
ದೊಡ್ಡಬಳ್ಳಾಪುರ : ರಾತೋ ರಾತ್ರಿ ಮನೆಯನ್ನು ಯಾವುದೇ ಮಾಹಿತಿ ನೀಡದೆ ಏಕಾಏಕಿ ಜೆಸಿಬಿಯಿಂದ ನಾವು ಧ್ವಂಸಗೊಳಿಸಿಲ್ಲ. ವಿಶ್ವನಾಥ್ ಅವರು ನಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ವೀರಪುರ ಗ್ರಾಮದ ಸರ್ವೇ ನಂಬರ್ 115 ರ ಜಮೀನು ಮಾಲೀಕರಾದ ಮಧು ಕುಮಾರ್ ತಿಳಿಸಿದ್ದಾರೆ.
ತಾಲ್ಲೂಕಿನ ಹೊರವಲಯದ ವೀರಪುರದಲ್ಲಿ ಈ ಹಿಂದೆ ವಿಶ್ವನಾಥ್ ಎಂಬುವರು ನಮ್ಮ ಮನೆಯನ್ನು ಜೆಸಿಬಿಯಿಂದ ನೆಲಸಮ ಮಾಡಲಾಗಿದೆ. ಮನೆಯ ಒಳಗಿದ್ದ ವಸ್ತುಗಳು ಸಂಪೂರ್ಣ ಹಾಳಾಗಿದ್ದು , ಕೋಳಿ ಹಾಗೂ ಮೇಕೆಗೆ ಹಾನಿ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ಕುರಿತಂತೆ ಜಮೀನು ಮಾಲಿಕ ಮಧುಕುಮಾರ್ ಮಾತನಾಡಿ, ಈಗಾಗಲೇ ಹಲವಾರು ಬಾರಿ ಸರ್ವೆ ಮಾಡಿಸಿದ್ದೇವೆ . ವಿಶ್ವನಾಥ್ ಖುದ್ದು ಸಹಿ ಹಾಕಿ ಸರ್ವೇಯನ್ನು ಒಪ್ಪಿಕೊಂಡಿದ್ದಾರೆ. ಆದರೆ, ಪದೇ ಪದೇ ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಸಮಸ್ಯೆ ಕೊಡುತ್ತಿದ್ದಾರೆ ಎಂದರು.

ವೀರಪುರ ಗ್ರಾಮದ ಸರ್ವೇ ನಂಬರ್ 115ಕ್ಕೆ ಸಂಬಂಧಿಸಿದಂತೆ 32 ಗುಂಟೆ ಜಮೀನಿಗೆ ಮಧು ಕುಮಾರ್, ರವಿ, ಚಂದ್ರಪ್ಪ, ನಾರಾಯಣಪ್ಪ ಎಂಬ ನಾವು ಜಂಟಿ ಮಾಲೀಕರಾಗಿದ್ದು, ನಮ್ಮ ಪಕ್ಕದ 19 ಗುಂಟೆ ಜಮೀನು ವಿಶ್ವನಾಥ್ ಅವರಿಗೆ ಸೇರಿರುತ್ತದೆ. ಆದರೆ, ನಮ್ಮ ಜಮೀನು ನಮಗೆ ಬಿಟ್ಟುಕೊಡದೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈಗಾಗಲೇ ಹಲವಾರು ಬಾರಿ ಪೊಲೀಸ್ ಠಾಣೆಯಲ್ಲಿ ಮಾತುಕತೆ ನಡೆದಿದೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ತಾವೇ ಮನೆ ನೆಲಸಮ ಮಾಡಿಕೊಂಡು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಮನೆಯನ್ನು ಬಿಳಿಸುವ ಉದ್ದೇಶ ನಮ್ಮದಾಗಿದ್ದರೆ ಕೋರ್ಟ್ ಆದೇಶ ಪಡೆದು ಸಂಪೂರ್ಣ ಮನೆಯನ್ನು ದ್ವಂಸಗೊಳಿಸುತ್ತಿದ್ದೆವು. ಆದರೆ, ನಾವು ಆ ಕೆಲಸ ಮಾಡಿಲ್ಲ. ಮನೆ ಖಾಲಿ ಮಾಡಿಕೊಡುವಂತೆ ಮನವಿ ಮಾಡಿದ್ದೆವು. ಅದಕ್ಕೆ ವಿಶ್ವನಾಥ್ ಕೂಡ ಒಪ್ಪಿದ್ದರು. ಈಗ ಏಕಏಕಿ ಬಂದು ನಾವು ಅವರ ಮನೆ ಧ್ವಂಸಗೊಳಿಸಿದ್ದೇವೆ ಹಾನಿ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ನಮ್ಮ ಬಳಿ ಸೂಕ್ತ ದಾಖಲಾತಿ ಇದೆ. ಜಮೀನು ನಮ್ಮದು ನಮ್ಮ ಜಾಗವನ್ನು ನಮಗೆ ಬಿಟ್ಟು ಕೊಡಿ ಎಂದು ಮನವಿ ಮಾಡಿದರು.
ಮನೆಯಲ್ಲಿದ್ದ ವಸ್ತುಗಳು, ಅಡುಗೆ ಪಾತ್ರೆಗಳು ಸಂಪೂರ್ಣ ಹಾಳಾಗಿದ್ದು , ತಾವು ಸಾಕಿದ್ದ ಕೋಳಿಗಳು ಗೋಡೆ ಕೆಳಗೆ ಸಿಲುಕಿ ಸಾವನಪ್ಪಿವೆ ಗೋಡೆ ಬಿದ್ದ ಪರಿಣಾಮ ಮೇಕೆ ಮರಿಯ ಕಾಲು ಮುರಿದಿದೆ ಎಂದು ವಿಶ್ವನಾಥ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಇದು ಎಲ್ಲವೂ ಸುಳ್ಳು ಸತ್ಯಕ್ಕೆ ದೂರವಾದ ಮಾತು. ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದರು.