ಪಶು ಆಹಾರ ಬೆಲೆ ಏರಿಕೆ, ಮೇವಿನ ಕೊರತೆಗೆ ರೈತ ಕಂಗಾಲು: ಬಮೂಲ್ ನಲ್ಲಿ ಪ್ರತಿದಿನ 2 ಲಕ್ಷ ಲೀ. ಹಾಲು ಉತ್ಪಾದನೆ ಕುಂಠಿತ: ಹೈನುಗಾರಿಕೆಯತ್ತ ಮುಖ ಮಾಡದ ಯುವ ಪೀಳಿಗೆ

ಸ್ವ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಿ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಸರ್ಕಾರಗಳ ಉದ್ದೇಶ. ಗ್ರಾಮಾಂತರ ಭಾಗದ ರೈತರಿಗೆ ಸ್ವಾವಲಂಬಿ ಯೋಜನೆಗೆ ಅತಿ ಹೆಚ್ಚಿನ ಬಲವನ್ನು ನೀಡುತ್ತಿರುವುದು ಹೈನುಗಾರಿಕೆ. ಆದರೆ ಹೈನುಗಾರಿಕೆಗೆ ಅತೀ ಅಗತ್ಯವಾಗಿ ಬೇಕಾಗಿರುವ ಪಶು ಆಹಾರದ ಬೆಲೆ ಏರಿಕೆ, ಚರ್ಮಗಂಟು ವ್ಯಾಧಿ, ಕೆಲವೆಡೆ ಮೇವಿನ ಕೊರತೆ ಹೈನೋದ್ಯಮಕ್ಕೆ ಸಂಕಷ್ಟ ತಂದಿಟ್ಟಿದೆ. ಮತ್ತೊಂದೆಡೆ ಯುವ ಪೀಳಿಗೆಯ ಜನತೆ ಹೈನುಗಾರಿಕೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಹಾಲಿನ ಉತ್ಪಾದನೆಯೂ ಕುಂಠಿತವಾಗಿದೆ.

ಬಮೂಲ್ ನಲ್ಲಿ 2 ಲಕ್ಷ ಲೀ. ಉತ್ಪಾದನೆ ಕುಂಠಿತ:

ಈ ವರ್ಷ ಸೂಕ್ತ ಮಳೆಯಾಗದ ಪರಿಣಾಮ ಎಲ್ಲೆಡೆ ಮೇವಿನ ಕೊರತೆ ಎದುರಾಗಿದೆ. ಮುಖ್ಯವಾಗಿ ಹಸಿರು ಮೇವಿನ ಪ್ರಮಾಣ ಸಾಕಷ್ಟು ಕಡಿಮೆಯಾಗಿ ಹೈನುಗಾರಿಕೆ ಉದ್ಯಮದ ಮೇಲೆ ಪರಿಣಾಮ ಬೀರಿದೆ. ಇದರಿಂದ ಹಾಲು ಉತ್ಪಾದನೆಯೂ ಕುಂಠಿತವಾಗಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಬಮೂಲ್ ವ್ಯಾಪ್ತಿಯಲ್ಲಿ ಸರಾಸರಿ 17 ಲಕ್ಷ 75 ಸಾವಿರ ಲೀಟರ್ ಸರಬರಾಜು ಆಗುತ್ತಿತ್ತು. ಈ ವರ್ಷದ ಜುಲೈ ಮಾಸದಲ್ಲಿ ಸುಮಾರು 15 ಲಕ್ಷ 25 ಸಾವಿರ ಲೀಟರ್ ಹಾಲು ಸರಬರಾಜು ಆಗಿ ಸರಾಸರಿ 2 ಲಕ್ಷ ಲೀ. ಹಾಲು ಉತ್ಪಾದನೆ ಕುಂಠಿತವಾಗಿದೆ. ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಕಳೆದ ವರ್ಷ 1 ಲಕ್ಷ 40 ಸಾವಿರ ಲೀ. ಹಾಲು ಉತ್ಪಾದನೆಯೂ ಈ ವರ್ಷ 1 ಲಕ್ಷ 15 ಸಾವಿರ ಲೀ ಹಾಲಿಗೆ ಇಳಿದಿದೆ. ಅಂದರೆ ಈ ವರ್ಷ 22-25 ಸಾವಿರ ಲೀ. ಕಡಿಮೆಯಾಗಿದೆ.

ಪಶು ಆಹಾರ, ಉತ್ಪಾದನಾ ವೆಚ್ಚ ಏರಿಕೆ:

ಬಮೂಲ್ ಒಕ್ಕೂಟವು ರೈತರಿಗೆ ಏಪ್ರಿಲ್, ಮೇ ನಲ್ಲಿ ಹಾಲಿನ ದರಕ್ಕೆ ಹೆಚ್ಚುವರಿ ₹2.85 ರೂ. ಸೇರಿಸಿ ನೀಡಲು ಆರಂಭಿಸಿದಾಗ ಬೂಸಾ, ಹಿಂಡಿ, ಫೀಡು ಸೇರಿ ಪಶು ಆಹಾರಗಳು ಏರಿಕೆಯಾಗಿದ್ದವು. ಹಾಲಿಗೆ ಹೆಚ್ಚುವರಿ ಹಣ ಸಿಗುತ್ತಿದ್ದ ಕಾರಣ, ಏರಿಕೆಯಾಗಿರುವ ಹೆಚ್ಚುವರಿ ಬೆಲೆ ಸರಿದೂಗಿಸಿಕೊಂಡು ಹೋಗುತ್ತಿದ್ದೇವು. ಜೂನ್ ಬಳಿಕ ಮತ್ತೆ ಹೆಚ್ಚುವರಿ ನೀಡುತ್ತಿದ್ದ ₹2.85 ರೂ. ಕಡಿತವಾಗಿದೆ. ಪಶುಗಳ ಆಹಾರ ದರ ಮಾತ್ರ ಯಥಾಸ್ಥಿತಿಯಲ್ಲಿದೆ. ಒಂದು ಮೂಟೆ ಬೂಸ ₹1,350, 30 ಕೆ.ಜಿ.ಚಕ್ಕೆ ಹಿಂಡಿ ₹1,600, ಪೀಡು ₹1,165, ಹಸಿಜೋಳದ ಕಡ್ಡಿ ಒಂದು ಕಡ್ಡಿ ₹3, ಒಣ ಹುಲ್ಲು ಒಂದು ಟ್ರ್ಯಾಕ್ಟರ್ ಲೋಡು, ₹25 ರಿಂದ ₹30 ಸಾವಿರ ಇದೆ. ಪ್ರತಿನಿತ್ಯ ರಾಸುಗಳಿಗೆ ಮೇವು ಪೂರೈಕೆ ಮಾಡುವುದು ಕಷ್ಟಕರವಾದ ಕೆಲಸವಾಗಿದೆ. ಪಶುಗಳ ಆಹಾರದ ಬೆಲೆ ಕಡಿಮೆಯಾಗಲಿಲ್ಲ. ರೈತರಿಗೆ ಸಿಗುವ ಬೆಲೆಯಲ್ಲಿ ಮಾತ್ರ ಕಡಿಮೆಯಾಗುತ್ತಿದೆ.

ಹೈನುಗಾರಿಕೆಯತ್ತ ಸುಳಿಯದ ಯುವ ಪೀಳಿಗೆ:

ಹೈನುಗಾರಿಕೆ ಬಯಲುಸೀಮೆ ಭಾಗದ ರೈತಾಪಿ ವರ್ಗದ ಜೀವನ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಉದ್ಯಮ. ಬೆಲೆ ಏರಿಕೆಗಳ ಮಧ್ಯೆ ನಿರೀಕ್ಷಿತ ಲಾಭ ಇಲ್ಲದೆ ಹೈನೋದ್ಯಮದಿಂದ ರೈತರು ವಿಮುಖರಾಗುತ್ತಿದ್ದಾರೆ. ಯುವ ಪಿಳೀಗೆಗೆ ಹೈನುಗಾರಿಕೆಯ ಬಗ್ಗೆ ತಿಳುವಳಿಕೆಯೇ ಇಲ್ಲದಾಗಿದೆ.
ಚರ್ಮಗಂಟು ವ್ಯಾಧಿ ರೈತರನ್ನು ಇನ್ನಿಲ್ಲದಂತೆ ಬಾಧಿಸಿದ ಬಳಿಕ ರೈತರು ಹಸುಗಳನ್ನೇ ಮಾರಾಟ ಮಾಡುತ್ತಿದ್ದಾರೆ. ಇನ್ನೂ ಕೈಗಾರಿಕಾ ಪ್ರದೇಶ ಅಭಿವೃದ್ಧಿ ನೆಪದಲ್ಲಿ ಗ್ರಾಮಾಂತರ ಭಾಗದಲ್ಲಿ ಸಾವಿರಾರು ಎಕರೆಗಳನ್ನು ಸರ್ಕಾರ ವಶಪಡಿಸಿಕೊಳ್ಳುತ್ತಿರುವುದರಿಂದ ಹಸುಗಳನ್ನು ಮೇಯಿಸಲು ಮೇವು ಕೂಡ ಸಿಗದಂತಾಗಿದೆ.

ಜೀವನ ನಿರ್ವಹಣೆ ಕಷ್ಟ:

ಹಲವು ಕುಟುಂಬಗಳಿಗೆ ಹೈನುಗಾರಿಕೆ ಜೀವನದ ಆಧಾರ ಸ್ತಂಭವಾಗಿದೆ. ಹೈನುಗಾರಿಕೆಯನ್ನು ನಂಬಿ ಅದರಿಂದ ಬರುವ ಆದಾಯದಲ್ಲಿ ಜೀವನ ನಿರ್ವಹಣೆ ಮಾಡುತ್ತಿರುವ ಅದೆಷ್ಟೋ ಕುಟುಂಬಗಳಿವೆ. ಇತ್ತೀಚಿನ ಹಲವು ಸಂಕಷ್ಟಗಳ ಪರಿಣಾಮ ಆದಾಯದ ಮೂಲ ಕುಸಿಯುತ್ತಿರುವುದರಿಂದ ಖರ್ಚನ್ನು ಸರಿದೂಗಿಸಲು ಪರದಾಡುವ ಪರಿಸ್ಥಿತಿ ಇದ್ದು ಭವಿಷ್ಯದಲ್ಲಿ ಜೀವನ ನಿರ್ವಹಣೆ ನಡೆಸುವುದು ಹೇಗೆ ಎಂಬ ಚಿಂತೆ ಆರಂಭವಾಗಿದೆ. ಹೈನುಗಾರರಿಗೆ ಇಷ್ಟೊಂದು ಸಮಸ್ಯೆಗಳಿದ್ದರೂ ಹಾಲಿನ ದರವನ್ನು ಏರಿಕೆ ಮಾಡದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕೊರೊನಾದಂತಹ ಕಷ್ಟ ಕಾಲದಲ್ಲಿಯೂ ರೈತರು ಡೇರಿಗಳಿಗೆ ಹಾಲನ್ನು ಪೂರೈಕೆ ಮಾಡಿದ್ದಾರೆ. ದೇಶಕ್ಕೆ ರೈತ ಮತ್ತು ಸೈನಿಕ ಎರಡು ಕಣ್ಣುಗಳಿದ್ದಂತೆ, ಹಾಲು ಉತ್ಪಾದಕ ರೈತರಿಗೆ ಸಾಲ ಸೌಲಭ್ಯ, ವಿಮೆ, ಮಕ್ಕಳಿಗೆ ಶೈಕ್ಷಣಿಕ ಧನಸಹಾಯ, ಚಾಫ್ ಕಟ್ಟರ್, ಮ್ಯಾಟ್, ಕ್ಯಾನ್ ಗಳು, ಎಂಪಿಸಿಎಸ್ ಗಳಿಗೆ ನೂತನ ಕಟ್ಟಡಗಳು, ಕಂಪ್ಯೂಟರ್, ಪೀಠೋಪಕರಣಗಳು ಒದಗಿಸುವಿಕೆ ಸೇರಿ ರೈತರ ಪ್ರತಿಯೊಂದು ಸಮಸ್ಯೆಗೆ ಸ್ಪಂದಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ರೈತರಿಗೆ ನೀಡುವ ಹಾಲಿಗೆ 3 ರೂ. ಏರಿಕೆ ಮಾಡಿದ್ದಾರೆ. ಮುಂದೆ ಪಶು ಆಹಾರದ ದರ ಇಳಿಕೆ ಬಗ್ಗೆ ಕೆಎಂಎಫ್ ತೀರ್ಮಾನ ತೆಗೆದುಕೊಳ್ಳಲಿದೆ. ರೈತರ ನೆರವಿಗೆ ಧಾವಿಸಿದ ಸಿಎಂ ಸಿದ್ದರಾಮಯ್ಯ, ಸಚಿವರಾದ ಕೆ.ಎನ್ ರಾಜಣ್ಣ, ಕೆ ವೆಂಕಟೇಶ್ ಹಾಗೂ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಅವರಿಗೆ ರೈತರ ಪರವಾಗಿ ಧನ್ಯವಾದ ತಿಳಿಸಿದ ಕೆಎಂಎಫ್ ನಿರ್ದೇಶಕ ಬಿ.ಸಿ. ಆನಂದ್ ಕುಮಾರ್.

ರಾಜ್ಯದಲ್ಲಿ ಹಾಲಿಗೆ ಅವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡಲಾಗಿದೆ. ಇತರೆ ರಾಜ್ಯಗಳಲ್ಲಿ ಸರ್ಕಾರದಿಂದಲೇ 40 ರೂ. ವರಗೆ ನೀಡಲಾಗುತ್ತಿದೆ. ನಮ್ಮಲ್ಲಿ ಕೇವಲ 30 ರೂ. ನೀಡುತ್ತಿದ್ದಾರೆ. ಬೆಲೆ ಏರಿಕೆ, ಮೇವಿನ ಕೊರತೆ, ಚರ್ಮಗಂಟು ರೋಗ ಬಂದ ಬಳಿಕ ಹಸುಗಳ ಮಾರಾಟ ಮಾಡಲಾಗುತ್ತಿದೆ. ಕೈಗಾರಿಕಾ ಹೆಸರಿನಲ್ಲಿ ರೈತರಿಂದ ಭೂ ಕಸಿಯುತ್ತಿರುವ ಸರ್ಕಾರಗಳು ರೈತರಿಗೆ ಸಮಾಧಿ ತೋಡುತ್ತಿದೆ. ಹೈನುಗಾರಿಕೆ ಉಳಿಯಬೇಕಾದರೆ ಸರ್ಕಾರ ಕೂಡಲೇ ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಪಶು ಆಹಾರ ಬೆಲೆ ಏರಿಕೆಗೆ ಕಡಿವಾಣ ಹಾಕಿ, ಪ್ರೋತ್ಸಾಹ ಧನವನ್ನು ಹೆಚ್ಚಿಗೆ ಮಾಡಲೇಬೇಕು ಎ‌ಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಆಗ್ರಹಿಸಿದರು.

Ramesh Babu

Journalist

Recent Posts

ರಾಜ್ಯದಲ್ಲಿ ಹೆಚ್ಚಿದ ಸನ್ ಸ್ಟ್ರೋಕ್‌ ಪ್ರಕರಣ : ಉರಿ ಬಿಸಿಲಿಗೆ ತತ್ತರಿಸಿದ ಜನಜೀವನ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಉಷ್ಣಾಂಶ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮೇ ತಿಂಗಳ ಉರಿ ಬಿಸಿಲು ಜನರನ್ನು…

1 hour ago

ವಿಜಯ್, ಆಃಡವನ್ ಮತ್ತು ಪ್ರಮಾಣವಚನ ನಿಷ್ಠೆ…….

ದೇವರ ದೃಷ್ಟಿಯಲ್ಲಿ ಮನುಷ್ಯರೆಲ್ಲಾ ಸಮಾನರು ಎಂಬುದು ನಮಗೆ ಮುಖ್ಯವಲ್ಲ, ಮನುಷ್ಯರ ದೃಷ್ಟಿಯಲ್ಲಿ ನಾವೆಲ್ಲರೂ ಸಮಾನರು ಎಂಬುದು ನಮಗೆ ಬಹಳ ಮುಖ್ಯ...…

5 hours ago

ಸಿನಿಮಾ ಸ್ಟೈಲ್‌ನಲ್ಲಿ ಪೊಲೀಸರ ಚೇಸಿಂಗ್: ಎರಡೇ ಗಂಟೆಗಳಲ್ಲಿ ಕಳವು ಮಾಡಿದ್ದ ಕ್ಯಾಷ್‌ ಸಮೇತ ಕಳ್ಳರ ಬಂಧನ

ಚಿಕ್ಕಬಳ್ಳಾಪುರ-‌ ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಕ್ಷಣ ಮಾತ್ರದಲ್ಲಿ ಕಣ್ಣಿಗೆ ಕಾರದಪುಡಿ ಹಾಕಿ ಒಂದಲ್ಲ ಎರಡಲ್ಲ ಬರೋಬ್ಬರಿ ಏಳೂವರೆ…

16 hours ago

ನಮ್ಮ ದೇಶದ ಪ್ರಗತಿ ಯುವಜನರಿಂದಲೇ ಆಗಬೇಕಿದೆ-ಇಂಧನ‌ ಸಚಿವ ಕೆ.ಜೆ.ಜಾರ್ಜ್

ಸುಶಿಕ್ಷಿತ, ಪ್ರಜ್ಞಾವಂತ ಯುವಶಕ್ತಿಯಿಂದ ನಮ್ಮ ದೇಶದ ಪ್ರಗತಿ ಸಾಧ್ಯವಾಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಪಟ್ಟಿದ್ದಾರೆ. ಇಂಡಿಯನ್ ಅಕಾಡೆಮಿ ಆಫ್…

16 hours ago

ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಭೀಕರ ಅಪಘಾತ: ಬೈಕ್ ಸವಾರ ದುರ್ಮರಣ

ದೇವನಹಳ್ಳಿ: ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟಿರುವ ಘಟನೆ ಮೇ.12ರ ರಾತ್ರಿ…

20 hours ago

‘ಪಬ್ಲಿಕ್ ಮಿರ್ಚಿ’ ವರದಿ ಫಲಶೃತಿ: ಕೊನೆಗೂ ಹೊಸಹಳ್ಳಿ ರಸ್ತೆಗೆ ಡಾಂಬರ್ ಭಾಗ್ಯ – ಜನರಲ್ಲಿ ಸಂತಸ

ದೊಡ್ಡಬಳ್ಳಾಪುರ: ತಾಲ್ಲೂಕಿನ ಸಾಸಲು–ಆರೂಢಿ ಭಾಗದ ಜನರ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಗುಂಡಮಗೆರೆ–ಹೊಸಹಳ್ಳಿ ರಸ್ತೆಗೆ ಕೊನೆಗೂ ಡಾಂಬರೀಕರಣ ಕಾಮಗಾರಿ ಆರಂಭವಾಗಿದ್ದು, ಗ್ರಾಮಸ್ಥರಲ್ಲಿ…

21 hours ago