Categories: ಲೇಖನ

ಕುವೆಂಪು ಮತ್ತು ಸಾಹಿತ್ಯ…….. (ನಿ‌ನ್ನೆಯ ಮುಂದುವರಿದ ಭಾಗ – 2)

ಕುಪಳಿಯಲ್ಲಿ ಹುಟ್ಟಿ – ಮೈಸೂರಿನಲ್ಲಿ ಬೆಳೆದು – ಕರ್ನಾಟಕದಲ್ಲಿ ಪಸರಿಸಿ – ವಿಶ್ಚ ಮಾನವತ್ವದ ಪ್ರಜ್ಞೆಯೊಂದಿಗೆ ಸಾಹಿತ್ಯದಲ್ಲಿ ರಸ ಋಷಿಯಾಗಿ – ಕವಿ ಶೈಲದಲ್ಲಿ ಲೀನರಾದ ರಾಷ್ಟ್ರ ಕವಿ ಕುವೆಂಪು ಅವರ ಜನುಮ ದಿನದ ಶುಭಾಶಯಗಳನ್ನು ಕೋರುತ್ತಾ (ಡಿ – 29)…………

ಕನ್ನಡ ಸಾಹಿತ್ಯ ಲೋಕದಲ್ಲಿ, ಇತಿಹಾಸದ ದಿಗ್ಗಜರ ಸಾಲಿನಲ್ಲಿ, ಮೇರು ಪರ್ವತದಂತೆ ಕಂಗೊಳಿಸುತ್ತಿರುವ ವ್ಯಕ್ತಿತ್ವ ಕುವೆಂಪು ಅವರದು……

ಸಾಹಿತ್ಯ ಎಂದರೇನು ?
ಸಾಹಿತಿ ಎಂದರೆ ಯಾರು ?
ಅಕ್ಷರಗಳ ಮಾಂತ್ರಿಕ ಶಕ್ತಿ ಹೇಗಿರುತ್ತದೆ ? ಬರಹಗಳಲ್ಲಿ ಬದುಕಿನ ಸಂದೇಶ ಹೇಗೆ ನೀಡುವುದು ? ಸಾಹಿತ್ಯದ ವಿವಿಧ ಪ್ರಕಾರಗಳ ಮೂಲಕ ಸಾಮಾಜಿಕ ಸಾಂಸ್ಕೃತಿಕ ಪ್ರಭಾವ ಹೇಗೆ ಬೀರುತ್ತದೆ ?
ಮುಂತಾದ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ಕುವೆಂಪು ಅವರನ್ನು ಹೆಸರಿಸಬಹುದು…..

ಕನ್ನಡ ಭಾಷೆಯನ್ನು ವಿಸ್ತಾರ ಗೊಳಿಸುವಲ್ಲಿ, ಕನ್ನಡ ‌ಸಾಹಿತ್ಯದ ಓದುಗರ ಚಿಂತನೆಗಳನ್ನು ವಿಶಾಲಕ್ಕೆ ಕೊಂಡೊಯ್ಯುವಲ್ಲಿ, ಕರ್ನಾಟಕದ ಕೀರ್ತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವಲ್ಲಿ, ಸಾಮಾನ್ಯ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವಲ್ಲಿ ಕುವೆಂಪು ಅವರ ಕೊಡುಗೆ ಸಾಕಷ್ಟಿದೆ…..

” ಮಂತ್ರ ಮಾಂಗಲ್ಯ ” ಎಂಬ ಸರಳ ವಿವಾಹ ಪದ್ದತಿಯನ್ನು ಪರಿಚಯಿಸುವಲ್ಲಿ ಮತ್ತು ವಿಶ್ವ ಮಾನವ ಪ್ರಜ್ಞೆ ಜಾಗೃತಗೊಳಿಸುವಲ್ಲಿ ಕುವೆಂಪು ಅವರ ಸಾಹಿತ್ಯ ಶ್ರೇಷ್ಠತೆಯನ್ನು ಗುರುತಿಸಬಹುದು……

ಈ ಸಂದರ್ಭದಲ್ಲಿ………

ಬರವಣಿಗೆ ಸಾಹಿತ್ಯವಾಗಿ ಬೆಳವಣಿಗೆ ಹೊಂದುವ ಪ್ರಕ್ರಿಯೆ ಗುರುತಿಸುವ ಒಂದು ಸಣ್ಣ ಪ್ರಯತ್ನ……

ಸಾಹಿತ್ಯ ಎಂದರೇನು ?

ಅಕ್ಷರಗಳೇ ? ಪದಗಳೇ ? ವಾಕ್ಯಗಳೇ ? ನಂಬಿಕೆಗಳೇ ? ಭಾವನೆಗಳೇ ? ಅನುಭವಗಳೇ ? ವ್ಯಾಕರಣವೇ ? ಛಂಧಸ್ಸೇ ? ಪ್ರಾಸವೇ ? ರಾಜಕೀಯವೇ ? ಸಾಮಾಜಿಕವೇ ? ಶಿಕ್ಷಣವೇ ? ಆಧ್ಯಾತ್ಮಿಕವೇ ? ಭಕ್ತಿಯೇ ? ವೈಚಾರಿಕತೆಯೇ ? ಕಲ್ಪನೆಯೇ ? ಪ್ರೀತಿಯೇ ?
ದ್ವೇಷವೇ ? ಅಸೂಯೆಯೇ ? ಇತಿಹಾಸವೇ ? ವರ್ತಮಾನವೇ ? ಭವಿಷ್ಯವೇ ? ಭ್ರಮೆಯೇ ?
ವಾಸ್ತವವೇ ? ಸ್ವಾಭಾವಿಕವೇ ? ಬರೆದದ್ದೆಲ್ಲವೂ ? ಗೀಚಿದ್ದೆಲ್ಲವೂ ? ಕಂಡಿದ್ದೆಲ್ಲವೂ ? ನೀತಿಗಳೇ ?
ನಿಯಮಗಳೇ ? ಸ್ವಚ್ಚಂದವೇ ? ಸರಳವೇ ? ಸಂಕೀರ್ಣವೇ ? ಸಂಘರ್ಷವೇ ? ಮಾತುಗಳೇ ?
ಮೌನವೇ ? ಶಬ್ದವೇ ? ಸಂಬಂಧಗಳೇ ? ಸಂಸ್ಕಾರಗಳೇ ?
ಶಾಸ್ತ್ರಗಳೇ ? ಕವಿತೆಯೇ ? ಕಥೆಯೇ ? ಕಾದಂಬರಿಯೇ ?
ನವರಸಗಳ ಪ್ರದರ್ಶನವೇ ? ಅರಿಷಡ್ವರ್ಗಗಳ ಅರಿವಿನ ವ್ಯಕ್ತಪಡಿಸುವಿಕೆಯೇ ? ಪಂಚೇದ್ರಿಯಗಳ ಸ್ಪರ್ಶದ ಗ್ರಹಿಕೆಯೇ ?……..

ಸಾಹಿತ್ಯವೆಂಬುದು…….

ಭಾಷೆಯ ಒಡಲು, ಭಾವನೆಗಳ ಕಡಲು, ಅಕ್ಷರಗಳ ಮಡಿಲು, ಕಲ್ಪನಾ ಲೋಕದ ಸವಾಲು, ಕ್ರಿಯಾತ್ಮಕತೆಯ ಒಲವು, ಮನುಷ್ಯನ ನಿಲುವು, ಪ್ರಾಸಗಳ ಚೆಲುವು, ವ್ಯಾಕರಣದ ತಿಳಿವು, ‌ಛಂದಸ್ಸಿನ ಅರಿವು, ಮನಸ್ಸುಗಳ ಹರಿವು, ಜ್ಞಾನದ ಸುಳಿವು, ಜೀವಂತಿಕೆಯ ಕುರುಹು…..

ಈ ಎಲ್ಲದರ ಸಮ್ಮಿಲನ….

ಅದೇ ಸಾಹಿತ್ಯದ ಸಂಕಲನ….
ನಮ್ಮೆಲ್ಲರ ಶುಭ ಮಿಲನ…..

ಹಾಗೆಯೇ ಸಾಹಿತ್ಯದ ಶ್ರೇಷ್ಠತೆ ಎಲ್ಲಿ ? ಹೇಗೆ ?…..

ನೋವು ಮತ್ತು ನೊಬೆಲ್ ಸಾಹಿತ್ಯ ಪ್ರಶಸ್ತಿ…….

ವಿಶ್ವ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಎಂದು ನೊಬೆಲ್ ಪರಿಗಣಿಸಲ್ಪಟ್ಟಿದೆ………

ಹೆಚ್ಚು ಕಡಿಮೆ ಇಲ್ಲಿಯವರೆಗೂ ತನ್ನ ಮೂಲ ಆಶಯದ ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿದೆ……
( ಎಂದಿನಂತೆ ಒಂದಷ್ಟು ವಿವಾದ – ಅಸಮಾಧಾನ ಇದ್ದೇ ಇರುತ್ತದೆ )

ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ಕೃತಿಗಳ ಸಾರಾಂಶಗಳನ್ನು ಓದುತ್ತಿರುವಾಗ ಗಮನಸೆಳೆಯುವ ಅಂಶವೆಂದರೆ ಬಹುತೇಕ ರಚನೆಗಳು ಅಂದರೆ ಶೇಕಡಾ 90% ಬರಹಗಳು ಶೋಷಣೆಯ, ಬಡತನದ, ಮೌಢ್ಯದ, ಅರಾಜಕತೆಯ, ದೌರ್ಜನ್ಯದ, ವ್ಯವಸ್ಥೆಯ ವಿರುದ್ಧದ, ಬದುಕಿನ ತಳಮಳಗಳ, ಅಸಹಾಯಕತೆಯ ವಿಷಯಗಳೇ ಕಂಡುಬರುತ್ತವೆ. ರಮ್ಯತೆಯ, ಆಧ್ಯಾತ್ಮದ, ಪ್ರೀತಿ ಪ್ರೇಮದ, ಪ್ರಾಕೃತಿಕ ಸೌಂದರ್ಯದ, ವೈಚಾರಿಕತೆಯ, ಕೌಟುಂಬಿಕ ಸಂಬಂಧಗಳ ವಿಷಯ ತುಂಬಾ ಕಡಿಮೆ ಇದೆ.

ಏಕೆ ಈ ಪ್ರಶಸ್ತಿ ಪುರಸ್ಕೃತ ಸಾಹಿತ್ಯವು ಹೆಚ್ಚಾಗಿ ನೋವನ್ನೇ ಅವಲಂಬಿಸಿದೆ ?

ಇಡೀ ವಿಶ್ವದಲ್ಲೇ ಅತಿಹೆಚ್ಚು ಪ್ರಸಾರ, ಜನಪ್ರಿಯತೆ, ಓದುಗರು, ಆರಾಧಕರು, ಅಭಿಮಾನಿಗಳು, ಅನುಯಾಯಿಗಳು ಇರುವುದು ಧಾರ್ಮಿಕ ಸಾಹಿತ್ಯಕ್ಕೆ……

ಅತಿಹೆಚ್ಚು ಬರೆಯಲ್ಪಡುವುದು ಪ್ರೀತಿ ಪ್ರೇಮಗಳಿಗೆ ಸಂಬಂಧಿಸಿದ ಸಾಹಿತ್ಯ. ಅದರಲ್ಲೂ ಯುವ ಬರಹಗಾರರ ನೆಚ್ಚಿನ ವಿಷಯವಿದು.

ಸಾಹಸ, ಶೃಂಗಾರ, ಹಾಸ್ಯ, ವಿಜ್ಞಾನ ಮುಂತಾದ ಸಾಹಿತ್ಯಗಳು ವಿಶೇಷವಾಗಿ ಅಲ್ಪ ಪ್ರಮಾಣದಲ್ಲಿ ಗುರುತಿಸಲ್ಪಡುತ್ತದೆ.

ಆದರೆ
ನೋವಿನ ಸಾಹಿತ್ಯ ಬಹುತೇಕ ಶ್ರೇಷ್ಠ ಸಾಹಿತ್ಯವಾಗಿ ಹೊರಹೊಮ್ಮುತ್ತದೆ – ಕಾಡುತ್ತದೆ – ಪ್ರಶಸ್ತಿ ಪಡೆಯುತ್ತದೆ. ನೋವು ಪ್ರೀತಿಯಲ್ಲಿ ಇರಬಹುದು, ಯುದ್ದದಲ್ಲಿ ಇರಬಹುದು, ಪ್ರಕೃತಿಯ ನಾಶದಲ್ಲಿ ಇರಬಹುದು, ನೋವಿನ ‌ಅಂತರಾಳ ಎಲ್ಲರನ್ನೂ ತಟ್ಟುತ್ತದೆ.

ನೋವಿನ ತೀವ್ರತೆ ಅಳೆಯುವ ಯಾವುದೇ ಮಾಪನ ಇಲ್ಲ ನಿಜ. ನೋವು ಖಾಸಗಿಯಾಗಿರಬಹುದು, ಸಾಮೂಹಿಕವಾಗಿರಬಹುದು, ವೈಯಕ್ತಿಕವಾಗಿರಬಹುದು, ಸಾರ್ವಜನಿಕವಾಗಿರಬಹುದು. ಅದು ವ್ಯಕ್ತಿಯ ಮನಸ್ಸಿನ ಮೇಲೆ ಬೀರುವ ಪರಿಣಾಮಗಳ ಆಧಾರದಲ್ಲಿ ನಿರ್ಧರಿಸಲ್ಪಡುತ್ತದೆ. ಅದನ್ನು ಸ್ವೀಕರಿಸುವ ವ್ಯಕ್ತಿಯ ಮನಸ್ಥಿತಿಯ ಮೇಲೆ ಅವಲಂಭಿಸಿರುತ್ತದೆ. ಆದರೆ ಅದರಿಂದ ಮೂಡುವ ಭಾವನೆಗಳು ಕಲೆ ಸಂಗೀತ ಸಾಹಿತ್ಯ ಮುಂತಾದ ಪ್ರಕಾರಗಳಲ್ಲಿ ಪ್ರಕಟವಾದಾಗ ಓದುವವರು ನೋಡುವವರು ಕೇಳುವವರು ಭಾವ ತೀವ್ರತೆಗೆ ಒಳಗಾಗುತ್ತಾರೆ.

ಮನುಷ್ಯನ ವ್ಯಕ್ತಿತ್ವದಲ್ಲಿ ಆತನ ಜೀವಿತ ಕಾಲದಲ್ಲಿ ಅನೇಕ ಘಟನೆಗಳು ಸಂಭವಿಸಿ ಎಲ್ಲಾ ರೀತಿಯ ಭಾವನೆಗಳನ್ನು ಹೊಮ್ಮಿಸುತ್ತದೆ. ಅದರಲ್ಲಿ ನೋವಿನ ನೆನಪು ಮಾತ್ರ ಇತರ ಭಾವನೆಗಳ ಮೇಲೆ ಸವಾರಿ ಮಾಡುತ್ತದೆ. ಬೇಕಾದರೆ ಒಮ್ಮೆ ಅವಲೋಕಿಸಿ ನೋಡಿ ಪ್ರೀತಿ ಸಂತೋಷ ಕೋಪ ಭಯ ಮುಂತಾದ ಇತರ ಭಾವನೆಗಳು ಇದ್ದರೂ ನೋವಿನ ಘಟನೆಗಳು ಮಾತ್ರ ಬೇಡ ಬೇಡವೆಂದರೂ ಮತ್ತೆ ಮತ್ತೆ ಕಾಡುತ್ತಲೇ ಇರುತ್ತವೆ. ಅದನ್ನೇ ಚಿಂತೆ ಎಂದು ಲೋಕದ ಆಡು ಭಾಷೆಯಲ್ಲಿ ಕರೆಯಲಾಗುತ್ತದೆ.

ಚಿತೆ ( ಬೆಂಕಿ ) ನಮ್ಮನ್ನು ಒಮ್ಮೆ ಸುಟ್ಟರೆ ಚಿಂತೆ ಇಡೀ ಬದುಕಿನ ಪ್ರತಿಕ್ಷಣವನ್ನು ಸುಡುತ್ತಲೇ ಇರುತ್ತದೆ.

ಹಲವಾರು ಹುಟ್ಟುಗಳ ನಡುವೆ ಒಂದು ಸಾವು, ಎಷ್ಟೋ ಸಂಬಂಧಗಳ ನಡುವೆ ಒಂದು ವಿರಹ, ಅನೇಕ ಲಾಭಗಳ ನಡುವೆ ಒಂದು ನಷ್ಟ, ಅಪಾರ ಹೊಗಳಿಕೆಗಳ ನಡುವೆ ಒಂದು ತೆಗಳಿಗೆ ನಮ್ಮನ್ನು ಅಲ್ಲಾಡಿಸಿಬಿಡುತ್ತದೆ. ಇರುವುದಕ್ಕಿಂತ ಇಲ್ಲದಿರುವುದರ ಕಡೆಯೇ ಮನಸ್ಸು ಸದಾ ಯೋಚಿಸುತ್ತದೆ.

ಆ ಕಾರಣದಿಂದಾಗಿಯೇ ನೋವಿನ ಸಾಹಿತ್ಯ ಓದುಗರೆದೆಯಲ್ಲಿ ಸೃಷ್ಟಿಸುವ ತಳಮಳ ಮತ್ತು ಅದರಿಂದ ಏಳುವ ಮಾನಸಿಕ ಅಲೆಗಳು ಅನಂತರದ ಪರಿಣಾಮಗಳು ಗಾಢ ಅನುಭವ ನೀಡುತ್ತದೆ. ನಮ್ಮ ವೈಯಕ್ತಿಕ ಬದುಕಿನೊಂದಿಗೆ ಸಮೀಕರಣಗೊಳ್ಳುತ್ತದೆ.
ದೀರ್ಘಕಾಲ ಉಳಿಯುತ್ತದೆ.

ಹಾಗೆಂದ ಮಾತ್ರಕ್ಕೆ ಬೇರೆ ಪ್ರಕಾರದ ಸಾಹಿತ್ಯ ಈ ಗುಣಲಕ್ಷಣಗಳನ್ನು ಹೊಂದಿಲ್ಲ ಎಂಬ ಅಭಿಪ್ರಾಯಕ್ಕೆ ಬರಬಾರದು. ಅದು ಓದುಗರ ಆಸಕ್ತಿಯನ್ನು ಅವಲಂಬಿಸಿರುತ್ತದೆ. ಅವರ ವಯಸ್ಸು ಅವರ ಬದುಕಿನ ಸ್ಥಿತಿ ಗತಿಗಳು, ಬೆಳೆದ ಪರಿಸರ ಎಲ್ಲವೂ ಇದನ್ನು ನಿರ್ಧರಿಸುತ್ತದೆ.

ಆದರೆ ಒಟ್ಟಾರೆ ನೋವಿನ ಸಾಹಿತ್ಯ ಬರಹಗಳಲ್ಲಿ ಸೃಷ್ಟಿಸುವ ತವಕ ತಲ್ಲಣಗಳು ಇತರೆ ಸಾಹಿತ್ಯ ಪ್ರಕಾರಗಳಿಗಿಂತ ಹೆಚ್ಚು ಪರಿಣಾಮಕಾರಿ ಎಂಬುದು ಸಾಮಾನ್ಯ ಸ್ಥಿತಿಯಲ್ಲಿ ಕಂಡುಬರುತ್ತದೆ. ನೋವಿನ ಮನಸ್ಥಿತಿಯಲ್ಲಿ ಇದ್ದವರಿಗಂತೂ ಇನ್ನೂ ಹೆಚ್ಚು ಕಾಡುತ್ತದೆ. ಓದುತ್ತಾ ಓದುತ್ತಾ ಕಣ್ಣೀರಾಗುತ್ತಾರೆ.

ಕಾಡದಿರು ನೀನು
ನೋವೆಂಬ ಮಾಯೆ,
ಎಷ್ಟೊಂದು ಹಿಂಸೆ
ನೆನಪುಗಳ ಭಾರ,
ಮುಂದಕ್ಕೂ ಚಲಿಸಲು ಬಿಡದೆ,
ಹಿಂತಿರುಗಲೂ ಅವಕಾಶ ನೀಡದೆ,
ಕಾಡದಿರು ನೀನು ನೋವೆಂಬ ಮಾಯೆ……….

ಸಾಹಿತ್ಯವನ್ನು ಅತ್ಯಂತ ವಿಶಾಲ ಅರ್ಥದಲ್ಲಿ ಗ್ರಹಿಸಬೇಕು. ಭಾಷೆಯ ಮೇಲಿನ ಹಿಡಿತ, ವಿಷಯಗಳ ವ್ಯಾಪ್ತಿ, ಅದು ಸಾಹಿತ್ಯ ಕ್ಷೇತ್ರ ಮತ್ತು ಜನಸಾಮಾನ್ಯರಲ್ಲಿ ಬೀರಿರುವ ಪ್ರಭಾವ, ಎಷ್ಟು ದೀರ್ಘಕಾಲದಿಂದ ಅದು ಉಳಿದು ಬಂದಿದೆ, ಪ್ರಶಸ್ತಿ ಮಾನದಂಡಗಳಲ್ಲಿ ಅದಕ್ಕಿರುವ ಸ್ಥಾನ, ಓದುವಾಗ ಆ ಸಾಹಿತ್ಯ ಓದುಗರ ಮನದಲ್ಲಿ ಮೂಡಿಸುವ ಭಾವ ತರಂಗಗಳು, ಸಾಹಿತ್ಯ ಪ್ರಕಾರಗಳು, ಭಾರತೀಯ ಮತ್ತು ವಿಶ್ವದ ಇತರ ಭಾಷೆಗಳ ಸಾಹಿತ್ಯದ ಆಳ ಅಗಲಗಳ ಮೂಲದಿಂದ ಪರಿಶೀಲನೆ, ಸಾಹಿತ್ಯದ ದೂರದೃಷ್ಟಿ, ಮಾನವೀಯ ಸ್ಪಂದನೆ, ಸಾಹಿತಿಯ ಒಟ್ಟು ವ್ಯಕ್ತಿತ್ವ ಮುಂತಾದ ಎಲ್ಲವನ್ನೂ ಒಳಗೊಂಡಿರಬೇಕು.

ದಾಖಲಾತಿಯ ಸಾಹಿತ್ಯ, ಹೊಗಳಿಕೆಯ ಸಾಹಿತ್ಯ, ಪೌರಾಣಿಕ ಸಾಹಿತ್ಯ, ಐತಿಹಾಸಿಕ ಸಾಹಿತ್ಯ, ಭಕ್ತಿ ಸಾಹಿತ್ಯ, ದಾಸ ಸಾಹಿತ್ಯ, ವಚನ ಸಾಹಿತ್ಯ, ನವ್ಯ ಸಾಹಿತ್ಯ, ನವೋದಯ ಸಾಹಿತ್ಯ, ನವ್ಯೋತ್ತರ ಸಾಹಿತ್ಯ, ಬಂಡಾಯ ಸಾಹಿತ್ಯ, ಮಹಿಳಾ ಸಾಹಿತ್ಯ, ಶಿಶು ಸಾಹಿತ್ಯ, ಜಾನಪದ ಸಾಹಿತ್ಯ, ಆಧ್ಯಾತ್ಮಿಕ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಹಾಸ್ಯ ಸಾಹಿತ್ಯ ಮುಂತಾದ ಎಲ್ಲಾ ಸಾಹಿತ್ಯ ಪ್ರಕಾರಗಳನ್ನು ಒಳಗೊಂಡು….

ಕಥೆ, ಕಾದಂಬರಿ, ಕಾವ್ಯ, ನಾಟಕ, ಪ್ರಬಂಧ, ಸಂಶೋಧನೆ, ಅನುವಾದ, ವಿಮರ್ಶೆ ಇತ್ಯಾದಿ ಎಲ್ಲವೂ ಸೇರಿ…..

ಕುವೆಂಪು ಅವರು ಕನ್ನಡ ಸಾಹಿತ್ಯ ಕ್ಷೇತ್ರದ ಮೇರು ಪರ್ವತ ಅಗುವುದು ಇಲ್ಲಿಯೇ….

ಸಾಂಕೇತಿಕವಾಗಿ ಹೇಳುವುದಾದರೆ……

ರಾಮಾಯಣ ದರ್ಶನಂ ಎಂಬ ಮಹಾಕಾವ್ಯ, ಜಯ ಭಾರತ ಜನನಿಯ ತನುಜಾತೆ ಎಂಬ ನಾಡಗೀತೆ, ನೇಗಿಲ ಯೋಗಿ ಎಂಬ ರೈತ ಗೀತೆ, ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೇ, ದೋಣಿ ಸಾಗಲಿ ಮುಂದೆ ಹೋಗಲಿ, ಎಲ್ಲಾದರು ಇರು ಎಂತಾದರೂ ಇರು, ಭಾರಿಸು ಕನ್ನಡ ಡಿಂಡಿಮವ ಎಂಬ ಭಾಷಾ ಮಹತ್ವದ ರಚನೆಗಳು, ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಎಂಬ ಕಾದಂಬರಿಗಳು, ಶೂದ್ರ ತಪಸ್ವಿ, ಬೆರಳ್ಗೆ ಕೊರಳ್ ನಾಟಕಗಳು, ಎಲ್ಲಕ್ಕಿಂತ ಹೆಚ್ಚಾಗಿ ” ವಿಶ್ವ ಮಾನವ ಪ್ರಜ್ಞೆ ” ಎತ್ತಿ ಹಿಡಿದ ಮಹಾನ್ ಸಾಹಿತಿ ಕುವೆಂಪು.

ಅವರನ್ನು ಅತ್ಯಂತ ಪ್ರೀತಿ ಅಭಿಮಾನದಿಂದ ಸ್ಮರಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಕರ್ನಾಟಕ ಹೆಚ್ಚು ತೆರಿಗೆ ನೀಡುತ್ತಿದ್ದು, ಇಲ್ಲಿಗೆ ಹೆಚ್ಚು ಅನುದಾನ ಬರಬೇಕೆಂಬ ತತ್ವ- ಚಿಂತನೆ ಸರಿಯಲ್ಲ. ಇದೆಲ್ಲವನ್ನು ಹಣಕಾಸು ಆಯೋಗ ನಿರ್ಧರಿಸುತ್ತದೆ- ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ದೇವನಹಳ್ಳಿ: ಭಾರತಮಾಲಾ ಪರಿಯೋಜನೆಯಡಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ದೇಶದ ಎರಡು ಪ್ರಮುಖ ಆರ್ಥಿಕ ಶಕ್ತಿ ಕೇಂದ್ರಗಳಾದ ಬೆಂಗಳೂರು…

14 hours ago

ಕೃಷಿ ಹೊಂಡಗಳಲ್ಲಿ ಅನಾಹುತ ತಡೆಗೆ ಜಾಗೃತಿ ಸಭೆ: ಸುರಕ್ಷತೆಗೆ ಕಟ್ಟುನಿಟ್ಟಿನ ಸೂಚನೆ

ದೊಡ್ಡಬಳ್ಳಾಪುರ: ಜೂ.13ರಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತೊಗರಿಘಟ್ಟ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಆಟವಾಡಲು ಹೋಗಿದ್ದ ಇಬ್ಬರು ಮಕ್ಕಳು…

20 hours ago

0% ಭ್ರಷ್ಟಾಚಾರ: ಯಾರು ಕೂಡ ಸರ್ಕಾರಿ ಕಚೇರಿಗಳಲ್ಲಿ 10 ರೂಪಾಯಿ ಕೂಡಾ ಲಂಚ ನೀಡಬಾರದು- ಸಿಎಂ‌ ಡಿಕೆಶಿ

ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ಜಿಲ್ಲಾಧಿಕಾರಿಗಳು, ಎಸ್‌ಪಿ, ಸಿಇಒ, ಡಿಎಫ್‌ಒ ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ…

1 day ago

ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿಸಿದ ಶನಿವಾರ: ಜಿಲ್ಲೆಯನ್ನ ಬೆಚ್ಚಿಬೀಳಿಸಿದ ಸರಣಿ ದುರಂತಗಳು: ಒಂದೇ ದಿನ 7 ಮಂದಿ ಮೃತ್ಯು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶನಿವಾರ ವಿವಿಧ ದುರ್ಘಟನೆಗಳಲ್ಲಿ ಏಳು ಮಂದಿ ಮೃತಪಟ್ಟಿರುವ ಘಟನೆಗಳು ವರದಿಯಾಗಿವೆ. ದೇವನಹಳ್ಳಿ, ನೆಲಮಂಗಲ, ಹೊಸಕೋಟೆ ಭಾಗಗಳಲ್ಲಿ…

2 days ago

ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳ ದಾರುಣ ಸಾವು

ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ಸುಮಾರು 3:30ರ ಸಮಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ‌…

2 days ago

ಕೆಲಸದ ಕನಸು ಹೊತ್ತು ಹೊರಟ ಯುವತಿ ಲಾರಿ ಅಪಘಾತಕ್ಕೆ ಬಲಿ

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಹಲಸಳ್ಳಿ ಗೇಟ್ ಸಮೀಪದ ಹೊಸಕೋಟೆ–ಕೋಲಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ದ್ವಿಚಕ್ರ…

2 days ago