
ತಮಿಳುನಾಡಿಗೆ ನಿತ್ಯ 6 ಸಾವಿರ ಕ್ಯೂಸೆಕ್ಸ್ ಕಾವೇರಿ ನೀರು ಹರಿಸುವಂತೆ CWRC ನೀಡಿರುವ ಆದೇಶ ಅಸಂಬದ್ಧವಾಗಿದ್ದು, ಅತ್ಯಂತ ನೋವು ಹಾಗೂ ಬೇಸರ ತಂದಿದೆ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, CWRC ಸಭೆಯಲ್ಲಿ ನಮ್ಮ ರಾಜ್ಯದ ಅಧಿಕಾರಿಗಳು ವಾಸ್ತವ ಸ್ಥಿತಿಯ ಬಗ್ಗೆ ಪ್ರಬಲವಾಗಿ ವಾದ ಮಂಡಿಸಿದ್ದಾರೆ. ತಮಿಳುನಾಡು 17 ಸಾವಿರ ಕ್ಯೂಸೆಕ್ಸ್ ನೀರಿಗೆ ಬೇಡಿಕೆ ಇಟ್ಟಿತ್ತು. ಆದರೆ ಕಳೆದ ಒಂದು ವಾರದಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಒಳಹರಿವು ಗಣನೀಯವಾಗಿ ಕಡಿಮೆಯಾಗಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ 6 ಸಾವಿರ ಕ್ಯೂಸೆಕ್ಸ್ ನೀರು ಹರಿಸುವುದೂ ನಮಗೆ ಅಸಾಧ್ಯ. ನಾವು ‘ಶೂನ್ಯ ನೀರು’ ಬಿಡುವ ನಿಟ್ಟಿನಲ್ಲಿ ಸತತ ಪ್ರಯತ್ನ ನಡೆಸುತ್ತಿದ್ದೇವೆ, ಎಂದರು.
ದೆಹಲಿಯಲ್ಲಿ ಕುಳಿತು ಆದೇಶ ನೀಡುವ ಪ್ರಾಧಿಕಾರಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, “ದೆಹಲಿಯಲ್ಲಿ ಕುಳಿತು ಆಡಳಿತ ನಡೆಸುವ ಕಾನ್ಸ್ಟಿಟ್ಯೂಷನ್ ಹಾಗೂ ಅಡ್ಮಿನಿಸ್ಟ್ರೇಶನ್ ಬೆಂಚ್ಗಳಿಗೆ ನೆಲಮಟ್ಟದ ವಾಸ್ತವ ಸ್ಥಿತಿ ಅರ್ಥವಾಗುತ್ತಿಲ್ಲ. ಈ ಹಿಂದೆಯೂ ವಾಸ್ತವ ಅರಿಯದೆ ಇದೇ ರೀತಿಯ ಆದೇಶಗಳನ್ನು ನೀಡಿರುವ ನಿದರ್ಶನಗಳಿವೆ.
ಇಂದು ಮಧ್ಯಾಹ್ನ ಮೂರು ಗಂಟೆಗೆ CWMA ಸಭೆ ನಡೆಯಲಿದ್ದು, ಅಲ್ಲಿಯೂ ನಮಗೆ ಹೆಚ್ಚಿನ ಸಮಾಧಾನ ಸಿಗುವುದು ಅನುಮಾನ. ಹೀಗಾಗಿ ಸಿಡಬ್ಲ್ಯೂಎಂಎ ಸಭೆಯ ಬಳಿಕ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ನಾಳೆಯೇ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ,” ಎಂದು ಮಾಹಿತಿ ನೀಡಿದರು.
ರಾಜ್ಯದ ಜಲಾಶಯಗಳ ನೀರಿನ ಸಂಗ್ರಹದ ಕುರಿತು ವಿವರಿಸಿದ ಅವರು, “ಪ್ರಸ್ತುತ ಡ್ಯಾಂಗಳಲ್ಲಿರುವ ನೀರಿನ ಪೈಕಿ ಶೇ. 5೦ ರಷ್ಟನ್ನು ಕೇವಲ ಕುಡಿಯುವ ನೀರಿನ ಉದ್ದೇಶಕ್ಕೆ ಮೀಸಲಿಡಲಾಗಿದೆ. ಭದ್ರಾ ಹಾಗೂ ಕೃಷ್ಣಾ ಮೇಲ್ದಂಡೆ (UKP) ಯೋಜನೆಯಿಂದ ರೈತರ ಬೆಳೆಗಳಿಗೆ ಅಗತ್ಯಕ್ಕೆ ತಕ್ಕಂತೆ ನೀರು ಒದಗಿಸಲಾಗಿದೆ. ಚಿತ್ರದುರ್ಗ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನದಿಯ ಮೂಲಕ ನೀರು ಹರಿಸಲಾಗಿದೆ. ಎಲ್ಲೆಡೆ ಕೆರೆ-ಕುಂಟೆಗಳನ್ನು ತುಂಬಿಸಿ ಜನ-ಜಾನುವಾರುಗಳಿಗೆ ಸಮಸ್ಯೆಯಾಗದಂತೆ ಡ್ಯಾಂಗಳಿಂದ ನಿಯಂತ್ರಿತವಾಗಿ ನೀರು ನಿರ್ವಹಣೆ ಮಾಡಲಾಗುತ್ತಿದೆ,” ಎಂದರು.
ಇದೇ ವೇಳೆ ವಿರೋಧ ಪಕ್ಷದ ನಾಯಕರ ಪಾದಯಾತ್ರೆಯ ಕುರಿತು ವ್ಯಂಗ್ಯವಾಡಿದ ಸಚಿವ ಚಲುವರಾಯಸ್ವಾಮಿ, “ಬಿಜೆಪಿಯವರು ಯಾರ ಹಠಕ್ಕೆ ಬಿದ್ದು ಪಾದಯಾತ್ರೆ ನಡೆಸುತ್ತಿದ್ದಾರೆ ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಈಗಾಗಲೇ ಆರ್. ಅಶೋಕ್ ಅವರಿಗೆ ಕಾಲು ನೋವು ಕಾಣಿಸಿಕೊಂಡಿದೆ. ಅಲ್ಲಿರುವ ನಾಯಕರೂ ನಮ್ಮ ಸ್ನೇಹಿತರೇ ಆಗಿದ್ದು, ಪಾದಯಾತ್ರೆ ಮಾಡುವವರ ಆರೋಗ್ಯ ಕೆಡದಿರಲಿ. ಪಾದಯಾತ್ರೆ ಮುಗಿದ ಮೇಲೂ ಅವರ ಆರೋಗ್ಯ ಸ್ಥಿರವಾಗಿರಲಿ ಎಂದು ಆಶಿಸುತ್ತೇನೆ ಎಂದು ಟಾಂಗ್ ನೀಡಿದರು.