Categories: ಲೇಖನ

ಕಾಡು ನೆನಪಾದಾಗ ಕಾಡುವ ತೇಜಸ್ವಿ……

ಪೂರ್ಣ ಚಂದ್ರ ತೇಜಸ್ವಿ…………

ಕಾಡು ನೆನಪಾದಾಗ ಕಾಡುವ ತೇಜಸ್ವಿ………

ಕನ್ನಡ ಚಿತ್ರರಂಗದಲ್ಲಿ ಶಂಕರ್ ನಾಗ್ ಈಗಲೂ ಏನೋ ಮೋಡಿ ಮಾಡಿದಂತೆ ಎಲ್ಲರನ್ನೂ ಆಕರ್ಷಿಸುತ್ತಾರೆ. ಇತ್ತೀಚೆಗೆ ಪುನೀತ್ ರಾಜಕುಮಾರ್ ಆ ಸ್ಥಾನಕ್ಕೆ ಬಂದಿದ್ದಾರೆ.

ಹಾಗೆಯೇ ನನಗೆ ಕನ್ನಡ ಸಾಹಿತ್ಯದಲ್ಲಿ ತೇಜಸ್ವಿಯವರು ಸಹ ಅದೇರೀತಿ ಓದುಗರಲ್ಲಿ ಮೋಡಿ ಮಾಡಿದ್ದಾರೆ.

ಇದು ಅವರ ನಡುವಿನ ಹೋಲಿಕೆಯಲ್ಲ. ಇಬ್ಬರದೂ ಬೇರೆ ಬೇರೆ ಕ್ಷೇತ್ರ. ಜನಾಕರ್ಷಣೆಯ ದೃಷ್ಟಿಯಿಂದ ಮಾತ್ರ ಹೇಳಿದ್ದು.

ಕನ್ನಡ ಸಾಹಿತ್ಯದಲ್ಲಿ ಆಗಿನ ಸಂದರ್ಭದಲ್ಲಿ ಸಾಕ್ಷಿ ಪ್ರಜ್ಞೆಯಂತಿದ್ದ, ಸ್ವತಃ ಉತ್ತಮ ಬರಹಗಾರರಾಗಿದ್ದರೂ ಲಂಕೇಶ್ ಅವರು ತೇಜಸ್ವಿ ಬರಹಗಳ ಬಗ್ಗೆ ಬರೆಯುತ್ತಾ, ಅವರ ಬರಹದ ಬಗ್ಗೆ ನನಗೆ ಈಗಲೂ ಅಸೂಯೆ ಕಾಡುತ್ತದೆ. ಹಾಗೆ ಬರೆಯಲು ನನಗೂ ಸಾಧ್ಯವಾಗುತ್ತಿಲ್ಲ ಎಂಬ ಅರ್ಥದಲ್ಲಿ ಅವರನ್ನು ಹೊಗಳುತ್ತಾರೆ.

ಸಾಹಿತ್ಯದ ಸಹಜತೆ ಕಾಪಾಡುತ್ತಾ, ಬದುಕಿನ ಸ್ವಾಭಾವಿಕತೆಯನ್ನು ತನ್ನ ನಡವಳಿಕೆಯಾಗಿ ರೂಪಿಸಿಕೊಂಡು ಅದನ್ನು ಅಕ್ಷರಗಳಿಗೆ ಇಳಿಸಿ ಸಾಮಾನ್ಯ ಓದುಗರ ಮನದಲ್ಲಿ ಮನೆ ಮಾಡಿದ ಅಪರೂಪದ ಬರಹಗಾರ ತೇಜಸ್ವಿ.

ಹುಚ್ಚು ಕನಸುಗಳನ್ನು ಕಾಣುತ್ತಾ, ಹುಚ್ಚುಚ್ಚಾಗಿ ಬದುಕುತ್ತಾ, ಹುಚ್ಚು ಕುತೂಹಲವನ್ನು ಸರಿಯಾದ ಭಾಷೆಯ ಕ್ರಮದಲ್ಲಿ ಬರೆದು ಹುಚ್ಚಿನ ಅಮಲಿನಲ್ಲಿ ಬದುಕಿನ ಸವಿಯನ್ನು ಉಂಡು ಮತ್ತು ಓದುಗರಿಗೆ ಉಣಬಡಿಸಿದ ಅದ್ಬುತ ಬರಹಗಾರ. ಬೇರೆಯವರಿಗೆ ಅವರ ನಡವಳಿಕೆ ಹುಚ್ಚುತನದಂತೆ ಭಾಸವಾದರೂ ಇತರರನ್ನು ಅವರೂ ಹುಚ್ಚರಂತೆ ಕಂಡಿರಬೇಕು. ತೇಜಸ್ವಿಯವರ ಹುಚ್ಚುತನ ವಾಸ್ತವದಲ್ಲಿ ಅತ್ಯಂತ ಸಹಜವಾದ ಪ್ರಾಕೃತಿಕ ಗುಣಲಕ್ಷಣ. ಇಂದಿನ ಕೃತಕ ಕಾಲಘಟ್ಟದ ಜನರಿಗೆ ಅದು ಒಂದು ಹುಚ್ಚಿನ ರೀತಿಯೇ ಭಾಸವಾಗುತ್ತದೆ.

ಹಾಡಿನ ಮಾಂತ್ರಿಕ, ಸಂಗೀತ ಮಾಂತ್ರಿಕ, ಮಾತಿನ ಮಾಂತ್ರಿಕ,
ಕಲೆಯ ಮಾಂತ್ರಿಕ, ಕ್ರೀಡಾ ಮಾಂತ್ರಿಕ ಎಂಬಂತೆ ಸಾಹಿತ್ಯದ ಮಾಂತ್ರಿಕ ತೇಜಸ್ವಿ.

ಜಾನ್ ಕೀಟ್ಸ್, ವರ್ಡ್ಸ್‌ವರ್ತ್, ಎಲಿಯಟ್ ಮುಂತಾದ ಪಾಶ್ಚಿಮಾತ್ಯ ಸಂಸ್ಕೃತಿಯ ‌ಅದ್ಭುತ ಸಾಹಿತಿಗಳಂತೆ ಪ್ರಕೃತಿ ಮತ್ತು ಮನುಷ್ಯನ ನಡುವಿನ ಪ್ರೀತಿ, ಸಂಘರ್ಷ, ಒಡನಾಟಗಳ ಕುರಿತು, ಪ್ರಾಣಿ ಪಕ್ಷಿ ಕೀಟಗಳ ಚಲನವಲನಗಳ ಅತ್ಯಂತ ಆಸಕ್ತಿ ಮತ್ತು ಕುತೂಹಲಕಾರಿ ನಿರೂಪಣೆಯನ್ನು, ವಿದೇಶಿ ಸಾಹಿತ್ಯದ ಅತ್ಯುತ್ತಮ ಸಾಹಸಿ, ರೋಮಾಂಚಕಾರಿ ಮಾಹಿತಿಯ ಸಾಹಿತ್ಯವನ್ನು ಕನ್ನಡದ ಸೊಗಡಿಗೆ ಹೊಂದಿಸಿ ಸಾಮಾನ್ಯ ಜನರಿಗೆ ಮನಮುಟ್ಟುವ ಅನುವಾದವನ್ನು, ವೈಚಾರಿಕ ಪ್ರಜ್ಞೆ, ವ್ಯವಸ್ಥೆಯ ಬಂಡಾಯ, ಸಮಾಜವಾದಿ ಚಿಂತನೆಯ ಅನೇಕ ಕಥನಗಳನ್ನು, ಕನ್ನಡದ ಉಳಿವು, ರೈತ ಶೋಷಣೆ ಮತ್ತು ಅದಕ್ಕಾಗಿ ಚಳವಳಿ ರೂಪಿಸುವ ಹೋರಾಟಗಳನ್ನು, ತತ್ವಜ್ಞಾನಿಯಂತೆ ಮನುಷ್ಯನ ಮಾನಸಿಕ ತಾಕಲಾಟಗಳು ಮತ್ತು ಸಾಮಾಜಿಕ ಜೀವನದಲ್ಲಿ ಧಾರ್ಮಿಕ ಸಂಘರ್ಷಗಳ ಬಗ್ಗೆಯೂ ಸೇರಿದಂತೆ ಎಲ್ಲವನ್ನೂ ಅಕ್ಷರ ರೂಪಕ್ಕೆ ಇಳಿಸಿ ಜನರ ಚಿಂತನ ಮಂಥನಗಳಿಗೆ ಕಾರಣರಾಗಿದ್ದರು.

ಹಾಗೆಂದು ಅವರ ಸಾಹಿತ್ಯ ಎಲ್ಲಕ್ಕಿಂತ ಶ್ರೇಷ್ಠ ಎಂದು ಅರ್ಥವಲ್ಲ. ಆದರೆ ಬರಹಗಾರನ ಬದುಕಿನ ಪ್ರಾಮಾಣಿಕತೆ, ಅನುಭವಗಳ ದಾಖಲಾತಿಯ ನಿಷ್ಠೆ, ಮುಖವಾಡವಿಲ್ಲದ ಸಹಜತೆಯ ಕಾರಣದಿಂದ ಅತ್ಯಂತ ಆಪ್ತವಾಗುತ್ತದೆ.

ಹಾಸ್ಯ, ವ್ಯಂಗ್ಯ, ಲೇವಡಿಗಳ ಮೂಲಕ ಪ್ರತಿ ವಿಷಯದಲ್ಲು ನಗು ಉಕ್ಕಿಸಿದರು. ಇದು ನಿಜ ಎಂದು ನಮ್ಮ ಮನಸ್ಸಿಗೆ ಅನಿಸುತ್ತದೆ. ಅಷ್ಟೊಂದು ಸಹಜತೆ ಅವರ ಬರಹಗಳಲ್ಲಿ ಮೂಡಿ ಬಂದಿದೆ.

ತೇಜಸ್ವಿಯವರ ಮತ್ತೊಂದು ವಿಶೇಷತೆಯೆಂದರೆ ಪಂಥಗಳ ಆಚೆ ಎಲ್ಲಾ ವರ್ಗದವರನ್ನು ತಲುಪಿದ್ದು. ಗಂಭೀರ ಸಾಹಿತ್ಯ ಹೊರತುಪಡಿಸಿ ಸಾಹಿತ್ಯಾಸಕ್ತಿಯ ಬಹುತೇಕರು ಮತ್ತು ಸಾಮಾನ್ಯ ಓದುಗರ ಆಯ್ಕೆಯಲ್ಲಿ ತೇಜಸ್ವಿಯವರ ಒಂದಾದರು ಕೃತಿ ಇದ್ದೇ ಇರುತ್ತದೆ.

ಅಲ್ಲದೆ, ಅಧಿಕಾರ ದಾಹವಿಲ್ಲದ, ಆಡಂಬರ ಪ್ರದರ್ಶನವಿಲ್ಲದ, ಕೃತಕತೆಯ ವಿಡಂಬನೆ ಹಾಗು ಅವರ ಮಾತಿನ ಶೈಲಿ ಬಹಳಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಅಕ್ಷರ ಮೋಡಿಗಾರನ ಹುಟ್ಟುಹಬ್ಬದ ಸಂದರ್ಭದಲ್ಲಿ …..

ಅಕ್ಷರ ಸಾಹಿತ್ಯ,
ಅನುಭವ ಸಾಹಿತ್ಯ,
ಅನುಭಾವ ಸಾಹಿತ್ಯ……….

ಅಕ್ಷರ ಸಾಹಿತ್ಯ……
***************

ಅಕ್ಷರಗಳನ್ನು ಕಲಿತಿರುವ ಕಾರಣದಿಂದ ಏನಾದರೂ ಬರೆಯಬೇಕು ಎಂಬ ಹಂಬಲದಿಂದ ಬರೆಯುತ್ತಾ ಹೋಗುವುದು ಅಕ್ಷರ ಸಾಹಿತ್ಯ. ಇಲ್ಲಿ ಅಕ್ಷರಗಳದೇ ಪ್ರಾಬಲ್ಯ. ಅಕ್ಷರಗಳಿಂದಲೇ ಭಾವನೆಗಳನ್ನು, ಕಲ್ಪನೆಗಳನ್ನು, ಅನುಭವಗಳನ್ನು, ಮಾಹಿತಿಗಳನ್ನು ಇತ್ಯಾದಿ ಎಲ್ಲಾ ಪ್ರಕಾರದ ಬರಹಗಳನ್ನು ಮೂಡಿಸುತ್ತಾ ಹೋಗುವುದು. ತನಗೆ ತಿಳಿದಿರುವ ಅಥವಾ ತನ್ನ ಜ್ಞಾನದ ಮಿತಿಯಲ್ಲಿ ಬರೆಯುವುದು. ಇದರಲ್ಲಿ ಅಕ್ಷರದ ಅಥವಾ ಪದಗಳ ಲಾಲಿತ್ಯವೇ ಮೇಲುಗೈ ಪಡೆದಿರುತ್ತದೆ ಜೊತೆಗೆ ತನ್ನ ಸ್ವಂತ ಬುದ್ದಿಯ ಪ್ರದರ್ಶನವೂ ಸೇರಿರುತ್ತದೆ. ನನ್ನ ವೈಯಕ್ತಿಕ ಅನಿಸಿಕೆಯ ಪ್ರಕಾರ ಇದರಲ್ಲಿ ಹೆಚ್ಚು ಜೀವ ಇರುವುದಿಲ್ಲ. ಒಣ ಅಥವಾ ಶುಷ್ಕ ವಾತಾವರಣದ ರೀತಿಯಲ್ಲಿ ಈ ಬರಹಗಳು ಇರುತ್ತವೆ. ಇದರಲ್ಲಿ ಹೆಚ್ಚು ಆಳವಾದ ಅಥವಾ ಅಧ್ಯಯನದ ಒಳ ಅರ್ಥಗಳು ಗೋಚರಿಸುವ ಸಾಧ್ಯತೆ ಕಡಿಮೆ. ನಿರೂಪಣೆಯೇ ಇಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ.

ಅನುಭವ ಸಾಹಿತ್ಯ……
***********************

ಅಕ್ಷರ ಜ್ಞಾನದ ಜೊತೆಗೆ ಬದುಕಿನ ಅನುಭವದ ಆಧಾರದ ಮೇಲೆ ಬರೆಯುವ ಪ್ರಕಾರ. ಅಂದರೆ ಇಲ್ಲಿ ಅನುಭವಗಳಿಗೆ ಅಕ್ಷರದ ರೂಪ ನೀಡುವುದು. ಒಂದಷ್ಟು ಅಧ್ಯಯನ, ಚಿಂತನೆಗಳು ಇಲ್ಲಿ ಅಡಕವಾಗಿರುವ ಸಾಧ್ಯತೆ ಇರುತ್ತದೆ. ಬರೆಯುವ ತುಡಿತ ಹೆಚ್ಚಾಗಿರುತ್ತದೆ. ಆ ಅಕ್ಷರಗಳಲ್ಲಿ ಜೀವಂತಿಕೆಯ ಲಕ್ಷಣಗಳನ್ನು ಗುರುತಿಸಬಹುದು.

ಅಕ್ಷರಗಳಿಂದ ಅನುಭವದ ರೂಪ ಕೊಡುವುದಕ್ಕಿಂತ ಅನುಭವವನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಸಾಹಿತ್ಯಿಕವಾಗಿ ಉತ್ತಮ ಗುಣಮಟ್ಟವನ್ನು ಮುಟ್ಟಲು ಸಾಧ್ಯವಾಗುತ್ತದೆ.

ಅನುಭಾವ ಸಾಹಿತ್ಯ…
*********************

” ರವಿ ಕಾಣದ್ದನ್ನು ಕವಿ ಕಂಡ ” ಎಂಬ ನಾಣ್ಣುಡಿಯನ್ನು ಇದು ನೆನಪಿಸುತ್ತದೆ. ಅಕ್ಷರ ಜ್ಞಾನದ ಜೊತೆಗೆ ಅನುಭವವೂ ಸೇರಿ ಅದರಿಂದ ಮೇಲೇರಿ ಇನ್ನಷ್ಟು ಆಳವನ್ನು ಹುಡುಕುತ್ತಾ ಒಳನೋಟಗಳನ್ನು, ವಿವಿಧ ಮುಖಗಳನ್ನು ಗ್ರಹಿಸುತ್ತಾ, ಬರೆಯುತ್ತಾ ಹೋಗುವುದು ಅನುಭಾವ ಸಾಹಿತ್ಯ. ತುಂಬಾ ಸೂಕ್ಷ್ಮ ಮತ್ತು ದೂರ ದೃಷ್ಟಿ ಇದರಲ್ಲಿ ಸಿಗುತ್ತದೆ. ಅಧ್ಯಯನ ಮತ್ತು ಚಿಂತನೆಯೂ ಇಲ್ಲಿ ಅಡಕವಾಗಿರುತ್ತದೆ. ಇದರಲ್ಲಿ ಜೀವ ಮೈತುಂಬಿ ಹರಿಯುತ್ತದೆ..

ಬರಹಗಳಲ್ಲಿ ಸಹ ಗುಣಮಟ್ಟವನ್ನು ಅಳೆಯಬಹುದು. ಅನೇಕ ಬರಹಗಳು ಕಾಲದ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಈಗಲೂ ಪ್ರಸ್ತುತವಾಗಿ ಉಳಿದಿರುವುದಕ್ಕೆ ಕಾರಣ ಅವುಗಳ ಆಳದಲ್ಲಿ ಇರುವ ಅನುಭಾವ.

ಸಾಮಾಜಿಕ ಜಾಲತಾಣಗಳ ಬೆಳವಣಿಗೆಯೊಂದಿಗೆ ಅನೇಕ ಬರಹಗಾರರು ಸೃಷ್ಟಿಯಾಗಿದ್ದಾರೆ. ಸಾಹಿತ್ಯ ರಚಿಸಲು ಜನಸಾಮಾನ್ಯರಿಗೆ ಒಂದು ಅತ್ಯುತ್ತಮ ವೇದಿಕೆ ದೊರೆತಿದೆ.
ಆದರೆ ಅದು ಅಕ್ಷರ ಸಾಹಿತ್ಯ ದಾಟಿ, ಅನುಭವ ‌ಸಾಹಿತ್ಯ ಮೀರಿ, ಅನುಭಾವ ಸಾಹಿತ್ಯವಾಗಲಿ ಎಂಬುದು ಒಂದು ಆಶಯ.

ನಿಜವಾದ ಸಾಹಿತ್ಯ ಮಾನವೀಯತೆಯ ವಿಕಾಸವಾದದ ಕುರುಹುಗಳಾಗಿ ಉಳಿಯಬೇಕೇ ಹೊರತು ಶಿಕ್ಷಣ ಆಧಾರಿತ ಮಾನವೀಯ ಮೌಲ್ಯಗಳ ವಿನಾಶದ ಮಾರ್ಗವಾಗಬಾರದು………….

ಇದೊಂದು ಸರಳ ನಿರೂಪಣೆ. ಸಾಹಿತ್ಯದ‌ ಆಳ ಅಗಲಗಳು ಅನಂತ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

‘ಡೇ ಕೇರ್’ ಮುದ್ದು ಕಂದಮ್ಮಗಳ ಹೊಣೆ ಕೆಲಸಗಾರರದ್ದೋ, ನಮ್ಮದೋ……?

ಡೇ ಕೇರ್........, ಮುದ್ದು ಕಂದಮ್ಮಗಳ ಹೊಣೆ ಕೆಲಸಗಾರರದ್ದೋ, ನಮ್ಮದೋ...... ಬೆಂಗಳೂರಿನಲ್ಲಿ ಪುಟ್ಟ ಮಕ್ಕಳನ್ನು ಆರೈಕೆ ಮಾಡುವ ಡೇಕೇರ್ ಎಂಬ ಪರಿಕಲ್ಪನೆಯ…

1 hour ago

ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು: ವಾರಸುದಾರರ ಪತ್ತೆಗೆ ರೈಲ್ವೆ ಪೊಲೀಸರ ಮನವಿ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ ಒಡ್ಡರಹಳ್ಳಿ ಮತ್ತು ಮಾಕಳೀದುರ್ಗ ರೈಲು ನಿಲ್ದಾಣಗಳ ನಡುವಿನ ಮಾಕಳಿ ಗೋಶಾಲೆ ಸಮೀಪದ…

14 hours ago

ಪತ್ನಿಯ ಶೀಲ ಶಂಕಿಸಿ ಗೃಹಿಣಿಯ ಕೊಲೆ: ಪತಿ ಬಂಧನಕ್ಕೆ ಬಲೆ

ಚಿಕ್ಕಬಳ್ಳಾಪುರ: ಪತ್ನಿಯ ಶೀಲದ ಬಗ್ಗೆ ಅನುಮಾನ ಹಾಗೂ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಕುಟುಂಬ ಕಲಹದ ಹಿನ್ನೆಲೆಯಲ್ಲಿ ಗೃಹಿಣಿಯನ್ನು ಪತಿಯೇ ಕೊಲೆ…

14 hours ago

ಕೌಟುಂಬಿಕ ಕಲಹ ಡಬಲ್ ಮರ್ಡರ್: ಅಕ್ಕ-ತಂಗಿಯ ಹತ್ಯೆ, ಆರೋಪಿ ಪೊಲೀಸರಿಗೆ ಶರಣು

ಚಿಂತಾಮಣಿ: ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಕೌಟುಂಬಿಕ ಕಲಹ ಕೊನೆಗೆ ಭೀಕರ ತಿರುವು ಪಡೆದು, ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ…

14 hours ago

ಪ್ರತಿ ಲೀಟರ್ ಹಾಲಿಗೆ 10‌ ರೂ. ಪ್ರೋತ್ಸಾಹಧನ ಹೆಚ್ಚಳಕ್ಕೆ ಆಗ್ರಹ: ಜು.9ರಂದು ಸಿಎಂಗೆ ಮನವಿ ಸಲ್ಲಿಕೆ

ದೊಡ್ಡಬಳ್ಳಾಪುರ: ಹೈನುಗಾರಿಕೆಗೆ ಅಗತ್ಯವಾದ ಹಿಂಡಿ, ಬೂಸ, ಮೇವು ಸೇರಿದಂತೆ ಕಚ್ಚಾ ವಸ್ತುಗಳ ಬೆಲೆ ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರ ಸಂಕಷ್ಟವನ್ನು…

19 hours ago

ಜು.7 ರಂದು ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಜು.7 ರಂದು 66/11 ಕೆವಿ ಡಿಕ್ರಾಸ್ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F15-Tropical Flavours ಮತ್ತು 220/66/11ಕೆವಿ…

1 day ago