
ಜಾನುವಾರುಗಳಿಗೆ ತಪ್ಪದೇ ಉಚಿತ ಕಾಲು ಬಾಯಿ ಲಸಿಕೆ ಹಾಕಿಸಲು ರೈತರಿಗೆ ಜಾಗೃತಿ ಮೂಡಿಸಿ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಶುಪಾಲನಾ ಮತ್ತು ಪಶವೈದ್ಯಕೀಯ ಸೇವಾ ಇಲಾಖೆ ವತಿಯಿಂದ 8 ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮದ ಪೂರ್ವಸಿದ್ಧತೆ ಬಗ್ಗೆ ಬುಧವಾರ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ನವೆಂಬರ್ 03 ರಿಂದ ಡಿಸೆಂಬರ್ 03 ರವರೆಗೆ ಈ ಅಭಿಯಾನ ನಡೆಯಲಿದ್ದು, ಇದರ ಮಾಹಿತಿಯನ್ನು ಬ್ಯಾನರ್, ಭಿತ್ತಿಪತ್ರಗಳ ಮೂಲಕ ರೈತರಿಗೆ ತಲುಪಿಸಿ ವ್ಯಾಪಕ ಪ್ರಚಾರ ಮಾಡಬೇಕು.
ಜಿಲ್ಲೆಯಲ್ಲಿ ಪ್ರಸ್ತುತ ಜಾನುವಾರು ಗಣತಿಯಲ್ಲಿ 1,31,986 ಹಸುಗಳು ಮತ್ತು 9,090 ಎಮ್ಮೆಗಳಿವೆ, ಒಟ್ಟು 1,41,076 ಜಾನುವಾರುಗಳಿವೆ. ಆದ್ದರಿಂದ ಜಿಲ್ಲೆಯಲ್ಲಿ 1738 ಬ್ಲಾಕ್ ಗಳನ್ನಾಗಿ ವಿಂಗಡಿಸಿದ್ದು, ಒಟ್ಟು 134 ತಂಡಗಳಿವೆ. ಇಲಾಖೆಯ ಅಧಿಕಾರಿಗಳು / ಸಿಬ್ಬಂದಿಗಳು, ಬಮೂಲ್ ಸಿಬ್ಬಂದಿಗಳು ಸೇರಿ ಒಟ್ಟು 347 ಲಸಿಕೆದಾರರು ಪ್ರತಿದಿನ ಮುಂಜಾನೆ 5:30 ಯಿಂದ 11 ಗಂಟೆಯ ವರೆಗೆ ನಿಗಧಿತ ವೇಳಾಪಟ್ಟಿಯಂತೆ ಗ್ರಾಮಗಳಿಗೆ ಭೇಟಿ ನೀಡಿ, ಉಚಿತ ಕಾಲುಬಾಯಿ ಜ್ವರದ ಲಸಿಕೆಯನ್ನು ನೀಡಲಾಗುವುದು ಎಂದು ತಿಳಿಸಿದರು.
ಪ್ರತಿಯೊಂದು ರಾಸುವಿಗೆ ಒಂದು ಸಿರಿಂಜ್ ಮತ್ತು ನೀಡಲ್ ಗಾಳನ್ನು ಬಳಸಿ ಲಸಿಕೆ ನೀಡಲಾಗುವುದು. ಹಾಗಾಗಿ ಪಶು ಸಾಕಾಣಿಕೆ ಮಾಡುವವರು 3 ತಿಂಗಳ ಮೇಲ್ಪಟ್ಟ ಎಲ್ಲಾ ಜಾನುವಾರುಗಳಿಗೆ ತಪ್ಪದೇ ಕಾಲುಬಾಯಿ ರೋಗ ಲಸಿಕೆ ಹಾಗೂ ಕರುಗಳಿಗೆ 21 ದಿನವಾದ ಬಳಿಕ ಬೂಸ್ಟರ್ ಡೋಸ್ ಲಸಿಕೆಯನ್ನು ಹಾಕಿಸಬೇಕು ಎಂದು ತಿಳಿಸಿದರು.
ಇದರ ಜೊತೆಗೆ ರೇಬೀಸ್ ಅಭಿಯಾನದ ಅಂಗವಾಗಿ ನಾಯಿಗಳಿಗೆ ರೇಬೀಸ್ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ನಂತರ 8 ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಪಶಸಂಗೋಪನಾ ಮತ್ತು ಪಶವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಡಾ. ಜಗದೀಶ್ ಕುಮಾರ್, ಜಿಲ್ಲಾ ಪಶುವೈದ್ಯಾಧಿಕಾರಿಗಳು, ನಾಲ್ಕು ತಾಲ್ಲೂಕಿನ ಸಹಾಯಕ ನಿರ್ದೇಶಕರು, ಬಮುಲ್ ಮತ್ತು ಕೆ.ಎಂ.ಎಫ್ ನ ಉಪ ವ್ಯವಸ್ಥಾಪಕರುಗಳು,
ಅಧಿಕಾರಿಗಳು ಹಾಗೂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.