Categories: ಲೇಖನ

ಚುನಾವಣಾ ಫಲಿತಾಂಶದ ನಂತರ ನಮ್ಮ ತಿಳಿವಳಿಕೆ – ನಡವಳಿಕೆ ಮತ್ತು ಪ್ರತಿಕ್ರಿಯೆ ಹೇಗಿರಬೇಕು….?

ನಾಳೆ ಭಾರತ ದೇಶದ ಲೋಕಸಭೆಯ 545 ಕ್ಷೇತ್ರಗಳ ಚುನಾವಣಾ ಫಲಿತಾಂಶ ಪ್ರಕಟವಾಗುತ್ತದೆ. ಫಲಿತಾಂಶ ಏನೇ ಇರಲಿ, ಯಾರೇ ಅಧಿಕಾರಕ್ಕೆ ಬರಲಿ ದಯವಿಟ್ಟು ಪಕ್ಷಗಳ ಕಾರ್ಯಕರ್ತರು ಮತ್ತು ಮತದಾರರು ಈ 72 ದಿನಗಳ ಚುನಾವಣಾ ಪ್ರಚಾರದ ಭಾಷಣಗಳು, ವಿರೋಧಗಳು, ದ್ವೇಷ ಅಸೂಯೆಗಳು ಎಲ್ಲವನ್ನು ಮರೆತುಬಿಡಿ…….

ಗೆದ್ದವರು ತಣ್ಣಗೆ ಸಂಭ್ರಮ ಆಚರಿಸಿ, ಸೋತವರನ್ನು ತೀರಾ ಕೆಟ್ಟದಾಗಿ ನಡೆಸಿಕೊಳ್ಳಬೇಡಿ, ಟೀಕಿಸಬೇಡಿ. ಇದೊಂದು ನಮ್ಮದೇ ಜನರು ನಡುವಿನ ತಾತ್ಕಾಲಿಕ ಸ್ಪರ್ಧೆ ಮಾತ್ರ. ನಾವೆಲ್ಲರೂ ಭಾರತೀಯರು, ಭಾರತೀಯ ಕುಟುಂಬಕ್ಕೆ ಸೇರಿದವರು……

ಈ ಚುನಾವಣಾ ರಾಜಕೀಯ ದ್ವೇಷವನ್ನು ಮುಂದುವರಿಸಿದ್ದೇ ಆದರೆ ಅದು ಮುಂದೆ ಅಪಾಯಕಾರಿ ಬೆಳವಣಿಗೆಗಳಿಗೆ ಕಾರಣವಾಗುತ್ತದೆ. ಇದನ್ನು ಒಂದು ಕ್ರೀಡಾ ಸ್ಪರ್ಧೆಯಾಗಿ ಪರಿಗಣಿಸಿ. ಈ ಸ್ಪರ್ಧೆಯಲ್ಲಿ ಒಬ್ಬರು ಗೆಲ್ಲುತ್ತಾರೆ. ಗೆದ್ದವರು ಉತ್ತಮ ಆಡಳಿತ ನೀಡಲಿ. ಸೋತವರು ಅವರ ಮೇಲ್ವಿಚಾರಣೆ ಮಾಡಿ ಅವರು ಸದಾ ಜಾಗೃತವಾಗಿರುವಂತೆ ಮಾಡಲಿ……

ಯಾವುದೇ ಗೆದ್ದ ರಾಜಕೀಯ ಪಕ್ಷಕ್ಕೆ ಅಥವಾ 545 ಸಂಸದರಿಗೆ ಯಾರೂ ದೇಶವನ್ನು ಅಥವಾ ಅವರವರ ಕ್ಷೇತ್ರಗಳನ್ನು ಸ್ವಂತಕ್ಕೆ ಗುತ್ತಿಗೆ ನೀಡುತ್ತಿಲ್ಲ. ಅವರು ಮತದಾರರ ಪ್ರತಿನಿಧಿಗಳು ಮಾತ್ರ. ಜೊತೆಗೆ ಅವರು ಯಾವುದೇ ಸರ್ವಾಧಿಕಾರಿಗಳಲ್ಲ. ಸಂವಿಧಾನಾತ್ಮಕ ಹಕ್ಕುಗಳು ಮತ್ತು ಕರ್ತವ್ಯಗಳು ಹಾಗು ಜವಾಬ್ದಾರಿಗಳು ಮಾತ್ರ ಅವರಿಗಿರುತ್ತವೆ, ಅದರ ಅಡಿಯಲ್ಲಿಯೇ ಅವರು ಕೆಲಸ ಮಾಡಬೇಕು. ಯಾರನ್ನೂ ದ್ವೇಷಿಸುವುದಿಲ್ಲ ಎಂದು ಪ್ರತಿಜ್ಞಾವಿಧಿ ಸಹ ಸ್ವೀಕರಿಸುತ್ತಾರೆ…….

ದಯವಿಟ್ಟು ಪಕ್ಷಗಳ ಕಾರ್ಯಕರ್ತರೇ ಮತ್ತು ಮತದಾರರೇ ದೇಶದ, ಸಮಾಜದ, ಮಾನವೀಯತೆಯ, ಗೆಳೆತನದ ಘನತೆಯನ್ನು ಕಾಪಾಡಿ. ಚುನಾವಣೆ ಎರಡು ದೇಶಗಳ, ಎರಡು ಸಂಸ್ಕೃತಿಗಳ, ಎರಡು ನಾಗರಿಕತೆಗಳ, ಎರಡು ಧರ್ಮಗಳ ನಡುವಿನ ಯುದ್ಧ ಅಥವಾ ವೈಷಮ್ಯವಲ್ಲ. ಎರಡು ಆಡಳಿತಾತ್ಮಕ ವಿಚಾರಗಳ ನಡುವಿನ ಆಯ್ಕೆ. ಒಂದು ಜವಾಬ್ದಾರಿಯುತ ಸರ್ಕಾರ ನಡೆಸಲು ನಮ್ಮಗಳ ನಡುವೆಯೇ ನಡೆದ ಅತ್ಯಂತ ಸರಳ ಮತ್ತು ತಾತ್ಕಾಲಿಕ ಸ್ಪರ್ಧೆ ಮಾತ್ರ……

ಇಲ್ಲಿ ಯಾರು ಶತ್ರುಗಳಲ್ಲ. ಇದನ್ನು ಅರ್ಥ ಮಾಡಿಕೊಳ್ಳಿ. ಹುಚ್ಚರಂತೆ ಫಲಿತಾಂಶ ಪ್ರಕಟವಾದ ನಂತರ ಏನೋ ಮಹಾನ್ ಸಾಧನೆ ಮಾಡಿದಂತೆ ಸಂಭ್ರಮವನ್ನು ಆಚರಿಸಬೇಡಿ. ಪಟಾಕಿ ಹೊಡೆದು ಪರಿಸರ ನಾಶ ಮಾಡಬೇಡಿ. ಜೈಕಾರ ಕೂಗಿ ವಿರೋಧಿಗಳಲ್ಲಿ ಅಸಮಾಧಾನ ಸೃಷ್ಟಿ ಮಾಡಬೇಡಿ. ನೀವು ನಿಜವಾಗಲೂ ಸಂಭ್ರಮ ಪಡಬೇಕಾಗಿರುವುದು ಗೆದ್ದ ನಂತರ ಎಷ್ಟು ಉತ್ತಮವಾಗಿ ಮುಂದಿನ ವರ್ಷಗಳಲ್ಲಿ ಕೆಲಸ ಮಾಡುವಿರಿ, ಆ ಐದು ವರ್ಷದ ಕೊನೆಯಲ್ಲಿ ನೀವು ಸಂಭ್ರಮ ಪಟ್ಟರೆ ಅದಕ್ಕೆ ಒಂದು ಅರ್ಥವಿರುತ್ತದೆ. ಗೆದ್ದಿದ್ದು ಮಾತ್ರವೇ ಸಾಧನೆಯಾಗುವುದಿಲ್ಲ….

ಕ್ರೀಡೆಗಳಲ್ಲಿ ಗೆದ್ದ ವ್ಯಕ್ತಿ ಸೋತ ವ್ಯಕ್ತಿಯನ್ನು ಅಪ್ಪಿಕೊಂಡು ತನ್ನ ಸಹಾನುಭೂತಿ ವ್ಯಕ್ತಪಡಿಸುತ್ತಾನೆ. ಅದನ್ನೇ ಚುನಾವಣೆಯಲ್ಲಿ ಸೋತ ವ್ಯಕ್ತಿಯ ಬಗ್ಗೆಯೂ ವ್ಯಕ್ತಪಡಿಸಿ. ಚುನಾವಣಾ ಸೋಲು ಗೆಲುವು ಸಾಧನೆಯಲ್ಲ. ನಮ್ಮ ಬದುಕಿನ ಒಂದು ಅನುಭವ ಮಾತ್ರ. ಅದರಲ್ಲೂ ಅಧಿಕಾರಕ್ಕೆ ಏರುವವರು ಹೆಚ್ಚು ಸಮಯದಿಂದ, ತಾಳ್ಮೆಯಿಂದ, ಪ್ರಬುದ್ಧತೆಯಿಂದ ವರ್ತಿಸಬೇಕಾಗುತ್ತದೆ…….

ಸೋತವರ ಅಸಹಾಯಕತೆ, ನಿರಾಸೆ, ನೋವನ್ನು ಅರ್ಥ ಮಾಡಿಕೊಂಡು ಸಹಜವಾಗಿ ವರ್ತಿಸಬೇಕಾಗುತ್ತದೆ. ಇಲ್ಲದಿದ್ದರೆ ದೇಶ ಭಕ್ತಿಗೂ, ಧರ್ಮ ಭಕ್ತಿಗೂ, ಮನುಷ್ಯತ್ವಕ್ಕೂ ಅರ್ಥವೇ ಇರುವುದಿಲ್ಲ. ಕೋತಿಗಳಂತೆ ಕುಣಿದು ಕುಪ್ಪಳಿಸುವುದನ್ನು  ನಿಲ್ಲಿಸಿ. ಇದು ಯಾರೇ ಗೆದ್ದರೂ ಎಲ್ಲರಿಗೂ ಏಕಪ್ರಕಾರವಾಗಿ ಅನ್ವಯಿಸುತ್ತದೆ……..

ಮೊದಲಿಗೆ ಈ ಟಿವಿ ಮಾಧ್ಯಮಗಳ TRP ಪ್ರೇರಿತ ವಿವೇಚನಾರಹಿತ, ಪ್ರಚೋದಾತ್ಮಕ ಹೇಳಿಕೆ, ಚರ್ಚೆಗಳನ್ನು ನಿರ್ಲಕ್ಷಿಸಿ…..

ಕುರುಕ್ಷೇತ್ರ – ಅಖಾಡ – ಯುದ್ಧ – ಮಹಾಭಾರತ – ಪ್ರತೀಕಾರ  ಮುಂತಾದ ಮನ ಕೆರಳಿಸುವ ಕಾರ್ಯಕ್ರಮಗಳನ್ನು ಹಾಸ್ಯಾಸ್ಪದವಾಗಿ ನೋಡೋಣ…..

ಹೌದು,

ಇದು ಪ್ರಜಾಪ್ರಭುತ್ವ ಮತ್ತು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ‌ ದೇಶ ನಿಜ. ಹಾಗಂತ ಹುಚ್ಚುಚ್ಚಾಗಿ ಅವಶ್ಯಕತೆ ಇಲ್ಲದಿದ್ದರೂ ಚರ್ಚೆಯ ನೆಪದಲ್ಲಿ ಕೆಟ್ಟದಾಗಿ ಪ್ರತಿಕ್ರಿಯಿಸುವುದು ಬೇಡ…..

ನಾವೆಲ್ಲರೂ ಸ್ನೇಹಿತರು – ಸಂಬಂಧಿಗಳು – ಒಂದೇ ದೇಶದ ಪ್ರಜೆಗಳು. ಯಾವುದೋ ಒಂದು ಪಕ್ಷದ ಬಗ್ಗೆ ಒಲವಿರಬಹುದು. ಅದರ ಅರ್ಥ ನಾವು ಅದನ್ನು ದೊಡ್ಡ ಗಂಟಲಿನಲ್ಲಿ ಕೂಗಾಡಿ ಈಗಿರುವ ನಮ್ಮ ಪ್ರೀತಿ ವಿಶ್ವಾಸಕ್ಕೆ ಧಕ್ಕೆ ಮಾಡಿಕೊಳ್ಳುವುದು ಬೇಡ……

ಈ ಪಕ್ಷ ಬಂದರೆ ಹಾಗೆ,‌ಆ ಪಕ್ಷ ಬಂದರೆ ಹೀಗೆ ಎಂದು ನಮ್ಮೊಳಗೆ ಕಚ್ಚಾಡುವುದು ಬೇಡ. ಅಂತಹ ಕ್ರಾಂತಿಕಾರಿ ಬದಲಾವಣೆ ಈ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ….

ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ. ತುಂಬಾ ಸಂತೋಷ. ಆದರೆ ಸಭ್ಯತೆಯ ಗೆರೆ ದಾಟದೆ, ನಾವೇ ಸರಿ ಎಂದು ಹಠ ಮಾಡದೆ, ದುರಹಂಕಾರ ಪ್ರದರ್ಶಿಸದೆ, ನಮ್ಮ ಅಭಿಪ್ರಾಯ ಒಪ್ಪಲೇ ಬೇಕು ಎಂದು ಒತ್ತಡ ಹೇರದೆ ನಗುನಗುತ್ತಾ ಪ್ರತಿಕ್ರಿಯಿಸಿ…..

ಸೋಷಿಯಲ್ ಮೀಡಿಯಾಗಳಲ್ಲಿ ಎಷ್ಟೋ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ, ಕೌಟುಂಬಿಕ, ಹಳೆಯ ಸ್ನೇಹಿತರ, ತಮ್ಮ ಊರಿನವರ‌, ಹೊರಗಿನವರ ನಾನಾ ಗುಂಪುಗಳಿವೆ. ಈ ಚುನಾವಣಾ ಸಮಯದಲ್ಲಿ ಕೇವಲ ಯಾರೋ ಸ್ವಾರ್ಥಿಗಳ ರಾಜಕೀಯ ದಾಳಗಳಾಗುವುದು ಬೇಡ…..

ಟಿವಿಗಳಲ್ಲಿ ಅಜನ್ಮ ಶತ್ರುಗಳಂತೆ ಜಗಳವಾಡುವ ನಾಯಕರು ಕಾರ್ಯಕ್ರಮ ಮುಗಿದ ನಂತರ ನಿರೂಪಕನನ್ನೂ ಕರೆದುಕೊಂಡು ರಾತ್ರಿ ಊಟಕ್ಕೆ ಹೋಗುವುದು ಬಹಳಷ್ಟು ಇದೆ……

ಸೀರೆ ಪಂಚೆ ಮಿಕ್ಸಿ ಕುಕ್ಕರ್ ದುಡ್ಡು ಬಾಡು ಜಾತಿ ಧರ್ಮ ಭಾಷೆ ಬಾರುಗಳಿಗಿರುವ ವೋಟಿನ ಶಕ್ತಿ, ಸುಳ್ಳು ಮತ್ತು ಆಕರ್ಷಕ ಮಾತುಗಳಿಗಿರುವ ವೋಟು ಸೆಳೆಯುವ‌ ಆಕರ್ಷಣೆ ಖಂಡಿತ ನಮ್ಮ ಅಭಿಪ್ರಾಯಗಳಿಗೆ ಇರುವುದಿಲ್ಲ…….

ಸಂಯಮವಿರಲಿ……

ಉದ್ವೇಗ ಒಳ್ಳೆಯದಲ್ಲ……

ಭಾವನಾತ್ಮಕ ಪ್ರತಿಕ್ರಿಯೆಯಲ್ಲಿ ಸೂಕ್ಷ್ಮತೆ ಇರಲಿ…….

ದ್ವೇಷ, ಪ್ರತೀಕಾರಗಳು, ಮಾತು ಅಕ್ಷರಗಳಲ್ಲಿ ಮೂಡುವ ಮುನ್ನ ಹಲವಾರು ಬಾರಿ ಯೋಚಿಸಿ……..

ನಿಂತ ನೆಲದ, ಸುತ್ತಲಿನ ಜನರ ಹಿತಾಸಕ್ತಿ ಮನದಲ್ಲಿರಲಿ……..

ನಮ್ಮ ಒಟ್ಟು ಪರಿಸ್ಥಿತಿ ಗಮನದಲ್ಲಿರಲಿ…..

ಸಹನೆಗೂ, ಹೇಡಿತನಕ್ಕೂ, ಧೈರ್ಯಕ್ಕೂ ನಡುವಿನ ವ್ಯತ್ಯಾಸ ತಿಳಿದಿರಲಿ…..

ನಮ್ಮ ಸಾಮರ್ಥ್ಯ, ಮಿತಿಗಳ ಪುನರಾವಲೋಕನವಾಗಲಿ…..

ಹಲವಾರು ಸಾಧ್ಯತೆಗಳ ವಿಮರ್ಶೆಯಾಗಲಿ……

ಓಟಿನ ಬೇಟೆಯ ಬಗ್ಗೆ ಎಚ್ಚರವಿರಲಿ…..

ಆಂತರಿಕ ಭಿನ್ನಾಭಿಪ್ರಾಯಗಳು ಹೆಚ್ಚಾಗದಿರಲಿ……..

ಶತ್ರುವಿನ ಕುತಂತ್ರಗಳ ಸಂಪೂರ್ಣ ಮಾಹಿತಿಯಿರಲಿ…..

ನಮ್ಮ ನಮ್ಮಲ್ಲಿ ಒಗ್ಗಟ್ಟಿರಲಿ…….

ನಮ್ಮ ಒಳಗಿನ ಆರೋಪ ಪ್ರತ್ಯಾರೋಪಗಳಿಗೆ ಅಲ್ಪ ವಿರಾಮ ನೀಡಿ……..

ಯುದ್ಧ, ಶಾಂತಿ, ಸಂಧಾನ ಅವುಗಳ ದೀರ್ಘ ಪರಿಣಾಮದ ಬಗ್ಗೆ ಹಿರಿಯರೊಂದಿಗೆ ಮಾತುಕತೆ ಮಾಡಿ…..

ಹುಚ್ಚರು, ಉಡಾಫೆಯವರು  ಮತ್ತು ಸಾಮಾನ್ಯರ ನಡುವಿನ ಅಂತರದ ತೀರ್ಮಾನ ಯೋಚಿಸಿ ನಿರ್ಧರಿಸಿ…..

ಮಾತಿನ ದೇಶ ಭಕ್ತಿಗೂ, ಮನಸ್ಸಿನ ದೇಶ ಪ್ರೇಮಕ್ಕೂ, ಹೃದಯದ ದೇಶ ಪ್ರೀತಿಗೂ, ನಡುವಿನ ವ್ಯತ್ಯಾಸದ ಅರಿವಿರಲಿ….

ಇರುವವರು ಕಳೆದುಕೊಳ್ಳುವರು, ಇಲ್ಲದವರಿಗೆ ಕಳೆದುಕೊಳ್ಳಲು ಏನೂ ಉಳಿದಿರುವುದಿಲ್ಲ……

ಗೆಲುವಿರುವುದು ತಾಳ್ಮೆಯಲ್ಲಿಯೇ ಹೊರತು ಆಕ್ರೋಶದಲಲ್ಲ……

ಯಶಸ್ವಿಯಾಗುವುದು ವಿವೇಚನೆಯಿಂದಲೇ ಹೊರತು ಕೋಪದಿಂದಲ್ಲ……

ಈ ದೇಶ ಈ ಜನರೊಂದಿಗೆ ಎಲ್ಲಾ ಕಾಲಕ್ಕೂ, ಎಲ್ಲಾ ‌ಸಂದರ್ಭದಲ್ಲಿಯೂ ನಾವು ನೀವು………..

ಆದ್ದರಿಂದ, ದಯವಿಟ್ಟು ಗೆಳೆಯರೆ,

ಚುನಾವಣಾ ಫಲಿತಾಂಶದ ಕಾರಣದಿಂದ ನಾವುಗಳು ಮನಸ್ತಾಪ ಮಾಡಿಕೊಳ್ಳುವುದು ಬೇಡ. ನಾವೆಲ್ಲರೂ ಸಾಮಾನ್ಯರು.

ದ್ವೇಷಕ್ಕಿಂತ ಪ್ರೀತಿ ವಿಶ್ವಾಸವೇ ಮುಖ್ಯ ನೆನಪಿರಲಿ. …‌

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಮಕ್ಕಳೇ ದೇಶದ ಆಸ್ತಿ, ಉತ್ತಮ ಶಿಕ್ಷಣದಿಂದ ಭವಿಷ್ಯ ನಿರ್ಮಾಣ- ಶಿವಕುಮಾರ್

ದೊಡ್ಡಬಳ್ಳಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಬುನಾದಿಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ…

8 hours ago

ಬೆಂಗಳೂರು ಗ್ರಾಮಾಂತರದಲ್ಲಿ ಎರಡು ಪ್ರತ್ಯೇಕ ಅಪಘಾತ: ಇಬ್ಬರು ಸಾವು, ಹಲವರಿಗೆ ಗಾಯ

ದೇವನಹಳ್ಳಿ/ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಮುಂಜಾನೆ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ…

12 hours ago

ಸ್ವಾತಂತ್ರ್ಯ ದಿನದಂದೇ ಹೆದ್ದಾರಿಯಲ್ಲಿ ಪುಂಡರ ಡೆಡ್ಲಿ ವ್ಹೀಲಿಂಗ್

ದೇವನಹಳ್ಳಿ: ಸ್ವಾತಂತ್ರ್ಯ ದಿನಾಚರಣೆ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ದೇವನಹಳ್ಳಿ ಹೊರವಲಯದ ಬೈಪಾಸ್ ನಲ್ಲಿ ಪುಂಡರು ಗುಂಪು ಗುಂಪಾಗಿ ಆಟೋ,…

12 hours ago

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಆರೋಗ್ಯ ಕಾಳಜಿ; ಹೀಲಿನ್ ಆಸ್ಪತ್ರೆಯಿಂದ ಉಚಿತ ತಪಾಸಣಾ ಶಿಬಿರ

80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.…

15 hours ago

ವಿಬಿ ಜಿ ರಾಮ್ ಜಿ: ಆ.15 ರಿಂದ ಜಾಬ್ ಕಾರ್ಡ್ ಮೇಳ

ಗ್ರಾಮೀಣರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ (ವಿಬಿ…

1 day ago

ತೂಬಗೆರೆ ಸೊಸೈಟಿ ಅಧ್ಯಕ್ಷರಾಗಿ ವಾಸುದೇವ್, ಉಪಾಧ್ಯಕ್ಷರಾಗಿ ಸತ್ಯನಾರಾಯಣಸ್ವಾಮಿ ಅವಿರೋಧ ಆಯ್ಕೆ

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್‌ಡಿಎ ಬೆಂಬಲಿತ ನಿರ್ದೇಶಕ ಟಿ.ಜಿ.…

2 days ago