
ಬೆಂಗಳೂರು ಗ್ರಾಮಾಂತರ: ಅಯೋಧ್ಯೆಯಲ್ಲಿ ಆರ್ಎಸ್ಎಸ್ ಹಾಗೂ ಬಿಜೆಪಿ ಪರವಾಗಿರುವವರಿಂದಲೇ ಭಾರೀ ಪ್ರಮಾಣದ ಲೂಟಿ ನಡೆದಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಆವರಣದಲ್ಲಿ ನಿರ್ಮಿಸಲಾದ 14 ಅಡಿ ಎತ್ತರದ ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಯೋಧ್ಯೆಯಲ್ಲಿ 20 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಬಂಗಾರ, ಬೆಳ್ಳಿ ಬೆಳ್ಳಿ ಇಟ್ಟಿಗೆ ಹಾಗೂ ಇತರೆ ಅಮೂಲ್ಯ ವಸ್ತುಗಳ ಲೂಟಿ ನಡೆದಿದೆ ಎಂಬ ಸುದ್ದಿಗಳು ಬರುತ್ತಿವೆ. ಈ ಲೂಟಿಯನ್ನು ಬಡವರು, ದಲಿತರು ಅಥವಾ ರೈತರು ಮಾಡಿಲ್ಲ. ಆರ್ಎಸ್ಎಸ್ ಮತ್ತು ಬಿಜೆಪಿ ಪರವಾಗಿರುವವರೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿದರು.
ನಿತ್ಯ ದೇವರ ಹೆಸರನ್ನು ಹೇಳುವವರು, ಅದೇ ದೇವರ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ. ಧರ್ಮ ಮತ್ತು ಶ್ರೀರಾಮನ ಹೆಸರಿನಲ್ಲಿ ಪ್ರಚಾರ ಮಾಡುವವರೇ ಇಂತಹ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಖರ್ಗೆ ಟೀಕಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳನ್ನು ಉಲ್ಲೇಖಿಸಿದ ಅವರು, ಮನುಷ್ಯನಿಗೆ ಧರ್ಮದ ಅವಶ್ಯಕತೆ ಇದೆ. ಆದರೆ ಧರ್ಮಕ್ಕಾಗಿ ಮನುಷ್ಯ ಹುಟ್ಟಿಲ್ಲ. ಹುಟ್ಟಿದ ಬಳಿಕ ಯಾವುದೇ ಧರ್ಮವನ್ನು ಅನುಸರಿಸಬಹುದು. ಧರ್ಮ ಮಾತ್ರದಿಂದ ಸಮಾಜದ ಉದ್ಧಾರ ಸಾಧ್ಯವಿಲ್ಲ. ಸಾವಿರಾರು ವರ್ಷಗಳಿಂದ ಧರ್ಮವಿದ್ದರೂ ಸಮಾಜದಲ್ಲಿ ಸಮಾನತೆ ಬಂದಿರಲಿಲ್ಲ. ಅಂಬೇಡ್ಕರ್ ಅವರು ಸಂವಿಧಾನ ನೀಡಿದ ಬಳಿಕವೇ ಶಿಕ್ಷಣ ಮತ್ತು ಹಕ್ಕುಗಳು ಸಾಮಾನ್ಯ ಜನರಿಗೆ ದೊರೆಯಲು ಸಾಧ್ಯವಾಯಿತು ಎಂದರು.
ಎಸ್ಐಆರ್ ಮೂಲಕ ಮತ ಕಳವು ನಡೆಯುತ್ತಿದೆ..
ದೇವರ ಹೆಸರಿನಲ್ಲಿ ಕೆಲ ಧಾರ್ಮಿಕ ಮುಖಂಡರು ಕಳ್ಳತನ ಮಾಡುತ್ತಿದ್ದಾರೆ. ಮತ್ತೊಂದೆಡೆ ಎಸ್ಐಆರ್ ಮೂಲಕ ಮತ ಕಳವು ನಡೆಸಲಾಗುತ್ತಿದೆ ಎಂದು ಆರೋಪಿಸಿದ ಖರ್ಗೆ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಹರಿಯಾಣ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಮತದಾರರ ಹಕ್ಕು ಕಸಿಯುವ ಪ್ರಯತ್ನ ನಡೆದಿದೆ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮತ ಕಳವು ಮಾಡಿ ಅಧಿಕಾರ ಉಳಿಸಿಕೊಳ್ಳಬಹುದು, ಯಾರನ್ನಾದರೂ ಜೈಲಿಗೆ ಕಳುಹಿಸಬಹುದು, ಇಡಿ ಮತ್ತು ಸಿಬಿಐ ಮೂಲಕ ಪ್ರಕರಣ ದಾಖಲಿಸಬಹುದು ಎಂಬ ಮನೋಭಾವ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಹೇಳಿದರು.
ಜನರು ಸಂವಿಧಾನದ ಮಹತ್ವವನ್ನು ಅರಿತು ಅದರ ರಕ್ಷಣೆಗೆ ಒಗ್ಗಟ್ಟಾಗಿ ನಿಲ್ಲದಿದ್ದರೆ ನ್ಯಾಯ ದೊರೆಯುವುದಿಲ್ಲ ಎಂದು ಅವರು ಎಚ್ಚರಿಸಿದರು.
ಯುವಕರಿಗೆ ಉದ್ಯೋಗ ಕಲ್ಪಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಅಗತ್ಯ ವಸ್ತುಗಳ ಬೆಲೆ ನಿರಂತರ ಏರಿಕೆಯಾಗುತ್ತಿದ್ದು, ಬಡವರು ಸಂಕಷ್ಟ ಎದುರಿಸುತ್ತಿದ್ದಾರೆ. ಎಲ್ಲರಿಗೂ ಉದ್ಯೋಗ ಹಾಗೂ ಆಹಾರ ಒದಗಿಸುವ ಹೊಣೆ ಸರ್ಕಾರಗಳ ಮೇಲಿದೆ. ಆದರೆ ಬಿಜೆಪಿ ಸರ್ಕಾರ ಈ ವಿಷಯಗಳ ಬಗ್ಗೆ ಗಮನಹರಿಸದೆ ಎಲ್ಲೆಡೆ ಮತ ರಾಜಕಾರಣವನ್ನೇ ಮಾಡುತ್ತಿದೆ ಎಂದು ಖರ್ಗೆ ಆರೋಪಿಸಿದರು.