ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರಂಟಿಗಳನ್ನು ಜಾರಿಗೊಳಿಸಲು ಇಂದು ಕ್ಯಾಬಿನೆಟ್ ಸಭೆಯಲ್ಲಿ ಸಮ್ಮತಿ ನೀಡಲಾಗಿದ್ದು, ಕರ್ನಾಟಕದ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಅಂಶಗಳು ಈ ಕೆಳಕಂಡಂತಿವೆ.
1.ಗೃಹಜ್ಯೋತಿ:
ವಾರ್ಷಿಕ ವಿದ್ಯುತ್ ಬಿಲ್ನ ಸರಾಸರಿಯಲ್ಲಿ 200 ಯೂನಿಟ್ ಒಳಗೆ ಬಳಸಿದ್ದರೆ ಅಂತಹ ಕುಟುಂಬಕ್ಕೆ ಉಚಿತ ವಿದ್ಯುತ್ ನೀಡಲಾಗುವುದು.
ವಾರ್ಷಿಕ ಸರಾಸರಿ ಮೇಲೂ ಕೂಡ 10%ಅನ್ನು ಉಚಿತ ಎಂದು ಪರಿಗಣಿಸಲಾಗುವುದು.
2.ಗೃಹಲಕ್ಷ್ಮಿ ಗ್ಯಾರಂಟಿ:
ಅರ್ಹ ಫಲಾನುಭವಿಯಾಗಲು ಮನೆಯ ಯಜಮಾನಿಯರು ಜೂನ್ 15ರಿಂದ ಜುಲೈ 15ರೊಳಗೆ ಅರ್ಜಿ ಸಲ್ಲಿಸಿ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಮೊದಲಾದ ವಿವರಗಳನ್ನು ನೀಡಬೇಕಿದೆ. ಆಗಸ್ಟ್ 15ರಿಂದ ಈ ಯೋಜನೆ ಜಾರಿಗೆ ಬರಲಿದ್ದು, ಮನೆಯ ಯಜಮಾನಿ ಖಾತೆಗೆ ನೇರ 2000 ರೂ. ಜಮಾವಣೆಯಾಗಲಿದೆ.
ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರು, ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುವವರೂ ಕೂಡ ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ.
3.ಶಕ್ತಿ ಗ್ಯಾರಂಟಿ:
ಜೂನ್ 11ರಿಂದ ಈ ಯೋಜನೆ ಜಾರಿಗೆ ಬರಲಿದೆ. ಸಿಟಿ ಬಸ್ಗಳು ಸೇರಿದಂತೆ ರಾಜ್ಯ ಸಾರಿಗೆಯ ಎಲ್ಲ ಬಸ್ಗಳಲ್ಲೂ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದು. ಆದರೆ, ರಾಜ್ಯ ಸಾರಿಗೆ ಬಸ್ಗಳಲ್ಲೇ ಹೊರ ರಾಜ್ಯಗಳಿಗೆ ಪ್ರಯಾಣಿಸಲು ಅವಕಾಶವಿಲ್ಲ.
4.ಅನ್ನ ಭಾಗ್ಯ:
ಈಗಾಗಲೇ ಪ್ರಸಕ್ತ ತಿಂಗಳ ಪಡಿತರ ವಿಲೇವಾರಿಯಾಗಿರುವ ಕಾರಣ, ಜುಲೈ 1ರಿಂದ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ದಾರರಿಗೆ ಮಾಸಿಕ 10 ಕೆಜಿ ಆಹಾರ ಧಾನ್ಯ ವಿತರಿಸಲಾಗುವುದು.
5.ಯುವನಿಧಿ:
2022-23ರ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆ ಹೊಂದಿದವರಿಗೆ 6 ತಿಂಗಳ ಗ್ರೇಸ್ ಪಿರಿಯಡ್ ಇರುತ್ತದೆ. ಆರು ತಿಂಗಳ ನಂತರವೂ ಕೆಲಸ ಸಿಗದಿದ್ದರೆ 24 ತಿಂಗಳುಗಳ ಕಾಲ ಪಧವೀಧರರಿಗೆ ಮಾಸಿಕ 3ಸಾವಿರ ರೂ, ಡಿಪ್ಲೊಮಾ ಪದವೀಧರರಿಗೆ 1500 ರೂ. ನೀಡಲಾಗುವುದು.
6 ತಿಂಗಳ ಒಳಗೆ ಖಾಸಗಿ/ಸರ್ಕಾರಿ ಕೆಲಸ ದೊರೆತರೆ ಅಥವಾ ಅರ್ಜಿ ಸಲ್ಲಿಸಿದ ನಂತರ ಕೆಲಸ ಸಿಕ್ಕರೂ ಕೂಡ ಅಂತಹವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.