ಸ್ವ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಿ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಸರ್ಕಾರಗಳ ಉದ್ದೇಶ. ಗ್ರಾಮಾಂತರ ಭಾಗದ ರೈತರಿಗೆ ಸ್ವಾವಲಂಬಿ ಯೋಜನೆಗೆ ಅತಿ ಹೆಚ್ಚಿನ ಬಲವನ್ನು ನೀಡುತ್ತಿರುವುದು ಹೈನುಗಾರಿಕೆ. ಆದರೆ ಹೈನುಗಾರಿಕೆಗೆ ಅತೀ ಅಗತ್ಯವಾಗಿ ಬೇಕಾಗಿರುವ ಪಶು ಆಹಾರದ ಬೆಲೆ ಏರಿಕೆ, ಚರ್ಮಗಂಟು ವ್ಯಾಧಿ, ಕೆಲವೆಡೆ ಮೇವಿನ ಕೊರತೆ ಹೈನೋದ್ಯಮಕ್ಕೆ ಸಂಕಷ್ಟ ತಂದಿಟ್ಟಿದೆ. ಮತ್ತೊಂದೆಡೆ ಯುವ ಪೀಳಿಗೆಯ ಜನತೆ ಹೈನುಗಾರಿಕೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಹಾಲಿನ ಉತ್ಪಾದನೆಯೂ ಕುಂಠಿತವಾಗಿದೆ.
ಬಮೂಲ್ ನಲ್ಲಿ 2 ಲಕ್ಷ ಲೀ. ಉತ್ಪಾದನೆ ಕುಂಠಿತ:
ಈ ವರ್ಷ ಸೂಕ್ತ ಮಳೆಯಾಗದ ಪರಿಣಾಮ ಎಲ್ಲೆಡೆ ಮೇವಿನ ಕೊರತೆ ಎದುರಾಗಿದೆ. ಮುಖ್ಯವಾಗಿ ಹಸಿರು ಮೇವಿನ ಪ್ರಮಾಣ ಸಾಕಷ್ಟು ಕಡಿಮೆಯಾಗಿ ಹೈನುಗಾರಿಕೆ ಉದ್ಯಮದ ಮೇಲೆ ಪರಿಣಾಮ ಬೀರಿದೆ. ಇದರಿಂದ ಹಾಲು ಉತ್ಪಾದನೆಯೂ ಕುಂಠಿತವಾಗಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಬಮೂಲ್ ವ್ಯಾಪ್ತಿಯಲ್ಲಿ ಸರಾಸರಿ 17 ಲಕ್ಷ 75 ಸಾವಿರ ಲೀಟರ್ ಸರಬರಾಜು ಆಗುತ್ತಿತ್ತು. ಈ ವರ್ಷದ ಜುಲೈ ಮಾಸದಲ್ಲಿ ಸುಮಾರು 15 ಲಕ್ಷ 25 ಸಾವಿರ ಲೀಟರ್ ಹಾಲು ಸರಬರಾಜು ಆಗಿ ಸರಾಸರಿ 2 ಲಕ್ಷ ಲೀ. ಹಾಲು ಉತ್ಪಾದನೆ ಕುಂಠಿತವಾಗಿದೆ. ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಕಳೆದ ವರ್ಷ 1 ಲಕ್ಷ 40 ಸಾವಿರ ಲೀ. ಹಾಲು ಉತ್ಪಾದನೆಯೂ ಈ ವರ್ಷ 1 ಲಕ್ಷ 15 ಸಾವಿರ ಲೀ ಹಾಲಿಗೆ ಇಳಿದಿದೆ. ಅಂದರೆ ಈ ವರ್ಷ 22-25 ಸಾವಿರ ಲೀ. ಕಡಿಮೆಯಾಗಿದೆ.
ಬಮೂಲ್ ಒಕ್ಕೂಟವು ರೈತರಿಗೆ ಏಪ್ರಿಲ್, ಮೇ ನಲ್ಲಿ ಹಾಲಿನ ದರಕ್ಕೆ ಹೆಚ್ಚುವರಿ ₹2.85 ರೂ. ಸೇರಿಸಿ ನೀಡಲು ಆರಂಭಿಸಿದಾಗ ಬೂಸಾ, ಹಿಂಡಿ, ಫೀಡು ಸೇರಿ ಪಶು ಆಹಾರಗಳು ಏರಿಕೆಯಾಗಿದ್ದವು. ಹಾಲಿಗೆ ಹೆಚ್ಚುವರಿ ಹಣ ಸಿಗುತ್ತಿದ್ದ ಕಾರಣ, ಏರಿಕೆಯಾಗಿರುವ ಹೆಚ್ಚುವರಿ ಬೆಲೆ ಸರಿದೂಗಿಸಿಕೊಂಡು ಹೋಗುತ್ತಿದ್ದೇವು. ಜೂನ್ ಬಳಿಕ ಮತ್ತೆ ಹೆಚ್ಚುವರಿ ನೀಡುತ್ತಿದ್ದ ₹2.85 ರೂ. ಕಡಿತವಾಗಿದೆ. ಪಶುಗಳ ಆಹಾರ ದರ ಮಾತ್ರ ಯಥಾಸ್ಥಿತಿಯಲ್ಲಿದೆ. ಒಂದು ಮೂಟೆ ಬೂಸ ₹1,350, 30 ಕೆ.ಜಿ.ಚಕ್ಕೆ ಹಿಂಡಿ ₹1,600, ಪೀಡು ₹1,165, ಹಸಿಜೋಳದ ಕಡ್ಡಿ ಒಂದು ಕಡ್ಡಿ ₹3, ಒಣ ಹುಲ್ಲು ಒಂದು ಟ್ರ್ಯಾಕ್ಟರ್ ಲೋಡು, ₹25 ರಿಂದ ₹30 ಸಾವಿರ ಇದೆ. ಪ್ರತಿನಿತ್ಯ ರಾಸುಗಳಿಗೆ ಮೇವು ಪೂರೈಕೆ ಮಾಡುವುದು ಕಷ್ಟಕರವಾದ ಕೆಲಸವಾಗಿದೆ. ಪಶುಗಳ ಆಹಾರದ ಬೆಲೆ ಕಡಿಮೆಯಾಗಲಿಲ್ಲ. ರೈತರಿಗೆ ಸಿಗುವ ಬೆಲೆಯಲ್ಲಿ ಮಾತ್ರ ಕಡಿಮೆಯಾಗುತ್ತಿದೆ.
ಹೈನುಗಾರಿಕೆಯತ್ತ ಸುಳಿಯದ ಯುವ ಪೀಳಿಗೆ:
ಹೈನುಗಾರಿಕೆ ಬಯಲುಸೀಮೆ ಭಾಗದ ರೈತಾಪಿ ವರ್ಗದ ಜೀವನ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಉದ್ಯಮ. ಬೆಲೆ ಏರಿಕೆಗಳ ಮಧ್ಯೆ ನಿರೀಕ್ಷಿತ ಲಾಭ ಇಲ್ಲದೆ ಹೈನೋದ್ಯಮದಿಂದ ರೈತರು ವಿಮುಖರಾಗುತ್ತಿದ್ದಾರೆ. ಯುವ ಪಿಳೀಗೆಗೆ ಹೈನುಗಾರಿಕೆಯ ಬಗ್ಗೆ ತಿಳುವಳಿಕೆಯೇ ಇಲ್ಲದಾಗಿದೆ.
ಚರ್ಮಗಂಟು ವ್ಯಾಧಿ ರೈತರನ್ನು ಇನ್ನಿಲ್ಲದಂತೆ ಬಾಧಿಸಿದ ಬಳಿಕ ರೈತರು ಹಸುಗಳನ್ನೇ ಮಾರಾಟ ಮಾಡುತ್ತಿದ್ದಾರೆ. ಇನ್ನೂ ಕೈಗಾರಿಕಾ ಪ್ರದೇಶ ಅಭಿವೃದ್ಧಿ ನೆಪದಲ್ಲಿ ಗ್ರಾಮಾಂತರ ಭಾಗದಲ್ಲಿ ಸಾವಿರಾರು ಎಕರೆಗಳನ್ನು ಸರ್ಕಾರ ವಶಪಡಿಸಿಕೊಳ್ಳುತ್ತಿರುವುದರಿಂದ ಹಸುಗಳನ್ನು ಮೇಯಿಸಲು ಮೇವು ಕೂಡ ಸಿಗದಂತಾಗಿದೆ.
ಹಲವು ಕುಟುಂಬಗಳಿಗೆ ಹೈನುಗಾರಿಕೆ ಜೀವನದ ಆಧಾರ ಸ್ತಂಭವಾಗಿದೆ. ಹೈನುಗಾರಿಕೆಯನ್ನು ನಂಬಿ ಅದರಿಂದ ಬರುವ ಆದಾಯದಲ್ಲಿ ಜೀವನ ನಿರ್ವಹಣೆ ಮಾಡುತ್ತಿರುವ ಅದೆಷ್ಟೋ ಕುಟುಂಬಗಳಿವೆ. ಇತ್ತೀಚಿನ ಹಲವು ಸಂಕಷ್ಟಗಳ ಪರಿಣಾಮ ಆದಾಯದ ಮೂಲ ಕುಸಿಯುತ್ತಿರುವುದರಿಂದ ಖರ್ಚನ್ನು ಸರಿದೂಗಿಸಲು ಪರದಾಡುವ ಪರಿಸ್ಥಿತಿ ಇದ್ದು ಭವಿಷ್ಯದಲ್ಲಿ ಜೀವನ ನಿರ್ವಹಣೆ ನಡೆಸುವುದು ಹೇಗೆ ಎಂಬ ಚಿಂತೆ ಆರಂಭವಾಗಿದೆ. ಹೈನುಗಾರರಿಗೆ ಇಷ್ಟೊಂದು ಸಮಸ್ಯೆಗಳಿದ್ದರೂ ಹಾಲಿನ ದರವನ್ನು ಏರಿಕೆ ಮಾಡದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕೊರೊನಾದಂತಹ ಕಷ್ಟ ಕಾಲದಲ್ಲಿಯೂ ರೈತರು ಡೇರಿಗಳಿಗೆ ಹಾಲನ್ನು ಪೂರೈಕೆ ಮಾಡಿದ್ದಾರೆ. ದೇಶಕ್ಕೆ ರೈತ ಮತ್ತು ಸೈನಿಕ ಎರಡು ಕಣ್ಣುಗಳಿದ್ದಂತೆ, ಹಾಲು ಉತ್ಪಾದಕ ರೈತರಿಗೆ ಸಾಲ ಸೌಲಭ್ಯ, ವಿಮೆ, ಮಕ್ಕಳಿಗೆ ಶೈಕ್ಷಣಿಕ ಧನಸಹಾಯ, ಚಾಫ್ ಕಟ್ಟರ್, ಮ್ಯಾಟ್, ಕ್ಯಾನ್ ಗಳು, ಎಂಪಿಸಿಎಸ್ ಗಳಿಗೆ ನೂತನ ಕಟ್ಟಡಗಳು, ಕಂಪ್ಯೂಟರ್, ಪೀಠೋಪಕರಣಗಳು ಒದಗಿಸುವಿಕೆ ಸೇರಿ ರೈತರ ಪ್ರತಿಯೊಂದು ಸಮಸ್ಯೆಗೆ ಸ್ಪಂದಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ರೈತರಿಗೆ ನೀಡುವ ಹಾಲಿಗೆ 3 ರೂ. ಏರಿಕೆ ಮಾಡಿದ್ದಾರೆ. ಮುಂದೆ ಪಶು ಆಹಾರದ ದರ ಇಳಿಕೆ ಬಗ್ಗೆ ಕೆಎಂಎಫ್ ತೀರ್ಮಾನ ತೆಗೆದುಕೊಳ್ಳಲಿದೆ. ರೈತರ ನೆರವಿಗೆ ಧಾವಿಸಿದ ಸಿಎಂ ಸಿದ್ದರಾಮಯ್ಯ, ಸಚಿವರಾದ ಕೆ.ಎನ್ ರಾಜಣ್ಣ, ಕೆ ವೆಂಕಟೇಶ್ ಹಾಗೂ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಅವರಿಗೆ ರೈತರ ಪರವಾಗಿ ಧನ್ಯವಾದ ತಿಳಿಸಿದ ಕೆಎಂಎಫ್ ನಿರ್ದೇಶಕ ಬಿ.ಸಿ. ಆನಂದ್ ಕುಮಾರ್.
ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕಮಂಕಳಾದ ಬಳಿಯ ಬೆಂಗಳೂರು ಕಸದ ವಿಲೇವಾರಿ ಘಟಕ ಎಂಎಸ್ ಜಿಪಿ ಘಟಕಕ್ಕೆ ಮಂಗಳವಾರ ಹೆಚ್ಚುವರಿ ಕಸದ ಲಾರಿಗಳು…
ಶಿವಮೊಗ್ಗ : ರಾಷ್ಟ್ರೀಯ ಹೆದ್ದಾರಿಯ ವಿಶೇಷ ಭೂ ಸ್ವಾಧೀನಾಧಿಕಾರಿ ಹಾಗೂ ಶಿವಮೊಗ್ಗ ಹಿಂದಿನ ಅಪರ ಜಿಲ್ಲಾಧಿಕಾರಿಯಾಗಿದ್ದ ಸಿದ್ದಲಿಂಗ ರೆಡ್ಡಿ ಮತ್ತು…
ಬೈಕ್ -ಖಾಸಗಿ ಕಂಪನಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಸಂಜೆ ಸುಮಾರು…
ಬೈಕ್ -ಖಾಸಗಿ ಕಂಪನಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿರುವ ಘಟನೆ ಇಂದು ಸಂಜೆ ಸುಮಾರು…
2026ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ದಿನಾಂಕ ಹಾಗೂ ಪರೀಕ್ಷೆ 2 ರ ವೇಳಾಪಟ್ಟಿಯನ್ನು ಶಿಕ್ಷಣ…
ಆಕೆ ತಂದೆ ತಾಯಿಗೆ ಇದ್ದ ಏಕೈಕ ಮಗಳು. ಹಾಗಾಗಿ ತಂದೆ ತಾಯಿಗೆ ಮಗಳು ಎಂದರೆ ಎಲ್ಲಿಲ್ಲದ ಪ್ರೀತಿ. ಮಗಳು ಚೆನ್ನಾಗಿ…