Categories: ಲೇಖನ

ತುಂಬಾ ಗಾಬರಿಯಾಗುವುದು ಬೇಡ….. ಯೋಚಿಸುವ ಸಮಯ ನಮ್ಮದು…

ದೇಶದ ಚುನಾವಣೆ ಘೋಷಣೆಯಾಗಿದೆ. ಚುನಾವಣಾ ಆಯೋಗ ಅನೇಕ ನೀತಿ ನಿಯಮಗಳನ್ನು ಜಾರಿ ಮಾಡಿದೆ. ಅವುಗಳಲ್ಲಿ ಸೋಷಿಯಲ್ ಮೀಡಿಯಾಗಳ ಮೇಲಿನ ಕೆಲವು ನಿಯಂತ್ರಣಗಳು ಸೇರಿವೆ……

ಮೂಲಭೂತವಾಗಿ ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯ ಗಣರಾಜ್ಯ. ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲಿನ ಹಕ್ಕು.. .

ಕೇವಲ ಚುನಾವಣಾ ಸಮಯದಲ್ಲಿ ಮಾತ್ರವಲ್ಲ ಎಲ್ಲಾ ಕಾಲದಲ್ಲೂ, ಎಲ್ಲಾ ಸಂದರ್ಭದಲ್ಲಿಯೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇನ್ನೊಬ್ಬರ ವೈಯಕ್ತಿಕ ನಿಂದನೆ, ಜಾತಿ ಧರ್ಮ ಭಾಷೆಗಳ ಅವಹೇಳನ, ಕೆಟ್ಟ ಪದಗಳ ಪ್ರಯೋಗ, ಅನೈತಿಕ ಚಟುವಟಿಕೆ, ಕಾನೂನು ಬಾಹಿರ ವ್ಯವಹಾರಗಳನ್ನು ನಿರ್ಬಂಧಿಸಲಾಗಿದೆ. ಇದೇನು ಹೊಸ ನಿಯಮವಲ್ಲ…….

ಚುನಾವಣಾ ಸಂದರ್ಭದಲ್ಲಿ ವಿಶೇಷವಾಗಿ ಕೆಲವು ಸೂಚನೆ ಕೊಡಲಾಗಿದೆ. ಅದರಲ್ಲಿ ಮುಖ್ಯವಾಗಿ….

ಸಾಮಾಜಿಕ ಜಾಲತಾಣಗಳಲ್ಲಿ ಅಭ್ಯರ್ಥಿ ಅಥವಾ ಪಕ್ಷದ ಪರ ಪ್ರಚಾರ ಮಾಡಬಾರದು. ಇದು ಸಂಪೂರ್ಣ ನಿಷೇಧವಲ್ಲ. ಪ್ರಚಾರ ಮಾಡಬೇಕಾದರೆ ಅನುಮತಿ ಪಡೆದಿರಬೇಕು. ಏಕೆಂದರೆ ಚುನಾವಣಾ ಖರ್ಚು ವೆಚ್ಚದ ಮೇಲೆ ಮಿತಿ ಇರುವುದರಿಂದ ಇಲ್ಲಿಯ ಪ್ರಚಾರದ ಲೆಕ್ಕ ಸಿಗುವುದಿಲ್ಲ ಎಂದು ಒಂದು ಆಲೋಚನೆ ಅಷ್ಟೆ. ಅನುಮತಿ ಪಡೆದು ಹಣದ ಲೆಕ್ಕ ತೋರಿಸಿ ಪ್ರಚಾರ ಮಾಡಬಹುದು. ಏಕೆಂದರೆ ಸಾಮಾನ್ಯ ಸಂಧರ್ಭದಲ್ಲಿ ಯಾವುದೇ ಮಾಧ್ಯಮಗಳ ಅಧೀಕೃತ ಪ್ರಚಾರವನ್ನು ತಡೆಯುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ…..

ಮತ್ತೆ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹೆಚ್ಚಾಗಿ ಹರಿದಾಡುವುದರಿಂದ ಮತ್ತು ಅದಕ್ಕೆ ಒಂದು ನಿರ್ದಿಷ್ಟ ಜವಾಬ್ದಾರಿ ಮತ್ತು ಸತ್ಯದ ಅಧೀಕೃತ ಖಚಿತತೆಯ ಮಾನದಂಡಗಳು ಇಲ್ಲದಿರುವುದರಿಂದ, ಭಾರತದಂತಹ ಬೃಹತ್ ದೇಶದಲ್ಲಿ ಗಾಳಿ ಸುದ್ದಿಗಳು ಬಹುಬೇಗ ಹರಡುವುದು ಮತ್ತು ಜನರು ಅದನ್ನು ನಂಬುವ ಸಾಧ್ಯತೆ ಇರುವುದರಿಂದ ಅದರ ದುಷ್ಪರಿಣಾಮ ತಡೆಯಲು ಅನುಮತಿಯನ್ನು ಕಡ್ಡಾಯ ಗೊಳಿಸಲಾಗಿದೆ…..

ಇದನ್ನೇ ಕೆಲವು ಗೆಳೆಯರು ತಪ್ಪಾಗಿ ಭಾವಿಸಿ ಕಳವಳಗೊಂಡಿದ್ದಾರೆ. ಭಾರತದ ಪ್ರಜೆಗಳೆಲ್ಲ ಕ್ರಿಮಿನಲ್ ಗಳಲ್ಲ. ಪ್ರಜಾಪ್ರಭುತ್ವದ ಮೂಲ ಗಟ್ಟಿತನ ಉಳಿದಿರುವುದೇ ಅದರ ಭಿನ್ನ ಧ್ವನಿಗಳಿಂದಾಗಿ. ಇದೇನು ಕಮ್ಯುನಿಸ್ಟ್ ಅಥವಾ ಸರ್ವಾಧಿಕಾರಿ ದೇಶವಲ್ಲ…..

ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗೆ ಇರುವಷ್ಟು ಸ್ವಾತಂತ್ರ್ಯ ಸೋಷಿಯಲ್ ಮೀಡಿಯಾಗಳಿಗೂ ಇದೆ. ಅದೇರೀತಿ ಕಾನೂನು ಬಾಹಿರ ವಿಷಯ ಪ್ರಕಟಿಸಿದರೆ ಶಿಕ್ಷೆಗೆ ಗುರಿ ಮಾಡುವ ಅಧಿಕಾರವೂ ಆಡಳಿತಕ್ಕೆ ಇದೆ……‌

ಸೋಷಿಯಲ್ ಮೀಡಿಯಾ ಇಂದು ಒಂದು ಪ್ರಬಲ ಮಾಧ್ಯಮವಾಗಿ ಬೆಳೆದಿದೆ. ಭಾರತದ ಶಾಂತಿ ಸಾಮರಸ್ಯ ಅಭಿವೃದ್ಧಿ ಮತ್ತು ವೈವಿಧ್ಯತೆಯನ್ನು ಉಳಿಸಿಕೊಳ್ಳಲು ಒಂದು ಜನಾಭಿಪ್ರಾಯ ಮೂಡಿಸುವುದು ಅವಶ್ಯವಲ್ಲವೆ‌‌……

ಅಧಿಕಾರಿಗಳು, ರಾಜಕೀಯ ಪಕ್ಷಗಳು, ಅತ್ಯಂತ ನೀಚ ಭ್ರಷ್ಟಾಚಾರಗಳಲ್ಲಿ ತೊಡಗಿ, ಅಕ್ರಮಗಳ ಮುಖಾಂತರ ಚುನಾವಣೆ ಗೆದ್ದು ಬಡವರ ರಕ್ತ ಹೀರುತ್ತಿರುವಾಗ ನಾವು ಕೈಕಟ್ಟಿ, ಬಾಯಿ ಮುಚ್ಚಿ ಕುಳಿತುಕೊಳ್ಳಬೇಕೆ……

ಕನಿಷ್ಠ ಒಂದು ಒಳ್ಳೆಯ ಆಡಳಿತಾತ್ಮಕ ವ್ಯವಸ್ಥೆ ರೂಪಿಸಲು, ಜನರ ಮೇಲೆ ಸಾಮೂಹಿಕ ಪರಿಣಾಮ ಬೀರಿ ಜನಾಭಿಪ್ರಾಯ ರೂಪಿಸಲು ಸಣ್ಣ ಮಟ್ಟದ ಪ್ರಯತ್ನ ಮಾಡಬಾರದೆ……

ಹೌದು, ಕೆಲವು ಉಡಾಫೆ ಮನೋಭಾವದ ಜನಗಳು ಯಾವುದೋ ವ್ಯಕ್ತಿ ಅಥವಾ ಪಕ್ಷ ಅಥವಾ ಜಾತಿ ಅಥವಾ ಧರ್ಮ ಅಥವಾ ಹಣಕ್ಕೆ ತಮ್ಮನ್ನು ಮಾರಿಕೊಂಡು ಅಸಭ್ಯ ಭಾಷೆಯಿಂದ ಇತರರನ್ನು ಕೆಟ್ಟ ಕೊಳಕ ಭಾಷೆಯಲ್ಲಿ ನಿಂದಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುವುದನ್ನು ನೋಡುತ್ತಿದ್ದೇವೆ. ಇದು ಅಪರಾಧ……

ಆದರೆ ಇಂತಹ ಅಭ್ಯರ್ಥಿ ಉತ್ತಮ, ಇಂತಹ ಪಕ್ಷ ಪರವಾಗಿಲ್ಲ ಅಥವಾ ‌ಇದು ಯಾವುದೂ ಸರಿ ಇಲ್ಲ ಬೇರೆ ವ್ಯವಸ್ಥೆಯ ಬಗ್ಗೆ ಪರಿಶೀಲಿಸೋಣ ಎಂಬ ಅಭಿಪ್ರಾಯ ವ್ಯಕ್ತಪಡಿಸಲೂ ಸಾಧ್ಯವಿಲ್ಲ ಎಂದಾದರೆ ಅದು ಪ್ರಜಾಪ್ರಭುತ್ವ ನಾಶದ ಲಕ್ಷಣ ಎಂದೇ ಭಾವಿಸಬೇಕಾಗುತ್ತದೆ…….

ಕೆಟ್ಟದ್ದನ್ನು ನಿಯಂತ್ರಿಸುವ ಭರದಲ್ಲಿ ಒಳ್ಳೆಯವರನ್ನು ಮೂಕರಾಗಿಸುವುದು ದುರಂತ. ಇದರ ಲಾಭ ಪಡೆಯುವ ದುಷ್ಟರು ನಮ್ಮನ್ನು ಸದಾಕಾಲವು ಶೋಷಿಸುತ್ತಲೇ ಇರುತ್ತಾರೆ. ಬಂಧನದ ಭೀತಿ ಸೃಷ್ಟಿಸಿ ನಮ್ಮ ಧ್ವನಿ ಅಡಗಿಸುತ್ತಾರೆ……

ನಾವು ಎಚ್ಚೆತ್ತುಕೊಳ್ಳಬೇಕಿದೆ. ಕೊಲೆಗಡುಕರು, ಭ್ರಷ್ಟರು, ಮಾಫಿಯಾದವರು, ರೌಡಿಗಳು, ಖದೀಮರು ಬಾಯಿಗೆ ಬಂದಂತೆ ರಾಜಾರೋಷವಾಗಿ ಮಾತನಾಡುವಾಗ ದೇಶದ ಹಿತದೃಷ್ಟಿಯಿಂದ ಒಳ್ಳೆಯ ಮಾತನಾಡುವ ನಾವು ಹೆದರಬೇಕೆ ?……

ಯೋಚಿಸುವ ಸಮಯ ನಮ್ಮದು……ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ.

ಲೇಖಕ- ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ಸಾಹಿತ್ಯ ಪರಿಷತ್ ಚುನಾವಣೆ…..

ಸಾಹಿತ್ಯ ಪರಿಷತ್ ಚುನಾವಣೆ..... ನನ್ನ ಮತ........? ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಕನ್ನಡದ ಅಸ್ಮಿತೆಗೊಂದು ಸವಾಲು. ಭ್ರಷ್ಟರ ವಿರುದ್ಧ ಪ್ರಾಮಾಣಿಕರು,…

5 hours ago

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಬೆಂಗಳೂರು ಗ್ರಾಮಾಂತರದ ಇಬ್ಬರು ಶಿಕ್ಷಕರು ಆಯ್ಕೆ

ದೇವನಹಳ್ಳಿ: ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2026–27ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ…

16 hours ago

ಮೇಕೆದಾಟು ಯೋಜನೆ ಶೀಘ್ರ ಜಾರಿಗೆ ಸಚಿವರ ದೃಢ ಸಂಕಲ್ಪ: ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ

ಮೇಕೆದಾಟು ಯೋಜನೆಯ ಶೀಘ್ರ ಜಾರಿಗಾಗಿ ಜಲಸಂಪನ್ಮೂಲ ಸಚಿವರು ತೀವ್ರ ಒಲವು ತೋರಿದ್ದು, ಕಾಮಗಾರಿಗೆ ಇನ್ನಷ್ಟು ವೇಗ ನೀಡುವ ನಿಟ್ಟಿನಲ್ಲಿ ರಾಜ್ಯದ…

17 hours ago

ಶ್ರೀರಂಗವನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

ತೂಬಗೆರೆ: ಹೋಬಳಿಯ ಯದ್ದಲಹಳ್ಳಿ ಸಮೀಪದ ಶ್ರೀರಂಗವನದಲ್ಲಿರುವ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ ಹಾಗೂ…

17 hours ago

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2026: ಹಕ್ಕು,ಆಕ್ಷೇಪಣೆ ಸಲ್ಲಿಕೆಗೆ ಸೆ. 23 ವರೆಗೆ ಅವಕಾಶ-ಡಿಸಿ ಅನುರಾಧ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಕರಡು ಮತದಾರ ಪಟ್ಟಿ ಪ್ರಕಟಗೊಂಡಿದ್ದು ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ಮತದಾರರು ಮತಗಟ್ಟೆ…

19 hours ago

ರೈಲು ಡಿಕ್ಕಿಗೆ ಅಪರಿಚಿತ ವ್ಯಕ್ತಿ ಬಲಿ

ದೊಡ್ಡಬಳ್ಳಾಪುರ: ರೈಲಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಸಮೀಪ…

23 hours ago