ರಾಷ್ಟ್ರಪಿತ ಮಹಾತ್ಮಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಸ್ಮರಣೆಗಷ್ಟೇ ಸೀಮಿತಗೊಳಿಸಬಾರದು. ಅವರುಗಳು ತಮ್ಮ ಬದುಕಿನಲ್ಲಿ ನಂಬಿದ್ದ ಮತ್ತು ಅಳವಡಿಸಿಕೊಂಡಿದ್ದ ಆದರ್ಶಗಳನ್ನು ಕಾರ್ಯರೂಪಕ್ಕೆ ತರುವುದು ಮುಖ್ಯವೆಂದು ಕನ್ನಡ ಸಾಹಿತ್ಯ ಪರಿಷತ್ತು ಸಾಸಲು ಹೋಬಳಿ ಘಟಕ ಅಧ್ಯಕ್ಷ ಜಿ.ಎಂ.ನಾಗರಾಜು ತಿಳಿಸಿದರು.
ನಗರದ ಮಹಾತ್ಮಗಾಂಧಿ ಪ್ರತಿಮೆಯ ಬಳಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಮಹಾತ್ಮಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸರಳ ಸಜ್ಜನಿಕೆ, ಪ್ರಾಮಾಣಿಕತೆ, ನುಡಿದಂತೆ ನಡೆದ ಮಹಾನ್ ವ್ಯಕ್ತಿಗಳು ಮಹಾತ್ಮಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಆಗಿದ್ದಾರೆ. ಭಾರತ ದೇಶದ ಜನರ ಬದುಕು ಮತ್ತು ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದ ಈ ಮಹಾನೀಯರು ತಮ್ಮ ಜೀವನವನ್ನೇ ದೇಶಕ್ಕಾಗಿ ಸಮರ್ಪಿಕೊಂಡರು ಎಂದರು.
ಮಹಾತ್ಮಗಾಂಧೀಜಿಯವರು ನನ್ನ ಜೀವನವೇ ನನ್ನ ಸಂದೇಶವೆಂದು ಹೇಳಿದರು. ಅಹಿಂಸೆ, ಶಾಂತಿ, ಸೌಹಾರ್ದತೆ, ದೇಶಪ್ರೇಮ, ತಾರತಮ್ಯ ನಿವಾರಣೆ ಮುಂತಾದ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಚಲವಾಗಿ ಅಳವಡಿಕೊಂಡಿದ್ದರು. ಮಹಾತ್ಮಗಾಂಧೀಜಿಯವರ ವಿಚಾರಧಾರೆಗಳನ್ನು ಜಗತ್ತಿನ ಎಲ್ಲಾ ದೇಶಗಳು ಗೌರವಿಸುತ್ತವೆ. ಭಾರತ ಸ್ವಾತಂತ್ರ್ಯ ಹೋರಾಟಗಾರರಿಗೆ ಮಹಾತ್ಮಗಾಂಧಿ ಸ್ಫೂರ್ತಿಯಾಗಿದ್ದರು. ಭಾರತ ದೇಶದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ತಮ್ಮದೇ ಚಿಂತನೆಯನ್ನು ಗಾಂಧೀಜಿ ಹೊಂದಿದ್ದರು. ಮಾನವೀಯ ಮೌಲ್ಯಗಳನ್ನು ಹೊಂದಿರುವ ಮಹಾತ್ಮಗಾಂಧೀಜಿಯ ಆದರ್ಶಗಳು ಎಂದಿಗೂ ಪ್ರಸ್ತುತವಾಗುತ್ತವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಘಟಕದ ಅಧ್ಯಕ್ಷ ಪಿ.ಡಿ.ದಾದಾಪೀರ್ ಮಾತನಾಡಿ, ಮಹಾತ್ಮಗಾಂಧಿಯವರ ಚಿಂತನೆಗಳು ಇಂದಿನ ನಮ್ಮ ದೇಶದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ. ಮಹಾತ್ಮಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ತತ್ವ ಆದರ್ಶಗಳು ಎಂದಿಗೂ ಅನುಕರಣೆಯ. ಉಪವಾಸ ಮತ್ತು ಅಸಹಕಾರ ಚಳುವಳಿಯ ಮೂಲಕ ಜಗತ್ತಿನ ಗಮನಸೆಳೆದವರು ಮಹಾತ್ಮಗಾಂಧೀಜಿ. ಜೈ ಜವಾನ್, ಜೈ ಕಿಸಾನ್ ಎಂಬ ಘೋಷವಾಕ್ಯದ ಮೂಲಕ ಭಾರತ ದೇಶದ ಅಭಿವೃದ್ಧಿ ಮತ್ತು ಆಡಳಿತ ವ್ಯವಸ್ಥಗೆ ಹೊಸ ಚೈತನ್ಯ ನೀಡಿದರು ಲಾಲ್ ಬಹದ್ದೂರ್ ಶಾಸ್ತ್ರಿ ಎಂದರು.
ಮಹಾತ್ಮಗಾಂಧೀಜಿ ಜಯಂತಿ ಪ್ರಯುಕ್ತ ಕನ್ನಡಪರ ಹೋರಾಟಗಾರ ನಾಗರಾಜು ಅವರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿಗಳಾದ ಗೆಜ್ಜಗದಹಳ್ಳಿ ಮುನಿರಾಜು, ಷಫೀರ್, ಹಣಬೆ ಚನ್ನೆಗೌಡ, ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ಸಂಚಾಲಕ ಜಗದೀಶ್, ಭಗತ್ ಸಿಂಗ್ ಕ್ರೀಡಾಂಗಣದ ಗುಂಡಣ್ಣ ಮುಂತಾದವರು ಭಾಗವಹಿಸಿದ್ದರು.