
ದೊಡ್ಡಬಳ್ಳಾಪುರ: ಮಾಹಿತಿ ನೀಡದೇ, ವಿಚಾರಣೆಗೆ ಹಾಜರಾಗದೆ ನಿರ್ಲಕ್ಷ್ಯ ತೋರಿದ ಆರೋಪದಡಿಯಲ್ಲಿ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಸೇರಿ ಹಲವು ಅಧಿಕಾರಿಗಳಿಗೆ ಕರ್ನಾಟಕ ಮಾಹಿತಿ ಆಯೋಗ ದಂಡವನ್ನು ವಿಧಿಸಿ ಬಿಸಿ ಮುಟ್ಟಿಸಿದೆ.
ನಿಗದಿತ ಕಾಲಾವಧಿಯಲ್ಲಿ ಮಾಹಿತಿ ನೀಡುವ ನಿಯಮವನ್ನು ಗಾಳಿಗೆ ತೂರಿ, ವಿಚಾರಣೆಗೆ ಹಾಜರಾಗದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ದೊಡ್ಡಬಳ್ಳಾಪುರ ಉಪವಿಭಾಧಿಕಾರಿ ದುರ್ಗಾಶ್ರೀ, ಮತ್ತು ದೇವನಹಳ್ಳಿ ತಹಶಿಲ್ದಾರರಿಗೆ ರಾಜ್ಯ ಮಾಹಿತಿ ಆಯೋಗವು ದಂಡ ಹಾಕಿದೆ.
ಪ್ರಕರಣವೊಂದರ ಸಂಬಂಧ ಕಾಲ ಮಿತಿಯೊಳಗೆ ಮಾಹಿತಿ ನೀಡದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಉಪವಿಭಾಗಾಧಿಕಾರಿ, ಕೆ ಆರ್ ಪುರಂ, ದೇವನಹಳ್ಳಿ ತಹಶೀಲ್ದಾರ್ ಗಳಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗ 25 ಸಾವಿರ ದಂಡವನ್ನು ವಿಧಿಸಿ ಆದೇಶಿಸಿದೆ.
ಬೆಂಗಳೂರು ದಕ್ಷಿಣ AC ವಿಶ್ವನಾಥ್ ಅವರಿಗೆ 25,000 ರೂ. ದಂಡ ವಿಧಿಸಿದ್ದು, ಕೆ ಆರ್ ಪುರಂ ತಹಶೀಲ್ದಾರ್ ರಾಜುಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ.
ಅಂತೆಯೇ ದೊಡ್ಡಬಳ್ಳಾಪುರ ಉಪವಿಭಾಧಿಕಾರಿ ದುರ್ಗಾಶ್ರೀ ಅವರಿಗೆ ಎರಡು ಪ್ರಕರಣಗಳಲ್ಲಿ ಒಂದಕ್ಕೆ ಮಾಹಿತಿ ನೀಡದೇ, ಮತ್ತೊಂದರ ವಿಚಾರಣೆಗೆ ಸತತ ಹಾಜರಾಗದ ಕಾರಣ ತಲಾ 25 ಸಾವಿರ ರೂ. ದಂಡ ವಿಧಿಸಲಾಗಿದೆ.
ಮುಂದೆಯೂ ಯಾವುದೇ ಪ್ರಕರಣದಲ್ಲಿ ಸೂಕ್ತ ಸಮಯಕ್ಕೆ ಕೇಳಿದ ಮಾಹಿತಿ ನೀಡಬೇಕು. ಉನ್ನತ ಅಧಿಕಾರಿಗಳು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂಬ ಸ್ಪಷ್ಟ ಸಂದೇಶವನ್ನು ಮಾಹಿತಿ ಆಯೋಗ ರವಾನಿಸಿದೆ.