ಎನ್‌ಸಿಸಿ ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ

ದೊಡ್ಡಬಳ್ಳಾಪುರ: ಎನ್‌.ಸಿ.ಸಿ ದಿನಾಚರಣೆಯ ಅಂಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಶ್ರೀ ಕೊಂಗಾಡಿಯಪ್ಪ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ಎನ್‌.ಸಿ.ಸಿ ವಿದ್ಯಾರ್ಥಿಗಳು ಐದು ಕರ್ನಾಟಕ ಎನ್‌ಸಿಸಿ ಬೆಟಾಲಿಯನ್‌ರ ಸಂಯುಕ್ತ ಆಶ್ರಯದಲ್ಲಿ ಸೈಕಲ್ ಜಾಥಾವನ್ನು ಆಯೋಜಿಸಲಾಗಿತ್ತು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸದಾಶಿವ ರಾಮಚಂದ್ರ ಗೌಡ ಅವರು ಸೈಕಲ್ ಜಾಥಾಗೆ ಚಾಲನೆ ನೀಡಿ ಮಾತನಾಡಿ, “ಎನ್‌ಸಿಸಿ ಕೇವಲ ಶಿಸ್ತುಮಯ ಬದುಕಿಗೆ ಮಾತ್ರ ಸೀಮಿತವಲ್ಲ, ಇದು ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿ, ಆತ್ಮವಿಶ್ವಾಸ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಮಹತ್ವದ ವೇದಿಕೆಯಾಗಿದೆ. ಇಂತಹ ಸೈಕಲ್ ಜಾಥಾಗಳು ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯದ ಮಹತ್ವವನ್ನು ಸಮಾಜದ ಮುಂದಿಡುತ್ತವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆರೋಗ್ಯವಂತ ಯುವಶಕ್ತಿ ರಾಷ್ಟ್ರದ ದೊಡ್ಡ ಬಲವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಅಗತ್ಯ” ಎಂದು ತಿಳಿಸಿದರು.

ಆರೋಗ್ಯ ಜಾಗೃತಿ ಹಾಗೂ ಸದೃಢ ಜೀವನಶೈಲಿಯ ಸಂದೇಶವನ್ನು ಸಾರುವ ಉದ್ದೇಶದಿಂದ ಶ್ರೀ ಕೊಂಗಾಡಿಯಪ್ಪ ಕಾಲೇಜಿನಿಂದ ಆರಂಭವಾದ ಸೈಕಲ್ ಜಾಥಾ ಮಾದಗೊಂಡನಹಳ್ಳಿ ವರೆಗೆ ಸಾಗಿತ್ತು. ಈ ಸೈಕಲ್ ಜಾಥಾದಲ್ಲಿ ಸುಮಾರು 100ಕ್ಕೂ ಹೆಚ್ಚು ಎನ್‌.ಸಿ.ಸಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು, ಆರೋಗ್ಯ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಕೊಂಗಾಡಿಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿವಾಸ್, ಐದು ಕರ್ನಾಟಕ ಎನ್‌.ಸಿ.ಸಿ ಬೆಟಾಲಿಯನ್ ಅಧಿಕಾರಿ ಬೊದಿ, ಸರ್ಕಾರಿ ಕಾಲೇಜಿನ ಎನ್‌.ಸಿ.ಸಿ ಅಧಿಕಾರಿ ಡಾ.ರಾಜಕುಮಾರ್, ಕೊಂಗಾಡಿಯಪ್ಪ ಕಾಲೇಜಿನ ಎನ್‌.ಸಿ.ಸಿ ಅಧಿಕಾರಿ ಶ್ರೀಕಾಂತ್, ಕಾಲೇಜಿನ ಐಕ್ಯೂಎಸಿ ಘಟಕದ ಸಂಚಾಲಕರಾದ ಡಾ.ಬಿ.ಆರ್. ಗಂಗಾಧರಯ್ಯ, ಪ್ರಾಧ್ಯಾಪಕರಾದ ಉಮೇಶ್.ವೈ, ಮಧುಸೂಧನ್, ಗವಿಗಂಗಾಧರಯ್ಯ, ಪಾಪಣ್ಣ, ಮುನಿರಾಜ್, ಸತೀಶ್ ಕುಮಾರ್, ವಿನೋದ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!