ಬಗರ್ ಹುಕ್ಕುಂ ಸಮಿತಿ ಸಭೆ ವಿಳಂಬ: ಹಕ್ಕುಪತ್ರಕ್ಕಾಗಿ ರೈತರ ಅಲೆದಾಟ: ಅರ್ಜಿ ಸಲ್ಲಿಸಿ ವರ್ಷಗಳಾದರೂ ಸಾಗುವಳಿ ಚೀಟಿ ಇಲ್ಲ: ಆತಂಕದಲ್ಲಿ ರೈತ

ಗ್ರಾಮೀಣ ಭಾಗದಲ್ಲಿ ಜೀವನ ನಡೆಸಲು ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡಿಕೊಂಡು ಜೀವನೋಪಾಯ ರೂಪಿಸಿಕೊಂಡಿರುವ ರೈತಾಪಿ ವರ್ಗದ ಜನರಿಗಾಗಿ ಸರ್ಕಾರ ಸಾಗುವಳಿ ಚೀಟಿಗಳನ್ನ ನೀಡುವ ಮೂಲಕ ರೈತನ ಬದುಕಿಗೆ ಆಸರೆಯಾಗಿದೆ. ಹೀಗೆ ಸುಮಾರು 25-30 ವರ್ಷಗಳಿಂದ ವ್ಯವಸಾಯ ಮಾಡಿಕೊಂಡಿರುವ ಜಮೀನುಗಳನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಅರ್ಜಿ ನಮೂನೆ-53 ಸಲ್ಲಿಸಿದ ರೈತರು ತಾಲ್ಲೂಕು ಕಚೇರಿ, ಕಂದಾಯ ಇಲಾಖೆಗೆ ಅಲೆದು ಅಲೆದು ಚಪ್ಪಲಿಗಳು ಸವೆದದ್ದು ಬಿಟ್ಟರೆ ಒಂದೇ ಒಂದು ಪೂರಕ ಕೆಲಸವಾಗಿಲ್ಲ. ಮುಖ್ಯವಾಗಿ ಸರ್ಕಾರ ಬಗರ್ ಹುಕ್ಕುಂ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ರೈತರಿಗೆ ಹಕ್ಕುಪತ್ರ ನೀಡುವ ಉದ್ದೇಶದಿಂದ ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಿದೆ. ಆದರೆ, ತಾಲೂಕುಗಳಲ್ಲಿ ಭೂ ಮಂಜೂರಾತಿ ಸಮಿತಿ ಕಳೆದ ಮೂರು ವರ್ಷಗಳಿಂದ ಬೆರಳೆಣಿಕೆಯಷ್ಟು ಸಭೆಗಳನ್ನು ಮಾಡಲಷ್ಟೆ ಸೀಮಿತವಾಗಿದೆ. ಇದೂವರೆಗೂ ಒಬ್ಬ ಅರ್ಹ ರೈತನಿಗೆ ಸಾಗುವಳಿ ಚೀಟಿ ವಿತರಣೆ ಮಾಡಿಲ್ಲ. ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿರುವ ರೈತರು, ಡಿಸಿ‌ ಕಚೇರಿ, ತಹಶೀಲ್ದಾರ್ ಕಚೇರಿ, ಕಂದಾಯ ಕಚೇರಿಗಳ ಸುತ್ತಲೂ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜಮೀನು ದಾಖಲೆ ಇಲ್ಲದೆ ರೈತರ ಪರದಾಟ:

ರೈತ ಕುಟುಂಬಗಳು ಹಲವು ತಲೆಮಾರುಗಳಿಂದ ಸರ್ಕಾರದ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಕೆಲವರು ಬೆಳೆ ಸಾಲ ಪಡೆದು ಕೃಷಿ ಮಾಡುತ್ತಿದ್ದರೂ, ಜಮೀನಿನ ದಾಖಲೆ ಇಲ್ಲದ ಕಾರಣ ಬ್ಯಾಂಕ್ ಸಾಲ, ಬೆಳೆ ವಿಮೆ ಸೇರಿದಂತೆ ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಮಳೆ, ಬೆಳೆ ಹಾನಿ, ಆರ್ಥಿಕ ಸಂಕಷ್ಟಗಳ ನಡುವೆಯೂ ಹಕ್ಕುಪತ್ರ ಸಿಗದಿರುವುದು ರೈತರ ಬೇಸರಕ್ಕೆ ಕಾರಣವಾಗಿದೆ.

ಭೂಮಿಯ ಸಾಗುವಳಿ ಚೀಟಿ ಇಲ್ಲದ ಕಾರಣ ಅನೇಕ ಕುಟುಂಬಗಳು ಆತಂಕದಲ್ಲಿವೆ. ಯಾವಾಗ ಬೇಕಾದರೂ ಜಮೀನು ಖಾಲಿ ಮಾಡುವಂತೆ ನೋಟಿಸ್ ಬರುತ್ತದೆ ಎಂಬ ಭಯದಲ್ಲಿ ರೈತರು ಬದುಕುತ್ತಿದ್ದಾರೆ. ಮತ್ತೊಂದೆಡೆ, ಕೆಲವು ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಹಾಗೂ ರಾಜಸ್ವ ಇಲಾಖೆಗಳ ನಡುವಿನ ಗೊಂದಲವೂ ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.

ಕೆಐಎಡಿಬಿ ಭೂಸ್ವಾಧೀನದ ಆತಂಕ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಗಳು ಬಗರ್ ಹುಕ್ಕುಂ ಅರ್ಜಿದಾರರಲ್ಲಿ ಮತ್ತಷ್ಟು ಆತಂಕ ಮೂಡಿಸಿವೆ. ಹಲವು ವರ್ಷಗಳಿಂದ ಉಳುಮೆ ಮಾಡುತ್ತಿರುವ ಜಮೀನುಗಳು ದಾಖಲೆ ಇಲ್ಲದ ಕಾರಣ ಯಾವುದೇ ಕ್ಷಣದಲ್ಲಿ ಕೈತಪ್ಪುವ ಭೀತಿ ರೈತರನ್ನು ಕಾಡುತ್ತಿದೆ.

ಕೆಲವು ಗ್ರಾಮಗಳಲ್ಲಿ ಸ್ಮಶಾನ, ರಸ್ತೆ, ಕೈಗಾರಿಕಾ ಯೋಜನೆಗಳ ಹೆಸರಿನಲ್ಲಿ ರೈತರು ಕೃಷಿ ಮಾಡುತ್ತಿರುವ ಜಾಗಗಳನ್ನು ವಶಪಡಿಸಿಕೊಳ್ಳಲು ಯತ್ನಗಳು ನಡೆಯುತ್ತಿರುವ ಆರೋಪವೂ ಕೇಳಿಬರುತ್ತಿದೆ. ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗಳ ನಡುವಿನ ಗೊಂದಲವೂ ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.

ಏಪ್ರಿಲ್‌ನಲ್ಲಿ ಭರವಸೆ, ಮೇ ಅಂತ್ಯವಾದರೂ ಕ್ರಮವಿಲ್ಲ

ಏಪ್ರಿಲ್ 13ರಂದು ದೊಡ್ಡಬಳ್ಳಾಪುರ ನಗರದ ತಾಲೂಕು ಕಚೇರಿ ಆವರಣದಲ್ಲಿ ಶಾಸಕ ಧೀರಜ್ ಮುನಿರಾಜು ಅಧ್ಯಕ್ಷತೆಯಲ್ಲಿ ನಡೆದ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಇದೇ ಏಪ್ರಿಲ್ ತಿಂಗಳಾಂತ್ಯಕ್ಕೆ ಬಗರ್ ಹುಕ್ಕುಂ ಸಮಿತಿ ಸಭೆ ನಡೆಸಿ ರೈತರಿಗೆ ಭೂ ಮಂಜೂರು ಮಾಡುವ ಪ್ರಕ್ರಿಯೆ ಆರಂಭಿಸಲಾಗುವುದು. ತಿಂಗಳಾಂತ್ಯಕ್ಕೆ ಸಭೆ ಮಾಡಿ ಕನಿಷ್ಟ 100 ಮಂದಿಗೆ ಸಾಗುವಳಿ ಚೀಟಿ ವಿತರಣೆ ಭರವಸೆ ನೀಡಿದ್ದರು. ಆದರೆ, ಏಪ್ರಿಲ್ ಕಳೆದು, ಈಗ ಮೇ ತಿಂಗಳೂ ಮುಗಿಯುವ ಹಂತಕ್ಕೆ ಬಂದರೂ ಸಮಿತಿ ಸಭೆ ನಡೆಯದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಜೊತೆಗೆ ಹೊಸಕೋಟೆ, ನೆಲಮಂಗಲ, ದೇವನಹಳ್ಳಿಯಲ್ಲಿಯೂ ಸಹ ಸಮಿತಿ ಸಭೆ ನಡೆಸಿ ಅರ್ಹ ರೈತರಿಗೆ ಸಾಗುವಳಿ ಚೀಟಿ ನೀಡಿಲ್ಲ. ಇನ್ನಷ್ಟು ವಿಳಂಬ ಮಾಡದೆ ತಕ್ಷಣ ಸಮಿತಿ ಸಭೆ ನಡೆಸಿ ಅರ್ಹ ರೈತರಿಗೆ ಸಾಗುವಳಿ ಚೀಟಿ ವಿತರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಒಟ್ಟಾರೆ, ಬಗರ್ ಹುಕ್ಕುಂ ಸಮಸ್ಯೆ ಕೇವಲ ಭೂಮಿಯ ವಿಚಾರವಲ್ಲ, ಅದು ಸಾವಿರಾರು ರೈತ ಕುಟುಂಬಗಳ ಬದುಕಿನ ಪ್ರಶ್ನೆಯಾಗಿದೆ. ಸರ್ಕಾರ ಶೀಘ್ರ ಕ್ರಮ ಕೈಗೊಂಡು ರೈತರ ದಶಕಗಳ ಕನಸಾದ ಹಕ್ಕುಪತ್ರ ವಿತರಣೆಗೆ ಸ್ಪಷ್ಟ ದಿಕ್ಕು ನೀಡಬೇಕಿದೆ.

ಸಾಗುವಳಿ ಚೀಟಿ ವಿತರಣೆ ಕುರಿತು ಶಾಸಕರೊಂದಿಗೆ ಚರ್ಚೆ ಮಾಡಲಾಗಿದೆ. ಜೂನ್ ಮೊದಲ ವಾರದಲ್ಲಿ ಬಗುರ್ ಹುಕುಂ ಸಮಿತಿ ಸಭೆ ಮಾಡಲಾಗುವುದು. ಸುಮಾರು 60 ರಿಂದ 100 ಮಂದಿ ಅರ್ಹ ರೈತರಿಗೆ ಸಾಗುವಳಿ ಚೀಟಿ ವಿತರಣೆಗೆ ಕ್ರಮ ವಹಿಸಲಾಗಿದೆ ಎಂದು ತಹಶೀಲ್ದಾರ್ ಮಲ್ಲಪ್ಪ ಕೆ ಯರಗೋಳ ತಿಳಿಸಿದ್ದಾರೆ.

ಸುಮಾರು ಮೂವತ್ತು ವರ್ಷಗಳಿಂದ ಗೋಮಾಳದಲ್ಲಿ ಉತ್ತು ಬಿತ್ತು ಬೆಳೆದು ಜೀವನ ಸಾಗಿಸುತ್ತಿದ್ದೇವೆ. ನಮೂನೆ 53 ಅರ್ಜಿ ಸಲ್ಲಿಸಿ ಸಾಗುವಳಿ ಚೀಟಿಗಾಗಿ ಕಾಯುತ್ತಿದ್ದೇವೆ.‌ ನಮ್ಮ ಹೆಸರಿನಲ್ಲಿ ದಾಖಲೆಗಳಿಲ್ಲದ‌ ಕಾರಣ ಇತ್ತಿಚೆಗೆ ಸ್ಮಶಾನಕ್ಕೆ ಜಾಗ ಬೇಕೆಂದು ನಮ್ಮಿಂದ ಭೂಮಿಯನ್ನು ಬಲವಂತವಾಗಿ ಕಿತ್ತುಕೊಳ್ಳಲು ಪ್ರಯತ್ನ‌ ನಡೆಯುತ್ತಿದೆ.‌ ಬಗರ್ ಹುಕುಂ ಕಮಿಟಿ ಸಭೆ ಆಗಿದ್ದರೆ ನಮಗೆ ಭೂಮಿ ಸಿಗುತ್ತಿತ್ತು.‌ ಈ ಸಭೆ ವಿಳಂಬದಿಂದ ನಾವು ನಮ್ಮ ಭೂಮಿ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದೇವೆ ಎಂದು ರೈತ ಕೆಂಪರಾಜು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!