
ಇಂದು ಬೆಂಗಳೂರಿನ ಮಡಿವಾಳದಲ್ಲಿರುವ ಎಫ್ಎಸ್ಎಲ್ ಕಚೇರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಪರಿಶೀಲನಾ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಕರ್ನಾಟಕದ ಫೊರೆನ್ಸಿಕ್ ವಿಜ್ಞಾನ ಪ್ರಯೋಗಾಲಯವು ಅಪರಾಧ ತನಿಖೆಯಲ್ಲಿ ವೈಜ್ಞಾನಿಕ ನಿಖರತೆ, ತಾಂತ್ರಿಕ ಸಾಮರ್ಥ್ಯ ಮತ್ತು ವೇಗದ ವರದಿ ವ್ಯವಸ್ಥೆಯಲ್ಲಿ ದೇಶದ ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿರುವುದು ನಿಜಕ್ಕೂ ಸಂತಸದ ವಿಷಯ ಎಂದರು.
ದೇಶದಲ್ಲಿಯೇ ಅತ್ಯಾಧುನಿಕ ಹಾಗೂ ಅತ್ಯಂತ ಪರಿಣಾಮಕಾರಿ ಫೊರೆನ್ಸಿಕ್ ತನಿಖಾ ವ್ಯವಸ್ಥೆ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ರಾಜ್ಯದ ಫೊರೆನ್ಸಿಕ್ ವಿಜ್ಞಾನ ಪ್ರಯೋಗಾಲಯ ನಿರ್ದೇಶನಾಲಯವು ರಾಷ್ಟ್ರವೇ ಹೆಮ್ಮೆಪಡುವಂತಹ ಸಾಧನೆ ಮಾಡಿದೆ.
ಕರ್ನಾಟಕ ಎಫ್ಎಸ್ಎಲ್ಗೆ ರಾಷ್ಟ್ರೀಯ ಮಾನ್ಯತಾ ಮಂಡಳಿ ಮಾನ್ಯತೆ ದೊರೆತಿದ್ದು, ಅಂತರರಾಷ್ಟ್ರೀಯ ಗುಣಮಟ್ಟದ ಮಾನದಂಡಗಳಡಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಡಿಜಿಟಲ್ ಮತ್ತು ಮೊಬೈಲ್ ಫೊರೆನ್ಸಿಕ್ ವಿಭಾಗಗಳಿಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಲೆಕ್ಟ್ರಾನಿಕ್ಸ್ ಎವಿಡೆನ್ಸ್ ಎಕ್ಸಾಮಿನರ್ ಸ್ಥಾನಮಾನ ದೊರೆತಿರುವುದು ದೇಶದಲ್ಲೇ ಗಮನಾರ್ಹ ಸಾಧನೆಯಾಗಿದೆ ಎಂದು ಹೇಳಿದರು.

ಇತ್ತೀಚೆಗೆ ಸರ್ಕಾರದ ಸಂಸ್ಥೆಗಳಿಗೆ ನೀಡಲಾಗುವ ಪ್ರತಿಷ್ಠಿತ ಡಿ.ಎಸ್.ಸಿ.ಐ ಪ್ರಶಸ್ತಿಯನ್ನು ಕರ್ನಾಟಕ ಎಫ್ಎಸ್ಎಲ್ ತನ್ನ ಅತ್ಯುತ್ತಮ ಡಿಜಿಟಲ್ ಫೊರೆನ್ಸಿಕ್ ಸಾಮರ್ಥ್ಯಕ್ಕಾಗಿ ಪಡೆದಿದೆ. ಇದು ರಾಜ್ಯದ ತನಿಖಾ ವ್ಯವಸ್ಥೆಯ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಎಂದರು.
ಗೌರಿ ಲಂಕೇಶ್, ಎಂ.ಎಂ. ಕಲಬುರ್ಗಿ, ನರೇಂದ್ರ ದಭೋಲ್ಕರ್ ಹಾಗೂ ಗೋವಿಂದ ಪನ್ಸಾರೆ ಹತ್ಯೆ ಪ್ರಕರಣಗಳ ನಡುವಿನ ವೈಜ್ಞಾನಿಕ ಸಂಪರ್ಕವನ್ನು ಫೊರೆನ್ಸಿಕ್ ವಿಶ್ಲೇಷಣೆಯ ಮೂಲಕ ಪತ್ತೆಹಚ್ಚಿದ ಕರ್ನಾಟಕ ಎಫ್ಎಸ್ಎಲ್ ಕಾರ್ಯ ರಾಷ್ಟ್ರಮಟ್ಟದಲ್ಲಿ ದೊಡ್ಡ ಮೆಚ್ಚುಗೆ ಪಡೆದಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಮೊದಲ ಬಾರಿಗೆ “ವೈಲ್ಡ್ ಲೈಫ್ ಫೊರೆನ್ಸಿಕ್ ಘಟಕ” ಆರಂಭಿಸಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ವನ್ಯಜೀವಿ ಅಪರಾಧಗಳು ಹಾಗೂ ಅಕ್ರಮ ಸಾಗಾಟ ಪ್ರಕರಣಗಳ ತನಿಖೆಗೆ ಇದು ನೆರವಾಗಲಿದೆ ಎಂದರು.
ಎಫ್ಎಸ್ಎಲ್ನಲ್ಲಿ ಪ್ರಸ್ತುತ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಆದ್ಯತೆ ನೀಡಲಿದ್ದು, ವೈಜ್ಞಾನಿಕ ಅಧಿಕಾರಿಗಳು ಸೇರಿದಂತೆ ಅಗತ್ಯ ಸಿಬ್ಬಂದಿ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದೆ.
ಕಳೆದ ಕೆಲವು ವರ್ಷಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾದರೂ, ತಂತ್ರಜ್ಞಾನ ಬಳಕೆ ಮತ್ತು ಕಾರ್ಯಕ್ಷಮತೆಯಿಂದ ಹಲವು ವಿಭಾಗಗಳಲ್ಲಿ ವರದಿ ನೀಡುವ ಅವಧಿಯನ್ನು 40 ತಿಂಗಳಿಂದ ಕೇವಲ 1 ರಿಂದ 4 ತಿಂಗಳಿಗೆ ಇಳಿಸಿರುವುದು ಇಲಾಖೆಯ ಮತ್ತೊಂದು ಗಮನಾರ್ಹ ಸಾಧನೆಯಾಗಿದೆ ಎಂದು ಹೇಳಿದರು.

ಅಪರಾಧ ತನಿಖೆಯಲ್ಲಿ ನಿಖರತೆ, ವೇಗ ಮತ್ತು ಪಾರದರ್ಶಕತೆ ತರಲು ಕರ್ನಾಟಕ ಸರ್ಕಾರ ಫೊರೆನ್ಸಿಕ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿ, ದೇಶದಲ್ಲೇ ಮಾದರಿಯಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಲು ಗ್ಯಾರಂಟಿ ಸರ್ಕಾರ ಬದ್ಧವಾಗಿದೆ ಎಂದರು.