Categories: ಕೊಡಗು

ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಗ್ರೇಟ್ ಎಸ್ಕೇಪ್ ಆದ ಸುಪಾರಿ ಕಿಲ್ಲರ್

ಇತ್ತೀಚಿಗೆ ಕೊಡಗು ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಪನ್ಯ ತೋಟದ ಮಾರಿಗುಡಿ ಬಳಿ ಕಾಫಿ ಗಿಡಗಳ ಮಧ್ಯದಲ್ಲಿ ಸುಟ್ಟ ಸ್ಥಿತಿಯಲ್ಲಿ ಪುರುಷನೋರ್ವನ ಮೃತದೇಹ ಪತ್ತೆಯಾಗಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ, ಕೊಲೆ ಪ್ರಕರಣವನ್ನು ಚಾಣಕ್ಷತನದಿಂದ ಕೊಡಗು ಪೊಲೀಸ್ ಭೇದಿಸಿದ್ದಾರೆ ಎಂಬ ಸುದ್ದಿ ರಾಷ್ಟ್ರ ವ್ಯಾಪ್ತಿಯಲ್ಲಿ ಬಾರಿ ಸದ್ದು ಮಾಡಿತ್ತು.

ಅಂತಾರಾಜ್ಯಗಳ ಲಿಂಕ್ ಹೊಂದಿರುವ ಈ ನಿಗೂಢ ಕೊಲೆ ಪ್ರಕರಣದ ಜಾಡನ್ನು ಸಿನಿಮೀಯ ರೀತಿಯಲ್ಲಿ ಆರೋಪಿಗಳೇ ದಂಗಾಗುವ ರೀತಿಯಲ್ಲಿ ಬಯಲಿಗೆಳೆದ್ದಿದರು ಎಂದು ಪ್ರಚಾರವಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಡನಿಗೆ ಗತಿಕಾಣಿಸಿದ ಓರ್ವ ಮಹಿಳೆ ಸೇರಿದಂತೆ ಒಟ್ಟು ಮೂವರು ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ ಹಾಗೂ ಮರ್ಸಿಡಸ್ ಬೆಂಝ್ ಕಾರು, ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು.

ಮೃತ ರಮೇಶ್ ಕುಮಾರನ ಎರಡನೇ ಪತ್ನಿ ನಿಹಾರಿಕ ಮತ್ತು ಆಕೆಯ ಬಾಯ್ ಫ್ರೆಂಡ್ ನಿಖಿಲ್ ಹಾಗೂ ಸುಫಾರಿ ಕಿಲ್ಲರ್ ಅಂಕುರ್ ರಾಣಾ ಎಂಬುವರುಗಳನ್ನು ಬಂಧಿಸಲಾಗಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಪೊಲೀಸ್ ಕಸ್ಟಡಿಗೆ ಮೂವರನ್ನು ಪಡೆಯಲಾಗಿತ್ತು.

ಕಳೆದೆರಡು ದಿನಗಳ ಹಿಂದೆ ವಿಚಾರಣೆ ಮುಗಿಸಿ ಓರ್ವ ಆರೋಪಿ ಡಾಕ್ಟರ್ ನಿಖಿಲ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.

ಪ್ರಮುಖ ಆರೋಪಿಗಳಾದ ಪಂತುಲ್ ನಿಹಾರಿಕಾ ಹಾಗೂ ಅಂಕುರ್ ರಾಣಾ ಪೊಲೀಸ್ ಕಸ್ಟಡಿಗೆ ಪೊಲೀಸ್ ತಂಡ ಪಡೆದುಕೊಂಡು ಸೋಮವಾರ ಬೆಳಗ್ಗೆ ಕೊಡಗಿನ 13 ಮಂದಿ ಪೊಲೀಸರ ತಂಡ ಟಿ.ಟಿ ವಾಹನದಲ್ಲಿ ಸ್ಥಳ ಮಹಾಜರ್ ನಡೆಸಲು ಮೊದಲು ಬೆಂಗಳೂರಿಗೆ ತೆರಳಿ ಅಲ್ಲಿ ಮಹಾಜಾರ್ ನಡೆಸಿ ನಂತರ ಮಂಗಳವಾರ ತೆಲಂಗಾಣಕ್ಕೆ ಕರೆದುಕೊಂಡು ಹೋಗಿದ್ದರು.

ಕೃತ್ಯ ನಡೆದ ಸ್ಥಳವಾದ ಉಪ್ಪಲ್ ಭುವನಗಿರಿಯ ರಾಜ್ಯ ಹೆದ್ದಾರಿಯ ಸಮೀಪ ಮಹಾಜರ್ ಕಾರ್ಯ ನಡೆಸಿ ರಾತ್ರಿ ಹೈದರಾಬಾದ್ ನಿಂದ 30 ಕಿಲೋಮೀಟರ್ ದೂರದ ಉಪ್ಪಲ್ ಸಮೀಪ ಉಡುಪಿ ಗಾರ್ಡನ್ ಹೋಟೆಲ್ ವಸತಿ ಗ್ರಹದ ಮೂರನೇ ಅಂತಸ್ತಿನಲ್ಲಿ ಆರೋಪಿ ಸಹಿತ ಎಲ್ಲರೂ ತಂಗಿರುವ ಸಮಯದಲ್ಲಿ ಗುರುವಾರ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಎಲ್ಲರೂ ನಿದ್ರೆಗೆ ಜಾರಿದ ಸಂದರ್ಭ ಕೈಗೆ ಹಾಕಿರುವ ಬೇಡಿಯನ್ನು ಯಾರು ತಿಳಿಯದಂತೆ ಕೈಯಿಂದ ಮೆಲ್ಲನೆ ಬೇಡಿಯನ್ನು ಕಳಚಿ ಮುಂಭಾಗದ ಬಾಗಿಲ ಸಮೀಪ ಇರುವ ಕಿಟಕಿಯ ಮೂಲಕ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಪೊಲೀಸ್ ಬಳಿ ಇದ್ದ ಸಂಪರ್ಕ ಸಾಧಿಸುವ ಸಾಧನವನ್ನು ಕೂಡ ಎತ್ತಿಕೊಂಡು ಪರರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಬೆಳಿಗ್ಗೆ ಪೊಲೀಸರು ಎದ್ದು ನೋಡುವಾಗ ಆರೋಪಿ ಪರಾರಿಯಾಗಿರದನ್ನು ಗಮನಿಸಿ ಸುತ್ತ ಹುಡುಕಿ ನಂತರ ಸಮೀಪದ ಕಂಚರಾಮ್ ಪೊಲೀಸ್ ಠಾಣೆಯಲ್ಲಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದೀಗ ಆತನ ಶೋಧಕಾಗಿ ಕೊಡಗಿನಿಂದ ಮತ್ತಷ್ಟು ಹಿರಿಯ ಅಧಿಕಾರಿಗಳು ತೆಲಂಗಾಣದತ್ತ ತೆರಳಿದ್ದಾರೆ ಎಂದು ಹೇಳಲಾಗಿದೆ.

ಮಡಿಕೇರಿ ನ್ಯಾಯಾಲಯದಲ್ಲಿ ನವೆಂಬರ್ 4ರ ತನಕ ಆರೋಪಿಯನ್ನು ಪೊಲೀಸ್ ಕಸ್ಟಡ್ಗೆ ನೀಡಲಾಗಿದ್ದು ನವೆಂಬರ್ 4ರಂದು ಅವರನ್ನು ಹಾಜರುಪಡಿಸಬೇಕಾಗಿದೆ. ಒಂದೊಮ್ಮೆ ಹಾಜರುಪಡಿಸಲು ಸಾಧ್ಯವಾಗದಿದ್ದರೆ,ಕಾನೂನಂತೆ ಪೊಲೀಸರು ಕರ್ತವ್ಯ ದಿಂದ ಅಮಾನತುಗೊಳ್ಳುವ ಸಾಧ್ಯತೆಗಳು ಕೂಡ ಹೆಚ್ಚಿವೆ. ಮಹಾಜರ್ ನಡೆಸುವ ಸಂದರ್ಭ ತನಿಖಾ ಅಧಿಕಾರಿ ಹಾಗೂ ಘಟನಾ ಸ್ಥಳದ ಠಾಣಾಧಿಕಾರಿ ಖುದ್ದು ಹಾಜರಿರಬೇಕಾಗಿರುವುದು ಕೂಡ ನಿಯಮವಿದೆ.

ಸುಂಟಿಕೊಪ್ಪ ಠಾಣಾಧಿಕಾರಿ ಚಂದ್ರಶೇಖರ್ ಮಾಜರ್ ಸಂದರ್ಭ ಬೆಂಗಳೂರು ಹಾಗೂ ತೆಲಂಗಾಣಕ್ಕೆ ತೆರಳಲಿಲ್ಲ ಎಂದು ಹೇಳಲಾಗಿದೆ.

*ಪ್ರಕರಣದ ವಿವರ*

ತೆಲಂಗಾಣದ ರಮೇಶ್ ಕುಮಾರ್ ಎಂಬಾತ ಬೆಂಗಳೂರು ರಾಮಮೂರ್ತಿನಗರದಲ್ಲಿ ವಾಸವಾಗಿರುವ ಮೂಲತಃ ತೆಲಂಗಾಣದವಳಾದ ತನ್ನ ಪತ್ನಿ ಪಂತುಲ್ ನಿಹಾರಿಕ, ಹರ್ಯಾಣ ರಾಜ್ಯದ ಅಂಕುರು ರಾಣಾ ಹಾಗೂ ನಿಖಿಲ್ ಮೈರೆಡ್ಡಿ ಎಂಬುವವರಿಂದ ಕೊಲೆಗೀಡಾದವನಾಗಿದ್ದಾನೆ.

ದಿನಾಂಕ 08-10-2024 ರಂದು ಸುಂಟಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಪನ್ಯ ಎಸ್ಟೇಟ್ ಎಂಬಲ್ಲಿ ಸಂದೇಶ್ ಎಂಬುವವರ ಕಾಫಿ ತೋಟದಲ್ಲಿ ಅರ್ಧಂಬರ್ಧ ಬೆಂದಿರುವ ಗಂಡಸಿನ ಶವವನ್ನು ಕಾರ್ಮಿಕರು ನೋಡಿದ್ದು ಮಾಲೀಕರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಕಲಂ 103, 234 ಬಿ. ಎನ್. ಎಸ್. ರಂತೆ ಪ್ರಕರಣ ದಾಖಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೊಡಗು ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಕೆ.ಎಸ್. ಸುಂದರ್ ರಾಜ್, ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ ಇವರ ಮಾರ್ಗದರ್ಶನದಲ್ಲಿ ಮೃತನ ಹಾಗೂ ಆರೋಪಿಗಳ ಪತ್ತೆಗಾಗಿ ಸೋಮವಾರಪೇಟೆ ಪೊಲೀಸ್ ಠಾಣೆಯ ನಿರೀಕ್ಷಕರಾದ ಮುದ್ದು ಮಾದೇವ ಸುಂಟಿಕೊಪ್ಪ ಠಾಣಾಧಿಕಾರಿ ಚಂದ್ರಶೇಖರ್, ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಮೋಹನ್ ರಾಜ್ ಹಾಗೂ ಇಲಾಖೆಯ ಇನ್ನಿತರ ಅಧಿಕಾರಿಳು ಹಾಗೂ ಸಿಬ್ಬಂದಿಗಳನ್ನು ಒಳಗೊಂಡ 16 ಜನರ ಒಟ್ಟು 4 ವಿಶೇಷ ತಂಡಗಳನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು..

*ಘಟನೆಯ ಹಿನ್ನೆಲೆ*

ಆರೋಪಿ ನಿಹಾರಿಕಳು ಮೃತ ರಮೇಶ್ ಕುಮಾರ್ ನನ್ನು ಮದುವೆಯಾಗಿದ್ದು, ಆಸ್ತಿ ಮಾರಾಟದಿಂದ 8 ಕೋಟಿ ಹಣ ಪಡೆಯುವ ಉದ್ದೇಶದಿಂದ ಬಾಯ್ ಫ್ರೆಂಡ್ ಹರಿಯಾಣ ಮೂಲದ ಅಂಕುರ್ ರಾಣಾನನ್ನು ದಿನಾಂಕ 01-10-2024 ರಂದು ಮತ್ತು 03-10-2024 ರಂದು ರಮೇಶ್ ಕುಮಾರ್ ನನ್ನು ಹೈದರಾಬಾದ್ ಗೆ ಬರಲು ತಿಳಿಸಿದ್ದಾಳೆ. ಡ್ರಾಪ್ ಮಾಡುವ ನೆಪದಲ್ಲಿ ಮರ್ಸಿಡಸ್ ಬೆಂಜ್ ಕಾರಿನಲ್ಲಿ೦ ಹೊರಟು ತೆಲಂಗಾಣದ ಉಪ್ಪಲ್ – ಭುವನಗಿರಿ ಹೆದ್ದಾರಿಯಲ್ಲಿ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ರಮೇಶ್ ಕುಮಾರ್ ನನ್ನು ಕೊಲೆ ಮಾಡಿದ್ದಾರೆ. ನಂತರ ಅಲ್ಲಿಂದ ಇವರಿಬ್ಬರು ಕಾರಿನಲ್ಲಿ ಮೃತದೇಹವನ್ನು ಬೆಂಗಳೂರಿಗೆ ತಂದು ಹೊರಮಾವು ಎಂಬಲ್ಲಿದ್ದ ಇನ್ನೋರ್ವ ಬಾಯ್ ಫ್ರೆಂಡ್ ನಿಖಿಲ್ ಗೆ ವಿಷಯ ತಿಳಿಸಿದ್ದಾಳೆ. ನಂತರ ಅದೇ ಕಾರಿನಲ್ಲಿ ಶವವನ್ನು ಸುಂಟಿಕೊಪ್ಪ ಪನ್ಯ ತೋಟಕ್ಕೆ ತಂದು ಬೆಂಕಿಹಚ್ಚಿ ಸುಟ್ಟು ಅಲ್ಲಿಂದ ಹಿಂತಿರುಗಿದ್ದಾರೆ ಎಂದು ಆರೋಪಿ ಹೇಳಿಕೆ ನೀಡಿದ್ದರು.

ಇದೀಗ ಸುಫಾರಿ ಕಿಲ್ಲರ್ ಪರಾರಿಯಾಗಿದ್ದು ಈತ ಈ ಕೃತ್ಯ ನಡೆಸಲು ಒಟ್ಟು ಇಪ್ಪತ್ತೈದು ಲಕ್ಷ ರೂಪಾಯಿಯನ್ನು ನಿಹಾರಿಕಳಿಂದ ಪಡೆದುಕೊಂಡಿದ್ದ ಎಂದು ಮತ್ತೊಬ್ಬ ಆರೋಪಿಯ ಹೇಳಿಕೆಯಿಂದ ತಿಳಿದು ಬಂದಿದೆ. ಒಟ್ಟು ರಮೇಶ್ 28 ಕೋಟಿ ಆಸ್ತಿಯನ್ನು ಮಾರಾಟ ಮಾಡಿದ್ದು ಅದರಲ್ಲಿ ಮುಂಗಡ ಹಣ 8 ಕೋಟಿ ರಮೇಶನಿಗೆ ದೊರಕಿತ್ತು. ಇದನ್ನು ಕಸಿದುಕೊಳ್ಳಲು ಹಾಗೂ ಮಾರಾಟ ಮಾಡಿದ ಸಂಪೂರ್ಣ ಮೊತ್ತವನ್ನು ತನ್ನದಾಗಿಸಿಕೊಳ್ಳಲು ತನ್ನ ಬಾಯ್ ಫ್ರೆಂಡ್ ಡಾಕ್ಟರ್ ನಿಖಿಲ್ ಅವರೊಂದಿಗೆ, ಸುಫಾರಿ ಕಿಲ್ಲರ್ ನನ್ನನ್ನು ಕರೆಸಿ ನಿಹಾರಿಕಾ ಈ ಕೃತ್ಯಕ್ಕೆ ಕೈ ಹಾಕಿದ್ದಾಳೆ ಎಂದು ಹೇಳಲಾಗಿದೆ.

ಸುಂಟಿಕೊಪ್ಪದ ಬಳಿ ಕೊಲೆ ಮಾಡಿ ಸುಟ್ಟು ಹಾಕಿದ್ದ ಸ್ಥಳದಲ್ಲಿ ದೊರಕಿದ ಪ್ರಮುಖ ವಸ್ತುವಿನಿಂದ, ಅದರ ಜಾಡು ಹಿಡಿದು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಲಮೂಲಗಳಿಂದ ತಿಳಿದುಬಂದಿದೆ. ಕೃತ್ಯ ನಡೆದ ಸ್ಥಳದ ಆಸುಪಾಸು ಎಲ್ಲೂ ಸಿ.ಸಿ.ಟಿ.ವಿ ಇಲ್ಲದ್ದರಿಂದ ಪೊಲೀಸರಿಗೆ ಆರೋಪಿಗಳು ಹಾಗೂ ಅವರು ಬಂದ ವಾಹನದ ಗುರುತು ಕೂಡ ಸಿಗಲು ಮೊದಲು ಸಾಧ್ಯವಾಗಿಲ್ಲ. ಆದರೆ ಪೊಲೀಸರು 10 ದಿನದ ಕಾರ್ಯಾಚರಣೆ ನಡೆಸಿ ಮೊದಲು ನಿಹಾರಿಕಾ ಹಾಗೂ ಆಕೆಯ ಬಾಯ್ ಫ್ರೆಂಡ್ ಡಾಕ್ಟರ್ ನಿಖಿಲ್ ನನ್ನು ಬಂಧಿಸಿ ಅವರ ಮೂಲಕ ಸುಪಾರಿ ಕಿಲ್ಲರ್ ನ ಮಾಹಿತಿಗಳು ಪಡೆದು ಕೊಲೆಗಾರ ಅಂಕುರ್ ರಾಣಾನನ್ನು ಬಂಧಿಸಲಾಗಿತ್ತು. ಇದೀಗ ಕೊಡಗು ಪೊಲೀಸ್ ತಪ್ಪಿಸಿಕೊಂಡ ಅಂಕುರ್ ನ ಬಂಧನಕ್ಕಾಗಿ ತೆಲಂಗಾಣದಲ್ಲಿ ತೀವ್ರ ಶೋಧ ನಡೆಸುತ್ತಿದ್ದು ಅಲ್ಲಿನ ಪೊಲೀಸರ ಸಹಕಾರವನ್ನು ಕೂಡ ಪಡೆದುಕೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಕಳೆದ ಹಲವು ದಿನಗಳಿಂದ ಪೊಲೀಸರು ಈ ಪ್ರಕರಣದ ಆರೋಪಿಗಳನ್ನು ಹುಡುಕುವತ್ತ ಎಲ್ಲಾ ಕಡೆಗಳಿಗೆ ತೆರಳಿ ದೈಹಿಕವಾಗಿ ತುಂಬಾ ಬಳಲಿದ್ದರು.ಇದನ್ನೇ ಬಂಡವಾಳಾಗಿಟ್ಟುಕೊಂಡು ಆರೋಪಿ ಸಮಯ ಸಾಧಿಸಿ ತಪ್ಪಿಸಿಕೊಂಡಿದ್ದಾನೆ.

ಪರಾರಿಯಾದ ಕೊಲೆಗಾರನನ್ನು ಬಂಧಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Ramesh Babu

Journalist

Recent Posts

ಸ್ಥಳೀಯ ಸಂಸ್ಥೆಗಳಲ್ಲಿ ಚುರುಕಾಗಬೇಕಿದೆ ಬಿಎಂಸಿ: ಕೆರೆ, ಕುಂಟೆ, ಗೋಮಾಳ, ಅರಣ್ಯ ಸಂರಕ್ಷಣೆಗೆ ನಿರ್ಲಕ್ಷ್ಯ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ನೈಸರ್ಗಿಕ ಸಂಪನ್ಮೂಲ ಹಾಗೂ ಜೀವ ವೈವಿಧ್ಯ ಸಂರಕ್ಷಣೆಗಾಗಿ ರಚಿಸಲಾಗಿರುವ ಜೀವ ವೈವಿಧ್ಯ…

5 hours ago

ಅಪರೂಪದ ದುಬಾರಿ ಖಾಯಿಲೆಗಳು…….

ಇದಕ್ಕೊಂದು ಪರಿಹಾರ ರೂಪಿಸಬಹುದೇ...... ಅಪರೂಪದ ದುಬಾರಿ ಖಾಯಿಲೆಗಳು.......... ಆಗಾಗ ಬದುಕು ಬಟ್ಟೆ ಒಗೆಯುವಂತೆ ಎತ್ತೆತ್ತಿ ಒಗೆಯುತ್ತದೆ. ಅನಿರೀಕ್ಷಿತಗಳು ಸಂಭವಿಸಿ ತುಂಬಾ…

1 day ago

ಮತದಾರರ ಪಟ್ಟಿ ಪರಿಷ್ಕರಣೆ ಚುರುಕು: 7.96 ಲಕ್ಷ ಮತದಾರರ ಹೆಸರು ಅಂತಿಮ ಹಂತಕ್ಕೆ

ಬೆಂಗಳೂರು ಗ್ರಾಮಾಂತರ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಸೋಮವಾರ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ…

2 days ago

ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಹೊಸ ವೇದಿಕೆ ಒಂದೇ ಆವರಣದಲ್ಲಿ ಬಾಕ್ಸಿಂಗ್, ಕುಸ್ತಿ, ಜೂಡೋ, ಕಬ್ಬಡಿ, ಬ್ಯಾಡ್ಮಿಂಟನ್, ಸ್ಕೇಟಿಂಗ್ ಸೌಲಭ್ಯ

ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ತರಬೇತಿ ಹಾಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ನಗರದ ನ್ಯಾಷನಲ್ ಪ್ರೈಡ್…

3 days ago

ಶಾಲೆ ಬಿಟ್ಟ ಮಕ್ಕಳ ಪತ್ತೆಗೆ ಅಭಿಯಾನ: ವಲಸೆ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಕರೆತರಲು ಕ್ರಮ

  ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ಸರ್ಕಾರದ ಆಶಯದ ನಡುವೆಯೂ ನಾನಾ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿರುವ ಹಾಗೂ ಶಾಲೆಗೆ…

3 days ago

ಪಾಕಿಸ್ತಾನಿ ಗ್ಯಾಂಗ್‌ ಜೊತೆ ಸಂಪರ್ಕ ಆರೋಪ: ದೊಡ್ಡಬಳ್ಳಾಪುರದಲ್ಲಿ ವ್ಯಕ್ತಿ ಬಂಧನ

ದೊಡ್ಡಬಳ್ಳಾಪುರ: ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳೊಂದಿಗೆ ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ…

4 days ago