Categories: ಲೇಖನ

ದಯವಿಟ್ಟು ನಿಮ್ಮ ಕುಟುಂಬದ ಜೊತೆ ಸಮಾಜದ ಬಗ್ಗೆಯೂ ಸ್ವಲ್ಪ ಯೋಚಿಸಿ

” ಮನುಷ್ಯ ಇತರರ ಒಳ್ಳೆಯದಕ್ಕಾಗಿ ಎಷ್ಟು ದುಡಿಯುತ್ತಾನೋ ಅಷ್ಟು ದೊಡ್ಡವನಾಗುತ್ತಾನೆ…….. ”

ಮಹಾತ್ಮ ಗಾಂಧಿ……

ಸಾಮಾನ್ಯವಾಗಿ ಭಾರತೀಯ ಸಮಾಜದ ಕೌಟುಂಬಿಕ ವ್ಯವಸ್ಥೆಯಲ್ಲಿ ಬಹುತೇಕ ವ್ಯಕ್ತಿಗಳು ದುಡಿಯುವುದು, ಬದುಕುವುದು, ಮಡಿಯುವುದು ತನ್ನ ತಂದೆ ತಾಯಿ ಗಂಡ ಹೆಂಡತಿ ಮಕ್ಕಳಿಗಾಗಿ. ಕೆಲವರಂತು ತನ್ನ ಮುಂದಿನ ಹಲವು ಪೀಳಿಗೆಗೆ ಆಗುವಷ್ಟು ಹಣ ಮಾಡಲು ಪ್ರಯತ್ನಿಸುತ್ತಾರೆ……..

ಆದರೆ ದುರಂತವೆಂದರೆ, ಸಾಮಾನ್ಯವಾಗಿ ತನ್ನವರಿಗಾಗಿ ಅಷ್ಟು ದೊಡ್ಡ ಹಣ ಮಾಡಿದ್ದರೂ ಅವರ ಬಗ್ಗೆ ಹತ್ತಿದವರಿಗೆ ಇನ್ನೂ ಮಾಡಬೇಕಿತ್ತು ಎಂಬ ಅಸಮಾಧಾನ ಅತೃಪ್ತಿ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಅವರ ಆಸ್ತಿ ಸಂಪಾದನೆಯ ಸಾಧನೆಯ ಬಗ್ಗೆ ಹೆಮ್ಮೆ ಇದ್ದರೂ ಒಂದೆರಡು ಪೀಳಿಗೆಯ ನಂತರ ಅವರ ಹೆಸರನ್ನೇ ಮರೆಯಲಾಗುತ್ತದೆ.

ಆದರೆ ಗೌತಮ ಬುದ್ಧ, ಮಹಾವೀರ, ಬಸವಣ್ಣ, ವಿವೇಕಾನಂದ, ಮಹಾತ್ಮ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್ ಮುಂತಾದ ಅನೇಕ ಮಹತ್ವದ ವ್ಯಕ್ತಿಗಳು ತನ್ನ ಮನೆಯವರಿಗಾಗಿ ಹೆಚ್ಚಾಗಿ ಏನನ್ನೂ ಮಾಡಲಿಲ್ಲ. ಆದರೆ ನಾವುಗಳು ಮತ್ತು ಇಡೀ ದೇಶ ಈಗಲೂ ಅವರನ್ನು ನೆನಪಿಸಿಕೊಳ್ಳುತ್ತದೆ ಮತ್ತು ಅವರ ಹುಟ್ಟು ಹಬ್ಬವನ್ನು ಅತ್ಯಂತ ಅಭಿಮಾನದಿಂದ ಆಚರಿಸಲಾಗುತ್ತದೆ……….

ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿಯವರ ಅನುಭವದ ಹೇಳಿಕೆಯನ್ನು ಗಮನಿಸಬೇಕು ಮತ್ತು ಅರ್ಥೈಸಬೇಕು….

” ಪರೋಪಕಾರಂ ಇದಂ ಶರೀರಂ ” ಬದುಕಿನ ಸಾರ್ಥಕತೆ ಅಡಗಿರುವುದೇ ಇತರರ ಸೇವೆಯಲ್ಲಿ. ಕನಿಷ್ಠ ನಮಗಾಗಿ ಮತ್ತು ನಮ್ಮವರಿಗಾಗಿ ಜೊತೆಯಲ್ಲಿ ಇತರರಿಗಾಗಿ ಎಂಬುದು ಹೆಚ್ಚು ಅರ್ಥಪೂರ್ಣ ಎನಿಸುತ್ತದೆ.

ಹಿರಿಯರೊಬ್ಬರು ಹೇಳುತ್ತಿದ್ದರು‌
” ಹಿಂದೆ ನನ್ನದೆಲ್ಲವೂ ನಿನ್ನದೇ ” ಎನ್ನುತ್ತಿದ್ದರು. ನಂತರದಲ್ಲಿ
” ನನ್ನದು ನನ್ನದೇ ನಿನ್ನದು ನಿನ್ನದೇ ” ಎಂಬಂತಾಯಿತು. ಆದರೆ ಈಗಿನ ಆಧುನಿಕ ಕಾಲದಲ್ಲಿ ” ನನ್ನದು ಮತ್ತು ನಿನ್ನದು ಎರಡೂ ನನ್ನದೇ ” ಎಂಬ ಮನೋಭಾವ ಸಾಕಷ್ಟು ಜನರಲ್ಲಿ ಬೆಳೆಯುತ್ತಿದೆ.

ದೊಡ್ಡವರಾಗುವುದು ಅಥವಾ ಯಶಸ್ವಿಯಾಗುವುದು ಎಂದರೆ ತನ್ನ ವೈಯಕ್ತಿಕ ಹಣ ಅಂತಸ್ತು ಅಧಿಕಾರ ಜಮೀನುಗಳ ಹೆಚ್ಚಾಗುವಿಕೆ ಮತ್ತು ಅದರ ಪ್ರದರ್ಶನ. ಅದನ್ನು ಗಳಿಸಲು ಯಾವುದೇ ಮಾರ್ಗಗಳನ್ನು ಉಪಯೋಗಿಸಲು ಹಿಂಜರಿಯುವುದಿಲ್ಲ.

ನಾಮಕರಣ, ಗೃಹ ಪ್ರವೇಶ, ಮದುವೆ, ಮುಂಜಿ, ನಿಶ್ಚಿತಾರ್ಥ, ತಿಥಿ, ಹುಟ್ಟಿದ ಹಬ್ಬ ಹೀಗೆ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ತಮ್ಮ ಶ್ರೀಮಂತಿಕೆಯ ಪ್ರದರ್ಶನ ಮತ್ತು ಆ ಸಂಭ್ರಮಕ್ಕಾಗಿ ಉಪಯೋಗಿಸುವ ಶ್ರಮ ಮತ್ತು ಹಣವನ್ನು ಯಾವುದೇ ಸಾಮಾಜಿಕ ಕಾರ್ಯಗಳ ವಿಷಯದಲ್ಲಿ ತೋರುವುದಿಲ್ಲ. ಜನರು ಸಹ ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವಷ್ಟು ಯಾವುದೇ ಸಮಾಜ ಮುಖಿ ಜನ ಸೇವೆಗಳಲ್ಲಿ ಸೇರುವುದಿಲ್ಲ.

ತನಗೆ ವೈಯಕ್ತಿಕವಾಗಿ ಯಾವುದೋ ತೊಂದರೆಯಾದಾಗ ” ಅಯ್ಯೋ ಯಾರು ನ್ಯಾಯ ಕೇಳುವವರೇ ಇಲ್ಲ. ಅನ್ಯಾಯದ ವಿರುದ್ಧ ಮಾತನಾಡುವವರಿಲ್ಲ. ಸಮಾಜ ಸತ್ತು ಹೋಗಿದೆ ” ಎಂದು ಆಕ್ರೋಶದಿಂದ ಮಾತನಾಡುವ ಇದೇ ಜನ ಇತರರು ಸಂಕಷ್ಟದಲ್ಲಿ ಇರುವಾಗ ಧ್ವನಿ ಎತ್ತುವುದಿಲ್ಲ. ಮೌನವಾಗಿ ತಮಗೆ ಸಂಬಂಧವಿಲ್ಲದವರಂತೆ ಸುಮ್ಮನಿರುತ್ತಾರೆ.

ಮಹಾತ್ಮ ಗಾಂಧಿಯವರ ಮಾತಿನ ಅರ್ಥ ಇದೇ ಎನಿಸುತ್ತದೆ. ನೀವು ಹೇಗೆ ಕುಟುಂಬದ ಒಂದು ಭಾಗವೋ ಹಾಗೆಯೇ ಈ ಸಮಾಜದ, ಈ ಪ್ರಕೃತಿಯ ಒಂದು ಭಾಗ. ಅದರ ಹಿತಾಸಕ್ತಿಗೆ ಧಕ್ಕೆಯಾದಾಗ ಪ್ರತಿಭಟಿಸುವುದು ನಮ್ಮ ನಿಮ್ಮ ಕರ್ತವ್ಯ. ಅದನ್ನು ನಿರ್ವಹಿಸಿದಾಗ ಮನುಷ್ಯ ದೊಡ್ಡವನಾಗುತ್ತಾನೆ.

ಇಂದಿನ ವೇಗದ ಮತ್ತು ಸ್ಪರ್ಧಾ ಜಗತ್ತಿನಲ್ಲಿ ನಾವುಗಳು ಕಳೆದುಹೋಗಿ ಇಡೀ ವ್ಯವಸ್ಥೆ ಕುಸಿದು ಬಿದ್ದು ವಿನಾಶದ ಅಂಚಿನಲ್ಲಿರುವಾಗಲೂ ನಮ್ಮ ಪ್ರತಿಕ್ರಿಯೆ ಶೂನ್ಯ. ಅಷ್ಟು ಸ್ವಾರ್ಥಮಯ ಸಮಾಜ ಎಲ್ಲಾ ದೃಷ್ಟಿಯಿಂದ ಅಭಿವೃದ್ಧಿ ಹೊಂದುವುದು ತುಂಬಾ ಕಷ್ಟ.

ಆದ್ದರಿಂದ ದಯವಿಟ್ಟು ಮಹಾತ್ಮ ಗಾಂಧಿಯವರ ಆಶಯದಂತೆ ಪ್ರತಿಯೊಬ್ಬರ ಮನೆಯಲ್ಲಿ ಮನಸ್ಸಿನಲ್ಲಿ ಊರಿನಲ್ಲಿ ಒಬ್ಬೊಬ್ಬ ಬಾಬಾ ಸಾಹೇಬ್ ಬುದ್ದ ಮಹಾವೀರ ವಿವೇಕಾನಂದ ಬಸವಣ್ಣ ಅಕ್ಕಮಹಾದೇವಿ ಮುಂತಾದ ಮಹಾಮಹಿಮರ ಚಿಂತನೆಗಳು ಸದಾ ಜೀವಂತ ಇರುವಂತೆ ನಮ್ಮ ನಡವಳಿಕೆಗಳನ್ನು ರೂಪಿಸಿಕೊಳ್ಳಬೇಕಿದೆ.

ಆಗ ಮಾತ್ರ ಭಾರತೀಯ ಸಮಾಜ ತನ್ನ ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಎಲ್ಲರೂ ತನ್ನ ಕುಟುಂಬವೇ ತನ್ನ ಸರ್ವಸ್ವ, ಬದುಕಿನ ಸಾರ್ಥಕತೆ ಅಡಗಿರುವುದು ತನ್ನ ಕುಟುಂಬದ ಏಳಿಗೆಯಲ್ಲಿ ಮಾತ್ರ ಎಂಬ ಸ್ವಾರ್ಥಕ್ಕೆ ತಲುಪಿದರೆ ಇಡೀ ಸಮಾಜ ನಿಧಾನವಾಗಿ ಭೀಕರ ಅನಾಹುತಕ್ಕೆ ಒಳಗಾಗುತ್ತದೆ.

ದಯವಿಟ್ಟು ನಿಮ್ಮ ನಮ್ಮ ಕುಟುಂಬದ ಜೊತೆ ಸಮಾಜದ ಬಗ್ಗೆಯೂ ಸ್ವಲ್ಪ ಯೋಚಿಸಿ ಮತ್ತು ಆಗಾಗ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಹಾಗೂ ಸಮಾಜಕ್ಕಾಗಿ ನಿಮ್ಮ ಬಳಿ ಹೆಚ್ಚುವರಿಯಾಗಿರುವ ಸಂಪನ್ಮೂಲಗಳನ್ನು ಸ್ವಲ್ಪ ಮಟ್ಟಿಗೆ ದಾನ ಮಾಡಿ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಕೆ.ಜಿ.ಹಳ್ಳಿ ಮೂಲಸೌಕರ್ಯ ಸಮಸ್ಯೆಗಳ ಪರಿಹಾರಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಸೂಚನೆ

‘ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು. ಅವರು ಕೇಳಿದ ಕೆಲಸ ಮಾಡಿಕೊಡಬೇಕು, ವಿಳಂಬ ಮಾಡಬೇಡಿ’ ಎಂದು ಇಂಧನ ಸಚಿವ ಹಾಗೂ ಸರ್ವಜ್ಞ ನಗರ…

4 hours ago

ಯೂರಿಯಾ ಅಕ್ರಮ ದಾಸ್ತಾನು ಗೋದಾಮುಗಳ ಮೇಲೆ ಕೃಷಿ ಇಲಾಖೆ ಅಧಿಕಾರಿಗಳ ದಾಳಿ…18 ಲಕ್ಷ ಮೌಲ್ಯದ ಗೊಬ್ಬರ ವಶ..1296 ಮೂಟೆ ಯೂರಿಯಾ ವಶ…

ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದ ಗೋದಾಮುಗಳ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 18 ಲಕ್ಷ ಮೌಲ್ಯದ 1296…

4 hours ago

ಖಾಸಗಿ‌ ಕಂಪನಿ ಅವರಣದಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಅಸ್ಥಿಪಂಜರ ಪತ್ತೆ

ಹೊಂಗೆ ಮರದಲ್ಲಿ ನೇತಾಡುತ್ತಿರುವ ಸ್ಥಿತಿಯಲ್ಲಿ ತಲೆ ಬುರುಡೆ ಪತ್ತೆಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಬ್ಯಾಂಕ್ ಸರ್ಕಲ್…

10 hours ago

ಲಾರಿ ಪಲ್ಟಿ, ರಸ್ತೆಗೆ ಚೆಲ್ಲಿದ ಡೀಸೆಲ್: 112 ಸಿಬ್ಬಂದಿ ಸಮಯಪ್ರಜ್ಞೆಗೆ ಶ್ಲಾಘನೆ

ಸಿದ್ದಾಪುರ: ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯ ಜೋಗಿನ್ ಮಠ ಕ್ರಾಸ್ ಬಳಿ ಜಲ್ಲಿ ತುಂಬಿದ ಲಾರಿಯೊಂದು ರಸ್ತೆಗೆ ಉರುಳಿದ ಪರಿಣಾಮ,…

11 hours ago

ಹೆಂಡತಿಯ ಕೊಂ*ದು ಮನೆ ಬಳಿಯೇ ಹೂತು ಕಣ್ಮರೆ ಅಂತ ದೂರು ಕೊಟ್ಟ ಪಾಪಿ ಪತಿ…!

ದೇವರಹಿಪ್ಪರಗಿ: ‍ಪತ್ನಿಯನ್ನು ತಾನೇ ಕೊಂ*ದು ಶವವನ್ನು ಮನೆಯ ಆವರಣದಲ್ಲೇ ಹೂತುಹಾಕಿ ಆಕೆ ನಾಪತ್ತೆಯಾಗಿದ್ದಾಳೆ ಎಂದು ಕಥೆ ಕಟ್ಟಿದ್ದ ಆರೋಪಿಯನ್ನು ಬಂಧಿಸುವಲ್ಲಿ…

15 hours ago

ವಾಹನ ತಪಾಸಣ ಪೊಲೀಸರಿಗೆ ಹೆದರಿ ಜೀವ ಕಳೆದುಕೊಂಡ ಬೈಕ್ ಸವಾರ ಪತಿ….ಕಾಲುಗಳು ಮುರಿದು ಆಪರೇಷನ್ ರೂಮಿನಲ್ಲಿ  ಪತ್ನಿ….

ಬೈಕ್ ನಲ್ಲಿ ಪತ್ನಿಯೊಂದಿಗೆ ಸಂಬಂಧಿಕರ ಮನೆಯ ಸಾವಿಗೆ ತೆರಳುತ್ತಿದ್ದ ಬೈಕ್ ಸವಾರನೊಬ್ಬ ಹೆದ್ದಾರಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಪೋಲೀಸರನ್ನು ಕಂಡು…

16 hours ago