
ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡತುಮಕೂರು ಗ್ರಾಪಂ ವ್ಯಾಪ್ತಿಯ ಬೈರಸಂದ್ರ ಗ್ರಾಮದಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ಹಂದಿ ಸಾಕಣೆ ಶೆಡ್ ನಿಂದಾಗಿ ಗ್ರಾಮಸ್ಥರಿಗೆ ತೊಂದರೆಗಳಾಗುತ್ತಿದ್ದು, ಕೂಡಲೇ ಶೆಡ್ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಹಂದಿ ಶೆಡ್ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮಲ್ಲಪ್ಪ ಕೆ.ಯರಗೋಳ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಗ್ರಾಮದ ಮುಖಂಡರಾದ ಲಕ್ಷ್ಮೀಸಾಗರ್, ಮುನಿ ಓಬಳಪ್ಪ, ಸಿದ್ದರಾಜು, ಶ್ರೀಧರ್ ತಾಲೂಕಿನ ದೊಡ್ಡತುಮಕೂರು ಗ್ರಾಪಂ ವ್ಯಾಪ್ತಿಯ ಬೈರಸಂದ್ರ ಗ್ರಾಮದ ಪರಿಮಿತಿಯಲ್ಲಿ ಅಕ್ರಮವಾಗಿ ಯಾವುದೇ ಸಕ್ಷಮ ಪ್ರಾಧಿಕಾರ ಅಥವಾ ಸ್ಥಳೀಯ ಪ್ರಾಧಿಕಾರದಿಂದ ಅನುಮತಿ ಪಡೆಯದೆ, ಹಂದಿ ಸಾಕಣೆ ಶೆಡ್ ನಿರ್ಮಿಸಲಾಗಿದೆ ಎಂದು ಆರೋಪಿಸಿದಲ್ಲದೇ, ಈ ಶೆಡ್ನಿಂದ ಪ್ರತಿನಿತ್ಯ ದುರ್ವಾಸನೆ ಬರುತ್ತಿದ್ದು ಗ್ರಾಮದಲ್ಲಿ ವಾಸನೆ ಸೇರಿದಂತೆ ಅನೇಕ ರೋಗಗಳು ಹರಡುತ್ತಿವೆ. ಮಹಿಳೆಯರು, ಮಕ್ಕಳು ಹೆಚ್ಚಾಗಿ ತೊಂದರೆಗೀಡಾಗುತ್ತಿದ್ದಾರೆ. ಇದಲ್ಲದೇ ಹಂದಿ ಸಾಕಣೆ ಮಾಡಲು ದೊಡ್ಡಬಳ್ಳಾಪುರ ನಗರ ಮತ್ತು ಇತರ ಕಡೆಗಳಿಂದ ಕೋಳಿ ಮತ್ತು ನಗರದ ಹೋಟೆಲ್ ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ ತಂದು ಸುಡಲಾಗುತ್ತಿದೆ. ಅರ್ಕಾವತಿ ನದಿ ಪಾತ್ರದ ದೊಡ್ಡತುಮಕೂರು ಕೆರೆಗೆ ಶೆಡ್ನ ಕೊಳಚೆ ನೀರು ಬಿಡಲಾಗುತ್ತಿದೆ. ಅಕ್ರಮ ಹಂದಿ ಸಾಕಣೆ ಶೆಡ್ ಸ್ಥಳಾಂತರ ಹಾಗೂ ಕೆರೆ ಅಂಗಳಕ್ಕೆ ಕಲುಷಿತ ನೀರು ಸೇರುತ್ತಿದೆ. ಈ ಕುರಿತು ಈಗಾಗಲೇ ಹೋರಾಟ ನಡೆಯುತ್ತಿದ್ದು, ಗ್ರಾಪಂಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಿಲ್ಲವಾಗಿದೆ. ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಶೆಡ್ ಸ್ಥಳಾಂತರ ಮಾಡುವಂತೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.