಯ ತೂಬಗೆರೆ ಷರೀಫ್, ಕರ್ನಾಟಕ ಪ್ರಾಂತರೈತ ಸಂಘದ ತಾಲ್ಲೂಕು ಅಧ್ಯಕ್ಷ ವಿಜಯ್ ಕುಮಾರ್, ಯುವ ಸಂಚಲನದ ಚಿದಾನಂದಮೂರ್ತಿ, ಟಿಪ್ಪು ಸಮಿತಿಯ ಡಿ.ಕೆ.ಬಾಬ, ಕಾಂಗ್ರೆಸ್ ಮುಖಂಡರಾದ ಶೋಭ ಪ್ರದೀಪ್, ಮುನ್ನ, ಬಷೀರ್ ಅಹ್ಮದ್, ಮೋಸಿನಾ, ಮಹಮದ್ ಪಾಷ, ಮಾನವ ಬಂಧುತ್ವ ವೇದಿಕೆಯ ವೆಂಕಟೇಶ್, ಎಆರ್‌ಡಿಎಸ್ ನ ಎಜಾಜ್, ಸಾಧಿಕ್, ಡಿವೈಎಫ್‌ಐ ನಟರಾಜು, ಬಿರ್ಲಾ ಸೂಪರ್ ಸಂಘಟನೆಯ ಮುಕ್ಷು, ಅಕ್ಬರ್ ಅಲಿ, ಗಗನ್ ಸಿಂಗ್, ಸಿಪಿಐಎಂ ನ ರಘುಕುಮಾರ್, ವೇದಿಕೆಯ ಸಂಚಾಲಕ ರಾಜುಸಣ್ಣಕ್ಕಿ ಮುಂತಾದವರು ಉಪಸ್ಥಿತರಿದ್ದರು.

Ramesh Babu

Journalist

Recent Posts

ತೂಬಗೆರೆ ಎಂ.ಪಿ.ಆರ್.ಎ.ಸಿ.ಎಸ್. ಚುನಾವಣೆ: ಬಿಜೆಪಿ–ಜೆಡಿಎಸ್ ಮೈತ್ರಿಗೆ ಸ್ಪಷ್ಟ ಬಹುಮತ

ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘ (ಎಂ.ಪಿ.ಆರ್.ಎ.ಸಿ.ಎಸ್.)ದ 2026–2031ನೇ ಅವಧಿಯ ಆಡಳಿತ ಮಂಡಳಿ…

8 hours ago

ಗಾಳಿಪಟವು ಒಂದು ಕಲೆಯಷ್ಟೇ ಅಲ್ಲ ಸಾಹಸದ ಪ್ರವೃತ್ತಿಯೂ ಆಗಿದೆ- ಪ್ರೊ. ಹಿ.ಚಿ. ಬೋರಲಿಂಗಯ್ಯ

ದೊಡ್ಡಬಳ್ಳಾಪುರ: ಆಷಾಢ ಮಾಸದಲ್ಲಿ ಗಾಳಿಪಟ ಹಾರಿಸುವುದು ನಮ್ಮ ಭಾಗದ ಸಾಂಪ್ರದಾಯಿಕ ಆಚರಣೆಯಾಗಿದ್ದು, ಗಾಳಿಪಟವು ಒಂದು ಕಲೆಯಷ್ಟೇ ಅಲ್ಲ ಸಾಹಸದ ಪ್ರವೃತ್ತಿಯೂ…

14 hours ago

ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ ಸುಸೂತ್ರ; ದೊಡ್ಡಬಳ್ಳಾಪುರದ 7 ಕೇಂದ್ರಗಳಲ್ಲಿ ಯಶಸ್ವಿ ಆಯೋಜನೆ

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕರ್ನಾಟಕ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆ ಭಾನುವಾರ ಯಾವುದೇ ಅಡಚಣೆ ಅಥವಾ…

16 hours ago

ಈ ಬಾರಿಯ ದಸರಾ ಉದ್ಘಾಟನೆ ಯಾರು ಮಾಡಿದರೆ ಉತ್ತಮ…..

ಇತ್ತೀಚೆಗೆ ಹೊಸದಾಗಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ, ಡಾಕ್ಟರ್ ರಾಮ್ ಮನೋಹರ್ ಲೋಹಿಯಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಮಳವಳ್ಳಿ ಶಿವಣ್ಣ…

2 days ago

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಗೂಡ್ಸ್ ವಾಹನ: ತಪ್ಪಿದ ಭಾರೀ ಅನಾಹುತ

ದೊಡ್ಡಬಳ್ಳಾಪುರ: ನೆಲಮಂಗಲದಿಂದ ದೊಡ್ಡಬಳ್ಳಾಪುರದತ್ತ ಬರುತ್ತಿದ್ದ ಗೂಡ್ಸ್ ವಾಹನವು ಅರಳುಮಲ್ಲಿಗೆ ಗ್ರಾಮದ ಬಳಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ…

2 days ago

ಮದ್ಯಪಾನ, ಡ್ರಗ್ಸ್ ದುಶ್ಚಟಗಳಿಗೆ ಬಲಿಯಾಗದೆ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ- ಸಚಿವ ಕೆ.ಎಚ್ ಮುನಿಯಪ್ಪ

ಮದ್ಯಪಾನ, ಡ್ರಗ್ಸ್ ನಂತಹ ದುಶ್ಚಟಗಳಿಗೆ ಬಲಿಯಾಗದೆ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ…

2 days ago