ಮನರೇಗಾ ಉಳಿಸಲು ಗ್ರಾ.ಪಂ ಮಟ್ಟದಲ್ಲೂ ಹೋರಾಟ- ಜಿಲ್ಲಾ ಎಸ್.ಟಿ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ

ತಾಲ್ಲೂಕು ಕೇಂದ್ರದಲ್ಲಿ ಮಾತ್ರವಲ್ಲದೆ ಗ್ರಾ.ಪಂ ಮಟ್ಟದಲ್ಲಿ ಮನರೇಗಾ ಯೋಜನೆ ಉಳಿಸಲು ಹೋರಾಟ ನಡೆಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಎಸ್.ಟಿ ಘಟಕದ ಅಧ್ಯಕ್ಷ ಮುನಿಕೃಷ್ಣ ಹೇಳಿದರು.

ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಮನರೇಗಾ ಯೋಜನೆ ಉಳಿಸಿ ಬೃಹತ್ ಹೋರಾಟಕ್ಕೆ ನಗರದ ಬಸವಭವನದಿಂದ ಕಾರ್ಯಕರ್ತರೊಂದಿಗೆ ತೆರಳುವ ವೇಳೆ ಬಸ್ ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾಂಗ್ರೆಸ್ ನೇತೃತ್ವದ ಸರ್ಕಾರ ಗ್ರಾಮೀಣ ಭಾಗದಲ್ಲಿ ಗುಳೆ ತಪ್ಪಿಸಲು 2005ರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಮನರೇಗಾ) ಜಾರಿಗೆ ತರಲಾಗಿತ್ತು. ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ಮಹಾತ್ಮ ಗಾಂಧೀಜಿ ಕಂಡಿದ್ದ ಕನಸನ್ನು ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರುವ ಮೂಲಕ ಯುಪಿಎ ಸರ್ಕಾರ ನನಸು ಮಾಡಿತ್ತು. 20 ವರ್ಷಗಳ ಗ್ರಾಮೀಣ ಭಾಗದ ಜನರ ಜೀವನ ಜೊತೆ ಗ್ರಾಮಗಳು ಬಹಳಷ್ಟು ಸುಧಾರಣೆ ಕಂಡಿದೆ. ಆದರೆ ಈಗಿನ ಕೇಂದ್ರ ಸರ್ಕಾರ ಯೋಜನೆ ಮೂಲ ಉದ್ದೇಶಕ್ಕೆ ಕತ್ತರಿ ಹಾಕಿ ಜನರ ದುಡಿಯುವ ಹಕ್ಕು ಕಿತ್ತಿಕೊಂಡಿದೆ. ಮನರೇಗಾ ಯೋಜನೆಯ ಹೆಸರು ಮತ್ತು ಸ್ವರೂಪದ ಬದಲಾವಣೆ ಮೂಲಕ ಉದ್ಯೋಗ ಖಾತ್ರಿ ಯೋಜನೆಯ ಆತ್ಮಕ್ಕೆ ಕೇಂದ್ರ ಸರ್ಕಾರ ಕೊಡಲಿಯೇಟು ನೀಡಿದೆ. ವಿಬಿ ಜಿ–ರಾಮ–ಜಿ ಯೋಜನೆ ಜನರಿಗೆ ಉದ್ಯೋಗ ಒದಗಿಸಲಾರದು. ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆ ಹೊರಿಸುತ್ತಿದೆ. ರಾಜ್ಯಗಳಿಗೆ ಸಿಗಬೇಕಾದ ಅನುದಾನ ನೀಡದೇ ಕೇಂದ್ರ ವಂಚನೆ ಮಾಡುತ್ತಿದೆ. ಮನರೇಗಾ ಯೋಜನೆ ಮರು ಜಾರಿಗಾಗಿ ತಾಲ್ಲೂಕಿನ ಎಲ್ಲಾ ಗ್ರಾ.ಪಂಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.

ಈ ವೇಳೆ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಮೇಗೌಡ, ನರಸಿಂಹ, ಎಂಪಿಸಿಎಸ್ ಅಧ್ಯಕ್ಷ ಕೆಂಪಣ್ಣ, ಹಿರಿಯ ಮುಖಂಡರಾದ ಹನುಮಂತಣ್ಣ, ಮನೋಹರ್, ರಾಮಾಂಜಿನಪ್ಪ, ಮಂಜುನಾಥ, ಸತೀಶ್, ಪಿಳ್ಳವೀರಣ್ಣ ಮತ್ತಿತ್ತರರು ಇದ್ದರು.

Leave a Reply

Your email address will not be published. Required fields are marked *

error: Content is protected !!