ಸರ್ಕಾರಿ ನೌಕರರು, ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಆರೋಗ್ಯ ಭದ್ರತೆ: 5 ಲಕ್ಷ ರೂ.ಗಳವರೆಗೆ ನಗದು ರಹಿತ ಚಿಕಿತ್ಸಾ ಸೌಲಭ್ಯ….

ಕರ್ನಾಟಕ ಕ್ಯಾಬಿನೆಟ್ ಐತಿಹಾಸಿಕ ನಿರ್ಣಯ. ದೇಶದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯದ ಎಲ್ಲಾ ಸರ್ಕಾರೀ ಇಲಾಖೆಗಳ ನೌಕರರು, ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಆರೋಗ್ಯ ಭದ್ರತೆ. 5 ಲಕ್ಷ ರೂ.ಗಳವರೆಗೆ ನಗದು ರಹಿತ ಚಿಕಿತ್ಸಾ ಸೌಲಭ್ಯ. ದೊರಕಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ರಾಜ್ಯದ ಯಾವುದೇ ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಮತ್ತು ಗೌರವಧನದ ಆಧಾರದ ಮೇಲೆ ಕೆಲಸ ಮಾಡುವ 3 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗಳು ಮತ್ತು ಅವರ ಅವಲಂಬಿತರಿಗೆ 5 ಲಕ್ಷ ರೂ.ಗಳವರೆಗೆ ನಗದು ರಹಿತ ಚಿಕಿತ್ಸೆಯನ್ನು ಒದಗಿಸುವ ಸಲುವಾಗಿ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ- ಖಾಯಂ ಅಲ್ಲದ ಸಿಬ್ಬಂದಿಗೆ (KASS-NPE)” ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದರು.

ಈ ಯೋಜನೆಯು ESIC, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (AB-ArK), ಯಶಸ್ವಿನಿ ಮುಂತಾದ ಯಾವುದೇ ಸರ್ಕಾರಿ ಪ್ರಾಯೋಜಿತ ಆರೋಗ್ಯ ವಿಮಾ ಯೋಜನೆಗಳಲ್ಲಿ ಒಳಗೊಳ್ಳದ ಸಿಬ್ಬಂದಿ ಹಾಗು ಅವರ ಅವಲಂಬಿತರನ್ನು ಒಳಗೊಳ್ಳಲಿದೆ. ಈ ಯೋಜನೆಗಾಗಿ ಪ್ರತಿ ತಿಂಗಳು ಸಿಬ್ಬಂದಿ 100 ರೂಪಾಯಿ ಭರಿಸಿದರೆ, ರಾಜ್ಯ ಸರ್ಕಾರವೂ ಸಹ 100 ರೂಪಾಯಿ ಭರಿಸಲಿದೆ. ರಾಜ್ಯ ಸರ್ಕಾರವು ಈ ಯೋಜನೆಗಾಗಿ 36 ಕೋಟಿ ವೆಚ್ಚ ಮಾಡಲಿದೆ ಎಂದು ತಿಳಿಸಿದರು.

ಯಾವುದೇ ಆರೋಗ್ಯ ಯೋಜನೆಗಳ ಲಾಭ ದೊರಕದ ಕೆಳ ಮಧ್ಯಮ ವರ್ಗಕ್ಕೆ ಆರೋಗ್ಯದ ಭದ್ರತೆ ನೀಡುವ ದೃಷ್ಟಿಯಿಂದ ಕಳೆದ ಬಜೆಟ್’ನಲ್ಲಿ ಘೋಷಿಸಿದಂತೆ ರಾಜ್ಯ ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸುತ್ತಿದ್ದು ದೇಶದಲ್ಲೇ ಇದೊಂದು ಮಾದರಿ ಯೋಜನೆಯಾಗಲಿದೆ ಎಂದರು.

ರಾಜ್ಯದ ಇತಿಹಾಸದಲ್ಲಿ ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆಗಳನ್ನು ತೆಗೆದುಕೊಂಡು ಹೋದ ಹೆಗ್ಗಳಿಕೆ ನಮ್ಮ ಸರ್ಕಾರದ್ದು. ಗೃಹ ಆರೋಗ್ಯ ಯೋಜನೆ ಮೂಲಕ ಮನೆ ಬಾಗಿಲಿಗೆ ಆರೋಗ್ಯ ಸೇವೆ ನೀಡುವ ಜೊತೆ ಜೊತೆಗೆ ಇದೀಗ ನಮ್ಮ ಆರೋಗ್ಯ ಇಲಾಖೆಯು ಸಂಚಾರಿ ಆರೋಗ್ಯ ಘಟಕಗಳ ಮೂಲಕ ಸುಮಾರು 15.97 ಕೋಟಿ ರೂಪಾಯಿ ವೆಚ್ಚದಲ್ಲಿ ದುರ್ಗಮ ಮತ್ತು ಸಂಪರ್ಕ ರಹಿತ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ನೀಡಲು ಮುಂದಾಗಿದೆ ಎಂದು ಹೇಳಿದರು.

ಸಂಚಾರಿ ಆರೋಗ್ಯ ಘಟಕಗಳ ವಿಶೇಷತೆ

▪️ದುರ್ಗಮ ಮತ್ತು ಸಂಪರ್ಕ ರಹಿತ ಪ್ರದೇಶಗಳು, ಸಂಕಷ್ಟದಲ್ಲಿರುವ ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪುಗಳು (ಪಿವಿಟಿಜಿ), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಆರೋಗ್ಯ ಸೇವೆಗಳನ್ನು ಅವರ ಮನೆಯ ಬಾಗಿಲಲ್ಲೇ ನೀಡುವ ಉದ್ದೇಶದಿಂದ 82 ಸಂಚಾರಿ ಆರೋಗ್ಯ ಘಟಕಗಳು ಕಾರ್ಯಾಚರಣೆ ನಡೆಸಲಿವೆ.

▪️ಇವು ಸಂಚಾರಿ ಚಿಕಿತ್ಸಾಲಯಗಳಾಗಿದ್ದು, ಈ ಘಟಕಗಳಲ್ಲಿ ರೋಗ ತಪಾಸಣೆ, ರೋಗ ನಿರ್ಣಯ, ಚಿಕಿತ್ಸೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಆರೈಕಾ ಸೇವೆಗಳು ಸಿಗಲಿವೆ.

▪️ಈ ಸಂಚಾರಿ ಆರೋಗ್ಯ ಘಟಕಗಳಲ್ಲಿ ವೈದ್ಯರು, ಶುಶ್ರೂಷಕರು, ಪ್ರಯೋಗಾಲಯ ತಂತ್ರಜ್ಞರು, ಸಹಾಯಕರು ಕಾರ್ಯನಿರ್ವಹಿಸಲಿದ್ದಾರೆ.

▪️ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಿರುವ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ಸಂಚಾರಿ ಆರೋಗ್ಯ ಘಟಕಗಳು ಕಾರ್ಯ ನಿರ್ವಹಿಸಲಿವೆ.

▪️ಸಂಚಾರಿ ಆರೋಗ್ಯ ಘಟಕಗಳಿಗೆ ಸಂಬಂಧಿಸಿದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾರ್ಗಸೂಚಿಗಳಂತೆ ಈ ಘಟಕಗಳು ಕಾರ್ಯ ನಿರ್ವಹಿಸಲಿವೆ.

▪️ಈ ಹಿಂದೆ ಪಿಪಿಪಿ ಮಾದರಿಯಲ್ಲಿ ಸಂಚಾರಿ ಆರೋಗ್ಯ ಘಟಕಗಳನ್ನು ನಿರ್ವಹಿಸಲಾಗುತ್ತಿತ್ತು. ಪಾರದರ್ಶಕತೆ ಮತ್ತು ಕಾರ್ಯಾಚರಣಾ ವೆಚ್ಚ ಉಳಿತಾಯ ಮಾಡಲು ಇನ್ನು ಮುಂದೆ ಆರೋಗ್ಯ ಇಲಾಖೆಯ ವತಿಯಿಂದಲೇ ನಿರ್ವಹಿಸಲು ತೀರ್ಮಾನಿಸಲಾಗಿದೆ.

Leave a Reply

Your email address will not be published. Required fields are marked *