H3N2ಗೆ ಕರ್ನಾಟಕದಲ್ಲಿ ಮೊದಲ ಬಲಿ: ಕರ್ನಾಟಕ-ಹರಿಯಾಣದಲ್ಲಿ ತಲಾ 1 ಸಾವು

ದೇಶದಲ್ಲಿ ಕೋವಿಡ್ 19 ಸಾಂಕ್ರಾಮಿಕದ ಬಳಿಕ ಈಗ ಎಚ್‌3ಎನ್‌2 ಅಥವಾ ಇನ್‌ಫ್ಲೂಯೆಂಜಾ ವೈರಸ್ ಭೀತಿ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಮನೆ‌ ಮಾಡಿದೆ. ಎಚ್‌3ಎನ್2 ವೈರಸ್‌ಗೆ ದೇಶದಲ್ಲಿ ಮೊದಲ ಎರಡು ಸಾವುಗಳು ವರದಿಯಾಗಿವೆ. ಕರ್ನಾಟಕದಲ್ಲಿ ಒಬ್ಬರು ಮತ್ತು ಹರಿಯಾಣದಲ್ಲಿ ಒಬ್ಬರು ವೈರಸ್‌ಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿದೆ.

ದೇಶದಲ್ಲಿ ಸುಮಾರು 90 ಎಚ್‌3ಎನ್‌2 ಪ್ರಕರಣಗಳು ಈವರೆಗೂ ದಾಖಲಾಗಿವೆ. ಇದಲ್ಲದೆ ಎಚ್‌1ಎನ್1 (ಹಂದಿ ಜ್ವರ) ವೈರಸ್‌ನ ಎಂಟು ಪ್ರಕರಣಗಳು ಕೂಡ ವರದಿಯಾಗಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಹಾಂಕಾಂಗ್ ಫ್ಲೂ ಎಂದೂ ಕರೆಯಲಾಗುವ ವೈರಸ್‌ಗೆ ರಾಜ್ಯದ ಹಾಸನದಲ್ಲಿ ಒಬ್ಬರು ಬಲಿಯಾಗಿದ್ದಾರೆ. ಮತ್ತೊಂದು ಸಾವು ಹರಿಯಾಣದಲ್ಲಿ ದಾಖಲಾಗಿದೆ.

ಜ್ವರ, ನಿರಂತರ ಕೆಮ್ಮು, ಉಸಿರಾಟದ ಸಮಸ್ಯೆ ಹಾಗೂ ಉಬ್ಬಸ ಇದರ ಸಾಮಾನ್ಯ ಲಕ್ಷಣಗಳಿಂದ ಈ ರೋಗ‌ ಬರುತ್ತದೆ. ಇದರ ಜತೆಗೆ ವಾಕರಿಕೆ, ಗಂಟಲು ನೋವು, ಮೈಕೈ ನೋವು ಮತ್ತು ಅತಿಸಾರದ ಸಮಸ್ಯೆಗಳನ್ನೂ ರೋಗಿಗಳು ಅನುಭವಿಸುತ್ತಿದ್ದಾರೆ. ಈ ಲಕ್ಷಣಗಳು ಒಂದು ವಾರದವರೆಗೂ ನಿರಂತರವಾಗಿ ಕಾಡುವ ಅಪಾಯವಿದೆ.

ಈ ವೈರಸ್ ಹೆಚ್ಚು ಅಪಾಯಕಾರಿಯಾಗಿದ್ದು, ಕೆಮ್ಮು, ಸೀನು ಹಾಗೂ ಸೋಂಕಿತ ಜನರೊಂದಿಗಿನ ಸಂಪರ್ಕದಿಂದ ಹರಡುತ್ತದೆ. ಇದರಿಂದ ರಕ್ಷಣೆ ಪಡೆಯಲು ಕೋವಿಡ್ ಮಾದರಿಯ ಕ್ರಮಗಳನ್ನೇ ಅನುಸರಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.

ಜನರು ನಿರಂತರವಾಗಿ ಕೈಗಳನ್ನು ತೊಳೆದುಕೊಳ್ಳುತ್ತಿರಬೇಕು ಮತ್ತು ಮಾಸ್ಕ್‌ ಧರಿಸಬೇಕು. ಸೀನುವಾಗ ಮತ್ತು ಕೆಮ್ಮುವಾಗ ಜನರು ಮುಖ ಹಾಗೂ ಮೂಗನ್ನು ಮುಚ್ಚಿಕೊಳ್ಳಬೇಕು. ಯಥೇಚ್ಛವಾಗಿ ನೀರು ಕುಡಿಯಬೇಕು. ಕಣ್ಣು ಮತ್ತು ಮೂಗನ್ನು ಮುಟ್ಟದಂತೆ ಎಚ್ಚರ ವಹಿಸಬೇಕು. ಜ್ವರ ಹಾಗೂ ದೇಹದ ನೋವಿಗೆ ಪ್ಯಾರಾಸಿಟಮಾಲ್ ತೆಗೆದುಕೊಳ್ಳಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಲಹೆ ನೀಡಿದೆ.

Leave a Reply

Your email address will not be published. Required fields are marked *