ವಿದ್ಯುತ್ ದರ ಇಳಿಕೆ ಸೇರಿದಂತೆ ನೇಕಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜವಳಿ ಸಚಿವರಲ್ಲಿ ಮನವಿ

ದೊಡ್ಡಬಳ್ಳಾಪುರ ತಾಲೂಕು ಕರ್ನಾಟಕ ರಾಜ್ಯ ನೇಕಾರರ ಸಂಘಟನೆಗಳ ಒಕ್ಕೂಟ, ಮಾಜಿ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದ ತಂಡ ಜವಳಿ, ಕಬ್ಬು ಮತ್ತು ಸಕ್ಕರೆ ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ.ಎಸ್ ಪಾಟೀಲ ಅವರನ್ನು

ಭೇಟಿ ಮಾಡಿ ರಾಜ್ಯ ನೇಕಾರರ ಸಮಸ್ಯೆಗಳ ಬಗ್ಗೆ ವಿವರಿಸಿ ಹಲವಾರು ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಮುಖ್ಯವಾಗಿ ವಿದ್ಯುತ್ ಬೆಲೆ ಏರಿಕೆ ದುಬಾರಿಯಾಗಿದ್ದು ತಕ್ಷಣ ಹಿಂಪಡೆಯಬೇಕು ಹಾಗೂ ನೇಕಾರರು ಮಗ್ಗಗಳಿಗೆ 20 ಎಚ್‌ಪಿ ವರೆಗಿನ ವಿದ್ಯುತ್ ಉಚಿತವಾಗಿ ನೀಡಬೇಕು, ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ನೇಕಾರರಿಗೆ ಗುರುತಿನ ಚೀಟಿಯನ್ನು ನೀಡಲು ದೊಡ್ಡಬಳ್ಳಾಪುರದಲ್ಲಿ ಬೃಹತ್ ಹೋರಾಟ ನಡೆಸಿ ಒತ್ತಾಯಿಸಲಾಗಿತ್ತು, ಹೋರಾಟದ ಫಲವಾಗಿ ಈಗ ರಾಜ್ಯದಲ್ಲಿ ಸೆನ್ಸಸ್ ಕಾರ್ಯ ಮುಗಿದಿದ್ದು ಇಡೀ ರಾಜ್ಯದ ನೇಕಾರರಿಗೆ ತಕ್ಷಣ ನೇಕಾರ ಗುರುತಿನ ಚೀಟಿಯನ್ನು ನೀಡಬೇಕು, ನೇಕಾರರ ಕಲ್ಯಾಣ ಮಂಡಳಿಯನ್ನು ರಚಿಸಿ ರಾಜ್ಯದ ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ ರೀತಿಯಲ್ಲಿ ಇ.ಎಸ್.ಐ ಸೇರಿದಂತೆ 20 ಸೌಲಭ್ಯಗಳನ್ನು ನೇಕಾರರಿಗೂ ನೀಡಬೇಕು ಮತ್ತು ಈ ಕಲ್ಯಾಣ ಮಂಡಳಿಗೆ ಒಂದು ಸಾವಿರ ಕೋಟಿಯ ಆವರ್ತ ನಿಧಿಯನ್ನು ಮೀಸಲಿಡಬೇಕು. ನೇಕಾರರು ಸ್ವಯಂ ಉದ್ಯೋಗಕ್ಕೆ ಖರೀದಿಸುವ ಮಗ್ಗಗಳಿಗೆ ಮತ್ತು ಜಾಕಾರ್ಡುಗಳಿಗೆ ಶೇ.75ರಷ್ಟು ಸಹಾಯಧನ ನೀಡಬೇಕು. ವಿದ್ಯುತ್ ಕ್ಷೇತ್ರದ ಖಾಸಗೀಕರಣವನ್ನು ತಡೆಯಬೇಕು ಎಂದು ಆಗ್ರಹಿಸಿದರು.

ಸಚಿವ ಶಿವಾನಂದ ಪಾಟೀಲ್ ಅವರು ಮಾತನಾಡಿ, ನಿಮ್ಮ ಎಲ್ಲಾ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ತಕ್ಷಣಕ್ಕೆ ಮಾಡಬಹುದಾದ ಮತ್ತು ದೀರ್ಘಾವಧಿಯಲ್ಲಿ ಮಾಡಬಹುದಾದ ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು ಮತ್ತು ಸಾಧ್ಯವಾದಷ್ಟು ಬೇಗ ಅನುಷ್ಠಾನಕ್ಕೆ ಬರುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಮುಖಂಡರಾದ ಆರ್.ಎಸ್.ಶ್ರೀನಿವಾಸ್, ಸಿ.ಸುರೇಶ್, ವೇಣು, ಕೆರಮಲ ಬದ್ರಿ, ಎಂ.ಮುನಿರಾಜು, ಎಂ.ಚೌಡಯ್ಯ, ಸಿ.ಅಶ್ವತ್, ಜನಪರ ಮಂಜು, ನಾಗೇಶ್, ಎಲ್.ಶಿವಕುಮಾರ್, ರಾಜಶೇಖರ್, ಆನಂದ್, ತ್ಯಾಗರಾಜ್, ನೇಕಾರ ಸಂಘಟನೆಗಳ ಒಕ್ಕೂಟದ ಪರವಾಗಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *