ರಸಗೊಬ್ಬರಗಳಿಗೆ ಹೆಚ್ಚಿದ ಬೇಡಿಕೆ: ರೈತರ ಸುಲಿಗೆಗೆ ಇಳಿದ ರಸಗೊಬ್ಬರ ಅಂಗಡಿಗಳು, ಡೀಲರ್ ಶಿಪ್ ಕಂಪನಿ?

ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಾಡುತ್ತಿದ್ದ ಬೆಳೆಗಳು ನಳನಳಿಸುತ್ತಿವೆ. ರಾಗಿ, ಜೋಳದ ಬೆಳೆಗೆ ಬೇಕಾದ ರಸಗೊಬ್ಬರಗಳಿಗೆ ಬೇಡಿಕೆಯೂ ಹೆಚ್ಚಾದೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ರಸಗೊಬ್ಬರ ಅಂಗಡಿಗಳು, ಡೀಲರ್ ಶಿಪ್ ಪಡೆದ ಕಂಪನಿಗಳು ರೈತರ ಸುಲಿಗೆಗೆ ಇಳಿದಿವೆ ಎನ್ನಲಾಗಿದೆ.

ತಾಲೂಕಿನ ಕಾಡನೂರು ಗ್ರಾಮದಲ್ಲಿರುವ ಕ್ರಿಯಾಜೆನ್ ಕಂಪನಿಯ ಕಿಸಾನ್ ವರ್ಲ್ಡ್ ಔಟ್ ಲೆಟ್ ನಲ್ಲಿ 20-20-20 (ಎನ್ ಪಿಕೆ) ಖರೀದಿಸಿದರಷ್ಟೇ ಯೂರಿಯಾ ನೀಡುವುದಾಗಿ ಹೇಳಿ ರೈತರನ್ನು ವಂಚಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರೈತ ಚೇತನ್ ರೈತರ ಒಂದು ಎಕರೆ ಬೆಳೆಗೆ ಒಂದು ಮೂಟೆ ರಸಗೊಬ್ಬರ ( ಯೂರಿಯಾ ) ಬೇಕು ಆದರೆ, ರೈತರ ಆಧಾರ್ ಕಾರ್ಡ್ ಕೊಟ್ಟರೆ ಒಂದು ಮೂಟೆ ಕೊಡ್ತಿದಾರೆ, ಅದರ ಜೊತೆ 20-20-20 ಎಸ್ಪಿಕೆ ಕೊಂಡರೆ ಎರಡು ಮೂಟೆ ರಸಗೊಬ್ಬರ ಕೊಡುತ್ತಿದ್ದಾರೆ. ನಮಗೆ ಎಸ್ಪಿಕೆ ಬೇಕಾಗಿಲ್ಲ, ಎಸ್ಪಿಕೆ ಮಾರಾಟ ಮಾಡಲು ಬಲವಂತದಿಂದ ನಮಗೆ ಎಸ್ಪಿಕೆ ಕೊಂಡುಕೊಳ್ಳಲು ಈ ರೀತಿಯ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರಿ ಗೋದಾಮುಗಳಲ್ಲಿ ಇಲ್ಲದ ಯೂರಿಯಾ ಇಲ್ಲಿ ಮಾತ್ರ ಹೇಗೆ ಸಿಗುತ್ತಿದೆ ಎಂದು ಪ್ರಶ್ನಿಸಿದ ಅವರು, ಯೂರಿಯಾ ಬೆಲೆ 295 ರೂಪಾಯಿ ಇದೆ. ಆದರೆ ಇಲ್ಲಿ ಒಂದು ಚೀಲ ಯೂರಿಯಾಗೆ 310 ರೂ.ಪಡೆಯಲಾಗುತ್ತಿದೆ. ಸಾಲದೆಂಬಂತೆ ಎನ್ ಪಿಕೆ(20-20-20) ಖರೀದಿಸಿದರೆ ಮಾತ್ರ ಯೂರಿಯಾ ನೀಡುತ್ತೇವೆ. ಇಲ್ಲವಾದರೆ ಯಾವುದನ್ನೂ ಕೊಡುವುದಿಲ್ಲ ಎಂದು ಹೇಳಿ ರೈತರನ್ನು ಹೆದರಿಸುತ್ತಿದ್ದಾರೆ, ಎಂದು ಮತ್ತೊಬ್ಬ ರೈತ ತಮ್ಮ ಅಳಲು ತೋಡಿಕೊಂಡರು.

ಸೋಮವಾರ ಬೆಳಿಗ್ಗೆ ಯೂರಿಯಾ ಖರೀದಿಗೆ ಸುಮಾರು 100ಕ್ಕೂ ಹೆಚ್ಚು ಮಂದಿ ಕ್ರಿಯಾಜೆನ್ ಮಾರಾಟ ಮಳಿಗೆಗೆ ಧಾವಿಸಿದಾಗ ಕಂಪೆನಿಯ ಸಿಬ್ಬಂದಿ ಈ ರೀತಿ ಹೇಳುತ್ತಿರುವುದಾಗಿ ರೈತರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *