ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ: ವ್ಯಾಪಾರಸ್ಥರ ವಿರೋಧ: ಅಧಿಕಾರಿಗಳಿಗೆ ನುಂಗಲಾರದ ತುತ್ತು

ನಗರದಲ್ಲಿ ಪ್ರಸ್ತುತ ಚರ್ಚೆಗೆ ಗ್ರಾಸವಾಗಿರೋ ವಿಷಯವೆನೆಂದರೆ ರಸ್ತೆಗಳನ್ನು ಅತಿಕ್ರಮಣ ಮಾಡಿ ಅಪಘಾತ, ವಾಹನ ದಟ್ಟಣೆಗೆ ಕಾರಣವಾಗಿರುವ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮನೆ, ಶೆಡ್, ಅಂಗಡಿಗಳನ್ನ ತೆರವುಗೊಳಿಸುವುದು.

ರಸ್ತೆ ಬದಿಯಲ್ಲಿನ ಅನಧಿಕೃತ ಅಂಗಡಿ, ಮನೆ, ಶೆಡ್ ಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಹಲವು ಹೋರಾಟಗಾರರು ಮನವಿ ಸಲ್ಲಿಸಿದ್ದಾರೆ. ಈ ಮನವಿ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿದೆ. ರಸ್ತೆ ಬದಿಯಲ್ಲಿನ ವ್ಯಾಪಾರಸ್ಥರಿಗೆ ಎಲ್ಲಿ ನಮ್ಮ ಅಂಗಡಿಗಳನ್ನು ತೆರವುಗೊಳಿಸುತ್ತಾರೋ ಎಂಬ ಸಂಕಷ್ಟದಲ್ಲಿದ್ದಾರೆ.

ಜನರ ಜೀವ ಹಾಗೂ ಜೀವನ ಮುಖ್ಯ. ನಮ್ಮ ಹೋರಾಟ ಬೀದಿ ಬದಿಯ ವ್ಯಾಪಾರಿಗಳ ವಿರುದ್ಧ ಅಲ್ಲ, ಬದಲಿಗೆ ರಸ್ತೆ ಒತ್ತುವರಿಯನ್ನು ಮಾಡಿಕೊಂಡವರ ವಿರುದ್ಧ ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಸ್ಪಷ್ಟಪಡಿಸಿದರು.

ಈಗಾಗಲೇ ಹಲವು ದಿನಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ, ತಾಲೂಕು ಆಡಳಿತ, ನಗರಸಭೆ ಹಾಗೂ ಡಿವೈಎಸ್ಪಿ ಅವರಿಗೂ ಮನವಿ ಪತ್ರವನ್ನು ಸಲ್ಲಿಸಲಾಗಿದೆ, ಬೆಸ್ಕಾಂ ಅಧಿಕಾರಿಗಳು ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ್ದಾರೆ, ಲೋಕೋಪಯೋಗಿ ಆಸ್ತಿಗಳನ್ನು ಕಬಳಿಸಲಾಗಿದ್ದು ಅವುಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ರಸ್ತೆ ಒತ್ತುವರಿ ತೆರವಿನ ಕುರಿತು 2006ರಲ್ಲಿ ಸುಪ್ರೀಂಕೋರ್ಟ್ ಆದೇಶ ಮಾಡಿದೆ, 2010ರಲ್ಲಿ ಅದೇ ಆದೇಶವನ್ನು ರಾಜ್ಯ ಸರ್ಕಾರ ಆದೇಶ ಮಾಡಿದೆ, ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶ ಸಂದೀಪ್‌ ಸಾಲಿಯಾನ ಅವರು ಸಹ ರಸ್ತೆ ಒತ್ತುವರಿ ತೆರವು ಮಾಡುವಂತೆ ಅಧಿಕಾರಿಗಳಿಗೆ ಮೌಖಿಕವಾಗಿ ಆದೇಶಿಸಿದ್ದು ಅವುಗಳನ್ನು ಅಧಿಕಾರಿಗಳು ಪಾಲಿಸಬೇಕು ಎಂದು ತಿಳಿಸಿದರು.

ನಮ್ಮ ಹೋರಾಟ ಸಾರ್ವಜನಿಕರ ಪರವಾಗಿದ್ದು. ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯವಾಗಬೇಕು ತಪ್ಪಿದಲ್ಲಿ ನಮ್ಮ ಹೋರಾಟ ನಿರಂತರವಾಗಿರಲಿದ್ದು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.

ನಂತರ ನಗರಸಭೆ ಸದಸ್ಯ ವಡ್ಡರಹಳ್ಳಿ ರವಿ ಮಾತನಾಡಿ, ಬೆಂಗಳೂರು ನಗರದಿಂದ ಕೇವಲ ನಲವತ್ತು ಕಿಲೋ ಮೀಟರ್ ದೂರದಲ್ಲಿರುವ ದೊಡ್ಡಬಳ್ಳಾಪುರ ಇಂದು ಬೃಹತ್ ಆಕಾರದಲ್ಲಿ ಬೆಳೆಯುತ್ತಿದೆ, ನಗರದಲ್ಲಿ 1,75,000 ಕ್ಕಿಂತ ಹೆಚ್ಚು ಜನರು ವಾಸಿಸುತ್ತಿದ್ದು, ಒಂದು ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಅಪಘಾತಗಳೂ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರುವುದು ಆಘಾತಕಾರಿ ಎಂದು ಆತಂಕ ವ್ಯಕ್ತಪಡಿಸಿದರು.

ರಸ್ತೆ ಬದಿಯಲ್ಲಿನ ಫುಟ್ ಪಾತ್ ಹಾಗೂ ನಗರಸಭೆಗೆ ಸೇರಿದ ಜಾಗವನ್ನು ಆಕ್ರಮಿಸಿಕೊಂಡು ಹೋಟೆಲ್, ಹಣ್ಣಿನ ಅಂಗಡಿ ಹಾಗೂ ಮಾಂಸದ ಮಳಿಗೆಗಳನ್ನು ತೆರೆಯಲಾಗಿದ್ದು ಇತ್ತೀಚೆಗೆ ಸಾರ್ವಜನಿಕರು ಹೆಚ್ಚಿನ ಹಿಂಸೆ ಅನುಭವಿಸುವಂತಾಗಿದೆ ಎಂದರು.

ನಗರದಲ್ಲಿ ಕೈಗಾರಿಕೆ ಹಾಗೂ ಮಗ್ಗಗಳಲ್ಲಿ ಕೆಲಸ ಮಾಡಲು ಪ್ರತೀ ದಿನ 5000 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಓಡಾಡುತ್ತಿದ್ದಾರೆ, ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ತಂದೆ ಹಾಗೂ ಮಗಳು ಸಾವನ್ನಪ್ಪಿದ್ದು ಬೇಸರದ ಸಂಗತಿಯಾಗಿದೆ ಎಂದರು.

ಜಿಲ್ಲಾಡಳಿತ, ಪೊಲೀಸ್ ಇಲಾಖೆ, ತಾಲೂಕು ಆಡಳಿತ ಹಾಗೂ ನಗರಸಭೆಯ ಸಮ್ಮುಖದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಹಲವಾರು ನಿಣ೯ಯ ಕೈಗೊಳ್ಳಲಾಗಿದ್ದು ನಗರ ಪ್ರದೇಶದಲ್ಲಿ ಸ್ವಚ್ಛತೆ, ಚರಂಡಿ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಉತ್ತಮ ಆಡಳಿತ ನಡೆಸಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *