Categories: ಲೇಖನ

ಕಳೆದ 15 ತಿಂಗಳುಗಳಲ್ಲಿ ಸುಮಾರು 1182 ರೈತರ ಆತ್ಮಹತ್ಯೆ: ಅಂಬಾನಿ ಮಗನ ಭರ್ಜರಿ ಮದುವೆ ಒಂದು ದೊಡ್ಡ ಸುದ್ದಿಯಾಗುತ್ತದೆ.‌. ಆದರೆ, ರೈತರ ಆತ್ಮಹತ್ಯೆ ನಿರ್ಲಕ್ಷ್ಯಕ್ಕೊಳಗಾಗುತ್ತಿದೆ….!

” ಭಾರತ ಯುರೋಪಿನಂತೆ ನಗರ ಸಂಸ್ಕೃತಿಯಲ್ಲ. ಗ್ರಾಮೀಣ ಸಂಸ್ಕೃತಿ. ಹಾಗಾಗಿ ಇಲ್ಲಿನ ಯಾವುದೇ ಅಭಿವೃದ್ಧಿ ಕಲ್ಪನೆ ಹಳ್ಳಿಗಳ ಹಿತವನ್ನು ಮರೆತರೆ ಈ ನಾಗರಿಕತೆಯು ಅವನತಿಯ ಹಾದಿ ಹಿಡಿಯುತ್ತದೆ “……ಮಹಾತ್ಮ ಗಾಂಧಿ,

” ನಿರ್ಧಾಕ್ಷಿಣ್ಯವಾದ ವಿಚಾರ ವಿಮರ್ಶೆಯೇ ಸಾರ್ವಜನಿಕರು ದೇಶಕ್ಕೆ ಸಲ್ಲಿಸಬಹುದಾದ ಸರ್ವೋತ್ತಮ ಸೇವೆ “….. ಡಿವಿಜಿ,

” ಭಾರತೀಯರು ಭಾರತೀಯರನ್ನೇ ನಂಬಲಾರದ ಜನ. ಸಾರ್ವಜನಿಕ ಜೀವನದಲ್ಲಿ ಪರಸ್ಪರ ಸಹಕರಿಸುವುದೇ ಇಲ್ಲ. ಅವರಲ್ಲಿ ಏನಾದರೂ ಜಾಣತನವಿದ್ದರೆ ಅದನ್ನು ಇತರರಿಗೆ ಮೋಸ ಮಾಡಲು ಮಾತ್ರ ಬಳಸುತ್ತಾರೆ. ಸಾರ್ವಜನಿಕ ನೈತಿಕತೆಯ ಕಲ್ಪನೆಯೇ ಇಲ್ಲದ ಈ ಜನಕ್ಕೆ ಸತ್ಯ ಅಥವಾ ಪ್ರಾಮಾಣಿಕತೆ ಎಂದರೆ ಏನೆಂಬುದೇ ಗೊತ್ತಿಲ್ಲ” …….
ಲಾರ್ಡ್ ಕರ್ಜನ್ ( 1899 ),

” ಇಂದು ನಮ್ಮೆದುರಿಗಿರುವ ಯಾವುದೇ ಅಸಾಮಾನ್ಯನು ಪ್ರಾರಂಭದಲ್ಲಿ ನಮ್ಮಂತೆಯೇ ಸಾಮಾನ್ಯನೇ. ಸತತ ಪರಿಶ್ರಮ ಆಸಕ್ತಿಗಳೇ ಪರಿವರ್ತನೆಗೆ ಕಾರಣ “……
ಚಿನ್ಮಯ ಮಿಷನ್,

” ಟೀಕೆಗಳು ಅಳಿಯುತ್ತವೆ ಕೆಲಸಗಳು ಉಳಿಯುತ್ತವೆ “….. ಕುವೆಂಪು,

ಈ ಮಾತುಗಳೊಂದಿಗೆ, ಭಾವನೆಗಳ ಬೆಸುಗೆಯ ಪ್ರಯಾಣದಲ್ಲಿ ನಮ್ಮ ರೈತರು ನೆನಪಾದಾಗ……..

ಮಾಧ್ಯಮಗಳ ಅಂಬಾನಿ ಮದುವೆಯ ವಿಜೃಂಭಣೆಯಲ್ಲಿ ಸಮಾಧಿಯಾದ ಆತ್ಮಹತ್ಯೆ ಮಾಡಿಕೊಂಡ ರೈತರ ದೇಹಗಳು……

ಕಳೆದ 15 ತಿಂಗಳುಗಳಲ್ಲಿ ಸುಮಾರು 1182 ರೈತರ ಆತ್ಮಹತ್ಯೆ ಪ್ರಕರಣಗಳು ಸರ್ಕಾರದ ಮಟ್ಟದಲ್ಲಿ ದಾಖಲಾಗಿವೆ. ಇದು ಅಧಿಕೃತ ಅಂಕಿಅಂಶಗಳು. ಗಮನಕ್ಕೆ ಬಾರದ, ಪರೋಕ್ಷ ಒತ್ತಡಕ್ಕೆ ಒಳಗಾದ, ಮಾನಸಿಕ ಖಿನ್ನತೆಗೆ ಬಲಿಯಾದ, ಇನ್ನೂ ಸಾಯದೆ ಆದರೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿರುವ ಬಹಳಷ್ಟು ರೈತ ಕುಟುಂಬಗಳು ನಮ್ಮ ನಡುವೆ ಇದೆ. ಆದರೆ ನಮ್ಮ ಇಡೀ ಆಡಳಿತ ವ್ಯವಸ್ಥೆ, ಮಾಧ್ಯಮಗಳು, ಸಾರ್ವಜನಿಕ ಹೋರಾಟಗಳು, ಧಾರ್ಮಿಕ ನಾಯಕರುಗಳು ಇದನ್ನು ಹೊರತುಪಡಿಸಿದ ಬೇರೆ ಬೇರೆ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದು ಒಂದು ಪ್ರಮುಖ ಚರ್ಚೆಯ ವಿಷಯವಾಗಲೇ ಇಲ್ಲ……

ಇನ್ನೇನು ಕರ್ನಾಟಕದ ವಿಧಾನಸಭಾ ಅಧಿವೇಶನ ಪ್ರಾರಂಭವಾಗಲಿದೆ. ಅದರಲ್ಲಿ ಕೂಡ ಚರ್ಚಿಸಲು ಈಗಾಗಲೇ ಸಾಕಷ್ಟು ಭ್ರಷ್ಟಾಚಾರದ, ಕೊಲೆಗಳ ಕ್ರಿಮಿನಲ್ ವಿಷಯಗಳು ಆಧ್ಯತೆಯಾಗುವುದು, ಪ್ರತಿಭಟನೆ, ಸಭಾತ್ಯಾಗ, ಬಹಿಷ್ಕಾರ ಮಾಡುವುದು ಬಹುತೇಕ ಖಚಿತ. ಮತ್ತೆ ರೈತರು ಈ ದೇಶದ ಬೆನ್ನೆಲುಬು, ರೈತರೇ ಅನ್ನದಾತರು, ರೈತರೇ ನಮ್ಮ ಸರ್ವಸ್ವ ಎನ್ನುವ ಮಾತುಗಳು ಯಾರಿಗಾಗಿ. ಪ್ರತಿನಿತ್ಯ ಕನಿಷ್ಠ ಮೂರು ಹೊತ್ತು ಭಕ್ಷ್ಯ ಭೋಜನಗಳನ್ನು ಸವಿಯುವ ಮನುಷ್ಯ ಪ್ರಾಣಿ ತನಗೆ ಆಹಾರ ನೀಡುವ ಮೂಲವಾದ ಕೃಷಿ ಮತ್ತು ರೈತರ ಬಗ್ಗೆ ಸ್ವಲ್ಪವಾದರೂ ಯೋಚಿಸಬೇಕಲ್ಲವೇ. ಮುಖ್ಯವಾಗಿ ಶಾಸಕಾಂಗ ಮತ್ತು ಕಾರ್ಯಾಂಗ ಈ ನಿಟ್ಟಿನಲ್ಲಿ ಎಷ್ಟೊಂದು ಕೆಲಸ ಮಾಡಬೇಕು. ರೈತರ ಋಣ ತೀರಿಸಲು ಒಂದು ಜನ್ಮವೂ ಸಾಕಾಗುವುದಿಲ್ಲ…..

ಆದರೆ ಮಾಡುತ್ತಿರುವುದಾದರೂ ಏನು. ಹಿಂದಿನ ವರ್ಷ ಬರಪೀಡಿತ. ಈಗ ಒಂದಷ್ಟು ಒಳ್ಳೆಯ ಮಳೆಯಾಗುತ್ತಿದೆ. ಕೆಲವಡೆ ಅತಿವೃಷ್ಟಿಯೂ ಆಗಬಹುದು. ಕರ್ನಾಟಕ ಪ್ರಾಕೃತಿಕವಾಗಿ ಅತ್ಯುತ್ತಮ ಗುಣಮಟ್ಟದ ಸಂಪನ್ಮೂಲಗಳ ಉತ್ಕೃಷ್ಟ ಮಣ್ಣಿನ ಪ್ರದೇಶ. ಅದರಲ್ಲೂ ಶೇಕಡಾ ಸುಮಾರು 50/60% ಗೂ ಹೆಚ್ಚು ಭೂಪ್ರದೇಶ ಕೃಷಿಗೆ ಅತ್ಯಂತ ಯೋಗ್ಯವಾಗಿದೆ. ಇಲ್ಲಿನ ಅಕ್ಷರಸ್ಥರ ಸಂಖ್ಯೆ ಸಹ ಶೇಕಡಾ 80 ರಿಂದ 90% ರವರೆಗೆ ಇದೆ. ಈ ರಾಜ್ಯದ ಬಜೆಟ್ ಸರಿಸುಮಾರು 4 ಲಕ್ಷ ಕೋಟಿಗಳ ಸಮೀಪದಲ್ಲಿದೆ. ಇಲ್ಲಿನ ಜನಸಂಖ್ಯೆ ಸುಮಾರು 7 ಕೋಟಿ. ಇಷ್ಟು ದೊಡ್ಡ ಪ್ರಾಕೃತಿಕ ಪ್ರದೇಶ, ಸಂಪನ್ಮೂಲ, ಹಣಕಾಸು ಮತ್ತು ಆಡಳಿತ ವ್ಯವಸ್ಥೆಯನ್ನು ಗಮನಿಸಿದಾಗ ಅದನ್ನು ಈ ಏಳು ಕೋಟಿ ಜನರಲ್ಲಿ ಹಂಚುತ್ತಾ ನಿಭಾಯಿಸುವುದು ದೊಡ್ಡ ಕಷ್ಟವೇನು ಅಲ್ಲ…..

ಒಂದಷ್ಟು ಸವಾಲುಗಳಿರಬಹುದು. ಆದರೆ ನಿರ್ವಹಣೆ ಪ್ರಾಮಾಣಿಕವಾಗಿದ್ದಲ್ಲಿ ನಮ್ಮೆಲ್ಲರ ಜೀವನಮಟ್ಟ ಇದಕ್ಕಿಂತ ಉತ್ತಮವಾಗಿರುತ್ತದೆ. ದುರಂತವೆಂದರೆ ಹಂಚಿಕೆಯ ಮುಖ್ಯಸ್ಥಾನದಲ್ಲಿರುವ ವ್ಯಕ್ತಿಗಳೇ ದುರಾಸೆ, ದುಷ್ಟತನದ ಪರಮಾವಧಿ ತಲುಪಿದ್ದಾರೆ. ರಾಜಕೀಯ, ಚುನಾವಣೆಗಳು, ಭ್ರಷ್ಟಾಚಾರ, ವಿವಿಧ ತನಿಖೆಗಳು ಹೀಗೆ ಹೇಗೋ ದಿನಗಳು ಉರುಳುತ್ತಿವೆ. ಇವರನ್ನು ಬಿಟ್ಟರೆ ಅವರು, ಅವರನ್ನು ಬಿಟ್ಟರೆ ಇವರು ಅಧಿಕಾರ ಚಲಾಯಿಸುತ್ತಾ ತಮ್ಮ ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು, ಮರಿ ಮಕ್ಕಳು ಹೀಗೆ ಅವರುಗಳನ್ನೇ ಬಳಸುತ್ತಾ, ತಮ್ಮ ವಂಶಾಭಿವೃದ್ಧಿ ಮಾಡುತ್ತಾ, ಸುಖ ಭೋಗದ ಜೀವನ ಮಾಡುತ್ತಿದ್ದಾರೆ…..

ಸಾಮಾನ್ಯ ಜನರು ಮಾತ್ರ ಶಾಲಾ ಫೀಸು ಕಟ್ಟಲು ಒದ್ದಾಡುತ್ತಾ,
ಉತ್ತಮ ಆರೋಗ್ಯ ಕಾಪಾಡಿಕೊಳ್ಳದೆ, ಸದಾ ಕಾಲ ಗೊಣಗುತ್ತಾ, ನಿರಾಸೆ ಅನುಭವಿಸುತ್ತಾ, ಏಕಾಂಗಿಯಾಗಿ ಅಳುತ್ತಾ, ಎಲ್ಲೋ ಒಮ್ಮೆ ಆಕ್ರೋಶ ವ್ಯಕ್ತಪಡಿಸುತ್ತಾ, ಟಿವಿ, ಸಿನಿಮಾ ಎಂಬ ಮನರಂಜನಾ ಮಾಧ್ಯಮಗಳನ್ನು ವೀಕ್ಷಿಸುತ್ತಾ ಬದುಕನ್ನು ಸಾಗಿಸುತ್ತಿದ್ದಾರೆ….

ಇದಕ್ಕಿಂತ ಉತ್ತಮ ಬದುಕು ಸಾಧ್ಯವಾಗಿಸುವ ಎಲ್ಲ ಸಾಧ್ಯತೆಗಳಿದ್ದರೂ, ಕೆಲವೇ ಕೆಲವು ಜನಪ್ರತಿನಿಧಿಗಳು, ಅಧಿಕಾರಿಗಳು ತಮ್ಮ ಸ್ವಾರ್ಥಕ್ಕಾಗಿ ನಮ್ಮನ್ನೆಲ್ಲ ಬಲಿಕೊಡುತ್ತಿದ್ದಾರೆ. ನಮ್ಮದೇ ಹಣದಲ್ಲಿ ಅವರ ಬದುಕನ್ನು ನಿಭಾಯಿಸುತ್ತಾ, ನಮ್ಮ ಬದುಕುಗಳನ್ನು ಅಸಹನೀಯಗೊಳಿಸಿದ್ದಾರೆ. ಕೇವಲ ಆರ್ಥಿಕ ಸಂಪನ್ಮೂಲಗಳಿಗೆ ಮಾತ್ರವಲ್ಲ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳನ್ನು ಕೂಡ ಮಲಿನಗೊಳಿಸಿದ್ದಾರೆ. ಗಾಳಿ, ನೀರು, ಆಹಾರಗಳನ್ನು ವಿಷಮಯಗೊಳಿಸಿದ್ದಾರೆ. ಎಚ್ಚೆತ್ತುಕೊಳ್ಳಬೇಕಾದ ನಾವು ನಿರ್ವೀರ್ಯರಾಗುತ್ತಿದ್ದೇವೆ. ಅಂಬಾನಿಯ ಭರ್ಜರಿ ಮದುವೆ ಒಂದು ದೊಡ್ಡ ಸುದ್ದಿಯಾಗುತ್ತದೆ. ರೈತರ ಆತ್ಮಹತ್ಯೆ ನಿರ್ಲಕ್ಷ್ಯಕ್ಕೊಳಗಾಗುತ್ತದೆ…….

ಹಾಗಾದರೆ ರೈತರ ಸಮಸ್ಯೆಗಳಿಗೆ ಪರಿಹಾರ ಇಲ್ಲವೇ. ಖಂಡಿತವಾಗಿಯೂ ಹೃದಯವಂತ, ಮಾನವೀಯ ಕಾಳಜಿಯ, ದಕ್ಷ, ಪ್ರಾಮಾಣಿಕ ಕೃಷಿ ಮಂತ್ರಿ, ಮುಖ್ಯಮಂತ್ರಿ ಪ್ರಧಾನಮಂತ್ರಿ, ಮುಖ್ಯ ಸರ್ಕಾರಿ ಕಾರ್ಯದರ್ಶಿಗಳು ಈ ದೇಶದ, ನಮ್ಮ ಅನ್ನದಾತರ ಋಣ ತೀರಿಸಬೇಕೆಂದು ಈ ಕಷ್ಟ ಪರಿಹರಿಸಬೇಕೆಂದು ಮನಸ್ಸು ಮಾಡಿದ್ದೇ ಆದರೆ, ಈ ಎಲ್ಲಾ ವ್ಯಾಪಾರಿ ಮನೋಭಾವವನ್ನು ಬದಿಗಿಟ್ಟರೆ ಇದು ಸಾಧ್ಯ…..

ರೈತರ ಬಗ್ಗೆ ಈಗಾಗಲೇ ಸಾಕಷ್ಟು ಅಧ್ಯಯನದ ವರದಿಗಳು, ಪರಿಹಾರ ಸೂತ್ರಗಳು, ಇನ್ನೊಂದಷ್ಟು ಮಾರುಕಟ್ಟೆ ವ್ಯವಸ್ಥೆಗಳು, ತಂತ್ರಜ್ಞಾನ ಎಲ್ಲವೂ ನಮ್ಮ ನಡುವೆ ಸಿದ್ಧವಾಗಿದೆ. ಅದನ್ನು ಅನುಷ್ಠಾನಗೊಳಿಸುವ ಕ್ರಮಬದ್ಧತೆ ಹಾಗೂ ಇಚ್ಛಾಶಕ್ತಿಯ ಅವಶ್ಯಕತೆ ಮಾತ್ರ ಇದೆ. ಅದನ್ನು ಮಾಡುವವರು ಯಾರು ಎಂಬ ಹಾಗೆಯೇ ಉಳಿಯುವ ಪ್ರಶ್ನೆಯೊಂದಿಗೆ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

2025–26 ಹಣಕಾಸು ವರ್ಷದಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದ ದಾಖಲೆ ಬೆಳವಣಿಗೆ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2025–26ನೇ ಹಣಕಾಸು ವರ್ಷದಲ್ಲಿ ಪ್ರಯಾಣಿಕರ ಸಂಚಾರ ಮತ್ತು ಸರಕು ಸಾಗಣೆ ಎರಡೂ ವಿಭಾಗಗಳಲ್ಲಿ…

22 minutes ago

ರೌಡಿಯಿಸಂ, ಗೂಂಡಾಗಿರಿ, ದೌರ್ಜನ್ಯದಿಂದ ಏನೂ ಪ್ರಯೋಜನವಿಲ್ಲ- ಕಾನೂನು ಬಾಹಿರ ಚಟುವಟಿಕೆ ಸಂಪೂರ್ಣವಾಗಿ ತ್ಯಜಿಸಬೇಕು- ಪೊಲೀಸ್ ಮೇಷ್ಟ್ರಿಂದ ರೌಡಿಗಳಿಗೆ ಕಾನೂನು ಪಾಠ: ಮಿಟ್ಟೆ ಗ್ಯಾಂಗ್ ಗೆ ವಿಶೇಷ ವಾರ್ನಿಂಗ್

ರೌಡಿಯಿಸಂ, ಗೂಂಡಾಗಿರಿ, ದೌರ್ಜನ್ಯದಿಂದ ಏನೂ ಪ್ರಯೋಜನವಿಲ್ಲ. ನೆಮ್ಮದಿ ಕಳೆದುಕೊಂಡು, ಕುಟಂಬದಿಂದ ದೂರಾವಾಗಿ ಭಯಭೀತಿಯಲ್ಲಿ ಜೀವನ ಮಾಡಬೇಕಷ್ಟೇ. ಹೀಗಾಗಿ ಅಕ್ರಮ, ಅನೈತಿಕ,…

13 hours ago

ಮದುವೆ ಸಂಭ್ರಮದ ನಡುವೆ ಬೈಕ್ ಗೆ ಬೆಂಕಿ ಇಟ್ಟ ಕಿಡಿಗೇಡಿಗಳು

ಚಿಕ್ಕಬಳ್ಳಾಪುರ: ಜಿಲ್ಲೆಯ ತಾಲೂಕಿನ ಅರಸನಹಳ್ಳಿಯಲ್ಲಿ ತಡರಾತ್ರಿ ಭೀಕರ ಘಟನೆಯೊಂದು ನಡೆದಿದೆ. ಮದುವೆ ಕಾರ್ಯಕ್ರಮವಿದ್ದ ಮನೆಯ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಕಿಡಿಗೇಡಿಗಳು…

23 hours ago

ಶನೇಶ್ವರ ಜಯಂತಿ ಹಾಗೂ ಅಮಾವಾಸ್ಯೆ ಹಿನ್ನೆಲೆ: ಮಧುರೆ ಶನೇಶ್ವರ ದೇವಸ್ಥಾನದಲ್ಲಿ ಅಪಾರ ಭಕ್ತಸಾಗರ

ಶನೇಶ್ವರ ಜಯಂತಿ ಹಾಗೂ ಅಮಾವಾಸ್ಯೆ ಒಂದೇ ದಿನ ಬಂದಿರುವ ಹಿನ್ನೆಲೆ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಶನೇಶ್ವರ ದೇವಸ್ಥಾನದಲ್ಲಿ ಅಪಾರ ಭಕ್ತಸಾಗರ…

23 hours ago

ಮೆಜೆಸ್ಟಿಕ್‌ನಿಂದ ಘಾಟಿ ಸುಬ್ರಮಣ್ಯಕ್ಕೆ ಬಿಎಂಟಿಸಿ ಹೊಸದಾಗಿ ನೇರ ಬಸ್‌ ಸೇವೆ ಆರಂಭ

ಬೆಂಗಳೂರು: ಬೆಂಗಳೂರು‌ ನಗರ ಹಾಗೂ ಗ್ರಾಮಾಂತರ ಭಾಗಗಳಿಗೆ ಪ್ರಯಾಣಿಸುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಿಎಂಟಿಸಿ(Bangalore Metropolitan Transport Corporation) ಮೇ 18ರಿಂದ…

1 day ago

ಅರಣ್ಯದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸಿ ಮಾನವೀಯತೆ ಮೆರೆದ ಇನ್ಸ್‌ಪೆಕ್ಟರ್ ಅಮರೇಶ್ ಗೌಡ

ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.…

1 day ago