ಟ್ರಂಪ್ ಕಾರ್ಡ್…….

ಟ್ರಂಪ್ ಕಾರ್ಡ್…….

ವಿಶ್ವದ ಕ್ರೀಡಾ ಸಂಸ್ಕೃತಿಯ ಘನತೆಗೆ ಚ್ಯುತಿ ತಂದ ಡೊನಾಲ್ಡ್ ಟ್ರಂಪ್…

ವಿಶ್ವದ ಕ್ರೀಡಾ ಸಂಸ್ಕೃತಿಗೆ ಅವಮಾನ ಮಾಡಿದ, ವಂಚಿಸಿದ, ಬೆನ್ನಿಗೆ ಚೂರಿ ಇರಿದ, ಮಾನವ ಕುಲಕೋಟಿಗೆ ಅವಮಾನ ಮಾಡಿದ ವಿಶ್ವ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಮತ್ತು ಅಮೆರಿಕಾದ ಅಧ್ಯಕ್ಷ ಹಾಗೂ ಈ ಅನೈತಿಕ ನಿಯಮದಡಿ ಆಟ ಆಡಿಸಿದ ಅಮೆರಿಕ ಫುಟ್ಬಾಲ್ ತಂಡದ ಮುಖ್ಯ ಕೋಚ್ ಈ ಕ್ಷಣವೇ ರಾಜೀನಾಮೆ ನೀಡಿ ಹೊರ ನಡೆಯಬೇಕು. ವಿಶ್ವದ ಕ್ರೀಡಾ ಸಂಸ್ಕೃತಿಯ ಘನತೆಯನ್ನು ಎತ್ತಿ ಹಿಡಿಯಬೇಕು.

ಹಾಗೆಯೇ ಅಮೆರಿಕಾ ಫುಟ್ಬಾಲ್ ತಂಡವನ್ನು ಒಂದು ವರ್ಷದ ಅವಧಿಗೆ ನಿಷೇಧಿಸಬೇಕು. ಇದನ್ನು ಗಂಭೀರವಾಗಿ ಪ್ರತಿಭಟಿಸದೆ ಅದರ ವಿರುದ್ಧ ಆಡಿದ ಬೆಲ್ಜಿಯಂ ತಂಡವು ಸೇರಿ ಈ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಎಲ್ಲಾ ತಂಡಗಳು ಒಂದು ದೊಡ್ಡ ಮಟ್ಟದ ಹಣವನ್ನು ದಂಡದ ರೂಪದಲ್ಲಿ ನೀಡಿ, ವಿಶ್ವ ಕ್ರೀಡಾ ಸಂಸ್ಕೃತಿಯ ಉಳಿಸುವ ವ್ಯಕ್ತಿಗೆ ಒಂದು ಪ್ರಶಸ್ತಿಯನ್ನು ಸ್ಥಾಪಿಸಬೇಕು.

ಇದರ ಬಗ್ಗೆ ಇಡೀ ವಿಶ್ವದ ಎಲ್ಲ ಕ್ರೀಡಾಪಟುಗಳು, ಕ್ರೀಡಾ ಸಂಸ್ಥೆಗಳು, ಎಲ್ಲಾ ದೇಶಗಳ ಕ್ರೀಡಾ ಸಚಿವರು ಹಾಗೂ ಎಲ್ಲಾ ಪ್ರಬುದ್ಧ ಮನಸ್ಸುಗಳು ಧ್ವನಿ ಎತ್ತಲೇ ಬೇಕಿದೆ. ಇದೇನು ಹುಡುಗಾಟವಲ್ಲ. ಈ ವಿಶ್ವ ಟ್ರಂಪ್ ಅವರ ವೈಯಕ್ತಿಕ ಆಸ್ತಿಯೂ ಅಲ್ಲ. ಹಿಟ್ಲರ್, ಮುಸಲೋನಿ ಅಂತವರು ಆಗ ಈ ರೀತಿಯ ಕೆಲವು ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಇದೇ ಹಿಟ್ಲರ್ ನಮ್ಮ ದೇಶದ ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರಿಗೆ ಜರ್ಮನಿ ತಂಡಕ್ಕೆ ಸೇರ್ಪಡೆಯಾದರೆ ಸೈನ್ಯದಲ್ಲಿ ಮೇಜರ್ ಹುದ್ದೆಗೆ ಆಯ್ಕೆ ಮಾಡುವುದಾಗಿ ಆಮಿಷಹೊಡ್ಡಿ ತಿರಸ್ಕಾರಕ್ಕೆ ಒಳಗಾಗಿದ್ದು ನಮ್ಮ ಮುಂದಿದೆ. ಧ್ಯಾನ್ಚಂದ್ ಅವರ ದೇಶಭಕ್ತಿ, ಕ್ರೀಡಾ ಮನೋಭಾವವನ್ನು ಸ್ಮರಿಸುತ್ತಾ….

ಫುಟ್ಬಾಲ್ ಆಟದಲ್ಲಿ ಒಂದು ನಿಯಮವಿದೆ. ಅದರ ಪ್ರಕಾರ ಯಾರಾದರೂ ಆಟಗಾರರು ಆಟದಲ್ಲಿ ಒರಟುತನ ತೋರಿಸಿದರೆ ಅವರಿಗೆ ಹಳದಿ ಮತ್ತು ಕೆಂಪು ಕಾರ್ಡ್ ತೋರಿಸಲಾಗುತ್ತದೆ. ಎರಡು ಹಳದಿ ಕಾಡ್ ಪಡೆದರೆ ಆತ ಕೂಡಲೇ ಮೈದಾನ ಬಿಟ್ಟು ಹೊರ ಹೋಗಬೇಕು. ಒಂದು ಕೆಂಪು ಕಾರ್ಡ್ ಪಡೆದರೆ ಆತ ಆ ಕೂಡಲೇ ಮೈದಾನದಿಂದ ಹೊರ ಹೋಗಬೇಕು ಮತ್ತು ಮುಂದಿನ ಒಂದು ಪಂದ್ಯಕ್ಕೆ ಆತನನ್ನು ನಿಷೇಧಿಸಲಾಗುತ್ತದೆ.

ಇದೇ ರೀತಿ ಈ ವಿಶ್ವಕಪ್ ಪಂದ್ಯಾವಳಿಯಲ್ಲಿ ಅಮೆರಿಕಾದ ಆಟಗಾರ ಬಾಗೋಲನ್ ಅವರಿಗೆ ಕೆಂಪು ಕಾರ್ಡ್ ತೋರಿಸಿ ಹೊರಗೆ ಕಳುಹಿಸಲಾಯಿತು. ಮುಂದಿನ ಪಂದ್ಯದಲ್ಲಿ ಅವರು ಆಡುವಂತಿರಲಿಲ್ಲ. ಆದರೆ ಅಮೆರಿಕಾದ ಅಧ್ಯಕ್ಷ ವಿಶ್ವ ಪುಟ್ಬಾಲ್ ಸಂಸ್ಥೆಯ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿ ಆ ಪಂದ್ಯದ ಅಂಪೈರ್ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅವರ ನಿಷೇಧವನ್ನು ಅಮಾನತ್ತಿನಲ್ಲಿ ಇರಿಸಿ ಬಾಲೋಗನ್ ಅವರಿಗೆ ಮುಂದಿನ ಪಂದ್ಯದಲ್ಲಿ ಆಡಲು ಅನುಮತಿ ಕೇಳಿಕೊಂಡರು.

ಕ್ರೀಡಾ ವಿರೋಧಿ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷರು ಅದನ್ನು ಒಪ್ಪಿ ಬಾಲೋಗನ್ ಅವರನ್ನು ಆಡಿಸಿದರು. ಆದರೂ ಪಂದ್ಯದಲ್ಲಿ ಅಮೆರಿಕ 4 – 1 ರಿಂದ ಹೀನಾಯವಾಗಿ ಸೋತು ಕ್ರೀಡಾಕೂಟದಿಂದಲೇ ಹೊರ ನಡೆಯಿತು.

ಅದು ಏನೇ ಇರಲಿ ಡೊನಾಲ್ಡ್ ಟ್ರಂಪ್ ಮತ್ತು ಫುಟ್ಬಾಲ್ ಅಧ್ಯಕ್ಷರ ವರ್ತನೆ ಮಾತ್ರ ತೀರಾ ಆಘಾತಕಾರಿ ಮತ್ತು ಆಕ್ಷೇಪಾರ್ಹವಾದುದು.

ಹೌದು, ಫುಟ್ಬಾಲ್ ನಿಯಮಗಳ ಪ್ರಕಾರ ತೀರಾ ವಿಶೇಷ ಪ್ರಕರಣಗಳಲ್ಲಿ ಈ ರೀತಿ ಕೆಂಪು ಕಾರ್ಡ್ ಪಡೆದು ಅದನ್ನು ಮುಂದಿನ ಪಂದ್ಯಕ್ಕೆ ಅನ್ವಯಿಸದೆ ತಾತ್ಕಾಲಿಕ ತಡೆ ಹಿಡಿದು ಮುಂದೆ ಅದನ್ನು ಅನುಷ್ಠಾನಗೊಳಿಸಿದ ಅಪರೂಪದ ಒಂದೆರಡು ಪ್ರಕರಣಗಳಿವೆ. ಹಾಗೆಯೇ ತೀರ್ಪುಗಳನ್ನು ಪುನರ್ ಪರಿಶೀಲಿಸಿ ವಾಪಸ್ಸು ಪಡೆದ ವಿರಳ ಉದಾಹರಣೆಯು ಇದೆ. ಆದರೆ ಇಲ್ಲಿ ನಡೆದದ್ದರಲ್ಲಿ ಮಾತ್ರ ಆ ರೀತಿಯ ವಿಶೇಷತೆ ಏನೂ ಇರಲಿಲ್ಲ. ಜೊತೆಗೆ ಅಮೆರಿಕ ಅಧ್ಯಕ್ಷ ಸ್ವತಃ ತನ್ನ ದೇಶದ ತಂಡದ ಪರವಾಗಿ ಪಕ್ಷಪಾತದ ಹಸ್ತಕ್ಷೇಪ ಮಾಡಿದ್ದು ಸಹಿಸಲೇಬಾರದು.

ನನಗೆ ತುಂಬಾ ಆಶ್ಚರ್ಯವಾಗುತ್ತಿರುವುದು ಅಮೆರಿಕ ಜನರ ಬಗ್ಗೆ. ಸ್ವಾತಂತ್ರ್ಯ, ಸಮಾನತೆಯ ರಕ್ಷಕರು ಎಂದು ಹೇಳಿಕೊಳ್ಳುವ, ಈ ಪ್ರಜಾಪ್ರಭುತ್ವ ದೇಶದ ಅತ್ಯಂತ ಶ್ರೀಮಂತ, ಬುದ್ಧಿವಂತ ಜನರಿಗೆ ಏನಾಗಿದೆ. ಒಂದುವೇಳೆ ಚೀನಾದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟಿಸಿದರೆ ಗುಂಡಿಕ್ಕಲಾಗುತ್ತದೆ. ಇರಾನ್ ನಲ್ಲಿ, ಆಫ್ಘಾನಿಸ್ತಾನದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟಿಸಿದರೆ ಗುಂಡಿಕ್ಕಲಾಗುತ್ತದೆ. ಆದರೆ ಅಮೆರಿಕಾದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಭಟನೆ, ಪ್ರದರ್ಶನಗಳಿಗೆ ಸದಾ ಮುಕ್ತ ಅವಕಾಶವಿರುತ್ತದೆ. ಅಲ್ಲಿ ಪ್ರದರ್ಶನಕಾರರನ್ನು ಚದುರಿಸಲು ಗುಂಡಿಡುವುದು ಸುಲಭವೂ ಅಲ್ಲ ಹಾಗೆ ಮಾಡುವುದೂ ಇಲ್ಲ. ತೀರಾ ಹಿಂಸಾತ್ಮಕ ಪರಿಸ್ಥಿತಿ ನಿರ್ಮಾಣವಾದರೆ ಮಾತ್ರ ಹಾಗೆ ಮಾಡುತ್ತಾರೆ.

ಅಷ್ಟು ಸ್ವಾತಂತ್ರ್ಯವಿದ್ದರೂ ಸಹ ಅಮೆರಿಕಾದ ಜನ ಈ ಕೆಟ್ಟ, ದುಷ್ಟ ವ್ಯಕ್ತಿಯನ್ನು ಇನ್ನು ಸಹಿಸಿಕೊಂಡಿರುವುದು, ಪ್ರತಿಭಟನೆ ಮಾಡದಿರುವುದು ನಿಜಕ್ಕೂ ಆಶ್ಚರ್ಯ. ಅಲ್ಲಿನ ಸಂಸದರಾದರೂ ಇವರ ವಿರುದ್ಧ ವಾಗ್ದಂಡನೆ ವಿಧಿಸಲೇಬೇಕು. ಫುಟ್ಬಾಲ್ ಎಂಬುದು ಒಂದು ಕ್ರೀಡೆ. ಅಲ್ಲಿ ಕ್ರೀಡಾ ಮನೋಭಾವ ಮೆರೆಯಬೇಕು. ಗೆಲುವು ಸೋಲು ಇದ್ದದ್ದೇ. ಸಾಮರ್ಥ್ಯಕ್ಕೆ ತಕ್ಕಂತೆ ಫಲಿತಾಂಶ ನಿರ್ಧಾರವಾಗುತ್ತದೆ.

ಕೇವಲ 5 ಲಕ್ಷಕ್ಕಿಂತ ಕಡಿಮೆ ಇರುವ ಜನಸಂಖ್ಯೆಯ ಎರಡು ಮೂರು ದೇಶಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿವೆ. 140 ಕೋಟಿಗೂ ಹೆಚ್ಚಿನ ಜನಸಂಖ್ಯೆಯ ಭಾರತ ಮತ್ತು ಚೀನಾ ದೇಶಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಏಕೆಂದರೆ ಸಂಖೆ ಮುಖ್ಯವಲ್ಲ. ಕ್ರೀಡಾ ಸಾಮರ್ಥ್ಯ ಮುಖ್ಯ. ಇದನ್ನು ಕನಿಷ್ಠ ಡೊನಾಲ್ಡ್ ಟ್ರಂಪ್ ಎಂಬ ವ್ಯಕ್ತಿ ಅರ್ಥೈಸಿಕೊಳ್ಳಲು ಸಾಧ್ಯವಾಗದ್ದು ನಿಜಕ್ಕೂ ದುರಂತ. ಫುಟ್ಬಾಲ್ ಫೆಡರೇಷನ್ ಅಧ್ಯಕ್ಷನಿಗೆ ಯಾವ ಖಾಯಿಲೆ ಬಂದಿದೆಯೋ ಗೊತ್ತಿಲ್ಲ. ಇದಂತೂ ಖಂಡಿತವಾಗಿ ಕ್ರೀಡಾ ಸಂಸ್ಕೃತಿಗೆ ಮಾಡಿದ ಬಹುದೊಡ್ಡ ದ್ರೋಹ. ಇದನ್ನು ಸಹಿಸುವುದು ಸಹ ಮಹಾ ಪಾಪ.

ಜಗತ್ತಿನ ಅತ್ಯುತ್ತಮ ಬಾಂಧವ್ಯವನ್ನು ಉಳಿಸುವ ಕೆಲವೇ ವಿಷಯಗಳಲ್ಲಿ ಕ್ರೀಡೆ ಸಹ ಒಂದು. ಅದು ಕ್ರೀಡೆಯಾಗಿಯೇ ಉಳಿಯಬೇಕೆ ಹೊರತು ರಾಜಕೀಯ ಹಸ್ತಕ್ಷೇಪ ಇರಲೇಬಾರದು.

ನನಗೆ ಗೊತ್ತು, ನಮ್ಮ ಈ ಲೇಖನದ ಪ್ರಭಾವ ಡೊನಾಲ್ಡ್ ಟ್ರಂಪ್ ವರೆಗೂ, ಅಮೆರಿಕಾ ಜನರವರೆಗೂ ತಲುಪುವ ಸಾಧ್ಯತೆ ಇಲ್ಲ. ತಲುಪಬೇಕೆಂಬುದು ನಮ್ಮ ಆಶಯ. ತಲುಪಲು ಸಾಧ್ಯವಾಗುವುದಿಲ್ಲ ಎಂಬುದು ವಾಸ್ತವ. ಆದರೆ ಕನಿಷ್ಠ ನಮ್ಮ ಅಂತರಾಳದ ಧ್ವನಿಗಳಾದರೂ ಕ್ಷೀಣವಾಗಿಯಾದರೂ ಮೊಳಗುತ್ತಿರಲಿ ಎಂಬ ಆಶಯದಿಂದ ಈ ಲೇಖನ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *

error: Content is protected !!