ಮೇಕೆದಾಟು ಯೋಜನೆ ಶೀಘ್ರ ಜಾರಿಗೆ ಸಚಿವರ ದೃಢ ಸಂಕಲ್ಪ: ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ

ಮೇಕೆದಾಟು ಯೋಜನೆಯ ಶೀಘ್ರ ಜಾರಿಗಾಗಿ ಜಲಸಂಪನ್ಮೂಲ ಸಚಿವರು ತೀವ್ರ ಒಲವು ತೋರಿದ್ದು, ಕಾಮಗಾರಿಗೆ ಇನ್ನಷ್ಟು ವೇಗ ನೀಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಇಂದು ವಿಕಾಸಸೌಧದಲ್ಲಿ ಮಹತ್ವದ ವಿಡಿಯೋ ಕಾನ್ಫರೆನ್ಸ್ ನಡೆಸಿದರು.

ಯೋಜನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಸಚಿವರು, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದು, ಯೋಜನೆಗಾಗಿ ಮುಳುಗಡೆಯಾಗಲಿರುವ ಭೂಮಿಗೆ ಪ್ರತಿಯಾಗಿ ಪರಿಹಾರ ನೀಡಲು ಶೀಘ್ರದಲ್ಲೇ ಸೂಕ್ತ ಪರ್ಯಾಯ ಜಮೀನಿನನ್ನು ಹುಡುಕಿ ವರದಿ ಸಲ್ಲಿಸುವಂತೆ ಆದೇಶಿಸಿದರು. ಯಾವುದೇ ಕಾರಣಕ್ಕೂ ವಸತಿ ಪ್ರದೇಶಗಳನ್ನು ಈ ವರದಿಯಲ್ಲಿ ಸೇರಿಸಬಾರದು ಹಾಗೂ ಡೀಮ್ಡ್ (Deemed) ಅರಣ್ಯ ಪ್ರದೇಶದ ಜೊತೆಗೆ ಕಂದಾಯ ಇಲಾಖೆಗೆ ಸೇರಿದ ಭೂಮಿಯನ್ನು ಮಾತ್ರ ಗುರುತಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದರು.

*ಅನುಮೊದನೆ ಪ್ರಕ್ರಿಯೆ ಚುರುಕು*

ಯೋಜನೆಯ ಡಿಪಿಆರ್ (DPR) ತಾಂತ್ರಿಕ ಅನುಮೋದನೆ ಪಡೆಯುವ ಪ್ರಕ್ರಿಯೆ ಚುರುಕುಗೊಂಡಿದ್ದು, ಕೇಂದ್ರ ಜಲ ಆಯೋಗದ (CWC) ಮಾಜಿ ಅಧ್ಯಕ್ಷರೊಂದಿಗಿನ ಸಮಾಲೋಚನೆಯೊಂದಿಗೆ ಡಿಪಿಆರ್ ಸಿದ್ಧಪಡಿಸಲಾಗಿದೆ. ಯೋಜನೆಗಾಗಿ ಮುಳುಗಡೆಯಾಗಲಿರುವ 5,096 ಹೆಕ್ಟೇರ್ ಅರಣ್ಯ ಭೂಮಿಗೆ ಪರ್ಯಾಯವಾಗಿ ರಾಜ್ಯ ಸರ್ಕಾರದಿಂದ ಭೂಮಿ ನೀಡಬೇಕಿದ್ದು, ಕಂದಾಯ ಇಲಾಖೆಯು ಈಗಾಗಲೇ 20 ಸಾವಿರ ಹೆಕ್ಟೇರ್ ಪ್ರದೇಶವನ್ನು ಗುರುತಿಸಿದೆ. ಆದರೆ, ಅರಣ್ಯ ಬೆಳೆಸಲು ಅಗತ್ಯವಿರುವ 5 ಸಾವಿರ ಹೆಕ್ಟೇರ್ ಭೂಮಿಯನ್ನು ತ್ವರಿತವಾಗಿ ಒದಗಿಸಬೇಕಿದೆ.

ಡೀಮ್ಡ್ ಅರಣ್ಯವು ಕಂದಾಯ ಇಲಾಖೆಯ ವ್ಯಾಪ್ತಿಗೆ ಸೇರುವುದರಿಂದ, 1:2 ಅನುಪಾತದಲ್ಲಿ ಪರ್ಯಾಯ ಭೂಮಿ ನೀಡಲು ಚಾಮರಾಜನಗರ, ಮಂಡ್ಯ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳಲ್ಲಿ ಅವಕಾಶಗಳಿವೆ. ಇಲಾಖೆ ಸಮ್ಮತಿಸಿದರೆ ಮಂಡ್ಯ ಜಿಲ್ಲೆಯೊಂದರಲ್ಲೇ ಲಭ್ಯವಿರುವ 30 ಸಾವಿರ ಹೆಕ್ಟೇರ್ ಡೀಮ್ಡ್ ಅರಣ್ಯ ಪ್ರದೇಶದಿಂದಲೇ ಇಡೀ ಪರಿಹಾರ ಭೂಮಿಯನ್ನು ಒದಗಿಸುವ ಸಾಧ್ಯತೆಗಳ ಬಗ್ಗೆ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಯಿತು. ಜತೆಗೆ ಕಂದಾಯ ಇಲಾಖೆಯ ಭೂಮಿಯನ್ನಷ್ಟೆ ಪರಿಗಣಿಸಿದರೆ, ಯೋಜನೆಗಾಗಿ ಮುಳುಗಡೆಯಾಗಲಿರುವ ಪ್ರದೇಶದಷ್ಟೆ ಭೂಮಿ ನೀಡಲು ರಾಜ್ಯದ ಎಲ್ಲ ಜಿಲ್ಲೆಗಳು ಸಿದ್ದಂತೆ ನಡೆಸುವಂತೆ ಸಚಿವರು ಸೂಚನೆ ನೀಡಿದರು.

ಮಂಡ್ಯ ಜಿಲ್ಲೆಯಿಂದ 772 ಹೆಕ್ಟೇರ್ ಭೂಮಿ ನೀಡಲು ಈಗಾಗಲೇ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಉಳಿದ ಭೂಮಿಗಾಗಿ ಡೀಮ್ಡ್ ಅರಣ್ಯವನ್ನೇ ಅವಲಂಬಿಸಬೇಕಿದೆ ಎಂದು ಮಂಡ್ಯ ಜಿಲ್ಲಾಧಿಕಾರಿಗಳು ಸಭೆಗೆ ವಿವರಿಸಿದರು.

ಈಗಾಗಲೇ ಚಿತ್ರದುರ್ಗ, ರಾಯಚೂರು, ದಾವಣಗೆರೆ, ಬಾಗಲಕೋಟೆ, ಯಾದಗಿರಿ, ಹಾವೇರಿ, ಗದಗ, ವಿಜಯನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಾಮರಾಜನಗರ ಜಿಲ್ಲೆಗಳು ‘ಸಿ ಮತ್ತು ಡಿ’ ದರ್ಜೆಯ ಜಮೀನುಗಳ ಸರ್ವೆ ನಡೆಸಿ ಲಭ್ಯವಿರುವ ಭೂಮಿಯ ವರದಿ ಸಲ್ಲಿಸಿವೆ. ಕಂದಾಯ ವ್ಯಾಪ್ತಿಯ ಭೂಮಿಗೆ ಮಂಡ್ಯ ಜಿಲ್ಲಾಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಅದೇ ಮಾದರಿಯಲ್ಲಿ ಅರಣ್ಯ ಭೂಮಿ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಮತ್ತೋರ್ವ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸುವಂತೆ ಸಚಿವರು ಸೂಚಿಸಿದರು.

*ಮುಂದಿನ ವಾರ ದೆಹಲಿ ಭೇಟಿ*

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು (ACS) ಇದೇ ತಿಂಗಳ 7ರಂದು ದೆಹಲಿಗೆ ಭೇಟಿ ನೀಡಲಿದ್ದು, 8ನೇ ತಾರೀಖಿನಂದು ಡೀಮ್ಡ್ ಅರಣ್ಯವನ್ನು ಪರಿಹಾರ ಭೂಮಿಯನ್ನಾಗಿ ಪರಿಗಣಿಸುವ ಬಗ್ಗೆ ಸ್ಪಷ್ಟನೆ ಸಿಗುವ ನಿರೀಕ್ಷೆಯಿದೆ. ಒಮ್ಮೆ ಒಪ್ಪಿಗೆ ದೊರೆತರೆ ವಿಳಂಬವಿಲ್ಲದೆ ತಕ್ಷಣವೇ ಭೂಮಿ ಹಸ್ತಾಂತರಿಸಬೇಕು. ಹಣಕಾಸಿನ ಅಗತ್ಯವಿದ್ದರೆ ನೀರಾವರಿ ನಿಗಮಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿದ ಸಚಿವರು, ಕೇಂದ್ರ ಸರ್ಕಾರ ಹಾಗೂ ಅರಣ್ಯ ಇಲಾಖೆಯ ನಿಯಮಾವಳಿಗಳನ್ನು ಕಿಂಚಿತ್ತೂ ಉಲ್ಲಂಘಿಸದಂತೆ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ತಿಳಿಸಿದರು.

*10 ದಿನದಲ್ಲಿ ಮತ್ತೊಂದು ಸಭೆ*

ಮೇಕೆದಾಟು ಯೋಜನೆ ಸಂಬಂಧ ಮುಂದಿನ ಹತ್ತು ದಿನಗಳಲ್ಲಿ ಮತ್ತೊಂದು ಸಭೆ ನಡೆಸಲಾಗುವುದು. ಅಷ್ಟರೊಳಗೆ ಎಲ್ಲ ಜಿಲ್ಲಾಧಿಕಾರಿಗಳು, ಅರಣ್ಯಾಧಿಕಾರಿಗಳು ಒಟ್ಟಾಗಿ, ಭೂಮಿ ಸರ್ವೆ ನಡೆಸಿ, ವರದಿ ಸಲ್ಲಿಸಬೇಕು ಎಂದು ಸಚಿವರು ಸ್ಪಷ್ಟ ನಿರ್ದೇಶನ ನೀಡಿದರು.

ಈಗಾಗಲೇ ಡಿಪಿಆರ್ ಸಿದ್ದಗೊಂಡಿದ್ದು, CWC ಮಾಜಿ ಚೇರ್ಮೆಮ್ ಜತೆಗೆ ಸಂವಾದ ನಡೆಸಿ, ಈ ಡಿಪಿಆರ್ ಸಿದ್ದಗೊಂಡಿದ್ದು, ಮುಳುಗಡೆಯಾಗಲಿರುವ ಭೂಮಿಗೆ ನೀಡುವ ಪ್ರತಿ ಭೂಮಿ ಹಾಗೂ ಮುಳುಗಡೆಯಾಗಲಿರುವ ಮರಗಳ ಸರ್ವೆ ಪೂರ್ಣಗೊಳ್ಳಬೇಕು

*ಗೈರಾದ ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿ*

ಮೇಕೆದಾಟು ಯೋಜನೆಗೆ ಆದಷ್ಟು ಶೀಘ್ರವಾಗಿ ಅಡಿಗಲ್ಲು ಹಾಕಲೇಬೇಕು ಎಂಬ ದೃಢ ಸಂಕಲ್ಪ ವ್ಯಕ್ತಪಡಿಸಿದ ಸಚಿವರು, ಸಭೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ರಾಜ್ಯದ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿರುವ ಈ ಯೋಜನೆಗೆ ಯಾವುದೇ ಹಂತದಲ್ಲೂ ನಿರ್ಲಕ್ಷ್ಯ ಸಹಿಸುವುದಿಲ್ಲ ಎಂದು ಎಚ್ಚರಿಸಿದ ಅವರು, ಪೂರ್ವ ಮಾಹಿತಿ ನೀಡದೆ ವಿಡಿಯೋ ಕಾನ್ಫರೆನ್ಸ್‌ಗೆ ಗೈರುಹಾಜರಾದ ಕೆಲವು ಜಿಲ್ಲಾಧಿಕಾರಿಗಳಿಗೆ ತಕ್ಷಣವೇ ನೋಟಿಸ್ ಜಾರಿ ಮಾಡುವಂತೆ ಸರ್ಕಾರದ ಕಾರ್ಯದರ್ಶಿಗಳಿಗೆ ಖಡಕ್ ಸೂಚನೆ ನೀಡಿದರು.

ತಾವೂ ಸಹ ಮುಖ್ಯಮಂತ್ರಿಗಳೊಂದಿಗಿನ ಬರ ಪರಿಶೀಲನೆ ಕಾರ್ಯಕ್ರಮದ ನಡುವೆಯೂ, ಮೇಕೆದಾಟು ಯೋಜನೆಗೆ ಪ್ರಥಮ ಆದ್ಯತೆ ನೀಡಿ ಈ ಸಭೆ ನಡೆಸುತ್ತಿರುವುದಾಗಿ ತಿಳಿಸಿದ ಸಚಿವರು, ಅಧಿಕಾರಿಗಳಿಂದಲೂ ಅದೇ ಮಟ್ಟದ ಬದ್ಧತೆ ಹಾಗೂ ಕಾರ್ಯತತ್ಪರತೆಯನ್ನು ನಿರೀಕ್ಷಿಸುತ್ತಿರುವುದಾಗಿ ಸ್ಪಷ್ಟಪಡಿಸಿದರು.

*ಕೆಲಸ ಪೂರ್ಣಗೊಳಿಸಿ*

ಮುಳುಗಡೆಯಾಗಲಿರುವ ಭೂಮಿ ಹಾಗೂ ಮರಗಳ ಸರ್ವೆ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸಬೇಕು ಮತ್ತು ಪ್ರಗತಿ ಪರಿಶೀಲನೆಗಾಗಿ ಮುಂದಿನ ಹತ್ತು ದಿನಗಳಲ್ಲಿ ಮತ್ತೊಂದು ಸಭೆ ಕರೆಯಲಾಗುವುದು, ಅಷ್ಟರೊಳಗೆ ಕಂದಾಯ ಮತ್ತು ಅರಣ್ಯ ಅಧಿಕಾರಿಗಳು ಜಂಟಿ ಸರ್ವೆ ನಡೆಸಿ ಕಡ್ಡಾಯವಾಗಿ ವರದಿ ಸಲ್ಲಿಸಬೇಕು ಎಂದು ಸಚಿವರು ಗಡುವು ನೀಡಿದರು.

ಸಭೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಗೌರವ್ ಗುಪ್ತ, ಕಠಾರಿಯಾ, ಅಂಜುಮ್ ಪರ್ವೇಜ್, ಸಿಎನ್ಎನ್ ಎಂಡಿ ಮಹೇಶ್ ಹಾಗೂ ಮೇಕೆದಾಟು ಯೋಜನೆಯ ನೋಡಲ್ ಅಧಿಕಾರಿ ಡಾ. ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!