ಅ.22ರಂದು ನಗರದಲ್ಲಿ ಮಹಿಷ ಉತ್ಸವ ಆಚರಣೆ

ಅ.22ರ ಭಾನುವಾರ ಬೆಳಗ್ಗೆ 10ಕ್ಕೆ ನಗರದ ಕನ್ನಡ ಜಾಗೃತ ಭವನದಲ್ಲಿ ದ್ರಾವಿಡ ಸಂಸ್ಕೃತಿಯ ಮಹರಾಜ ಮಹಾದೇವ ಹರಹಂತ‌ ಮಹಿಷ ಉತ್ಸವವನ್ನ ಏರ್ಪಡಿಸಲಾಗಿದೆ ಎಂದು ದಲಿತ ವಿಮೋಚನಾ ಸೇನೆ ರಾಜ್ಯಾಧ್ಯಕ್ಷ ಮಾ.ಮುನಿರಾಜು ಹೇಳಿದರು.

ಈ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕರಾದ ಪ್ರೊ.ವಿಠಲ್ ವಗ್ಗನ್ ಅವರು ಭಾಗವಹಿಸಿ ಮಹಿಷನ ಇತಿಹಾಸ ಕುರಿತು ಮಾತನಾಡಲಿದ್ದಾರೆ ಎಂದರು.

ಆಯಾ ಜಾತಿ ಜನಾಂಗಗಳ ಸಾಂಸ್ಕೃತಿಕ ಆಚರಣೆಗೆ ಸಂವಿಧಾನದಲ್ಲಿ ಅವಕಾಶವಿದೆ. ನಾವು ಯಾರ ವಿರುದ್ಧವೂ ಈ ಆಚರಣೆಯನ್ನು ಮಾಡುತ್ತಿಲ್ಲ, ನಮ್ಮ ದ್ರಾವಿಡ ಅಸ್ಮಿತೆಯ ಬಗ್ಗೆ ಯುವಕರಲ್ಲಿ ಅರಿವು ಮೂಡಿಸಲು ಮಾಡುತ್ತಿದ್ದೇವೆ ಎಂದರು.

ಮಹಿಷನ ಚರಿತ್ರೆಯನ್ನ ಅರಿತ ದ್ರಾವಿಡ ಸಂತತಿಯ ಪ್ರಗತಿಪರರು, ಚಿಂತಕರು, ಡಾ.ಬಿ.ಆರ್.ಅಂಬೇಡ್ಕರ್, ಬುದ್ದನ ಅನುಯಾಯಿಗಳು ಮೈಸೂರಿನಲ್ಲಿ ಕಳೆದ 40ವರ್ಷಗಳಿಂದಲೂ ಮಹಿಷ ಉತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಈ ನಡುವೆ ದ್ರಾವಿಡರ ಅಸ್ಮಿತೆಯನ್ನು ಗೌರವಿಸದ ಮನುವಾದಿಗಳು ನೇರವಾಗಿ ಯುದ್ಧಕ್ಕೆ ಇಳಿಯದೆ ಶೂದ್ರರನ್ನು ಅಖಾಡಕ್ಕೆ ತರುತ್ತಿದ್ದಾರೆ.  ವೈದಿಕರ ರಾಜಕೀಯ ಆಶ್ರಯದಲ್ಲಿ ಕುಳಿತಿರುವ ಇಂಥವರು ದ್ರಾವಿಡ ಅಸ್ಮಿತೆಗೆ ಕೊಡಲಿ ಪೆಟ್ಟು ನೀಡುತ್ತಿದ್ದಾರೆ.  ಅಂತಹ ಎಲ್ಲ ಅಡೆತಡೆಗಳನ್ನು ನಿವಾರಿಸುವ ಶಕ್ತಿ ದ್ರಾವಿಡರಿಗೆ ಇದೆ.  ವಿರೋಧಿಸುವುದು ಆರಂಭವೂ ಅಲ್ಲ, ಅಂತ್ಯವೂ ಅಲ್ಲ, ಅಂತಹ ವಿರೋಧಿಗಳನ್ನು ಎದುರಿಸಿ ನಿಲ್ಲುವ ಜವಾಬ್ದಾರಿ ನಮ್ಮ ಮೇಲಿದೆ.  ಹಾಗಾಗಿ ನಮ್ಮ ಸಮಿತಿಯಿಂದ ದೊಡ್ಡಬಳ್ಳಾಪುರದಲ್ಲಿ ಮಹಿಷ ಉತ್ಸವ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಬೆಂ.ಗ್ರಾ, ಎಸ್.ಟಿ.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುನಿಕೃಷ್ಣಪ್ಪ ಮಾತನಾಡಿ ನಮ್ಮ ಜನಾಂಗಗಳು ಸುಶಿಕ್ಷಿತರಾಗಿದ್ದಾರೆ, ಸರಿ ತಪ್ಪುಗಳ ವಿವೇಚನೆಯ ಅರಿವಾಗಿದೆ, ಹಾಗಾಗಿ ಶೂದ್ರ ಮತ್ತು ಮೂಲ ನಿವಾಸಿಗಳ ಇತಿಹಾಸ ತಿಳಿಸಿಕೊಡುವ ಸಲುವಾಗಿ ಈ ಉತ್ಸವ ಆಚರಣೆ ಮಾಡುತ್ತಿದ್ದೇವೆ ಎಂದರು.

ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಗುರುರಾಜಪ್ಪ, ವಕೀಲರಾದ ಎಸ್.ಡಿ.ಮುನಿರಾಜು, ಬೆಂ.ಗ್ರಾ, ಎಸ್.ಟಿ.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುನಿಕೃಷ್ಣಪ್ಪ.ಯು, ಪ್ರಜಾ ವಿಮೋಚನಾ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಗೂಳ್ಯ ಹನುಮಣ್ಣ, ಪತ್ರಕರ್ತ ರಾಜುಸಣ್ಣಕ್ಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *