ಕೆರೆಗೆ ವೈದ್ಯಕೀಯ ತ್ಯಾಜ್ಯ: ಡಾಕ್ಟರ್ ಮೇಲೆ ಎಫ್.ಐ.ಆರ್. ದಾಖಲು

ಬೆಂಗಳೂರು ಗ್ರಾಮಾಂತರ ಜಿಲ್ಲೆ ಯಂಟಗಾನಹಳ್ಳಿ ಕೆರೆಗೆ ವೈದ್ಯಕೀಯ ತ್ಯಾಜ್ಯ ಸುರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಸೂಚನೆ ಮೇರೆಗೆ ಅಧಿಕಾರಿಗಳು ಕ್ರಮ ವಹಿಸಿದ್ದು, ಖಾಸಗಿ ಕ್ಲಿನಿಕ್ ವೈದ್ಯರ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿದೆ.

ಯಂಟಗಾನಹಳ್ಳಿ ಗ್ರಾಮಪಂಚಾಯ್ತಿಗೆ ಸಚಿವರು ಹಠಾತ್ ಭೇಟಿ ನೀಡಿದ್ದ ವೇಳೆ ಸಾರ್ವಜನಿಕರು ವೈದ್ಯಕೀಯ ತ್ಯಾಜ್ಯವನ್ನು ಕೆರೆಗೆ ಸುರಿದಿರುವ ಬಗ್ಗೆ ಮಾಹಿತಿ ನೀಡಿದ್ದರು. ಕೂಡಲೇ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗೆ ಸ್ಥಳ ಪರಿಶೀಲಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚಿಸಿದ್ದರು.

ಸಚಿವ ಖಂಡ್ರೆ ಅವರ ಸೂಚನೆಯಂತೆ ಸ್ಥಳ ಪರಿಶೀಲನೆ ನಡೆಸಿದ ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಬಿಂದು, ಸಚಿತ್ರ ಮಾಹಿತಿ ನೀಡಿದ ತರುವಾಯ ತಾಲೂಕು ವೈದ್ಯಾಧಿಕಾರಿ ಡಾ. ಪದ್ಮಿನಿ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪಂಚಾಯ್ತಿ ಇಓ ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಬಳಸಿದ ಸಿರೆಂಜ್ ಗಳು ಹಾಗೂ ರಕ್ತಸಿಕ್ತವಾಗಿದ್ದ ಹತ್ತಿ, ಬ್ಯಾಂಡೇಜ್ ಗಳನ್ನು ಸಿಮೆಂಟ್ ಬ್ಯಾಗ್ ಗಳಲ್ಲಿ ತುಂಬಿ ಕೆರೆಗೆ ನೀರು ಹೋಗುವ ಕಾಲುವೆಯಲ್ಲಿ ಎಸೆದಿರುವುದು ಪತ್ತೆಯಾಗಿತ್ತು.

ಜನ, ಜಾನುವಾರು ಈ ಕೆರೆಯ ನೀರು ಬಳಸುವ ಕಾರಣ ರೋಗ ಹರಡುವ ಸಾಧ್ಯತೆಯ ಗಂಭೀರತೆಯನ್ನು ಅರಿತು ಖಾಸಗಿ ಕ್ಲಿನಿಕ್ ವೈದ್ಯ ಡಾ. ಅರುಣ್ ಗಿರೀಶ್ ಸಾಗರ್ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ವೈದ್ಯರು ಇದು ತಮ್ಮ ಆಸ್ಪತ್ರೆಯ ತ್ಯಾಜ್ಯ ಎಂದು ಒಪ್ಪಿಕೊಂಡಿದ್ದಾರೆ ಎಂದು ಎಫ್.ಐ.ಆರ್.ನಲ್ಲಿ ಉಲ್ಲೇಖಿಸಲಾಗಿದೆ.

ಎಚ್ಚರಿಕೆ ಗಂಟೆ:

ಕುಡಿಯುವ ನೀರಿನ ಮೂಲಗಳಾದ ಕೆರೆ, ಕುಂಟೆ, ಬಾವಿ, ನದಿಗಳಿಗೆ ಅಪಾಯಕಾರಿ ತ್ಯಾಜ್ಯವನ್ನು ಎಸೆದು ಹೋಗುವವರಿಗೆ ಇದು ಎಚ್ಚರಿಕೆಯ ಗಂಟೆಯಾಗಿದೆ.

Leave a Reply

Your email address will not be published. Required fields are marked *

error: Content is protected !!