ಸರ್ಕಾರಿ ದನದ ಓಣಿ ಜಾಗ ಮತ್ತು ಗ್ರಾಮ ಠಾಣಾ ಗುಂಡು ತೋಪು ಜಾಗ ಒತ್ತುವರಿ ಆರೋಪ: ಭೂಗಳ್ಳರ ಮೇಲೆ ಕ್ರಮಕ್ಕಾಗಿ ಪ್ರಜಾವಿಮೋಚನಾ ಸಮಿತಿ ಒತ್ತಾಯ

ದೊಡ್ಡಬಳ್ಳಾಪುರ : ಸರ್ಕಾರಿ ದನದ ಓಣಿ ಜಾಗ ಮತ್ತು ಗ್ರಾಮ ಠಾಣಾ ಗುಂಡು ತೋಪು ಜಾಗಗಳನ್ನು ಒತ್ತುವರಿ ಮಾಡಿಕೊಂಡಿರುವ ಭೂಗಳ್ಳರ ಮೇಲೆ ಕ್ರಮ ಕೈಗೊಂಡು ತೆರವು ಗೊಳಿಸಿ ಬಡವರಿಗೆ ನಿವೇಶನಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಪ್ರಜಾವಿಮೋಚನಾ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಮುಖಂಡರು, ನಮಗೆ ಸ್ವತಂತ್ರ ಬಂದು 78 ವರ್ಷಗಳು ಕಳೆದಿವೆ, ಸಂವಿಧಾನ ಜಾರಿಯಾಗಿ 75 ವರ್ಷಗಳು ಕಳೆಯುತ್ತಿವೆ, ಹಳ್ಳಿಗಾಡಿನ ಪ್ರದೇಶಗಳಲ್ಲಿ ಇನ್ನು ಬಡವರಿಗೆ ಸೂರಿಲ್ಲ ಬಾಬಾ ಸಾಹೇಬರ ಕನಸು ನನಸಾಗೋದು ಯಾವಾಗ? ಇನ್ನು ಎಷ್ಟು ವರ್ಷಗಳ ಕಾಲ ನಾವು ಸೂರು-ನೀರಿಲ್ಲದ ಬದುಕನ್ನು ಅನುಭವಿಸಬೇಕು ಎಂದು ಪ್ರಶ್ನಿಸಿದ ಅವರು, ಬಡವರಿಗೆ ಸೀಗಬೇಕಾದ ಭೂಮಿ ಭೂಗಳ್ಳರ ಪಾಲಾಗಿದೆ ಎಂದು ಆಕ್ರೋಶ ಹೊರಹಾಕಿದರು.

ತಾಲ್ಲೂಕು ತೂಬಗೆರೆ ಹೋಬಳಿ ಗೂಳ್ಯ ನಂದಿಗುಂದ ಗ್ರಾಮಕ್ಕೆ ಸೇರಿದ ಸ ನಂ 132ರಲ್ಲಿ ಗುಂಡು ತೋಪು ಜಮೀನನ್ನು ಭೂಮಾಲಿಕರು ಕಬಳಿಸಿದ್ದಾರೆ. ಅಳತೆ ಕಾರ್ಯ ಕೈಗೊಂಡು ತೆರವು ಗೊಳಿಸಬೇಕು ಮತ್ತು ಗೂಳ್ಯ ಗ್ರಾಮದ ಧನದ ಓಣಿ ಜಾಗ ಸುಮಾರು 7ಎಕರೆಗಿಂತ ಹೆಚ್ಚು ವಿಸ್ತೀರ್ಣ ಹೊಂದಿರುವ ಭೂಮಿಯನ್ನು ಅಕ್ಕ ಪಕ್ಕದ ಜಮೀನಿನ ಮಾಲಿಕರು ಒತ್ತುವರಿ ಮಾಡಿಕೊಂಡಿದ್ದಾರೆ. ಗ್ರಾಮ ಠಾಣಾಗೆ ಸೇರಿದ 6ಎಕರೆ ಜಾಗವಿದ್ದು ಭೂಗಳ್ಳರು ಅದನ್ನೂ ಕಬಳಿಸಿದ್ದಾರೆ. ಹೆಗ್ಗಡಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿಯನ್ನು ಸಹ ಕೊಟ್ಟಿದ್ದೆವೆ. ಯಾವುದೇ ಕ್ರಮ ಕೈಗೊಂಡಿಲ್ಲ, ಪಿಡಿಒ ಅವರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಸರ್ಕಾರಿ ಧನದ ಓಣಿ ಜಾಗದಲ್ಲಿ ಯಾವುದೇ ದಾಖಲಾತಿಗಳಿಲ್ಲದೆ ಮನೆಗಳನ್ನು ನಿರ್ಮಿಸಿದ್ದಾರೆ. ಇಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತೆರವು ಗೊಳಿಸಬೇಕು ಎಂದು ಒತ್ತಾಯಿಸಿದರು.

ಹೆಗ್ಗಡಿಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಕೊಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ದೊಡ್ಡಬಳ್ಳಾಪುರ ತಾಲೂಕು ಕಸಬಾ ಹೋಬಳಿ ಕೆಸ್ತೂರು ಗ್ರಮದಲ್ಲಿ ಸುಮಾರು 70 ಕ್ಕೂ ಹೆಚ್ಚು ದಲಿತ ಕುಟುಂಬಗಳಿದ್ದು, ಇದುವರೆಗೂ ಸ್ಮಶಾನವಿಲ್ಲ ಗ್ರಾಮದ ಸನಂ 131 ರಲ್ಲಿ 8 ಎಕರೆ ಗೋಮಾಳವಿದ್ದು, ಅದರಲ್ಲಿ ಒಂದು ಎಕರೆ ಭೂಮಿಯನ್ನು ದಲಿತರ ಸ್ಮಶಾನಕ್ಕೆ ಮೀಸಲಿಡಬೇಕು ಎಂದು ಹೇಳಿದರು.

ಕಸಬಾ ಹೋಬಳಿಯ ಸಿದ್ದೇನಾಯಕನಹಳ್ಳಿ ಗ್ರಾಮದ ಸ ನಂ 10 ರಲ್ಲಿ 6 ಎಕರೆ 15 ಗುಂಟೆ, ಬಂಡಿದಾರಿ ಖರಾಬು ಜಮೀನಿದ್ದು 3 ಎಕರೆ ಜಮೀನಿನಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ ಉಳಿಕೆ ಖಾಲಿ ಇರುವ ಜಾಗದಲ್ಲಿ ಎಲ್ಲಾಜಾತಿಯ ಬಡವರಿಗೆ ನಿವೇಶನಗಳನ್ನು ಕಲ್ಪಿಸಿ ಕೊಡಬೇಕು. ತೂಬಗೆರೆ ಹೋಬಳಿ ಗೂಳ್ಯ ನಂದಿಗುಂದ ಗ್ರಾಮದ ಸ. ನಂ 125 ರಲ್ಲಿ 0 11ಗುಂಟೆ ಸರ್ಕಾರಿ ತಿಪ್ಪೇಹಳ್ಳ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಪ್ರಕರಣ ದಾಖಲಿಸಿ ಜಮೀನು ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ಹಕ್ಕೊತ್ತಾಯಗಳು

1). ದೊಡ್ಡಬಳ್ಳಾಪುರ ತಾಲೂಕು ಕಸಬಾ ಹೊಬಳಿ ಕೆಸ್ತೂರು ಗ್ರಾಮದ ದಲಿತ ಜನಾಂಗಕ್ಕೆ ಕೂಡಲೆ ಸ್ಮಶಾನ ಭೂಮಿಯನ್ನು ಅಳತೆ ಮಾಡಿ ಪಹಣಿಯಲ್ಲಿ ನಮೂದಿಸುವುದು.

2) ದೊಡ್ಡಬಳ್ಳಾಪುರ ತಾಲ್ಲೂಕು ತೂಬಗೆರೆ ಹೋಬಳಿ ಗೂಳ್ಯ ನಂದಿಗುಂದ ಗ್ರಾಮದಲ್ಲಿ ದಲಿತ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಡಾ ಬಿ ಆರ್ ಅಂಬೇಡ್ಕರ್ ಭವನಕ್ಕೆ ಸ ನಂ 7ರಲ್ಲಿ ಜಾಗವನ್ನು ಗುರುತಿಸಬೇಕು.

3) ದೊಡ್ಡಬಳ್ಳಾಪುರ ತಾಲ್ಲೂಕು ತೂಬಗೆರೆ ಹೋಬಳಿ ಹೆಗ್ಗಡಿಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಕೂಡಲೇ . ವರ್ಗಾವಣೆ ಮಾಡಬೇಕು

4) ದೊಡ್ಡಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿ ಸಿದ್ದೇನಾಯಕನ ಹಳ್ಳಿ ಗ್ರಾಮದಲ್ಲಿ ಬಂಡಿದಾರಿ ಖರಾಬು 6 ಎಕರೆ 15 ಗುಂಟೆ ಜಮೀನಿದ್ದು ಖಾಲಿ ಇರುವ ಜಮೀನಿನಲ್ಲಿ ಬಡವರಿಗೆ ನಿವೇಶನಗಳನ್ನು ಕಲ್ಪಿಸಿ ಕೊಡಬೇಕು.

ಎಂದು ಒತ್ತಾಯಿಸಿ ಎಸಿ ಕಚೇರಿಯ ತಹಶೀಲ್ದಾರ್ ಮೂಲಕ ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಪ್ರಜಾವಿಮೋಚನಾ ಸಮಿತಿ ರಾಜ್ಯಾಧ್ಯಕ್ಷ ಜೈಭೀಮ್ ಮಧುರೆ, ರಾಜ್ಯ ಕಾರ್ಯಾಧ್ಯಕ್ಷ ಗೂಳ್ಯ ಹನುಮಣ್ಣ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೋನಿಯಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿರಾಜು (ದಾಸ), ತಾಲ್ಲೂಕು ಅಧ್ಯಕ್ಷ ವಡ್ಡರಹಳ್ಳಿ ರಾಜಶೇಖರ್, ಉಪಾಧ್ಯಕ್ಷ ನಟರಾಜು, ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಸುಧಾ, ಗೂಳ್ಯ ಮುನಿದಾಸಪ್ಪ, ಯಲಹಂಕ ಅಧ್ಯಕ್ಷ ರಾಜು, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಹೊಸಹೂಡ್ಯ ಅರ್ಜುನ್, ಕನಕೇನಹಳ್ಳಿ ನಾಗಮ್ಮ, ಪ್ರಜಾವಿಮೋಚನಾ ಚಳುವಳಿ ತಾಲ್ಲೂಕು ಅಧ್ಯಕ್ಷ ಜಿ.ಕೆ.ನಾರಾಯಣಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!