
ದೊಡ್ಡಬಳ್ಳಾಪುರ: ಕೇವಲ 200 ರೂಪಾಯಿ ಬಾಕಿ ಹಣ ಕೇಳಿದ್ದಕ್ಕೆ ಕಾಫಿ-ಟೀ ಅಂಗಡಿ ಮಾಲೀಕನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ತಾಲೂಕಿನ ಅಪ್ಪಕಾರನಹಳ್ಳಿ ಗೇಟ್ ಬಳಿ ನಡೆದಿದೆ.

ಮೃತರನ್ನು ದೊಡ್ಡಬೆಳವಂಗಲ ಹೋಬಳಿಯ ದ್ಯಾವಸಂದ್ರ ಗ್ರಾಮದ ಮಂಜುನಾಥ (40) ಎಂದು ಗುರುತಿಸಲಾಗಿದೆ.

ಆರೋಪಿಯನ್ನು ಅಪ್ಪಕಾರನಹಳ್ಳಿ ಗ್ರಾಮದ ಮುನಿರಾಜು (41) ಎಂದು ಗುರುತಿಸಲಾಗಿದ್ದು, ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ವಿವರ
ಮಂಜುನಾಥ ಹಲವು ವರ್ಷಗಳಿಂದ ಅಪ್ಪಕಾರನಹಳ್ಳಿ ಗೇಟ್ ಬಳಿ ಕಾಫಿ-ಟೀ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ಆರೋಪಿಯಾದ ಮುನಿರಾಜು ಅಂಗಡಿಗೆ ನಿಯಮಿತವಾಗಿ ಬಂದು ಗ್ರಾಹಕನಾಗಿದ್ದನು. ಆರೋಪಿ ಮುನಿರಾಜು ಟೀ, ಕಾಫಿ ಅಂಗಡಿ ಮಂಜುನಾಥನ ಬಳಿ 200 ರೂಪಾಯಿ ಸಾಲ ಪಡೆದಿದ್ದ ಎನ್ನಲಾಗಿದೆ.

ಮೇ 12ರಂದು ಅಂಗಡಿಗೆ ಬಂದ ಮುನಿರಾಜುವಿಗೆ ಬಾಕಿಯಿದ್ದ ಹಣವನ್ನು ನೀಡುವಂತೆ ಮಂಜುನಾಥ ಕೇಳಿದ್ದಾನೆ. ಇದರಿಂದ ಆಕ್ರೋಶಗೊಂಡ ಮುನಿರಾಜು, “ಇಲ್ಲಿ ಹೇಗೆ ಅಂಗಡಿ ನಡೆಸುತ್ತೀಯಾ, ನಿನ್ನನ್ನು ಇಂದು ಉಳಿಸಲಾರೆ” ಎಂದು ಬೆದರಿಕೆ ಹಾಕಿ ಹಲ್ಲೆಗೆ ಮುಂದಾಗಿದ್ದಾನೆ.

ಬಳಿಕ ಅಂಗಡಿಯ ಹಿಂಭಾಗದಲ್ಲಿದ್ದ ನೀಲಗಿರಿ ತೋಪಿನಿಂದ ದೊಣ್ಣೆ ತಂದು ಮಂಜುನಾಥನ ತಲೆ ಹಾಗೂ ಮುಖದ ಭಾಗಕ್ಕೆ ಬಲವಾಗಿ ಹೊಡೆದಿದ್ದಾನೆ.

ಗಂಭೀರವಾಗಿ ಗಾಯಗೊಂಡ ಮಂಜುನಾಥನನ್ನು ತಕ್ಷಣ ದಾಬಸ್ ಪೇಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ನಾಲ್ಕು ದಿನಗಳ ಕಾಲ ಚಿಕಿತ್ಸೆ ಪಡೆದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.