Revenue inspector: ಸಂಬಂಧಿಕರಿಗಾಗಿ ತೂಬಗೆರೆ ರೆವಿನ್ಯೂ ಇನ್ಸ್‌ಪೆಕ್ಟರ್ ಅಧಿಕಾರ ದುರುಪಯೋಗ ಆರೋಪ: ರೆವಿನ್ಯೂ ಇನ್ಸ್‌ಪೆಕ್ಟರ್ ಲಕ್ಷಮ್ಮರನ್ನ ತೂಬಗೆರೆ ಉಪ ತಹಶೀಲ್ದಾರ್ ಕಚೇರಿಯಿಂದ ಬಿಡುಗಡೆ ಮಾಡುವಂತೆ ರೈತರ ಒತ್ತಾಯ

ದೊಡ್ಡಬಳ್ಳಾಪುರ: ತೂಬಗೆರೆ ರೆವಿನ್ಯೂ ಇನ್ಸ್‌ಪೆಕ್ಟರ್ ಲಕ್ಷ್ಮಮ್ಮನವರು ಸಂಬಂಧಿಕರಿಗಾಗಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ, ಹಣ ಇಲ್ಲದೆ ರೈತರ ಕೆಲಸ ಮಾಡಿಕೊಡುತ್ತಿಲ್ಲವೆಂದು ಗ್ರಾಮಸ್ಥರು ಆರೋಪ ಮಾಡಿದ್ದು, ತೂಬಗೆರೆ ರೆವಿನ್ಯೂ ಇನ್ಸ್‌ಪೆಕ್ಟರ್ ಹುದ್ದೆಯಿಂದ ಲಕ್ಷ್ಮಮ್ಮರನ್ನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸ್ಥಳೀಯ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯ ರೆವಿನ್ಯೂ ಇನ್ಸ್‌ಪೆಕ್ಟರ್ (ರಾಜಸ್ವ ನಿರೀಕ್ಷಕರು) ಆಗಿ ಲಕ್ಷ್ಮಮ್ಮ.ಆರ್ ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ, ಅವರ ನಾಲ್ಕು ವರ್ಷಗಳ ಅವಧಿ ಭ್ರಷ್ಟಾಚಾರದಿಂದ ಕೂಡಿದೆ ಎಂಬುದು ರೈತರ ಆರೋಪವಾಗಿದೆ. ಅಕ್ರಮ ಖಾತೆಗಳನ್ನ ಮಾಡಿರುವುದು, ಸರ್ಕಾರಿ ಸವಲತ್ತುಗಳಾದ ಪಿಂಚಣಿ ಮಾಡಿಕೊಡಲು ಸಹ ಬಡವರಿಂದ ಹಣ ಕೇಳುತ್ತಾರೆ, ಅಕ್ರಮ ಸಕ್ರಮಕ್ಕಾಗಿ ಫಾರಂ ನಂಬರ್ 53 ಅರ್ಜಿ ಹಾಕಿದ ರೈತರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ, ಭೂಮಿ ಇರುವರಿಗೇ ಗೋಮಾಳ ಜಾಗವನ್ನು ಮಂಜೂರು ಮಾಡಿದ್ದಾರೆಂಬುದು ರೈತರ ಆರೋಪವಾಗಿದೆ.

ಲಕ್ಷಮ್ಮರವರದ್ದು ತೂಬಗೆರೆಯ ಗಂಡರಾಜಪುರ ಗ್ರಾಮದವರಾಗಿದ್ದು, ತೂಬಗೆರೆ ಹೋಬಳಿಯಲ್ಲಿ ಅವರ ಸಂಬಂಧಿಕರು ಇದ್ದಾರೆ, ದಂಡುದಾಸನ ಕೋಡಿಗೆಹಳ್ಳಿಯ ಕೃಷ್ಣಪ್ಪನವರು ಕಳೆದ 50 ವರ್ಷಗಳಿಂದ ಜಮೀನು ಸಾಗುವಳಿ ಮಾಡುತ್ತಿದ್ದಾರೆ, ಜಮೀನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು, ಆದರೆ ಇದೇ ಗ್ರಾಮದಲ್ಲಿ ಲಕ್ಷ್ಮಮ್ಮರವರ ಅಕ್ಕ ವಾಸವಾಗಿದ್ದಾರೆ, ಅವರ ಅಕ್ಕನ ಗಂಡನಾದ ನಾರಾಯಣಸ್ವಾಮಿ ಒಂದು ತಿಂಗಳ ಹಿಂದೆಯಷ್ಟೇ ಅರ್ಜಿ ಹಾಕಿದ್ದು, ಅಕ್ರಮ ದಾಖಲೆ ಸೃಷ್ಟಿಸಿ ಒಂದು ತಿಂಗಳಲ್ಲೇ ಜಮೀನು ಮಂಜೂರು ಮಾಡುವ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆಂದು ಆರೋಪ ಮಾಡಿದ್ದಾರೆ.

ಆಡಳಿತಾತ್ಮಕ ಹಿತದೃಷ್ಟಿಯಿಂದ ಲಕ್ಷ್ಮಮ್ಮರನ್ನ ತೂಬಗೆರೆ ರೆವಿನ್ಯೂ ಇನ್ಸ್‌ಪೆಕ್ಟರ್ ಹುದ್ದೆಯಿಂದ ವರ್ಗಾವಣೆ ಮಾಡಲಾಗಿದೆ, ಸರ್ಕಾರದ ಕ್ರಮದಿಂದ ಸ್ಥಳೀಯ ರೈತರು ಸಂತಸಗೊಂಡಿದ್ದರು, ಆದರೆ ಲಕ್ಷ್ಮಮ್ಮ ಮತ್ತೆ ಇದೇ ಹುದ್ದೆಗೆ ಬರಲು ಕೋರ್ಟ್ ಮೂಲಕ ತಡೆ ತಂದಿದ್ದಾರೆ, ಲಕ್ಷ್ಮಮ್ಮ ಮತ್ತೆ ತೂಬಗೆರೆಗೆ ಬರುವುದು ಬೇಡ ಎನ್ನುವುದು ಸ್ಥಳೀಯ ರೈತರ ಬೇಡಿಕೆ, ಲಕ್ಷ್ಮಮ್ಮರನ್ನ ತೂಬಗೆರೆ ಕಚೇರಿಯಿಂದ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಕೊಟ್ಟಿದ್ದಾರೆ, ಇದರ ಜೊತೆಗೆ ಲಕ್ಷ್ಮಮ್ಮರವರು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಖಲೆಗಳನ್ನ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ರೈತರು.

Leave a Reply

Your email address will not be published. Required fields are marked *