
ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಗಾರ್ಮೆಂಟ್ಸ್ ಕಾರ್ಖಾನೆ(ಶೈಲೇಂದ್ರ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್)ಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಳೆದ ಮೂರು ತಿಂಗಳಿಂದ ಸಂಬಳ ನೀಡದ ಹಿನ್ನೆಲೆ ಫ್ಯಾಕ್ಟರಿ ಮುಂದೆ ಸಂಬಳಕ್ಕಾಗಿ ಕರವೇ ನಾರಾಯಣಗೌಡ ಬಣದಿಂದ ಕರವೇ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರಾದ ಮಂಜುನಾಥನಾಯ್ಕ್ ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು..
ಶರ್ಟ್ ತಯಾರಿಕಾ ಕಾರ್ಖಾನೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅಂದರೆ, ಶೇ.70ರಷ್ಟು ಮಹಿಳಾ ಕಾರ್ಮಿಕರು, ಶೇ.30ರಷ್ಟು ಪುರುಷ ಕಾರ್ಮಿಕರು ಕೆಲಸ ಮಾಡುತ್ತಿದ್ದರು.
ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಸಂಬಳ ನೀಡುತ್ತಿಲ್ಲವೆಂದು ಕಾರ್ಮಿಕರು ಆರೋಪಿಸಿ ಫ್ಯಾಕ್ಟರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ.. ಸದ್ಯ 15 ದಿನದಿಂದ ಫ್ಯಾಕ್ಟರಿಗೆ ಬೀಗ ಹಾಕಲಾಗಿದೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಕರವೇ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರಾದ ಮಂಜುನಾಥನಾಯ್ಕ್, ಶೈಲೇಂದ್ರ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಮಾಲೀಕ ಹಾಗೂ ಆಡಳಿತ ಮಂಡಳಿ ಕಾರ್ಮಿಕರಿಂದ ಹಗಲಿರುಳು ದುಡಿಸಿಕೊಂಡು ಸಂಬಳ ನೀಡದೇ ಇದೀಗ ಫ್ಯಾಕ್ಟರಿಗೆ ಬೀಗ ಹಾಕಿಕೊಂಡು ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಇದಕ್ಕೆ ಸಂಬಂಧಪಟ್ಟವರಿಗೆ ಕರೆ ಮಾಡಿದರೆ ಫೋನ್ ತೆಗೆಯುತ್ತಿಲ್ಲ. ಸಂಬಳವಿಲ್ಲದೇ ಈ ಬಡ ಕೂಲಿ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ. ಆದ್ದರಿಂದ ಕೂಡಲೇ ಎಲ್ಲಾ ಕಾರ್ಮಿಕರಿಗೆ ಸಂಬಳವನ್ನು ನೀಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು…
ಮಹಿಳಾ ಕಾರ್ಮಿಕರಾದ ಶಿಲ್ಪಾ ಮಾತನಾಡಿ, ನಾವು ಈ ಕಂಪನಿಯಲ್ಲಿ ಹಗಲಿರುಳು ದುಡಿದಿದ್ದೇವೆ. ಸಂಬಳವನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಸಂಬಳ ನೀಡಿಲ್ಲ. ಸಂಬಳ ಇಲ್ಲದ ಕಾರಣ ಆಚೆಗಡೆ ಸಾಲ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಇದೀಗ ಸಾಲಗಾರರು ಮನೆ ಬಳಿ ಬರುತ್ತಿದ್ದಾರೆ. ಕಂಪನಿಯವರು ಸಂಬಳ ನೀಡದೆ ನಮ್ಮ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ನಮಗೆ ನಾವು ದುಡಿದ ಸಂಬಳ ಕೊಡಬೇಕು ಎಂದು ಆಗ್ರಹಿಸಿದರು..