” ಭಾರತ ಯುರೋಪಿನಂತೆ ನಗರ ಸಂಸ್ಕೃತಿಯಲ್ಲ. ಗ್ರಾಮೀಣ ಸಂಸ್ಕೃತಿ. ಹಾಗಾಗಿ ಇಲ್ಲಿನ ಯಾವುದೇ ಅಭಿವೃದ್ಧಿ ಕಲ್ಪನೆ ಹಳ್ಳಿಗಳ ಹಿತವನ್ನು ಮರೆತರೆ ಈ ನಾಗರಿಕತೆಯು ಅವನತಿಯ ಹಾದಿ ಹಿಡಿಯುತ್ತದೆ “……ಮಹಾತ್ಮ ಗಾಂಧಿ,
” ನಿರ್ಧಾಕ್ಷಿಣ್ಯವಾದ ವಿಚಾರ ವಿಮರ್ಶೆಯೇ ಸಾರ್ವಜನಿಕರು ದೇಶಕ್ಕೆ ಸಲ್ಲಿಸಬಹುದಾದ ಸರ್ವೋತ್ತಮ ಸೇವೆ “….. ಡಿವಿಜಿ,
” ಭಾರತೀಯರು ಭಾರತೀಯರನ್ನೇ ನಂಬಲಾರದ ಜನ. ಸಾರ್ವಜನಿಕ ಜೀವನದಲ್ಲಿ ಪರಸ್ಪರ ಸಹಕರಿಸುವುದೇ ಇಲ್ಲ. ಅವರಲ್ಲಿ ಏನಾದರೂ ಜಾಣತನವಿದ್ದರೆ ಅದನ್ನು ಇತರರಿಗೆ ಮೋಸ ಮಾಡಲು ಮಾತ್ರ ಬಳಸುತ್ತಾರೆ. ಸಾರ್ವಜನಿಕ ನೈತಿಕತೆಯ ಕಲ್ಪನೆಯೇ ಇಲ್ಲದ ಈ ಜನಕ್ಕೆ ಸತ್ಯ ಅಥವಾ ಪ್ರಾಮಾಣಿಕತೆ ಎಂದರೆ ಏನೆಂಬುದೇ ಗೊತ್ತಿಲ್ಲ” …….
ಲಾರ್ಡ್ ಕರ್ಜನ್ ( 1899 ),
” ಇಂದು ನಮ್ಮೆದುರಿಗಿರುವ ಯಾವುದೇ ಅಸಾಮಾನ್ಯನು ಪ್ರಾರಂಭದಲ್ಲಿ ನಮ್ಮಂತೆಯೇ ಸಾಮಾನ್ಯನೇ. ಸತತ ಪರಿಶ್ರಮ ಆಸಕ್ತಿಗಳೇ ಪರಿವರ್ತನೆಗೆ ಕಾರಣ “……
ಚಿನ್ಮಯ ಮಿಷನ್,
” ಟೀಕೆಗಳು ಅಳಿಯುತ್ತವೆ ಕೆಲಸಗಳು ಉಳಿಯುತ್ತವೆ “….. ಕುವೆಂಪು,
ಈ ಮಾತುಗಳೊಂದಿಗೆ, ಭಾವನೆಗಳ ಬೆಸುಗೆಯ ಪ್ರಯಾಣದಲ್ಲಿ ನಮ್ಮ ರೈತರು ನೆನಪಾದಾಗ……..
ಮಾಧ್ಯಮಗಳ ಅಂಬಾನಿ ಮದುವೆಯ ವಿಜೃಂಭಣೆಯಲ್ಲಿ ಸಮಾಧಿಯಾದ ಆತ್ಮಹತ್ಯೆ ಮಾಡಿಕೊಂಡ ರೈತರ ದೇಹಗಳು……
ಕಳೆದ 15 ತಿಂಗಳುಗಳಲ್ಲಿ ಸುಮಾರು 1182 ರೈತರ ಆತ್ಮಹತ್ಯೆ ಪ್ರಕರಣಗಳು ಸರ್ಕಾರದ ಮಟ್ಟದಲ್ಲಿ ದಾಖಲಾಗಿವೆ. ಇದು ಅಧಿಕೃತ ಅಂಕಿಅಂಶಗಳು. ಗಮನಕ್ಕೆ ಬಾರದ, ಪರೋಕ್ಷ ಒತ್ತಡಕ್ಕೆ ಒಳಗಾದ, ಮಾನಸಿಕ ಖಿನ್ನತೆಗೆ ಬಲಿಯಾದ, ಇನ್ನೂ ಸಾಯದೆ ಆದರೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿರುವ ಬಹಳಷ್ಟು ರೈತ ಕುಟುಂಬಗಳು ನಮ್ಮ ನಡುವೆ ಇದೆ. ಆದರೆ ನಮ್ಮ ಇಡೀ ಆಡಳಿತ ವ್ಯವಸ್ಥೆ, ಮಾಧ್ಯಮಗಳು, ಸಾರ್ವಜನಿಕ ಹೋರಾಟಗಳು, ಧಾರ್ಮಿಕ ನಾಯಕರುಗಳು ಇದನ್ನು ಹೊರತುಪಡಿಸಿದ ಬೇರೆ ಬೇರೆ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದು ಒಂದು ಪ್ರಮುಖ ಚರ್ಚೆಯ ವಿಷಯವಾಗಲೇ ಇಲ್ಲ……
ಇನ್ನೇನು ಕರ್ನಾಟಕದ ವಿಧಾನಸಭಾ ಅಧಿವೇಶನ ಪ್ರಾರಂಭವಾಗಲಿದೆ. ಅದರಲ್ಲಿ ಕೂಡ ಚರ್ಚಿಸಲು ಈಗಾಗಲೇ ಸಾಕಷ್ಟು ಭ್ರಷ್ಟಾಚಾರದ, ಕೊಲೆಗಳ ಕ್ರಿಮಿನಲ್ ವಿಷಯಗಳು ಆಧ್ಯತೆಯಾಗುವುದು, ಪ್ರತಿಭಟನೆ, ಸಭಾತ್ಯಾಗ, ಬಹಿಷ್ಕಾರ ಮಾಡುವುದು ಬಹುತೇಕ ಖಚಿತ. ಮತ್ತೆ ರೈತರು ಈ ದೇಶದ ಬೆನ್ನೆಲುಬು, ರೈತರೇ ಅನ್ನದಾತರು, ರೈತರೇ ನಮ್ಮ ಸರ್ವಸ್ವ ಎನ್ನುವ ಮಾತುಗಳು ಯಾರಿಗಾಗಿ. ಪ್ರತಿನಿತ್ಯ ಕನಿಷ್ಠ ಮೂರು ಹೊತ್ತು ಭಕ್ಷ್ಯ ಭೋಜನಗಳನ್ನು ಸವಿಯುವ ಮನುಷ್ಯ ಪ್ರಾಣಿ ತನಗೆ ಆಹಾರ ನೀಡುವ ಮೂಲವಾದ ಕೃಷಿ ಮತ್ತು ರೈತರ ಬಗ್ಗೆ ಸ್ವಲ್ಪವಾದರೂ ಯೋಚಿಸಬೇಕಲ್ಲವೇ. ಮುಖ್ಯವಾಗಿ ಶಾಸಕಾಂಗ ಮತ್ತು ಕಾರ್ಯಾಂಗ ಈ ನಿಟ್ಟಿನಲ್ಲಿ ಎಷ್ಟೊಂದು ಕೆಲಸ ಮಾಡಬೇಕು. ರೈತರ ಋಣ ತೀರಿಸಲು ಒಂದು ಜನ್ಮವೂ ಸಾಕಾಗುವುದಿಲ್ಲ…..
ಆದರೆ ಮಾಡುತ್ತಿರುವುದಾದರೂ ಏನು. ಹಿಂದಿನ ವರ್ಷ ಬರಪೀಡಿತ. ಈಗ ಒಂದಷ್ಟು ಒಳ್ಳೆಯ ಮಳೆಯಾಗುತ್ತಿದೆ. ಕೆಲವಡೆ ಅತಿವೃಷ್ಟಿಯೂ ಆಗಬಹುದು. ಕರ್ನಾಟಕ ಪ್ರಾಕೃತಿಕವಾಗಿ ಅತ್ಯುತ್ತಮ ಗುಣಮಟ್ಟದ ಸಂಪನ್ಮೂಲಗಳ ಉತ್ಕೃಷ್ಟ ಮಣ್ಣಿನ ಪ್ರದೇಶ. ಅದರಲ್ಲೂ ಶೇಕಡಾ ಸುಮಾರು 50/60% ಗೂ ಹೆಚ್ಚು ಭೂಪ್ರದೇಶ ಕೃಷಿಗೆ ಅತ್ಯಂತ ಯೋಗ್ಯವಾಗಿದೆ. ಇಲ್ಲಿನ ಅಕ್ಷರಸ್ಥರ ಸಂಖ್ಯೆ ಸಹ ಶೇಕಡಾ 80 ರಿಂದ 90% ರವರೆಗೆ ಇದೆ. ಈ ರಾಜ್ಯದ ಬಜೆಟ್ ಸರಿಸುಮಾರು 4 ಲಕ್ಷ ಕೋಟಿಗಳ ಸಮೀಪದಲ್ಲಿದೆ. ಇಲ್ಲಿನ ಜನಸಂಖ್ಯೆ ಸುಮಾರು 7 ಕೋಟಿ. ಇಷ್ಟು ದೊಡ್ಡ ಪ್ರಾಕೃತಿಕ ಪ್ರದೇಶ, ಸಂಪನ್ಮೂಲ, ಹಣಕಾಸು ಮತ್ತು ಆಡಳಿತ ವ್ಯವಸ್ಥೆಯನ್ನು ಗಮನಿಸಿದಾಗ ಅದನ್ನು ಈ ಏಳು ಕೋಟಿ ಜನರಲ್ಲಿ ಹಂಚುತ್ತಾ ನಿಭಾಯಿಸುವುದು ದೊಡ್ಡ ಕಷ್ಟವೇನು ಅಲ್ಲ…..
ಒಂದಷ್ಟು ಸವಾಲುಗಳಿರಬಹುದು. ಆದರೆ ನಿರ್ವಹಣೆ ಪ್ರಾಮಾಣಿಕವಾಗಿದ್ದಲ್ಲಿ ನಮ್ಮೆಲ್ಲರ ಜೀವನಮಟ್ಟ ಇದಕ್ಕಿಂತ ಉತ್ತಮವಾಗಿರುತ್ತದೆ. ದುರಂತವೆಂದರೆ ಹಂಚಿಕೆಯ ಮುಖ್ಯಸ್ಥಾನದಲ್ಲಿರುವ ವ್ಯಕ್ತಿಗಳೇ ದುರಾಸೆ, ದುಷ್ಟತನದ ಪರಮಾವಧಿ ತಲುಪಿದ್ದಾರೆ. ರಾಜಕೀಯ, ಚುನಾವಣೆಗಳು, ಭ್ರಷ್ಟಾಚಾರ, ವಿವಿಧ ತನಿಖೆಗಳು ಹೀಗೆ ಹೇಗೋ ದಿನಗಳು ಉರುಳುತ್ತಿವೆ. ಇವರನ್ನು ಬಿಟ್ಟರೆ ಅವರು, ಅವರನ್ನು ಬಿಟ್ಟರೆ ಇವರು ಅಧಿಕಾರ ಚಲಾಯಿಸುತ್ತಾ ತಮ್ಮ ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು, ಮರಿ ಮಕ್ಕಳು ಹೀಗೆ ಅವರುಗಳನ್ನೇ ಬಳಸುತ್ತಾ, ತಮ್ಮ ವಂಶಾಭಿವೃದ್ಧಿ ಮಾಡುತ್ತಾ, ಸುಖ ಭೋಗದ ಜೀವನ ಮಾಡುತ್ತಿದ್ದಾರೆ…..
ಸಾಮಾನ್ಯ ಜನರು ಮಾತ್ರ ಶಾಲಾ ಫೀಸು ಕಟ್ಟಲು ಒದ್ದಾಡುತ್ತಾ,
ಉತ್ತಮ ಆರೋಗ್ಯ ಕಾಪಾಡಿಕೊಳ್ಳದೆ, ಸದಾ ಕಾಲ ಗೊಣಗುತ್ತಾ, ನಿರಾಸೆ ಅನುಭವಿಸುತ್ತಾ, ಏಕಾಂಗಿಯಾಗಿ ಅಳುತ್ತಾ, ಎಲ್ಲೋ ಒಮ್ಮೆ ಆಕ್ರೋಶ ವ್ಯಕ್ತಪಡಿಸುತ್ತಾ, ಟಿವಿ, ಸಿನಿಮಾ ಎಂಬ ಮನರಂಜನಾ ಮಾಧ್ಯಮಗಳನ್ನು ವೀಕ್ಷಿಸುತ್ತಾ ಬದುಕನ್ನು ಸಾಗಿಸುತ್ತಿದ್ದಾರೆ….
ಹಾಗಾದರೆ ರೈತರ ಸಮಸ್ಯೆಗಳಿಗೆ ಪರಿಹಾರ ಇಲ್ಲವೇ. ಖಂಡಿತವಾಗಿಯೂ ಹೃದಯವಂತ, ಮಾನವೀಯ ಕಾಳಜಿಯ, ದಕ್ಷ, ಪ್ರಾಮಾಣಿಕ ಕೃಷಿ ಮಂತ್ರಿ, ಮುಖ್ಯಮಂತ್ರಿ ಪ್ರಧಾನಮಂತ್ರಿ, ಮುಖ್ಯ ಸರ್ಕಾರಿ ಕಾರ್ಯದರ್ಶಿಗಳು ಈ ದೇಶದ, ನಮ್ಮ ಅನ್ನದಾತರ ಋಣ ತೀರಿಸಬೇಕೆಂದು ಈ ಕಷ್ಟ ಪರಿಹರಿಸಬೇಕೆಂದು ಮನಸ್ಸು ಮಾಡಿದ್ದೇ ಆದರೆ, ಈ ಎಲ್ಲಾ ವ್ಯಾಪಾರಿ ಮನೋಭಾವವನ್ನು ಬದಿಗಿಟ್ಟರೆ ಇದು ಸಾಧ್ಯ…..
ರೈತರ ಬಗ್ಗೆ ಈಗಾಗಲೇ ಸಾಕಷ್ಟು ಅಧ್ಯಯನದ ವರದಿಗಳು, ಪರಿಹಾರ ಸೂತ್ರಗಳು, ಇನ್ನೊಂದಷ್ಟು ಮಾರುಕಟ್ಟೆ ವ್ಯವಸ್ಥೆಗಳು, ತಂತ್ರಜ್ಞಾನ ಎಲ್ಲವೂ ನಮ್ಮ ನಡುವೆ ಸಿದ್ಧವಾಗಿದೆ. ಅದನ್ನು ಅನುಷ್ಠಾನಗೊಳಿಸುವ ಕ್ರಮಬದ್ಧತೆ ಹಾಗೂ ಇಚ್ಛಾಶಕ್ತಿಯ ಅವಶ್ಯಕತೆ ಮಾತ್ರ ಇದೆ. ಅದನ್ನು ಮಾಡುವವರು ಯಾರು ಎಂಬ ಹಾಗೆಯೇ ಉಳಿಯುವ ಪ್ರಶ್ನೆಯೊಂದಿಗೆ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ
ಉಡುಪಿ: ಉಡುಪಿ ಜಿಲ್ಲೆಯ ಕೋಟದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಾಜ್ಯ ಜ್ಞಾನಗಂಗಾ ಸಾಹಿತ್ಯ…
ಬೆಂಗಳೂರು: ರಾಜ್ಯದ ಸಾರ್ವಜನಿಕರಿಗೆ ಅಗತ್ಯ ಪ್ರಮಾಣಪತ್ರಗಳು ಮತ್ತು ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸುವ ನಾಡಕಚೇರಿ ಸೇವೆ ಕಳೆದ ಕೆಲವು…
ದೊಡ್ಡಬಳ್ಳಾಪುರ: ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ ವರ್ಷದ ಮೊದಲ ಹಬ್ಬವೆಂದು ಪರಿಗಣಿಸಲ್ಪಡುವ ಆಷಾಡ ಏಕಾದಶಿಯನ್ನು ಭಕ್ತಿ, ಸಂಭ್ರಮ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ…
ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಸಮೀಪದ ಯಲಹಂಕ–ಹಿಂದೂಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂ-ಟರ್ನ್ ಪಡೆಯುವ ವೇಳೆ ಟ್ರಕ್ ಏಕಾಏಕಿ ಕೆಟ್ಟು ನಿಂತ ಪರಿಣಾಮ ಕೆಲಕಾಲ…
ಬೆಂಗಳೂರು ಗ್ರಾಮಾಂತರ: ರಾಜ್ಯದ ಪ್ರಮುಖ ಸಂಪರ್ಕ ಮಾರ್ಗಗಳಲ್ಲಿ ಒಂದಾಗಿರುವ 84 ಕಿ.ಮೀ. ಉದ್ದದ ದಾಬಸ್ಪೇಟೆ–ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ-648ರಲ್ಲಿ ಸಾರ್ವಜನಿಕರ ಸುರಕ್ಷಿತ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (ಎಸ್ಐಆರ್) ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದ್ದು, ಜಿಲ್ಲೆಯಾದ್ಯಂತ ಒಟ್ಟು 15,721 ಮೃತರ…