ನಾನೊಂದು ಮೀನು…….
ಸಾಗರವೇ ನಮ್ಮ ಮನೆ……
ನಮಗೆ ನಿಮ್ಮಂತೆ ಪ್ರಕೃತಿಯನ್ನು ಘಾಸಿಗೊಳಿಸಿ ಕಟ್ಟಿದ ಕಟ್ಟಡಗಳಿಲ್ಲ,
ವಿಶಾಲ ಸಮುದ್ರದಲ್ಲಿ ಬೃಹತ್ ಜಲಚರ ಕುಟುಂಬದ ಜೊತೆ ವಾಸ,
ನಿಮ್ಮಂತೆ ನಮಗೆ ಹಲವು ಭಾಷೆಗಳಿಲ್ಲ, ಇರುವುದೊಂದೇ ಭಾಷೆ,
ಜಾತಿ ಧರ್ಮಗಳು ನಮಗೆ ಗೊತ್ತೇ ಇಲ್ಲ,
ನಿಮ್ಮಂತೆ ಯಾವ ಕಾನೂನುಗಳು ನಮ್ಮನ್ನು ಕಟ್ಟಿ ಹಾಕಿಲ್ಲ, ಸ್ವತಂತ್ರರು ನಾವು,
ಕಳ್ಳರಲ್ಲ ನಾವು, ಅದಕ್ಕೆ ನಮಗೆ ಪೋಲೀಸರೇ ಇಲ್ಲ,
ನಮಗೆ ನಾವೇ ರಾಜರು,
ನಮ್ಮನ್ನಾಳುವ ಯಾವ ಪುಢಾರಿಗಳು ಇಲ್ಲ,
ನಿಮ್ಮಂತೆ ನಮಗೆ ವಾಚು, ಕ್ಯಾಲೆಂಡರ್ ಗಳಿಲ್ಲ,
ಹುಟ್ಟಿದಾಗಿನಿಂದ ಉಸಿರು ನಿಲ್ಲುವವರೆಗೂ ಜೀವಿಸಿರುವುದೇ ನಮ್ಮ ಬದುಕು,
ನಮ್ಮಲ್ಲಿ ಡಾಕ್ಟರ್ ಗಳಿಲ್ಲ,
ಆಕ್ಟರ್ ಗಳಿಲ್ಲ, ಇ೦ಜಿನಿಯರ್ ಗಳು, ಸಾಪ್ಟ್ ವೇರ್ ಗಳೂ ಇಲ್ಲ,
ಪೂಜಾರಿಗಳ ಮಂತ್ರಗಳಿಲ್ಲ, ಜ್ಯೋತಿಷಿಗಳ ತಂತ್ರಗಳಿಲ್ಲ,
ಪ್ರಾದ್ರಿಗಳ ಪ್ರಾರ್ಥನೆಗಳಿಲ್ಲ.
ಮೌಲ್ವಿಗಳ ನಮಾಜುಗಳಿಲ್ಲ,
ಬುದ್ಧಿಜೀವಿಗಳೂ ಇಲ್ಲ,
ಲದ್ದಿ ಜೀವಿಗಳು ಇಲ್ಲ,
ದೇಶಭಕ್ತರೂ ಇಲ್ಲ,
ದೇಶ ದ್ರೋಹಿಗಳೂ ಇಲ್ಲ,
ಚಳುವಳಿಗಳೂ ಇಲ್ಲ,
ಪ್ರದರ್ಶನಗಳೂ ಇಲ್ಲ,
ಸಮಾಜ ಸೇವಕರೂ ಇಲ್ಲ,
ತಲೆ ಒಡೆಯುವವರೂ ಇಲ್ಲ,
ತಲೆ ಹಿಡಿಯುವವರೂ ಇಲ್ಲ,
ಬೆನ್ನಿಗೆ ಚೂರಿ ಹಾಕುವವರೂ ಇಲ್ಲ,
ಹೃದಯಕ್ಕೆ ಘಾಸಿಗೊಳಿಸುವವರೂ ಇಲ್ಲ,
ಬ್ಯಾಂಕ್ ಅಕೌಂಟುಗಳೂ ಇಲ್ಲ,
ಕಪ್ಪು ಹಣವು ಇಲ್ಲವೇ ಇಲ್ಲ,
ಚಿಕನ್ ಕಬಾಬ್ ಗಳಿಲ್ಲ,
ಹೋಳಿಗೆ ತುಪ್ಪಗಳೂ ಇಲ್ಲ,
ಅರಿಶಿನ ಕುಂಕುಮಗಳಿಲ್ಲ,
ಕಾಯಿ ಕರ್ಪೂರಗಳು ಗೊತ್ತೇ ಇಲ್ಲ,
ಮದುವೆಗಳಿಲ್ಲ,
ಡೈವೋರ್ಸ ಗಳೂ ತಿಳಿದಿಲ್ಲ,
ಜೀನ್ಸ್ ಪ್ಯಾಂಟುಗಳಿಲ್ಲ,
ಮಿಡಿ ಚೂಡಿದಾರ್ ಗಳೂ ಇಲ್ಲ,
ಬ್ಯೂಟಿ ಪಾರ್ಲರ್ ಗಳೂ ಇಲ್ಲ,
ಯೋಗ ಧ್ಯಾನ ಸೆಂಟರ್ ಗಳೂ ಇಲ್ಲ,
ಅಶ್ಲೀಲವೂ ಇಲ್ಲ,
ಸೌಂದರ್ಯವೂ ಇಲ್ಲ,
ಸ್ವಚ್ಛಂದ ಬದುಕು,
ನಿಷ್ಕಲ್ಮಶ ಸಂತಾನ,
ಕಷ್ಟಗಳೂ, ಅಪಾಯಗಳು ನಮಗೂ ಇವೆ, ಆದರೆ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ,
ಕ್ಷಮಿಸಿ,
ನಾವು ನಿಮ್ಮಂತೆ ನಾಗರಿಕ ಮನುಷ್ಯರಲ್ಲ ಅನಾಗರಿಕ ಜಲಚರಗಳು,
ಆದರೂ ನಿಮ್ಮಲ್ಲೇ ಕೆಲವರು ನನಗೆ ಮಾತನಾಡುತ್ತಿದ್ದುದು ಕೇಳಿಸಿತು,
ಮನುಷ್ಯರಿಗಿಂತ ಪ್ರಾಣಿಗಳೇ ಗುಣದಲಿ ಮೇಲು,
ನಿಜವೇ ?……….
ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ತಿಂದು ಬದುಕುತ್ತವಂತೆ,
ಏಡಿಗಳು ಮೇಲಕ್ಕೇರಲು ಪ್ರಯತ್ನಿಸುವ ಮತ್ತೊಂದು ಏಡಿಯ ಕಾಲು ಹಿಡಿದು ಕೆಳಕ್ಕೆ ಎಳೆಯುತ್ತವಂತೆ,
ತಲೆತಗ್ಗಿಸಿ ನಡೆಯುವ ಕುರಿಗಳು ಮುಂದೆ ಸಾಗುತ್ತಿದ್ದ ಕುರಿಯೊಂದು ಹಳ್ಳಕ್ಕೆ ಬಿದ್ದರೆ ಹಿಂಬಾಲಿಸುತ್ತಿದ್ದ ಎಲ್ಲಾ ಕುರಿಗಳು ಹಳ್ಳಕ್ಕೆ ಬೀಳುತ್ತವಂತೆ,
ಕೆರೆ ತಟದ ಕಪ್ಪೆಯೊಂದು ಒಮ್ಮೆ ವಟವಟ ಶುರು ಮಾಡಿದರೆ ಇಡೀ ಕಪ್ಪೆಗಳ ಸಮೂಹವೇ ವಟವಟ ಎನ್ನಲು ಪ್ರಾರಂಭಿಸುತ್ತವಂತೆ,
ಕೋಗಿಲೆಗಳು ಮರಿ ಮಾಡಿಸಲು ತಮ್ಮ ಮೊಟ್ಟೆಗಳನ್ನು ಕಾಗೆಗಳ ಗೂಡಿನಲ್ಲಿ ಇಟ್ಟು ಹೋಗುತ್ತದಂತೆ.
ಇನ್ನೊಂದು ಪ್ರಾಣಿಯ ಆಹಾರವನ್ನು ವಂಚಿಸಿ ತಿನ್ನುವುದೇ ನರಿ ಬುದ್ದಿಯಂತೆ,
ಇನ್ನೊಬ್ಬರ ರಕ್ತಹೀರಿ ಬದುಕುವುದೇ ಸೊಳ್ಳೆಗಳ ಕೆಲಸವಂತೆ,
ಮೋರಿಗಳಲ್ಲಿ ಹೊರಳಾಡಿ ತನ್ನ ದೇಹವನ್ನು ಗಲೀಜು ಮಾಡಿಕೊಳ್ಳುವುದೇ ಹಂದಿಗಳಿಗೆ ಸಂಭ್ರಮವಂತೆ,
ಊಸರವಳ್ಳಿ ತನ್ನ ಬಣ್ಣ ಆಗಾಗ ಬದಲಾಯಿಸುತ್ತಾ ಇತರ ಪ್ರಾಣಿಗಳನ್ನು ವಂಚಿಸುತ್ತದಂತೆ.
ಇನ್ನೊಂದೆಡೆ,……..
ನಾಯಿಯು ಅನ್ನ ಹಾಕಿದ ಒಡೆಯನಿಗೆ ತುಂಬಾ ನಿಯತ್ತಾಗಿರುತ್ತದಂತೆ,
ಹೊಟ್ಟೆ ಹಸಿವಾದಾಗ ಮಾತ್ರ ಹುಲಿಯು ಬೇಟೆಯಾಡುತ್ತದಂತೆ,
ಗೀಜಗ ಮಳೆ ಗಾಳಿ ಚಳಿಗೂ ನಾಶವಾಗದ ಗೂಡನ್ನು ನಿರ್ಮಿಸುತ್ತದಂತೆ,
ವಿಷದ ಹಾವುಗಳು ಕೂಡ ತಮ್ಮ ಜೀವಕ್ಕೆ ಅಪಾಯವಾದಾಗ ಮಾತ್ರ ಇತರರನ್ನು ಕಚ್ಚುತದಂತೆ,
ಅನೇಕ ಚಿಟ್ಟೆಗಳು – ಕೀಟಗಳು ಸಸ್ಯಗಳಿಗೆ ಪರಾಗಸ್ಪರ್ಶ ಮಾಡಿಸಿ ರೈತರ ಫಸಲು ಉತ್ತಮವಾಗಲು ಸಂಜೀವಿನಿಯಂತೆ ಕೆಲಸ ಮಾಡುತ್ತವಂತೆ,
ಎರೆ ಹುಳುಗಳು ಕೃಷಿ ಭೂಮಿಯನ್ನು ಫಲವತ್ತು ಮಾಡುತ್ತವಂತೆ,
ಹಸುವಿನ ಹಾಲು ತುಪ್ಪ ಬೆಣ್ಣೆ ಮೊಸರು ಕೊನೆಗೆ ಅದರ ಮಾಂಸವು ವಿಶ್ವದ ಆಹಾರ ಪದ್ದತಿಯ ಬಹುಮಖ್ಯ ಭಾಗವಂತೆ,
ಇವೆಲ್ಲವೂ ನಮ್ಮ ಸುತ್ತಲ ಪರಿಸರದ ಪ್ರಾಣಿ ಪಕ್ಷಿಗಳ ಗುಣ ದೋಷಗಳು.
ಈ ಮನುಷ್ಯನೆಂಬ ಪ್ರಾಣಿ ಬಹುತೇಕ ಈ ಎಲ್ಲಾ ಗುಣಗಳನ್ನೂ ತನ್ನಲ್ಲಿ ಅಡಗಿಸಿಕೊಂಡಿದ್ದಾನೆ. ಆದರೆ ತನ್ನ ಚಿಂತನಾಕ್ರಮದ, ಸ್ವಾರ್ಥ ದುರಾಸೆಯಿಂದ ಯಾವ ಗುಣ, ಯಾವ ಸಾಮರ್ಥ್ಯ, ಯಾವ ಕಲೆ ಯಾವ ವಿದ್ಯೆ ಯಾವಾಗ ಉಪಯೋಗಿಸಬೇಕು ಎಂದು ಸರಿಯಾಗಿ ಅರ್ಥಮಾಡಿಕೊಳ್ಳದೆ ಗೊಂದಲಕ್ಕೆ ಒಳಗಾಗಿದ್ದಾನೆ. ಅದಕ್ಕಾಗಿ ತನ್ನದಲ್ಲದ ಮುಖವಾಡ ತೊಟ್ಟಿದ್ದಾನೆ.
ಒಂದುವೇಳೆ ಆತ ಈ ಮುಖವಾಡ ಕಳಚಿ, ಸ್ವಾರ್ಥ ತ್ಯಜಿಸಿ, ತಾನು ಸಂಘಜೀವಿ, ತ್ಯಾಗಜೀವಿ ಎಂದು ಭಾವಿಸಿ ಆ ರೀತಿ ವರ್ತಿಸಿದ್ದೇ ಆದರೆ ಅವನಂತ ಅತ್ಯದ್ಬುತ ಪ್ರಾಣಿ ಈ ವಿಶ್ವದಲ್ಲೇ ಇಲ್ಲ.
ನಾವೆಲ್ಲ ಹಾಗಾಗೋಣ ಎಂಬ ನಿರೀಕ್ಷೆಯ ಆಶಯದೊಂದಿಗೆ …………….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ
"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…
"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…
ಬೆಳಗಾವಿಯ ದಟ್ಟ ಅರಣ್ಯ ಪ್ರದೇಶದ ನಡುವೆ ಸಾಗುವ ಚೋರ್ಲಾ ಘಾಟ್ನ ರಸ್ತೆಗಳು ಸಾಮಾನ್ಯವಾಗಿ ಮೌನದಿಂದ ಕೂಡಿರುತ್ತವೆ. ಆದರೆ, ಆ ಮೌನದಲ್ಲೇ…
2026ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟವಾಗಿದೆ. ಒಟ್ಟು 131 ಮಂದಿ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕದ 8 ಮಂದಿಯು ಈ…
ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರದಲ್ಲಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ವತಿಯಿಂದ ರಥಸಪ್ತಮಿ ಅಂಗವಾಗಿ ಇಂದು (ಜ.25) ವೀರಭದ್ರಸ್ವಾಮಿ ಮತ್ತು ಪ್ರಸನ್ನ…
ಪಿಕಪ್ ವಾಹನ, ಆಟೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ…