
ಶಿಡ್ಲಘಟ್ಟ : ಕೋಲಾರ ಜಿಲ್ಲೆಯ ವೇಮಗಲ್ ಹೋಬಳಿಯ ತೋಕಲಘಟ್ಟ ಗ್ರಾಮದ ಅನಿಲ್ ಕುಮಾರ್ ಬಿನ್ ಬೈರೇಗೌಡ ತಾನು ಕೆಪಿಎಸ್ಸಿ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿ ಇರುವುದಾಗಿ ಹೇಳಿ ನಿನ್ನ ಮಗನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು 21 ಲಕ್ಷದ 36,000 ರೂ ಹಣವನ್ನು ಪಡೆದು ವಂಚಿಸಿರುವುದಾಗಿ ತಿಳಿದು ಬಂದಿದೆ.
ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಗ್ರಾಮದ ಗೋಪಾಲಕೃಷ್ಣ ಬಿನ್ ನಾರಾಯಣಪ್ಪ ಅವರು ಗ್ರಾಮಾಂತರ ಠಾಣೆಯಲ್ಲಿ ಈತನ ವಿರುದ್ಧ ದೂರು ದಾಖಲಿಸಿರುತ್ತಾರೆ. ದೂರು ದಾಖಲೆಸಿಕೊಂಡ ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೆ ಸತೀಶ್ ಅವರು ಜಿಲ್ಲಾ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಅವರ ನೇತೃತ್ವದಲ್ಲಿ ತನಿಖೆಯನ್ನು ಕೈಗೊಂಡು ಸರ್ಕಲ್ ಇನ್ಸ್ಪೆಕ್ಟರ್ ಎಂ ಶ್ರೀನಿವಾಸ್ ಅವರ ಮುಂದಾಳತ್ವದಲ್ಲಿ ತಂಡವನ್ನು ರಚಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಅನಿಲ್ ಕುಮಾರ್ ನನ್ನು ವಿಚಾರಣೆಪಡಿಸಿದಾಗ ಗೋಪಾಲಕೃಷ್ಣ ಅವರ ಬಳಿ ಹಣವನ್ನ ಫೋನ್ ಪೇ ಮೂಲಕ ಹಾಗೂ ವಿವಿಧ ಖಾತೆಗಳಿಗೆ ಹಣ ಹಾಕಿಸಿಕೊಂಡು ಆನ್ಲೈನ್ ಬೆಟ್ಟಿಂಗ್ ನಲ್ಲಿ ಆಡಿ ಸೋತಿರುವುದಾಗಿ ತಿಳಿಸಿರುತ್ತಾನೆ. ಆರೋಪಿಯನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೆ ಸತೀಶ್ ಹಾಗೂ ಸಿಬ್ಬಂದಿ ವರ್ಗದ ಸಂದೀಪ್ ಕುಮಾರ್ ವೆಂಕಟೇಶ್, ಮಂಜುನಾಥ್ ಅವರನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಅವರು ಅಭಿನಂದಿಸಿ ಶ್ಲಾಘಿಸಿದ್ದಾರೆ.