ಹೊನ್ನಾವರದಲ್ಲಿ ಬೈಕ್ ಓವರ್‌ಟೇಕ್ ಗಲಾಟೆ, ಇಬ್ಬರು ಆರೋಪಿಗಳ ಬಂಧನ

ಹೊನ್ನಾವರ: ಸೆಪ್ಟೆಂಬರ್ 18, 2025 ರಂದು ಹೊನ್ನಾವರದಲ್ಲಿ ನಡೆದ ಬೈಕ್ ಓವರ್‌ಟೇಕ್ ಗಲಾಟೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂದು ಮಧ್ಯಾಹ್ನ ಸುಮಾರು 1:45 ರ ಸುಮಾರಿಗೆ ಸಂಶಿ ಗ್ರಾಮದ ವಿವೇಕ ಸುರೇಶ ನಾಯ್ಕ ಮತ್ತು ಸುದೀಪ್ ನಾಯ್ಕ ಅವರು ತಮ್ಮ ಬೈಕ್‌ನಲ್ಲಿ ಗೇರುಸೊಪ್ಪಾದಿಂದ ಉಪ್ಪೋಣಿ ಕಡೆಗೆ ಬರುತ್ತಿದ್ದರು. ಮಾವಿನಹೊಳೆ ಬಸ್ ನಿಲ್ದಾಣದ ಬಳಿ, ವಿವೇಕ ನಾಯ್ಕ ಅವರು ಮುಂದೆ ಹೋಗುತ್ತಿದ್ದ ಮತ್ತೊಂದು ಬೈಕ್ ಅನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ, ಆ ಬೈಕ್‌ನಲ್ಲಿದ್ದ ಆರೋಪಿಗಳಾದ ಮೊಹಮ್ಮದ್ ಅದ್ನಾನ್ (26, ಮುಸ್ಲಿಂಕೇರಿ, ಹೊನ್ನಾವರ) ಮತ್ತು ಪ್ರದೀಪ್ ಅಂಬಿಗ (26, ಮಾವಿನಹೊಳೆ, ಹೊನ್ನಾವರ) ಅವರು ಅಸಭ್ಯವಾಗಿ ಕೈ ಸನ್ನೆ ಮಾಡಿದ್ದಾರೆ.

ಇದರಿಂದ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ. ಈ ಸಂದರ್ಭದಲ್ಲಿ ಮೊಹಮ್ಮದ್ ಅದ್ನಾನ್ ತನ್ನ ಜೇಬಿನಲ್ಲಿದ್ದ ಚಾಕುವಿನಿಂದ ವಿವೇಕ ನಾಯ್ಕ ಅವರಿಗೆ ಚುಚ್ಚಲು ಯತ್ನಿಸಿದ್ದು, ವಿವೇಕ ಅವರಿಗೆ ಗಾಯಗಳಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.

ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೊನ್ನಾವರ ಪೊಲೀಸ್ ವೃತ್ತ ನಿರೀಕ್ಷಕರು ತನಿಖೆ ಕೈಗೊಂಡಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಪೊಲೀಸರು ತಕ್ಷಣವೇ ಆರೋಪಿಗಳಾದ ಮೊಹಮ್ಮದ್ ಅದ್ನಾನ್ ಮತ್ತು ಪ್ರದೀಪ್ ಅಂಬಿಗ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಘಟನೆಯು ಯಾವುದೇ ಕೋಮು ಅಥವಾ ಹಳೆಯ ದ್ವೇಷದ ಕಾರಣದಿಂದ ಸಂಭವಿಸಿಲ್ಲ. ಇದು ಹಠಾತ್ ಪ್ರಚೋದನೆಯಿಂದ ನಡೆದ ಘಟನೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಈ ಘಟನೆಯ ಬಗ್ಗೆ ಕೆಲವರು ಸುಳ್ಳು ಸುದ್ದಿ ಮತ್ತು ಅಪಪ್ರಚಾರ ಹರಡುತ್ತಿರುವುದು ಕಂಡುಬಂದಿದ್ದು, ಇಂತಹ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!