ಕೊಲೆ ಮತ್ತು ಡಕಾಯಿತಿ ಪ್ರಕರಣ: ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಕೋರ್ಟ್

ಕೊಲೆ ಮತ್ತು ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ವಶಕ್ಕೆ ಪಡೆಯಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದಲ್ಲದೇ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪಿಗಳಿಗೆ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾಗೃಹ ವಾಸ ಶಿಕ್ಷೆ ಹಾಗೂ 15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಘಟನೆ ಸಾರಾಂಶ

ದೊಡ್ಡಬೆಳವಂಗಲ ಪೊಲೀಸ್ ಠಾಣೆ ಮೊಕದ್ದಮೆ ಸಂಖ್ಯೆ: 111/2020 ಐ.ಪಿ.ಸಿ ಕಲಂ 396 (ಡಕಾಯಿತಿ ಮತ್ತು ಕೊಲೆ) ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ರಚಿಸಲಾಗಿದ್ದ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿ ತಂಡ ದಿನಾಂಕ: 10.09.2020 ರಂದು ಸಂಜೆ 5.55 ಗಂಟೆಯಲ್ಲಿ ಆರೋಪಿಗಳಾದ ಹೇಮಂತ್ ಕುಮಾರ್ ಹಾಗೂ ಸೋನು ರವರುಗಳು ಕೆಎ-03-ಎಂಸಿ-6915 ಚವರ್ಲೆಟ್ ಕಾರಿನಲ್ಲಿ ದೊಡ್ಡಬಳ್ಳಾಪುರ-ಡಾಬಸ್ ಪೇಟೆ ಮೂಲಕ ತುಮಕೂರು ಕಡೆಗೆ ಹೋಗುತ್ತಿರುತ್ತಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸರ್ಕಾರಿ ವಾಹನಗಳಲ್ಲಿ ಕೊಡಿಗೇಹಳ್ಳಿ ಕಡೆಯಿಂದ ಆರೋಪಿಗಳನ್ನು ಹಿಂಬಾಲಿಸಿಕೊಂಡು ಬಂದು ಕೆಸ್ತೂರು ಗ್ರಾಮದ ಬಳಿ ಬಂಡಿಜಾಡು ರಸ್ತೆಯಲ್ಲಿ ಆರೋಪಿಗಳ ಕಾರನ್ನು ಅಡ್ಡ ಹಾಕಿ ದಸ್ತಗಿರಿ ಮಾಡಲು ಹೋದಾಗ ಇಬ್ಬರೂ ಆರೋಪಿತರುಗಳು ಕೈಗಳಲ್ಲಿ ಚಾಕುಗಳನ್ನು ಹಿಡಿದುಕೊಂಡು ಬಂದು ಹತ್ತಿರ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಾ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಿಡಿದುಕೊಳ್ಳಲು ಹೋದ ಪೊಲೀಸರಿಗೆ ಚಾಕುವಿನಿಂದ ಚುಚ್ಚಿ ಹಲ್ಲೆಮಾಡಿ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದ ಸಂಬಂಧ ಸದರಿ ಆರೋಪಿಗಳ ವಿರುದ್ಧ ಅಂದಿನ ತನಿಖಾಧಿಕಾರಿಗಳಾಗಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಕುಮಾರ್ ಎ.ವಿ ರವರು ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

ಸದರಿ ಪ್ರಕರಣವು ಘನ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಪೀಠಾಸೀನ ದೊಡ್ಡಬಳ್ಳಾಪುರದಲ್ಲಿ ಎಸ್.ಸಿ.ನಂ:10003/2021 ರಂತೆ ವಿಚಾರಣೆ ನಡೆದಿದ್ದು, ಸದರಿ ಪ್ರಕರಣದಲ್ಲಿ ಆರೋಪಿತರು ಅಪರಾಧ ಎಸಗಿರುವುದು ಸಾಭೀತಾದ ಹಿನ್ನೆಲೆಯಲ್ಲಿ ಘನ ನ್ಯಾಯಾಧೀಶರಾದ ನಿರ್ಮಲ. ಕೆ ರವರು ದಿನಾಂಕ:23.03.2026 ರಂದು ಪ್ರಕರಣದ ಇಬ್ಬರೂ ಆರೋಪಿತರಿಗೆ ಐ.ಪಿ.ಸಿ ಕಲಂ;307 ರ ಅಪರಾಧಕ್ಕಾಗಿ 10 ವರ್ಷಗಳ ಕಠಿಣ ಕಾರಾಗೃಹ ವಾಸ ಹಾಗೂ ತಲಾ 10,000/- ರೂ ದಂಡ, ಐ.ಪಿ.ಸಿ ಕಲಂ;332 ರ ಅಪರಾಧಕ್ಕಾಗಿ 3 ವರ್ಷ ಕಠಿಣ ಕಾರಾಗೃಹ ವಾಸ ಹಾಗೂ ತಲಾ 5,000/- ರೂ ದಂಡ ಮತ್ತು ಐ.ಪಿ.ಸಿ ಕಲಂ; 353 ಅಪರಾಧಕ್ಕಾಗಿ 2 ವರ್ಷ ಕಠಿಣ ಕಾರಾಗೃಹ ವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ. ಸರ್ಕಾರದ ಪರವಾಗಿ ಅಭಿಯೋಜನೆ ಇಲಾಖೆ ವತಿಯಿಂದ ಸರ್ಕಾರಿ ಅಭಿಯೋಜಕರಾದ. ಟಿ.ಎನ್ ನಟರಾಜ ರವರು ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *

error: Content is protected !!