ಇತ್ತೀಚೆಗೆ ನಗರದಲ್ಲಿ ಒಂಟಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿರುವವ ಕಳ್ಳರನ್ನು ಬಂಧಿಸಿದ ಪೊಲೀಸರು.
ನಗರ ಹಾಗೂ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಸರಣಿ ಸರಗಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗೆದ್ದಲಪಾಳ್ಯ ಗ್ರಾಮದ ನಿವಾಸಿ ಆರ್. ಸುಬ್ರಮಣ್ಯ( 24), ಗೆದ್ದಲಪಾಳ್ಯ ದಿನ್ನೆಯ ನಿವಾಸಿ ಎನ್. ಪ್ರವೀಣ್ ಕುಮಾರ್ (19) ಹಾಗೂ ಪಾಲನಜೋಗಹಳ್ಳಿಯಲ್ಲಿ ವಾಸವಿರುವ ಜೊಮೆಟೊ ಡೆಲಿವರಿ ಬಾಯ್ ಎನ್. ಅಭಿಲಾಷ್(22) ಬಂಧಿತ ಆರೋಪಿಗಳು.
ಒಟ್ಟು 4( ನಗರ ಹಾಗೂ ಗ್ರಾಮಾಂತರ ಠಾಣೆಯ ತಲಾ ಎರಡು ಪ್ರಕರಣ) ಸರಗಳವು ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು, ಬಂಧಿತರಿಂದ ಸುಮಾರು 130 ಗ್ರಾಂ ತೂಕದ ನಾಲ್ಕು ಚಿನ್ನದ ಮಾಂಗಲ್ಯ ಸರಗಳು ಹಾಗೂ ಕೃತ್ಯಕ್ಕೆ ಬಳಸಿದ KA- 51-4404 ನೋಂದಣಿ ಸಂಖ್ಯೆಯ ಬೈಕ್ ವಶಪಡಿಸಿಕೊಂಡಿದ್ದಾರೆ.
ಮೇ 15 ರಂದು ರಾತ್ರಿ 8 ರ ಸುಮಾರಿಗೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಚ್ಚಪ್ಪನಪೇಟೆಯಲ್ಲಿ ವೃದ್ಧೆ ಉಗುಮಬಾಯಿ ಅವರ ಬಳಿ ಸುಮಾರು 40 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ಪುರುಷೋತ್ತಮ್ ಅವರು ಡಿವೈಎಸ್ಪಿ ನಾಗರಾಜ್ ಮಾರ್ಗದರ್ಶನದಲ್ಲಿ ತಂಡ ರಚಿಸಿದ್ದರು.
ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಪ್ರೀತಂ ಶ್ರೇಯಕರ, ಅಪರಾಧ ವಿಭಾಗದ ಪಿಎಸ್ಐ ನಂಜುಂಡಯ್ಯ ಹಾಗೂ ಸಿಬ್ಬಂದಿಗಳಾದ ಪಾಂಡುರಂಗ, ಕರಾರ್ ಹುಸೇನ್, ವಸಂತಕುಮಾರ್, ಸುನಿಲ್ ಭಾಸಗಿ , ಹುಸೇನ್ ಸಾಬ್ ಕಂಕುರಿ ಹಾಗೂ ಯೋಗಶ್ರೀ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.