ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ ಅವರ ದ್ವಿಶತಕದ ಜೊತೆಯಾಟ ಹಾಗೂ ಬೌಲರ್ ಗಳ ಕೈಚಳಕದಿಂದ ಭಾರತ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಜಯಿಸಿತು.
ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಪ್ರವಾಸಿ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ ಭಾರತವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿ ರುತುರಾಜ್ ಗಾಯಕ್ವಾಡ್ (8)ರನ್ ಗಳಿಸಿದ್ದಾಗ ವೇಗಿ ಜೋಶ್ ಹೆಜಲ್ವುಡ್ ವಿಕೆಟ್ ಪಡೆದು ಆರಂಭಿಕ ಮೇಲುಗೈ ಸಾಧಿಸಿದರು.
ನಂತರ ಒಂದಾದ ಆರಂಭಿಕ ಆಟಗಾರ ಶುಭ್ಮನ್ ಗಿಲ್ (104) ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಸಿಡಿಸಿದರೆ, ಶ್ರೇಯಸ್ ಅಯ್ಯರ್ (105) ಹನ್ನೊಂದು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 200 ರನ್ ಗಳ ಜೊತೆಯಾಟ ನಡೆಸಿದರು.
ಇವರಿಬ್ಬರು ಪೆವಿಲಿಯನ್ ಗೆ ತೆರಳಿದ ನಂತರ ಒಂದಾದ ನಾಯಕ ಕೆ.ಎಲ್. ರಾಹುಲ್ (52), ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ (31), ಸೂರ್ಯ ಕುಮಾರ್ ಯಾದವ್ (72) ಇವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ತಂಡಕ್ಕೆ 400 ರನ್ ಗಳ ಬೃಹತ್ ಮೊತ್ತದ ಗುರಿಯನ್ನು ನೀಡಿತು.
ಆಸ್ಟ್ರೇಲಿಯಾದ ಪರವಾಗಿ ವೇಗದ ಬೌಲರ್ ಕೆಮರೂನ್ ಗ್ರೀನ್ ಎರಡು ವಿಕೆಟ್, ಜೋಶ್ ಹೆಜಲ್ವುಡ್ , ಅಬ್ಬಾಟ್ ಹಾಗೂ ಜಂಪಾ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ್ದ ಪ್ರವಾಸಿ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತ ಎದುರಿಸಿತು, ಎರಡನೇ ಓವರ್ ನಲ್ಲಿ ಮ್ಯಾಥ್ಯೂ ಶಾಟ್ (9) ಹಾಗೂ ನಾಯಕ ಸ್ಟೀವನ್ ಸ್ಮಿತ್ (0) ಪ್ರಸಿದ್ಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದರು.
ನಂತರ ಒಂದಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (52) ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ಲಬುಶನಗೆ (27) ರನ್ ಗಳಿಸುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಲು ಪ್ರಯತ್ನಿಸಿದರು ಆದರೆ ವರುಣನ ಆರ್ಭಟಕ್ಕೆ ಪಂದ್ಯವನ್ನು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 33 ಓವರ್ ಗೆ 316 ರನ್ ಗುರಿ ನೀಡಲಾಯಿತು.
ಭಾರತದ ಬೌಲಿಂಗ್ ಪ್ರದರ್ಶನದ ಮುಂದೆ ಮಂಡಿಯೂರಿದ ಆಸ್ಟ್ರೇಲಿಯಾ ತಂಡ 217 ರನ್ ಗಳಿಸಿ ಆಲೌಟ್ ಆಯಿತು, ಭಾರತದ ಪರವಾಗಿ ಆಲ್ ರೌಂಡರ್ ರವೀಂದ್ರ ಜಡೇಜಾ ಹಾಗೂ ಅನುಭವಿ ಲೆಗ್ ಸ್ಪಿನ್ನರ್ ಆರ್. ಅಶ್ವಿನ್ ತಲಾ ಮೂರು ವಿಕೆಟ್ ಪಡೆದರು, ವೇಗಿಗಳಾದ ಪ್ರಸಿದ್ಧ ಕೃಷ್ಣ ಎರಡು ಹಾಗೂ ಮೊಹಮದ್ ಶಮಿ ಒಂದು ವಿಕೆಟ್ ಪಡೆದರು.
ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತ 99 ರನ್ ಅಂತರದಲ್ಲಿ ಗೆಲವು ದಾಖಲಿಸಿತು. ಭಾರತದ ಪರವಾಗಿ ಮಿಂಚಿದ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.