Categories: ಲೇಖನ

ಕದನ ವಿರಾಮ…., ಕೊನೆಗೆ ಗೆಲ್ಲುವುದು ಹಿಂಸೆಯಲ್ಲ ಅಹಿಂಸೆ

ಕದನ ವಿರಾಮ……

ಯುದ್ಧ ವಿರಾಮ ಘೋಷಣೆಯಾಗಿದೆ. ಸಾವಿರಾರು ಜನರ ಹತ್ಯೆಗಳ ನಂತರ,
ಅಪಾರ ಪ್ರಮಾಣದ ಭೂಪ್ರದೇಶ, ನೈಸರ್ಗಿಕ ಸಂಪನ್ಮೂಲಗಳು, ತೈಲ ಘಟಕಗಳು ಮತ್ತು ಪರಿಸರವನ್ನು ನಾಶ ಮಾಡಿದ ನಂತರ,
ಅತ್ಯಂತ ಉಪಯುಕ್ತ ಕಟ್ಟಡಗಳು, ಆಸ್ಪತ್ರೆ, ಶಾಲೆಗಳು ನಾಶವಾದ ನಂತರ,

ಈ ಕದನ ವಿರಾಮ
ಸತ್ತವರನ್ನು ಮರಳಿ ತರುವುದೇ‌ ?,
ಸತ್ತವರಿಗೆ ನ್ಯಾಯ ಕೊಡಿಸುವುದೇ ?
ಅಪಾರ ಪರಿಸರ ನಾಶಕ್ಕೆ ಹೊಣೆ ಯಾರು ?…..

ಅರ್ಥ ಮಾಡಿಕೊಳ್ಳಿ,
ಕೊನೆಗೂ ಗೆಲ್ಲುವುದು ಹಿಂಸೆಯಲ್ಲ ಅಹಿಂಸೆ,
ಕೊನೆಗೂ ಗೆಲ್ಲುವುದು ಸಂಧಾನವೇ ಹೊರತು ಸಂಘರ್ಷವಲ್ಲ,
ಕೊನೆಗೂ ಗೆಲ್ಲುವುದು ಪ್ರೀತಿಯೇ ಹೊರತು ದ್ವೇಷವಲ್ಲ….

ಸೇಡಿಗಿಂತ ಸಂಧಾನ ಅತ್ಯುತ್ತಮ,
ಸೇಡು ಶಾಪ, ಸಂಧಾನ ವರ….

ಕದನ ವಿರಾಮವೆಂಬ ಅಜ್ಞಾನದ ನಾಟಕ…..

ಸಾವಿರಾರು ಜನ ಸತ್ತು,
ನೂರಾರು ಮಕ್ಕಳು, ಮಹಿಳೆಯರು ಗಾಯಗೊಂಡು, ಅನೇಕರು ಅನಾಥರಾದ ನಂತರ ಅಮೇರಿಕಾ, ಇಸ್ರೇಲ್ ಮತ್ತು ಇರಾನ್ ನಡುವೆ ಹದಿನೈದು ದಿನಗಳ ಕದನ ವಿರಾಮ ಘೋಷಣೆಯಾಗಿದೆ. ಆ ನಂತರ ಯುದ್ಧ ಮುಂದುವರಿಯುತ್ತದೆ ಅಥವಾ ಇನ್ನೊಂದಿಷ್ಟು ದಿನ ಕದನ ವಿರಾಮ ಜಾರಿಯಲ್ಲಿರಬಹುದು.

ಇದೇ ಕೆಲಸವನ್ನು ಮೊದಲೇ ಮಾಡಿದ್ದರೆ ಸಾವಿರಾರು ಜನರ ಜೀವ ಉಳಿಯುತ್ತಿತ್ತಲ್ಲವೇ. ಮೂರೂ ದೇಶಗಳು ಇದರಿಂದ ಮಾಡಿದ ಸಾಧನೆಯಾದರು ಏನು. ಯುದ್ಧದಿಂದ ಎಲ್ಲಾ ಕಡೆ ಸಾವು ನೋವುಗಳೇ ಎಂಬುದು ತಿಳಿದಿಲ್ಲವೇ. ಮತ್ತೆ ಯುದ್ಧ ಮಾಡಿ, ಮುಂದೆ ಯಾವುದೋ ಒಂದು ದಿನ, ಯಾವುದೋ ಹಂತದಲ್ಲಿ ಒಪ್ಪಂದ ಮಾಡಿಕೊಂಡು ಯುದ್ಧ ನಿಲ್ಲುವುದು ಖಚಿತ. ಆದರೆ ಅದು ಮಾಡಬಹುದಾದ ಘೋರ ದುರಂತವನ್ನು ಮರಳಿ ಸರಿಪಡಿಸುವುದು ಸಾಧ್ಯವೇ…..

ಇದೇ ಪ್ರಶ್ನೆ ರಷ್ಯಾ, ಉಕ್ರೇನ್ ಯುದ್ಧದ ಬಗ್ಗೆಯೂ ಏಳುತ್ತದೆ. ನಾಶದ ನಂತರ ಶರಣಾಗುವುದಕ್ಕಿಂತ ಮೊದಲೇ ಇದನ್ನು ಗ್ರಹಿಸಿ ಸ್ವಲ್ಪ ಹೊಂದಾಣಿಕೆಯ ಒಪ್ಪಂದ ಮಾಡಿಕೊಳ್ಳಬಹುದಲ್ಲವೇ……

ಅನೇಕ ಸೈನಿಕರು, ಅಮಾಯಕರು ಯುದ್ಧದ ದಾಳಿಗೆ ಬಲಿಯಾಗಿರುವ ಈ ಸಂದರ್ಭದಲ್ಲಿ ಮನಸ್ಸು ಮತ್ತೆ ಮತ್ತೆ ಹುತಾತ್ಮ ಭಾವನೆಗಿಂತ ಜೀವ ಉಳಿಸದೆ ಕೆಲವು ರಾಜಕಾರಣಿಗಳು ಮತ್ತು ಧರ್ಮದವರು ತಮ್ಮ ತೆವಲಿಗಾಗಿ ಅಮಾಯಕ ಜನರನ್ನು ಬಲಿಕೊಡುತ್ತಿರುವ ವ್ಯವಸ್ಥೆಯ ಬಗ್ಗೆ ಜಿಗುಪ್ಸೆ ಮೂಡುತ್ತದೆ…..

ಹಿಂಸೆಯ ಫಲಿತಾಂಶಗಳು ಮತ್ತೊಂದು ಹಿಂಸೆಗೆ ಬಿತ್ತುವ ಬೀಜ ಎಂದು ಖಚಿತವಾಗಿರುವಾಗಲೂ ಮತ್ತೆ ಮತ್ತೆ ಹಿಂಸೆಯಿಂದಲೇ ಪರಿಹಾರ ಹುಡುಕುವ ಹುಚ್ಚು ಮನಸ್ಸಿನ ಮನುಷ್ಯರ ಬಗ್ಗೆಯೇ ಕೋಪ ಬರುತ್ತದೆ. ಬದುಕಲು ಬಾರದ ಮನುಷ್ಯರು ಎಂದೇ ಕರೆಯಬೇಕಾಗುತ್ತದೆ. ರಾಜಕಾರಣಿಗಳೇನೋ ಅಧಿಕಾರಕ್ಕಾಗಿ ಹೋರಾಟ ಮಾಡುತ್ತಾರೆ. ಅವರೇನು ಯುದ್ಧ ಭೂಮಿಯಲ್ಲಿ ಹೋರಾಡುವುದಿಲ್ಲ. ಇವರ ರಕ್ಷಣೆಗಾಗಿ ಸೈನಿಕರು ಮತ್ತು ಸಾಮಾನ್ಯ ಜನರು ಜೀವ ತ್ಯಾಗ ಮಾಡಬೇಕು. ಇದು ಯಾವ ನ್ಯಾಯ……….

ಸಂಧಾನ ಸೂತ್ರಗಳು ಯಾವಾಗಲೂ ಇದ್ದೇ ಇರುತ್ತದೆ. ‌ಆದರೆ ಅದನ್ನು ಗ್ರಹಿಸುವ ಮತ್ತು ಅನುಷ್ಠಾನ ಗೊಳಿಸುವ ವಿಶಾಲ ಮನೋಭಾವ ಮತ್ತು ಒಳ್ಳೆಯತನ ಮಾತ್ರ ಕಾಣೆಯಾಗಿದೆ. ಅದರ ಪರಿಣಾಮವೇ ಬಹುತೇಕ ಈ ಜಗತ್ತಿನಲ್ಲಿ ಶಾಂತಿಗಿಂತ ಹಿಂಸೆಯ ಪ್ರಮಾಣ ಜಾಸ್ತಿಯಾಗಿದೆ……

ಹೊಡೆತ ಬೀಳುವವರೆಗೆ ತಾನು ಸೂಪರ್ ಮ್ಯಾನ್ ಎಂಬಂತೆ ವರ್ತಿಸುವ ಮನುಷ್ಯರು ಮತ್ತು ಅವರ ನಿಯಂತ್ರಣದ ದೇಶಗಳು ಒಮ್ಮೆ ಬಲವಾದ ಹೊಡೆತ ಬಿದ್ದರೆ ನರಳುತ್ತಾ ಶರಣಾಗುತ್ತಾರೆ. ಅದೂ ಸಹ ತಾತ್ಕಾಲಿಕ. ಒಳಗೊಳಗೆ ದ್ವೇಷ ಅಸೂಯೆ ಹೊಗೆಯಾಡುತ್ತಲೇ ಇರುತ್ತದೆ. ಮತ್ತೆ ಕೆಲವು ಸಮಯದ ನಂತರ ಹಿಂಸೆಗೆ ಇಳಿಯುತ್ತಾರೆ. ಇಡೀ ಮಾನವ ಇತಿಹಾಸ ಇಂತಹ ಮನಸ್ಥಿತಿಯಿಂದಲೇ ತುಂಬಿದೆ…..

ಶಾಂತಿ ಎಂಬುದು ವಿನಾಶದ ಸಿದ್ದತೆ ಎಂಬಂತಾಗಿದೆ. ಬದುಕು ಎಂಬುದು ಸಾವಿಗೆ ಸಿದ್ದತೆ ಎಂಬಂತೆ. ಒಟ್ಟಿನಲ್ಲಿ ಇದೇ ವಿಶ್ವದ ಸ್ವಾಭಾವಿಕ ಗುಣವಾಗಿರಬಹುದು. ಅದನ್ನು ಅನುಭವಿಸುತ್ತಲೇ ಬದುಕುವುದು ಅನಿವಾರ್ಯವೇ ಅಥವಾ ಅಹಿಂಸೆಯ ಪರ್ಯಾಯ ಮಾರ್ಗಗಳ ಹುಡುಕಾಟ ಸಾಧ್ಯವೇ…..

ಏಕೆಂದರೆ, ದಿನ ನಿತ್ಯ ಈ ರೀತಿ ತಮ್ಮ ದೇಶಗಳಿಗಾಗಿ ಪ್ರಾಣತ್ಯಾಗ ಮಾಡುತ್ತಿರುವ ಅನೇಕ ಯುವಕರ ಜೀವಗಳನ್ನು ಉಳಿಸಲು ಸಾಧ್ಯವಾಗದ ಈ ಜಗತ್ತಿನ ಎಲ್ಲಾ ದೇವರು, ಧರ್ಮಗಳು, ಸರ್ಕಾರಗಳಿಗೆ ದಯವಿಟ್ಟು ಮನುಷ್ಯ ಜೀವಿಗಳ ಬದುಕುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕಾಪಾಡಿ, ಮನುಷ್ಯ ಪ್ರಾಣಿಯ ಘನತೆಯನ್ನು ರಕ್ಷಿಸಿ, ಉಳಿಸಿ ಎಂದು ಮನವಿ ಮಾಡಿಕೊಳ್ಳುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಬೆಂಗಳೂರು ಗ್ರಾಮಾಂತರದ ಇಬ್ಬರು ಶಿಕ್ಷಕರು ಆಯ್ಕೆ

ದೇವನಹಳ್ಳಿ: ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2026–27ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ…

8 hours ago

ಮೇಕೆದಾಟು ಯೋಜನೆ ಶೀಘ್ರ ಜಾರಿಗೆ ಸಚಿವರ ದೃಢ ಸಂಕಲ್ಪ: ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ

ಮೇಕೆದಾಟು ಯೋಜನೆಯ ಶೀಘ್ರ ಜಾರಿಗಾಗಿ ಜಲಸಂಪನ್ಮೂಲ ಸಚಿವರು ತೀವ್ರ ಒಲವು ತೋರಿದ್ದು, ಕಾಮಗಾರಿಗೆ ಇನ್ನಷ್ಟು ವೇಗ ನೀಡುವ ನಿಟ್ಟಿನಲ್ಲಿ ರಾಜ್ಯದ…

9 hours ago

ಶ್ರೀರಂಗವನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

ತೂಬಗೆರೆ: ಹೋಬಳಿಯ ಯದ್ದಲಹಳ್ಳಿ ಸಮೀಪದ ಶ್ರೀರಂಗವನದಲ್ಲಿರುವ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ ಹಾಗೂ…

9 hours ago

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2026: ಹಕ್ಕು,ಆಕ್ಷೇಪಣೆ ಸಲ್ಲಿಕೆಗೆ ಸೆ. 23 ವರೆಗೆ ಅವಕಾಶ-ಡಿಸಿ ಅನುರಾಧ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಕರಡು ಮತದಾರ ಪಟ್ಟಿ ಪ್ರಕಟಗೊಂಡಿದ್ದು ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ಮತದಾರರು ಮತಗಟ್ಟೆ…

11 hours ago

ರೈಲು ಡಿಕ್ಕಿಗೆ ಅಪರಿಚಿತ ವ್ಯಕ್ತಿ ಬಲಿ

ದೊಡ್ಡಬಳ್ಳಾಪುರ: ರೈಲಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಸಮೀಪ…

14 hours ago

ಮಳೆ ಕೊರತೆ ನೀಗಿಸಲು ಸರ್ಕಾರದ ಮಾಸ್ಟರ್ ಪ್ಲ್ಯಾನ್: ಎಚ್.ಎ.ಎಲ್‌ನಲ್ಲಿ ಮೋಡ ಬಿತ್ತನೆಗೆ ಜಲ ಸಂಪನ್ಮೂಲ ಸಚಿವರಿಂದ ಚಾಲನೆ

ರಾಜ್ಯದಲ್ಲಿ ಎದುರಾಗಿರುವ ಮಳೆ‌ ಕೊರತೆ ಹಾಗೂ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 'ಮೋಡ…

15 hours ago