
ಸಮಾಜದಲ್ಲಿ ದಲಿತ ಸಮುದಾಯಗಳು ಎದುರಿಸುತ್ತಿದ್ದ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿದ ಪ್ರೊ. ಬಿ ಕೃಷ್ಣಪ್ಪ ಅವರು ಎಲ್ಲರಿಗೂ ಮಾದರಿ. ಅವರ ಹೋರಾಟ ಸದಾ ಅವಿಸ್ಮರಣೀಯ ಎಂದು ಘಾಟಿ ಸುಬ್ರಹ್ಮಣ್ಯ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಆರ್.ವಿ ಮಹೇಶ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಘಟಕದ ವತಿಯಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಪ್ರೊ. ಬಿ ಕೃಷ್ಣಪ್ಪ ರವರ 80ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.
ಕೃಷ್ಣಪ್ಪ ಅವರು ಅಂಬೇಡ್ಕರ್ ಚಿಂತನೆಗಳನ್ನು ಅನುಸರಿಸಿ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಎಲ್ಲರಿಗೂ ಶಿಕ್ಷಣ ಸಿಗಬೇಕು ಎಂಬ ಬಗ್ಗೆ ಪ್ರತಿಪಾದಿಸಿದರು. ಕೃಷ್ಣಪ್ಪ ಅವರು ಶಿಕ್ಷಣ, ಸಂಘಟನೆ, ಹೋರಾಟದ ಸಿದ್ದಾಂತದೊಂದಿಗೆ ಸಾಕಷ್ಟು ಹೋರಾಟಗಳನ್ನು ನಡೆಸಿ, ದಲಿತ ಸಮುದಾಯದ ಏಳಿಗೆಗೆ ದುಡಿದವರಲ್ಲಿ ಪ್ರಮುಖರು ಎಂದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ರಾಮಮೂರ್ತಿ(ರಾಮು) ಮಾತನಾಡಿ, ಪ್ರೊ.ಬಿ ಕೃಷ್ಣಪ್ಪ ಅವರು ಕರ್ನಾಟಕದ ಪ್ರಮುಖ ದಲಿತ ಚಳವಳಿಯ ಧೀಮಂತ ನಾಯಕರು, ಸಾಮಾಜಿಕ ಹೋರಾಟಗಾರರು ಮತ್ತು ಪ್ರಖರ ಸಾಹಿತಿಯಾಗಿದ್ದರು. ಇವರು ಕರ್ನಾಟಕದಲ್ಲಿ ದಲಿತರು, ದಮನಿತರು ಮತ್ತು ಶೋಷಿತರ ಹಕ್ಕುಗಳಿಗಾಗಿ ಧ್ವನಿ ಎತ್ತಲು ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಸ್ಥಾಪಿಸಿದರು. ಇವರು ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳಿಂದ ಪ್ರೇರಿತರಾಗಿ 1970ರ ದಶಕದಲ್ಲಿ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಅಂಬೇಡ್ಕರ್ ಅವರ ಚಿಂತನೆಗಳನ್ನು ಬಿತ್ತಿದರು. ಶೋಷಿತ ಸಮುದಾಯಗಳಿಗೆ ಸಂವಿಧಾನಬದ್ಧ ಹಕ್ಕುಗಳನ್ನು ದೊರಕಿಸಿಕೊಡಲು ಶ್ರಮಿಸಿದರು. ರಾಜ್ಯದ ನಾನಾ ಕಡೆಗಳಲ್ಲಿ ಹೋರಾಟ ನಡೆಸಿದರು ಎಂದು ಹೇಳಿದರು.
ಈ ವೇಳೆ ಮುಖಂಡರಾದ ಆರ್.ವಿ ಶಿವಕುಮಾರ್, ಜಿಲ್ಲಾ ಸಂಚಾಲಕ ರಾಮಮೂರ್ತಿ ಬೈಲಾಂಜಿನಮೂರ್ತಿ, ಶ್ರೀನಿವಾಸ ಎನ್, ಪೂಜರಂಗಯ್ಯ, ಮಾರಪ್ಪ, ಹನುಮಂತರಾಯಪ್ಪ, ಓಬಳೇಶ್, ಸುಬ್ಬು, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಉಮಾದೇವಿ, ನಾಗರತ್ನಮ್ಮ, ಆಶಾ, ಪ್ರೇಮಾ, ವಿದ್ಯಾ ಸೇರಿದಂತೆ ಇತರರು ಉಪಸ್ಥಿತರಿದ್ದರು.