
ದೊಡ್ಡಬಳ್ಳಾಪುರ: ತಾಲ್ಲೂಕಿನ ಹುಸ್ಕೂರು ಗ್ರಾಮದಲ್ಲಿ ಶ್ರೀ ಸಪ್ಪಲಮ್ಮದೇವಿ ಹಾಗೂ ಶ್ರೀ ದುರ್ಗಮ್ಮದೇವಿ ಜಾತ್ರಾ ಮಹೋತ್ಸವವು ಭಕ್ತಿಭಾವ ಮತ್ತು ಸಡಗರದಿಂದ ನಡೆಯಿತು.
ಜಾತ್ರೆಯ ಅಂಗವಾಗಿ ಗ್ರಾಮದ ಶ್ರೀ ಸಪ್ಪಲಮ್ಮದೇವಿ ಮತ್ತು ಶ್ರೀ ದುರ್ಗಮ್ಮದೇವಿ ದೇವತಾ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ, ಪೂಜೆ ಹಾಗೂ ಆರತಿಗಳನ್ನು ನೆರವೇರಿಸಲಾಯಿತು.

ಶ್ರೀ ಆಂಜನೇಯಸ್ವಾಮಿ ಹಾಗೂ ಶ್ರೀ ಬಸವಣ್ಣ ದೇವರಿಗೆ ಬೆಲ್ಲದ ಆರತಿ, ಶ್ರೀ ಶನಿಮಹಾತ್ಮ ಸ್ವಾಮಿಗೆ ಎಳ್ಳಾರತಿ ಬೆಳಗುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಬಳಿಕ ಗ್ರಾಮ ದೇವತೆಗಳಾದ ಶ್ರೀ ಮುನೇಶ್ವರ, ಶ್ರೀ ದೊಡ್ಡಮ್ಮ, ಶ್ರೀ ಮಹೇಶ್ವರಮ್ಮ, ಶ್ರೀ ದುರ್ಗಮ್ಮ, ಶ್ರೀ ಸಪ್ಪಲಮ್ಮ ಹಾಗೂ ಶ್ರೀ ನಲ್ಲು ದೇವತಾ ಮೂರ್ತಿಗಳಿಗೆ ವಿಶೇಷ ಆರತಿಗಳನ್ನು ಬೆಳಗಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ಆರತಿಗಳನ್ನು ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತಿ ಸಂಭ್ರಮ ಮೆರೆದರು.

ಜೂನ್ 24ರಂದು ಗ್ರಾಮ ಜಾತ್ರೆಯ ಪ್ರಮುಖ ಆಚರಣೆಗಳಾದ ಮರಿ ಹೊಡೆಯುವ ಕಾರ್ಯಕ್ರಮ ನಡೆಯಿತು. ಜೂನ್ 25ರಂದು ಮಧ್ಯಾಹ್ನ ಶ್ರೀ ಸಪ್ಪಲಮ್ಮ ಹಾಗೂ ಶ್ರೀ ದುರ್ಗಮ್ಮ ದೇವತೆಗಳ ಅದ್ದೂರಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಲಿದೆ.
ಸುಮಾರು 32 ವರ್ಷಗಳ ಬಳಿಕ ಗ್ರಾಮದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಗ್ರಾಮಸ್ಥರು ಹಾಗೂ ಮುಖಂಡರ ಸಹಕಾರದಿಂದ ವಿಜೃಂಭಣೆಯಿಂದ ಆಯೋಜಿಸಲಾಗಿದೆ.

ಹುಸ್ಕೂರು ಗ್ರಾಮದ ಮುಖಂಡ ಟಿ.ಆನಂದ್ ಮಾತನಾಡಿ, ಸುಮಾರು 32 ವರ್ಷಗಳ ಬಳಿಕ ಗ್ರಾಮದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಗ್ರಾಮಸ್ಥರು ಹಾಗೂ ಮುಖಂಡರ ಸಹಕಾರದಿಂದ ವಿಜೃಂಭಣೆಯಿಂದ ಆಯೋಜಿಸಲಾಗಿದೆ. ಗ್ರಾಮ ಸೇರಿದಂತೆ ಎಲ್ಲೆಡೆ ಉತ್ತಮ ಮಳೆ-ಬೆಳೆ ಆಗಿ ಲೋಕ ಸುಭಿಕ್ಷವಾಗಿರಲಿ ಎಂದು ಪ್ರಾರ್ಥಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಜೆಡಿಎಸ್ ಮಾಜಿ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ಊರಹಬ್ಬಗಳು ಗ್ರಾಮದಲ್ಲಿನ ಜನರಲ್ಲಿ ಒಗ್ಗಟ್ಟು ಮೂಡಿಸಲು ಸಹಾಕರಿಯಾಗುತ್ತವೆ. ಶಕ್ತಿ ದೇವತೆಗಳ ಆರಾಧನೆಯಿಂದ ಎಲ್ಲಾ ತರಹದ ಸಂಕಷ್ಟಗಳಿಂದ ಊರು ಸುಭಿಕ್ಷವಾಗಿರಲಿದೆ ಎಂದರು.

ಈ ವೇಳೆ ಜೆಡಿಎಸ್ ಮಾಜಿ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ, ಗ್ರಾಮದ ಮುಖಂಡರಾದ ಟಿ.ಆನಂದ್, ಲಕ್ಷ್ಮೀಪತಿ, ಪುಟ್ಟರಾಜು, ಕುಂಟನಹಳ್ಳಿ ಮಂಜುನಾಥ, ರವಿಕುಮಾರ್ ಮತ್ತಿತ್ತರರು ಇದ್ದರು.