ನಗರಸಭೆ ವ್ಯಾಪ್ತಿಯಲ್ಲಿ ಇ-ಖಾತೆ ಮಾಡಲು ಅಧಿಕಾರಿಗಳು 15 ರಿಂದ 20 ಸಾವಿರ ರೂ ಲಂಚ ಬೇಡಿಕೆಯನ್ನು ಒಡ್ಡುತ್ತಿದ್ದಾರೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪರಾಜಿತ ಅಭ್ಯರ್ಥಿ ಬಿ.ಶಿವಶಂಕರ್ ಗಂಭೀರ ಆರೋಪ ಮಾಡಿದ್ದಾರೆ.
ಅವರು ನಗರದ ಕೆಆರ್ಎಸ್ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಂಚದ ಕುರಿತಂತೆ ಕೇಳಿದರೆ ಇಂತಿಂತ ಅಧಿಕಾರಿಗಳಿಗೆ ಇಷ್ಟಿಷ್ಟು ನೀಡಬೇಕೆಂದು ಬಹಿರಂಗವಾಗಿ ಹೇಳುತ್ತಿತ್ತಾರೆ. ಇದೇ ಸಮಸ್ಯೆ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಮುಂದುವರಿದಿದೆ. ಲಂಚಾವತಾರ ತಪ್ಪಿಸಲು ಕಂದಾಯ ಅದಾಲತ್ ಮೂಲಕ ಸಾರ್ವಜನಿಕರಿಗೆ ಇ-ಖಾತೆ ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲು ಒತ್ತಡ ಹೇರಲಾಗುವುದು. ಆ ಮೂಲಕ ಸಾರ್ವಜನಿಕರ ಸಹಕಾರದಿಂದ ಆಡಳಿತವನ್ನು ಜನರ ಬಾಗಿಲಿಗೆ ಮುಟ್ಟಿಸಲು ಹೆಚ್ಚಿನ ಗಮನ ಹರಿಸಲಾಗುವುದು ಎಂದರು.
ನಗರಸಭೆ ವತಿಯಿಂದ ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿದ್ದರು, ಬಾಡಿಗೆಗೆ ನೀಡುತ್ತಿಲ್ಲ ಈ ಹಿನ್ನೆಲೆ, ತಳ್ಳುವ ಗಾಡಿಯ ಮೂಲಕ ವ್ಯಾಪಾರ ಮಾಡಬೇಕಾದ ಅನಿವಾರ್ಯತೆಗೆ ವ್ಯಾಪಾರಿಗಳು ಸಿಲುಕಿದ್ದಾರೆ. ನಾಗರಕೆರೆ ಸೇರಿದಂತೆ ನಗರಸಭೆಗೆ ಸೇರಿದ ಅನೇಕ ಬೆಲೆಬಾಳುವ ಆಸ್ತಿ ಒತ್ತುವರಿಯಾಗಿದೆ.
ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಹೆಸರಿಗೆ ಚೆನ್ನಾಗಿರುವುದು ಬಿಟ್ಟರೆ ಸಾರ್ವಜನಿಕರಿಗೆ ಯಾವುದೇ ಉಪಯೋಗವಾಗಿಲ್ಲ. ತಾಲೂಕಿನಲ್ಲಿ ಕಂಡು ಬಂದಿರುವ ಸಮಸ್ಯೆಗಳ ಕುರಿತಂತೆ ಅಧಿಕಾರಿಗಳ ಗಮನಕ್ಕೆ ತರಲಾಗುತ್ತಿದ್ದು, ಅಧಿಕಾರಿಗಳು ಸ್ಪಂದಿಸದೇ ಹೋದಲ್ಲಿ ಹೋರಾಟ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಯುವಘಟಕದ ಅಧ್ಯಕ್ಷ ಆನಂದ್, ತಾಲೂಕು ಅಧ್ಯಕ್ಷ ಹೆಚ್.ಎನ್.ವೇಣು, ನಗರ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ವೆಂಕಟೇಶ್, ಚಾಲಕರ ಸಂಘದ ಅಧ್ಯಕ್ಷ ವಿಜಯ್, ಉಪಾಧ್ಯಕ್ಷ ಗೋವಿಂದರಾಜು ಇದ್ದರು.