ಪಶು ಆಹಾರ ಬೆಲೆ ಏರಿಕೆ, ಮೇವಿನ ಕೊರತೆಗೆ ರೈತ ಕಂಗಾಲು: ಬಮೂಲ್ ನಲ್ಲಿ ಪ್ರತಿದಿನ 2 ಲಕ್ಷ ಲೀ. ಹಾಲು ಉತ್ಪಾದನೆ ಕುಂಠಿತ: ಹೈನುಗಾರಿಕೆಯತ್ತ ಮುಖ ಮಾಡದ ಯುವ ಪೀಳಿಗೆ

ಸ್ವ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಿ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಸರ್ಕಾರಗಳ ಉದ್ದೇಶ. ಗ್ರಾಮಾಂತರ ಭಾಗದ ರೈತರಿಗೆ ಸ್ವಾವಲಂಬಿ ಯೋಜನೆಗೆ ಅತಿ ಹೆಚ್ಚಿನ ಬಲವನ್ನು ನೀಡುತ್ತಿರುವುದು ಹೈನುಗಾರಿಕೆ. ಆದರೆ ಹೈನುಗಾರಿಕೆಗೆ ಅತೀ ಅಗತ್ಯವಾಗಿ ಬೇಕಾಗಿರುವ ಪಶು ಆಹಾರದ ಬೆಲೆ ಏರಿಕೆ, ಚರ್ಮಗಂಟು ವ್ಯಾಧಿ, ಕೆಲವೆಡೆ ಮೇವಿನ ಕೊರತೆ ಹೈನೋದ್ಯಮಕ್ಕೆ ಸಂಕಷ್ಟ ತಂದಿಟ್ಟಿದೆ. ಮತ್ತೊಂದೆಡೆ ಯುವ ಪೀಳಿಗೆಯ ಜನತೆ ಹೈನುಗಾರಿಕೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಹಾಲಿನ ಉತ್ಪಾದನೆಯೂ ಕುಂಠಿತವಾಗಿದೆ.

ಬಮೂಲ್ ನಲ್ಲಿ 2 ಲಕ್ಷ ಲೀ. ಉತ್ಪಾದನೆ ಕುಂಠಿತ:

ಈ ವರ್ಷ ಸೂಕ್ತ ಮಳೆಯಾಗದ ಪರಿಣಾಮ ಎಲ್ಲೆಡೆ ಮೇವಿನ ಕೊರತೆ ಎದುರಾಗಿದೆ. ಮುಖ್ಯವಾಗಿ ಹಸಿರು ಮೇವಿನ ಪ್ರಮಾಣ ಸಾಕಷ್ಟು ಕಡಿಮೆಯಾಗಿ ಹೈನುಗಾರಿಕೆ ಉದ್ಯಮದ ಮೇಲೆ ಪರಿಣಾಮ ಬೀರಿದೆ. ಇದರಿಂದ ಹಾಲು ಉತ್ಪಾದನೆಯೂ ಕುಂಠಿತವಾಗಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಬಮೂಲ್ ವ್ಯಾಪ್ತಿಯಲ್ಲಿ ಸರಾಸರಿ 17 ಲಕ್ಷ 75 ಸಾವಿರ ಲೀಟರ್ ಸರಬರಾಜು ಆಗುತ್ತಿತ್ತು. ಈ ವರ್ಷದ ಜುಲೈ ಮಾಸದಲ್ಲಿ ಸುಮಾರು 15 ಲಕ್ಷ 25 ಸಾವಿರ ಲೀಟರ್ ಹಾಲು ಸರಬರಾಜು ಆಗಿ ಸರಾಸರಿ 2 ಲಕ್ಷ ಲೀ. ಹಾಲು ಉತ್ಪಾದನೆ ಕುಂಠಿತವಾಗಿದೆ. ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಕಳೆದ ವರ್ಷ 1 ಲಕ್ಷ 40 ಸಾವಿರ ಲೀ. ಹಾಲು ಉತ್ಪಾದನೆಯೂ ಈ ವರ್ಷ 1 ಲಕ್ಷ 15 ಸಾವಿರ ಲೀ ಹಾಲಿಗೆ ಇಳಿದಿದೆ. ಅಂದರೆ ಈ ವರ್ಷ 22-25 ಸಾವಿರ ಲೀ. ಕಡಿಮೆಯಾಗಿದೆ.

ಪಶು ಆಹಾರ, ಉತ್ಪಾದನಾ ವೆಚ್ಚ ಏರಿಕೆ:

ಬಮೂಲ್ ಒಕ್ಕೂಟವು ರೈತರಿಗೆ ಏಪ್ರಿಲ್, ಮೇ ನಲ್ಲಿ ಹಾಲಿನ ದರಕ್ಕೆ ಹೆಚ್ಚುವರಿ ₹2.85 ರೂ. ಸೇರಿಸಿ ನೀಡಲು ಆರಂಭಿಸಿದಾಗ ಬೂಸಾ, ಹಿಂಡಿ, ಫೀಡು ಸೇರಿ ಪಶು ಆಹಾರಗಳು ಏರಿಕೆಯಾಗಿದ್ದವು. ಹಾಲಿಗೆ ಹೆಚ್ಚುವರಿ ಹಣ ಸಿಗುತ್ತಿದ್ದ ಕಾರಣ, ಏರಿಕೆಯಾಗಿರುವ ಹೆಚ್ಚುವರಿ ಬೆಲೆ ಸರಿದೂಗಿಸಿಕೊಂಡು ಹೋಗುತ್ತಿದ್ದೇವು. ಜೂನ್ ಬಳಿಕ ಮತ್ತೆ ಹೆಚ್ಚುವರಿ ನೀಡುತ್ತಿದ್ದ ₹2.85 ರೂ. ಕಡಿತವಾಗಿದೆ. ಪಶುಗಳ ಆಹಾರ ದರ ಮಾತ್ರ ಯಥಾಸ್ಥಿತಿಯಲ್ಲಿದೆ. ಒಂದು ಮೂಟೆ ಬೂಸ ₹1,350, 30 ಕೆ.ಜಿ.ಚಕ್ಕೆ ಹಿಂಡಿ ₹1,600, ಪೀಡು ₹1,165, ಹಸಿಜೋಳದ ಕಡ್ಡಿ ಒಂದು ಕಡ್ಡಿ ₹3, ಒಣ ಹುಲ್ಲು ಒಂದು ಟ್ರ್ಯಾಕ್ಟರ್ ಲೋಡು, ₹25 ರಿಂದ ₹30 ಸಾವಿರ ಇದೆ. ಪ್ರತಿನಿತ್ಯ ರಾಸುಗಳಿಗೆ ಮೇವು ಪೂರೈಕೆ ಮಾಡುವುದು ಕಷ್ಟಕರವಾದ ಕೆಲಸವಾಗಿದೆ. ಪಶುಗಳ ಆಹಾರದ ಬೆಲೆ ಕಡಿಮೆಯಾಗಲಿಲ್ಲ. ರೈತರಿಗೆ ಸಿಗುವ ಬೆಲೆಯಲ್ಲಿ ಮಾತ್ರ ಕಡಿಮೆಯಾಗುತ್ತಿದೆ.

ಹೈನುಗಾರಿಕೆಯತ್ತ ಸುಳಿಯದ ಯುವ ಪೀಳಿಗೆ:

ಹೈನುಗಾರಿಕೆ ಬಯಲುಸೀಮೆ ಭಾಗದ ರೈತಾಪಿ ವರ್ಗದ ಜೀವನ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಉದ್ಯಮ. ಬೆಲೆ ಏರಿಕೆಗಳ ಮಧ್ಯೆ ನಿರೀಕ್ಷಿತ ಲಾಭ ಇಲ್ಲದೆ ಹೈನೋದ್ಯಮದಿಂದ ರೈತರು ವಿಮುಖರಾಗುತ್ತಿದ್ದಾರೆ. ಯುವ ಪಿಳೀಗೆಗೆ ಹೈನುಗಾರಿಕೆಯ ಬಗ್ಗೆ ತಿಳುವಳಿಕೆಯೇ ಇಲ್ಲದಾಗಿದೆ.
ಚರ್ಮಗಂಟು ವ್ಯಾಧಿ ರೈತರನ್ನು ಇನ್ನಿಲ್ಲದಂತೆ ಬಾಧಿಸಿದ ಬಳಿಕ ರೈತರು ಹಸುಗಳನ್ನೇ ಮಾರಾಟ ಮಾಡುತ್ತಿದ್ದಾರೆ. ಇನ್ನೂ ಕೈಗಾರಿಕಾ ಪ್ರದೇಶ ಅಭಿವೃದ್ಧಿ ನೆಪದಲ್ಲಿ ಗ್ರಾಮಾಂತರ ಭಾಗದಲ್ಲಿ ಸಾವಿರಾರು ಎಕರೆಗಳನ್ನು ಸರ್ಕಾರ ವಶಪಡಿಸಿಕೊಳ್ಳುತ್ತಿರುವುದರಿಂದ ಹಸುಗಳನ್ನು ಮೇಯಿಸಲು ಮೇವು ಕೂಡ ಸಿಗದಂತಾಗಿದೆ.

ಜೀವನ ನಿರ್ವಹಣೆ ಕಷ್ಟ:

ಹಲವು ಕುಟುಂಬಗಳಿಗೆ ಹೈನುಗಾರಿಕೆ ಜೀವನದ ಆಧಾರ ಸ್ತಂಭವಾಗಿದೆ. ಹೈನುಗಾರಿಕೆಯನ್ನು ನಂಬಿ ಅದರಿಂದ ಬರುವ ಆದಾಯದಲ್ಲಿ ಜೀವನ ನಿರ್ವಹಣೆ ಮಾಡುತ್ತಿರುವ ಅದೆಷ್ಟೋ ಕುಟುಂಬಗಳಿವೆ. ಇತ್ತೀಚಿನ ಹಲವು ಸಂಕಷ್ಟಗಳ ಪರಿಣಾಮ ಆದಾಯದ ಮೂಲ ಕುಸಿಯುತ್ತಿರುವುದರಿಂದ ಖರ್ಚನ್ನು ಸರಿದೂಗಿಸಲು ಪರದಾಡುವ ಪರಿಸ್ಥಿತಿ ಇದ್ದು ಭವಿಷ್ಯದಲ್ಲಿ ಜೀವನ ನಿರ್ವಹಣೆ ನಡೆಸುವುದು ಹೇಗೆ ಎಂಬ ಚಿಂತೆ ಆರಂಭವಾಗಿದೆ. ಹೈನುಗಾರರಿಗೆ ಇಷ್ಟೊಂದು ಸಮಸ್ಯೆಗಳಿದ್ದರೂ ಹಾಲಿನ ದರವನ್ನು ಏರಿಕೆ ಮಾಡದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕೊರೊನಾದಂತಹ ಕಷ್ಟ ಕಾಲದಲ್ಲಿಯೂ ರೈತರು ಡೇರಿಗಳಿಗೆ ಹಾಲನ್ನು ಪೂರೈಕೆ ಮಾಡಿದ್ದಾರೆ. ದೇಶಕ್ಕೆ ರೈತ ಮತ್ತು ಸೈನಿಕ ಎರಡು ಕಣ್ಣುಗಳಿದ್ದಂತೆ, ಹಾಲು ಉತ್ಪಾದಕ ರೈತರಿಗೆ ಸಾಲ ಸೌಲಭ್ಯ, ವಿಮೆ, ಮಕ್ಕಳಿಗೆ ಶೈಕ್ಷಣಿಕ ಧನಸಹಾಯ, ಚಾಫ್ ಕಟ್ಟರ್, ಮ್ಯಾಟ್, ಕ್ಯಾನ್ ಗಳು, ಎಂಪಿಸಿಎಸ್ ಗಳಿಗೆ ನೂತನ ಕಟ್ಟಡಗಳು, ಕಂಪ್ಯೂಟರ್, ಪೀಠೋಪಕರಣಗಳು ಒದಗಿಸುವಿಕೆ ಸೇರಿ ರೈತರ ಪ್ರತಿಯೊಂದು ಸಮಸ್ಯೆಗೆ ಸ್ಪಂದಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ರೈತರಿಗೆ ನೀಡುವ ಹಾಲಿಗೆ 3 ರೂ. ಏರಿಕೆ ಮಾಡಿದ್ದಾರೆ. ಮುಂದೆ ಪಶು ಆಹಾರದ ದರ ಇಳಿಕೆ ಬಗ್ಗೆ ಕೆಎಂಎಫ್ ತೀರ್ಮಾನ ತೆಗೆದುಕೊಳ್ಳಲಿದೆ. ರೈತರ ನೆರವಿಗೆ ಧಾವಿಸಿದ ಸಿಎಂ ಸಿದ್ದರಾಮಯ್ಯ, ಸಚಿವರಾದ ಕೆ.ಎನ್ ರಾಜಣ್ಣ, ಕೆ ವೆಂಕಟೇಶ್ ಹಾಗೂ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಅವರಿಗೆ ರೈತರ ಪರವಾಗಿ ಧನ್ಯವಾದ ತಿಳಿಸಿದ ಕೆಎಂಎಫ್ ನಿರ್ದೇಶಕ ಬಿ.ಸಿ. ಆನಂದ್ ಕುಮಾರ್.

ರಾಜ್ಯದಲ್ಲಿ ಹಾಲಿಗೆ ಅವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡಲಾಗಿದೆ. ಇತರೆ ರಾಜ್ಯಗಳಲ್ಲಿ ಸರ್ಕಾರದಿಂದಲೇ 40 ರೂ. ವರಗೆ ನೀಡಲಾಗುತ್ತಿದೆ. ನಮ್ಮಲ್ಲಿ ಕೇವಲ 30 ರೂ. ನೀಡುತ್ತಿದ್ದಾರೆ. ಬೆಲೆ ಏರಿಕೆ, ಮೇವಿನ ಕೊರತೆ, ಚರ್ಮಗಂಟು ರೋಗ ಬಂದ ಬಳಿಕ ಹಸುಗಳ ಮಾರಾಟ ಮಾಡಲಾಗುತ್ತಿದೆ. ಕೈಗಾರಿಕಾ ಹೆಸರಿನಲ್ಲಿ ರೈತರಿಂದ ಭೂ ಕಸಿಯುತ್ತಿರುವ ಸರ್ಕಾರಗಳು ರೈತರಿಗೆ ಸಮಾಧಿ ತೋಡುತ್ತಿದೆ. ಹೈನುಗಾರಿಕೆ ಉಳಿಯಬೇಕಾದರೆ ಸರ್ಕಾರ ಕೂಡಲೇ ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಪಶು ಆಹಾರ ಬೆಲೆ ಏರಿಕೆಗೆ ಕಡಿವಾಣ ಹಾಕಿ, ಪ್ರೋತ್ಸಾಹ ಧನವನ್ನು ಹೆಚ್ಚಿಗೆ ಮಾಡಲೇಬೇಕು ಎ‌ಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಆಗ್ರಹಿಸಿದರು.

Ramesh Babu

Journalist

Recent Posts

ಯೋಜನಾ ಪ್ರಾಧಿಕಾರಕ್ಕೆ ಮುನಿರಾಜು ಆಯ್ಕೆ: ಯುವ ಕಾಂಗ್ರೆಸ್‌ನಿಂದ ಆತ್ಮೀಯ ಅಭಿನಂದನೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಎಸ್.ಡಿ. ಮುನಿರಾಜು ಅವರನ್ನು ತೂಬಗೆರೆ ಯುವ ಕಾಂಗ್ರೆಸ್ ಸಮಿತಿ ವತಿಯಿಂದ…

2 hours ago

ವಿಯೆಟ್ನಾಂನಿಂದ 1.38 ಕೋಟಿ ಮೌಲ್ಯದ ಹೈಡ್ರೋಫೋನಿಕ್ ಗಾಂಜಾ ಸಾಗಾಟ: ಆರೋಪಿ ಬಂಧನ

ದೇವನಹಳ್ಳಿ: ವಿಯೆಟ್ನಾಂನ ಹಾನೊಯ್ ನಗರದಿಂದ ಬೆಂಗಳೂರಿಗೆ ವಿಮಾನದ ಮೂಲಕ ಹೈಡ್ರೋಫೋನಿಕ್ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಯನ್ನು ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ…

4 hours ago

ಗೃಹಜ್ಯೋತಿಗೆ ಮನೆಮನೆ ಬಾಗಿಲು ತಟ್ಟಿದ ಬೆಸ್ಕಾಂ:

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆ ಕಾರ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವೇಗ…

5 hours ago

ಜನರನ್ನು ತಾಲೂಕು ಕಚೇರಿಗೆ ಅಲೆದಾಟ ತಪ್ಪಿಸಿ ಸ್ಥಳದಲ್ಲೇ ಸಮಸ್ಯೆ ಪರಿಹರಿಸಿ- ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ, ಸ್ಥಳದಲ್ಲಿಯೇ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಜಾ ಸೇವಾ…

18 hours ago

ಭಾರತಕ್ಕೆ ಕ್ಸಿ ಜಿನ್‌ಪಿಂಗ್ ಭೇಟಿ: ಮೋದಿ–ಕ್ಸಿ ದ್ವಿಪಕ್ಷೀಯ ಮಾತುಕತೆ ಇಂದು

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಶನಿವಾರ ಮಧ್ಯಾಹ್ನ ರಾಷ್ಟ್ರ ರಾಜಧಾನಿ ನವದೆಹಲಿಗೆ…

22 hours ago

ಮಧುರೆ ದೇವಾಲಯದ ಬಳಿ ಮೇಲ್ಸೇತುವೆ ಅವ್ಯವಸ್ಥೆ: ಮೇಲಕ್ಕೆ ಚಾಚಿರುವ ಕಂಬಿಗಳಿಂದ ವಾಹನ ಸವಾರರಿಗೆ ತೊಂದರೆ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಮಧುರೆ ದೇವಾಲಯದ ಸಮೀಪ ಹೊಸದಾಗಿ ನಿರ್ಮಿಸಿರುವ ಮೇಲ್ಸೇತುವೆ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.…

1 day ago