ಸ್ವಾತಂತ್ರ್ಯಕ್ಕಾಗಿ ಆರ್.ಎಸ್.ಎಸ್ ಕೊಡುಗೆ ಶೂನ್ಯ ಇದ್ದರೆ ಬಹಿರಂಗ ಪಡಿಸಲಿ: ಎನ್.ಅಂಬರೀಷ್

ಕೋಲಾರ: ಸ್ವಾತಂತ್ರಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಆರ್.ಎಸ್.ಎಸ್ ಸಂಘಟನೆಯ ೧೦ ಮಂದಿ ಹೆಸರನ್ನು ಫೆ.೧೭ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕರೆದಿರುವ ಬಹಿರಂಗ ಸಭೆಯಲ್ಲಿ ಹೇಳಲಿ ಎಂದು ಆರ್‌ಎಸ್‌ಎಸ್ ನವರಿಗೆ ಕಾಂಗ್ರೆಸ್ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಎನ್.ಅಂಬರೀಷ್ ಸವಾಲು ಹಾಕಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಸಂಘಟನೆಯಿಂದ ಸದಾ ಅಶಾಂತಿ ಸೃಷ್ಟಿಸುವ ಕೆಲಸವಾಗುತ್ತಿದೆ. ಧರ್ಮಧರ್ಮಗಳ ನಡುವೆ ಅಹಿಷ್ಣುತೆ ಹುಟ್ಟಿ ಹಾಕಲಾಗುತ್ತಿದೆ.

ಅಂತಹ ಸಂಘಟನೆಯ ದೇಶಭಕ್ತಿ ನೋಡಿ ಬಿಜೆಪಿ ಸೇರಿರುವ ಸಿ.ಟಿ.ರವಿ ಸದನದಲ್ಲಿ ಸದಾ ವಿವಾದಗಳನ್ನು ಮಾಡುತ್ತಿರುತ್ತಾರೆ. ಮೊದಲ ಅಧಿವೇಶದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನ ಪದ ಬಳಸಿದ್ದರು ಇದೀಗ ನಸೀರ್ ಅಹಮದ್ ಬಗ್ಗೆ ಮಾತನಾಡಿರುವುದು ಸರಿಯಲ್ಲ ಎಂದರು.

ಏನಾದರೂ ಪ್ರಶ್ನೆ ಇದ್ದರೆ ನೇರವಾಗಿ ಕೇಳಲಿ ಅದನ್ನು ಬಿಟ್ಟು ಮುಸ್ಲೀಮರನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿ ಮಾತನಾಡುವುದು ಸರಿಯಲ್ಲ. ಆರ್.ಎಸ್.ಎಸ್. ನೋಡಿ ಬೆಳೆದಿರುವ ಸಿ.ಟಿ.ರವಿ ಅವರಿಗೂ ಗಾಂಧಿ ತತ್ವ ನೋಡಿ ಬೆಳೆದಿರುವ ನಸೀರ್ ಅವರಿಗೂ ಸಾಕಷ್ಟು ವ್ಯತ್ಯಾಸವಿದೆ ಪ್ರಧಾನಿ ಬಗ್ಗೆ ಅಚಾತುರ್ಯವಾಗಿ ಮಾತನಾಡಿದ್ದಕ್ಕೆ ನಸೀರ್ ಅಹಮದ್ ವಿಷಾಧ ವ್ಯಕ್ತಪಡಿಸಿದ್ದಾರೆ, ಆದರೆ ನೀವು ಕ್ಷಮೆಯಾಚಿಸಿಲ್ಲ ಎಂದು ಅಸಮಧಾನ ಹೊರಹಾಕಿದ ಅವರು, ಆರ್.ಎಸ್.ಎಸ್. ಸಂಘಟನೆಯ ಬಗ್ಗೆ ಬೇಸರದಿಂದ ಹೊರ ಬಂದ ಎ.ಕೆ.ಸುಬ್ಬಯ್ಯರಂತೆ ನೀವೂ ಸಹ ಹೊರಬರುತ್ತೀರಿ ಎಂದು ಹೇಳಿದರು.

ಮುಖಂಡ ಅನ್ವರ್ ಪಾಷ ಮಾತನಾಡಿ, ಸದನದಲ್ಲಿ ಕಾಂಗ್ರೆಸ್ ಹಿರಿಯ ನಾಯಕ, ಎಂಎಲ್ಸಿ ನಸೀರ್ ಅಹಮದ್ ಅವರು ಮಾತನಾಡಿದಾಗ ಸಿ.ಟಿ.ರವಿ ಕಾಲು ಕೆರೆದುಕೊಂಡು ಜಗಳ ಮಾಡಿದ್ದಲ್ಲದೆ ಮುಸ್ಲಿಂ ಸಮುದಾಯ ಗುರಿ ಮಾಡಿಕೊಂಡು ಮಾತನಾಡುತ್ತಾರೆ. ಆದರೆ ಅವರಿಗೆ ದೇಶದ ಪ್ರಗತಿ ಮತ್ತು ಸದ್ಯ ಆಗುತ್ತಿರುವ ಅನಾಹುತ ಬಗ್ಗೆ ಮಾತನಾಡುವ ನೈತಿಕ ಕಾಳಜಿ ಇಲ್ಲವೆಂದು ಕಿಡಿಕಾರಿದರು.

ಆರ್ ಎಸ್ ಎಸ್ ದೇಶಭಕ್ತಿ ನೋಡಿ ನಾನು ಬಿಜೆಪಿಗೆ ಸೇರಿದೆ ಅಂತೀರಿ. ಬಿಜೆಪಿಯದ್ದು ಯಾವ ದೇಶಭಕ್ತಿ ? ಆರ್‌ಎಸ್‌ಎಸ್ ಕೊಡುಗೆ ಏನು ದೇಶಕ್ಕೆ. ಅಮಿತ್ ಶಾ ಈ ಹಿಂದೆ ವಿವಾದಾತ್ಮಕವಾಗಿ ಮಾತನಾಡಿದಾಗ, ನ್ಯಾಯಾಲಯದಲ್ಲಿ ನ್ಯಾಯಾಧೀಶರಿಗೆ ಶೂ ಎಸೆದಾಗ ಯಾಕೆ ಮಾತನಾಡಲಿಲ್ಲ. ದೇಶ ಭಕ್ತಿ ಹೆಸರಿನಲ್ಲಿ ಬೂಟಾಟಿಕೆ ಮಾಡುತ್ತೀರಾ ಎಂದು ಪ್ರಶ್ನಿಸಿದರು.

ಇನ್ನು ಮಾಜಿ ಸಂಸದ ಎಸ್.ಮುನಿಸ್ವಾಮಿಯವರೇ ಧರ್ಮಾಧಾರಿತ, ಕೋಮುವಾದದ ರಾಜಕಾರಣ ಬಂದ ಮೇಲೆ ನಸೀರ್ ಅಹಮದ್ ಇಲ್ಲಿ ಶಾಸಕರಾಗಿಲ್ಲ. ಶಾಸಕ, ಸಚಿವರಾಗಿದ್ದಾಗ ಸಾಕಷ್ಟು ಕೊಡುಗೆ ನೀಡಿದ್ದರು. ಅದನ್ನು ಅರಿಯದೆ ನಸೀರ್ ಅಹಮದ್ ಕೊಡುಗೆ ಏನು ಎಂದು ಪ್ರಶ್ನೆ ಮಾಡುತ್ತೀರಾ. ಮೊದಲು ಆ ವಿಚಾರ ತಿಳಿದುಕೊಳ್ಳಿ ಎಂದರು.

ರಾಜ್ಯದಲ್ಲಿ ನಸೀರ್‌ಅಹಮದ್ ಎಂದರೆ ನಮ್ಮ ಸಮುದಾಯ ಅಲ್ಲದೆ ಸಮಾನ ಮನಸ್ಕರಿಗೂ ಕೊಡುಗೆ ನೀಡಿದ್ದಾರೆ. ವೈಯಕ್ತಿಕ ಟೀಕೆಗಳಿಗೆ ಇನ್ನಾದರೂ ಕಡಿವಾಣ ಹಾಕಿಕೊಳ್ಳಿ ಎಂದು ಸಲಹೆ ನೀಡಿ ಎಂದ ಅವರು, ಮೋದಿಯವರದ್ದು ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಲ್ಲ ಅದು ಸಬ್ ಕಾ ವಿನಾಶ್ ಎಂದು ಲೇವಡಿ ಮಾಡಿದರು.

ಮುಖಂಡ ಚಂದ್ರಮೌಳಿ ಮಾತನಾಡಿ, ಎಸ್.ಮುನಿಸ್ವಾಮಿ ಅಂತಹವರು ಒಬ್ಬರಲ್ಲ ೧೦ ನಾಯಕರು ಬಂದರೂ ನಸೀರ್ ಅಹಮದ್ ಅವರ ನೆರಳನ್ನು ತಾಕಲು ಆಗಲ್ಲ. ಆದರೂ ಬಾಯಿಗೆ ಬಂದಂತೆ ಮಾತನಾಡುತ್ತಿದ್ದು, ಇನ್ನಾದರೂ ಬಿಡಿ ಎಂದರು.

ಸುದ್ದಿಗೋಷ್ಠಿಯಲ್ಲಿ ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ನಗರಸಭೆ ಮಾಜಿ ಅಧ್ಯಕ್ಷ ಅಫ್ರೋಜ್ ಪಾಷ, ಹಿರಿಯ ಮುಖಂಡರಾದ ಶ್ರೀಕೃಷ್ಣ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಕಠಾರಿಪಾಳ್ಯ ನರೇಂದ್ರ ಬಾಬು(ಗಂಗಣ್ಣ), ಸಲ್ಲಾವುದ್ದೀನ್ ಬಾಬು, ಖಾದ್ರಿಪುರ ಬಾಬು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಆಫ್ರೀದ್, ರಾಜ್ಯ ಪ್ರಧಾನ ಕಾರ್ಯದರ್ಶಿ ಭರತ್ ರಾಯ್ ಇದ್ದರು.

Leave a Reply

Your email address will not be published. Required fields are marked *

error: Content is protected !!